ಕಾಂತರಾಜ್ ವರದಿ ಅವೈಜ್ಞಾನಿಕ

ಕಾಂತರಾಜ್ ವರದಿ ಅವೈಜ್ಞಾನಿಕ

ಮತ್ತೊಮ್ಮೆ ಜಾತಿ ಗಣತಿ ನಡೆಸಲು ಮಹಾಸಭಾ ಅಧ್ಯಕ್ಷ ಶಿವಶಂಕರಪ್ಪ ಒತ್ತಾಯ

ಬೆಂಗಳೂರು, ನ. 9 – ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಒಕ್ಕಲಿಗ ಸಮುದಾಯ ವಿರೋಧ ಮಾಡಿದ ಬೆನ್ನಲ್ಲೇ ಲಿಂಗಾಯತ ಸಮುದಾಯವೂ ಅದೇ ಹಾದಿಯನ್ನು ತುಳಿದಿದೆ.

ಕಾಂತರಾಜ್ ಅಧ್ಯಕ್ಷರಾಗಿದ್ದ ಹಿಂದುಳಿದ ವರ್ಗಗಳ ಆಯೋಗದ ವರದಿ ಅವೈಜ್ಞಾನಿಕವಾಗಿದೆ. ಅಲ್ಲದೆ, ಲೋಪ-ದೋಷಗಳಿಂದ ಕೂಡಿದ್ದು, ಅದನ್ನು ಸ್ವೀಕರಿಸಬಾರದು ಎಂದು ಅಖಿಲ ಭಾರತ ವೀರಶೈವ ಮಹಾ ಸಭಾ ಇಂದಿಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಜಾತಿಗಣತಿ ಅಗತ್ಯವಿದ್ದರೆ ಮತ್ತೊಮ್ಮೆ ಮನೆ ಮನೆಗೆ ಭೇಟಿ ನೀಡಿ ವೈಜ್ಞಾನಿಕ ಸಮೀಕ್ಷೆ ನಡೆಸಿ ವರದಿ ಪಡೆದುಕೊಳ್ಳಬೇಕು. ನಾವು ಜಾತಿ ಗಣತಿ ವಿರೋಧಿಗಳಲ್ಲ. ಆದರೆ, ಸಮರ್ಪಕ ಹಾಗೂ ವಾಸ್ತವ ಸಂಗತಿಗಳಿಂದ ಕೂಡಿರಬೇಕು ಎಂದು ಮಹಾಸಭಾ ಅಧ್ಯಕ್ಷ ಹಾಗೂ ಆಡಳಿತ ಪಕ್ಷದ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ಗೋಡೆಗಳ ನಡುವೆ ಕುಳಿತು ಸಿದ್ಧಪಡಿಸಿರುವ ವರದಿಯನ್ನು ಒಪ್ಪಲು ಸಾಧ್ಯವಿಲ್ಲ. ಆಧಾರ್ ಕಾರ್ಡ್‌ ಆಧಾರವಾಗಿಟ್ಟುಕೊಂಡು ಮತ್ತೆ ಸಮೀಕ್ಷೆ ನಡೆಸಬೇಕು ಎಂದು ಸಲಹೆ ಮಾಡಿದರು.

ಜಾತಿ ಗಣತಿ ವರದಿ ಈಗಾಗಲೇ 8 ವರ್ಷ ಗಳಷ್ಟು ಹಳೆಯದಾಗಿದ್ದು, ನ್ಯೂನತೆಗಳಿಂದ ಕೂಡಿದೆ. ನ್ಯೂನತೆಗಳಿರುವ ಕಾರಣ ಹೊಸದಾಗಿ ಹಾಗೂ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ವೈಜ್ಞಾನಿಕವಾಗಿ ವರದಿ ಸಿದ್ಧಪಡಿಸಬೇಕು.

ಸಕಲ ಜಾತಿ, ಜನಾಂಗಗಳಿಗೆ ಲೇಸನ್ನೇ ಬಯಸುವ ಸಮಾಜ ವೀರಶೈವ-ಲಿಂಗಾಯತ ಸಮುದಾಯವಾಗಿದೆ. ಎಲ್ಲರ ಒಳಿತನ್ನು ಬಯಸುವುದು ಸಮುದಾಯದ ಗುರಿ ಎಂದಿದ್ದಾರೆ. ಜಾತಿ ಗಣತಿ ಸಮೀಕ್ಷೆಯನ್ನೇ ಸಮರ್ಪಕವಾಗಿ ನಡೆಸಿಲ್ಲ. ಹಲವರ ಮನೆಗಳಿಗೆ ಭೇಟಿ ನೀಡದೆ, ವರದಿ ಸಿದ್ಧಪಡಿಸಲಾಗಿದೆ ಎಂಬ ದೂರುಗಳಿವೆ.

