ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ದೇಶಕ್ಕೇ ಮಾದರಿ : ಶಾಸಕ ಎಸ್ಸೆಸ್

ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ದೇಶಕ್ಕೇ ಮಾದರಿ : ಶಾಸಕ ಎಸ್ಸೆಸ್

ದಾವಣಗೆರೆ, ನ.12- ದೇಶದಲ್ಲಿ ಯಾವುದೇ ರಾಜ್ಯದಲ್ಲಿ ನೀಡದಂತಹ ಅನೇಕ ಭರವಸೆಗಳನ್ನು ಈಡೇರಿಸಿ ಅಭಿವೃದ್ಧಿ ಕಡೆ ಗಮನ ಹರಿಸುವ ಸರ್ಕಾರ ಇದ್ದರೆ, ಅದು ರಾಜ್ಯದ ಕಾಂಗ್ರೆಸ್ ಸರ್ಕಾರ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದರು.

ಅವರಿಂದು ಕುಕ್ಕವಾಡದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಹಮ್ಮಿಕೊಂಡಿದ್ದ ರಸ್ತೆ ನಿರ್ಮಾಣ ಕಾಮಗಾರಿ ಹಾಗೂ ಕುಕ್ಕುವಾಡ ಗ್ರಾಮ ಪಂಚಾಯ್ತಿಯಿಂದ ಹಮ್ಮಿಕೊಂಡಿದ್ದ ಶಾಮನೂರು ಶಿವಶಂಕರಪ್ಪ ವೃತ್ತದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ಈ ದೇಶಕ್ಕೇ ಮಾದರಿ ಆಗಿದೆ ಎಂಬುದಕ್ಕೆ ಈಗ ನಡೆಯುತ್ತಿರುವ 5 ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಎಲ್ಲಾ ಪಕ್ಷಗಳು ಕಾಪಿ ಮಾಡುತ್ತಿವೆ. ಇಲ್ಲಿನ ಬಿಜೆಪಿಯವರು ರಾಜ್ಯ ದಿವಾಳಿ ಆಗಲಿದೆ ಎಂದರು. ಆದರೆ ಬಿಜೆಪಿ ಹೈಕಮಾಂಡ್ ಚುನಾವಣೆ ನಡೆಯುವ ರಾಜ್ಯಗಳಲ್ಲಿ ನಮ್ಮ ಮಾದರಿ ಆಡಳಿತ ನೀಡುವ ಭರವಸೆ ನೀಡುತ್ತಿವೆ ಎಂದರು.

ಕಳೆದ 8 ತಿಂಗಳ ಹಿಂದೆ ಈ ಭಾಗದ ಅನೇಕ ರಸ್ತೆಗಳ ಅಭಿವೃದ್ಧಿಗೆ ಚಾಲನೆ ನೀಡಲಾಗಿತ್ತು. ಈ ರಸ್ತೆಗೂ ಚಾಲನೆ ನೀಡಿದ್ದೆವು. ಕೆಲವು ತಾಂತ್ರಿಕ ತೊಂದರೆಗಳಿಂದಾಗಿ ಈ ರಸ್ತೆಯನ್ನು ಕೈಗೆತ್ತಿಕೊಳ್ಳಲಿಲ್ಲ. ಇದೀಗ ಈ ರಸ್ತೆಯನ್ನು ಸಂಪೂರ್ಣ ಅಭಿವೃದ್ಧಿ ಮಾಡುವ ಉದ್ದೇಶದಿಂದ ಲೋಕೋಪಯೋಗಿ ಇಲಾಖೆಯಿಂದ ಸುಮಾರು 3 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗುವುದು ಎಂದರು.

ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಎನ್.ಮಂಜುನಾಥ್ ಮಾತನಾಡಿ, ಈ ಗ್ರಾಮಕ್ಕೆ ಶಾಮನೂರು ಶಿವಶಂಕರಪ್ಪನವರ ಕೊಡುಗೆ ಅಪಾರವಾಗಿದೆ ಎಂದರು.

ಈ ಸಂದರ್ಭದಲ್ಲಿ ಉದ್ಯಮಿ ಎಸ್.ಎಸ್.ಗಣೇಶ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಜಿ.ಸಿ.ನಿಂಗಪ್ಪ, ಕುಕ್ಕುವಾಡ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಶ್ರೀಮತಿ ಸೌಭಾಗ್ಯಮ್ಮ, ಗ್ರಾಮದ ಮುಖಂಡರುಗಳಾದ ಡಿ.ಮಲ್ಲೇಶಪ್ಪ, ಜಿ.ಎಂ.ರುದ್ರಗೌಡ್ರು, ಕೆ.ಜಿ.ಮಹೇಶ್ವರಪ್ಪ, ಅಂಜಿನಪ್ಪ, ಲಿಂಗೇಶ್, ಅನ್ವರ್ ಬಾಷಾ, ರಿಯಾಜ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ನರೇಂದ್ರಬಾಬು ಮತ್ತಿತರರಿದ್ದರು.

error: Content is protected !!