ಸಮೀಕ್ಷೆಯಲ್ಲಿ ವೀರಶೈವ-ಲಿಂಗಾಯತ ಸಮುದಾಯ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ ಎಂಬ ಮಾಹಿತಿ ಇದೆ. ಇದರಿಂದ ಸಮಾಜಕ್ಕೆ ತೀವ್ರ ಸ್ವರೂಪದ ನಷ್ಟವಾಗಲಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಸರ್ಕಾರ ಮತ್ತೊಮ್ಮೆ ಈ ಬಗ್ಗೆ ವಿವೇಚನಾಯುಕ್ತವಾಗಿ ಪರಾಮರ್ಶಿಸಿ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ ಎಂದರು.

ಈ ತಿಂಗಳ ಅಂತ್ಯದೊಳಗೆ ಸರ್ಕಾರಕ್ಕೆ ವರದಿ ತಲುಪಲಿದೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಶಿವಶಂಕರಪ್ಪ, ಸರ್ಕಾರ ವರದಿ ಪಡೆಯಲಿ. ಆದರೆ, ಅದನ್ನು ಒಪ್ಪಬಾರದು, ಅದನ್ನು ತಿರಸ್ಕರಿಸಬೇಕು ಎಂದರು.

2015ರಲ್ಲಿ ಆಗಿನ ಸಿದ್ದರಾಮಯ್ಯ ಸರ್ಕಾರ ಹೆಚ್. ಕಾಂತರಾಜ್ ಅವರ ಅಧ್ಯಕ್ಷತೆಯಲ್ಲಿ 170 ಕೋಟಿ ರೂ. ವೆಚ್ಚದಲ್ಲಿ  ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸಿತ್ತು. ಈ ಸಮೀಕ್ಷೆ ವರದಿಯನ್ನು ಇನ್ನೂ ಪ್ರಕಟಿಸಿಲ್ಲ.

ಬಿಹಾರ ಸರ್ಕಾರ ಇತ್ತೀಚೆಗೆ ಜಾತಿ ಗಣತಿ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸರ್ಕಾರ ಸಹ ಜಾತಿ ಸಮೀಕ್ಷಾ ವರದಿ ಪ್ರಕಟಿಸಬೇಕೆಂಬ ಒತ್ತಾಯ ಹೆಚ್ಚಾಗಿದೆ. ಈ ತಿಂಗಳಲ್ಲೇ ಸರ್ಕಾರ ವರದಿ ಬಿಡುಗಡೆ ಮಾಡಲಿದೆ ಎಂದೂ ಹೇಳಲಾಗಿತ್ತು.

ಆದರೆ, ಮೊದಲು ಒಕ್ಕಲಿಗ ಸಮುದಾಯದವರು ವರದಿ ವಿರೋಧಿಸಿದ್ದರು. ಈಗ ಲಿಂಗಾಯತ – ವೀರಶೈವ ಸಮಾಜ ಸಹ ವರದಿಯನ್ನು ಟೀಕಿಸಿದೆ. ದಲಿತರು ಹಾಗೂ ಇತರೆ ಹಿಂದುಳಿದ ವರ್ಗದವರು ವರದಿ ಪ್ರಕಟಿಸಲು ಒತ್ತಡ ಹೇರುತ್ತಿದ್ದಾರೆ. ಈ ವಿಷಯ ಸರ್ಕಾರವನ್ನು ಪೇಚಿಗೆ ಸಿಲಕಿಸುವ ಸಾಧ್ಯತೆ ಇದೆ.

ಕಳೆದ ವಾರ ಒಕ್ಕಲಿಗ ನಾಯಕರು ಸಭೆಯೊಂದನ್ನು ನಡೆಸಿದ್ದರು. ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಮುದಾಯದ ಸ್ವಾಮೀಜಿಗಳೂ ಪಾಲ್ಗೊಂಡಿದ್ದರು. ಜಾತಿ ಸಮೀಕ್ಷೆ ತಿರಸ್ಕರಿಸಬೇಕೆಂದು ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

ಬುಧವಾರ ಸಭೆ ನಡೆಸಿದ್ದ ದಲಿತರು, ಬುಡಕಟ್ಟು ಜನರು ಹಾಗೂ ಇತರೆ ಹಿಂದುಳಿದ ವರ್ಗಗಳ ಪ್ರತಿನಿಧಿಗಳು, ಕಾಂತರಾಜ್ ವರದಿ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಆಗಿನ ಸದಸ್ಯ ಕಾರ್ಯದರ್ಶಿ ಅಂತಿಮ ವರದಿಗೆ ಸಹಿ ಹಾಕಿಲ್ಲ. ಇದೂ ಸಹ ತಾಂತ್ರಿಕವಾಗಿ ವರದಿ ಬಿಡುಗಡೆಗೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವರದಿ ಈಗಲೂ ಆಯೋಗದ ಬಳಿ ಇದೆ. ಅದನ್ನು ಸಲ್ಲಿಸಿದ ನಂತರ ಸಂಪುಟದ ಎದುರು ಮಂಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!