ವಿಶ್ವಾಸದಿಂದ ಜನಸೇವೆ ಮಾಡಿದಾಗ ನಮ್ಮ ಕಾಯಕಕ್ಕೆ ಗೌರವ ಸಿಗಲು ಸಾಧ್ಯ

ವಿಶ್ವಾಸದಿಂದ ಜನಸೇವೆ ಮಾಡಿದಾಗ  ನಮ್ಮ ಕಾಯಕಕ್ಕೆ ಗೌರವ ಸಿಗಲು ಸಾಧ್ಯ

ವಿಜಯಪುರದ ಡೀಮ್ಡ್ ವಿವಿ ಘಟಿಕೋತ್ಸವದಲ್ಲಿ ಎಸ್ಸೆಸ್‌ಗೆ ಡಾಕ್ಟರೇಟ್‌

ವಿಜಯಪುರ, ಅ. 20 – ಶಾಸಕ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ  ಡಾ. ಶಾಮನೂರು ಶಿವಶಂಕರಪ್ಪ ಅವರಿಗೆ ನಗರದ ಬಿಎಲ್ ಡಿಇ ಡೀಮ್ಡ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಪ್ರತಿಷ್ಠಿತ ಬಿಎಲ್‌ಡಿಇ ಸಂಸ್ಥೆಯ ಡೀಮ್ಡ್ ವಿಶ್ವ ವಿದ್ಯಾಲಯದ 11ನೇ ಘಟಿಕೋತ್ಸವ ಇಂದು ನಡೆ ಯಿತು. ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿದ ಎಸ್ಸೆಸ್, ವಿಶ್ವಾಸದಿಂದ ಜನಸೇವೆ ಮಾಡಿದರೆ ಎಲ್ಲರೂ ನಮ್ಮ ಕಾಯಕವನ್ನು ಗುರುತಿಸಿ ಗೌರವಿಸುತ್ತಾರೆ ಎಂದು ಪ್ರತಿಪಾದಿಸಿದರು.

ಈಗಾಗಲೇ ನನಗೆ ಮೂರು ವಿಶ್ವವಿದ್ಯಾಲಯ ಗಳಿಂದ ಗೌರವ ಡಾಕ್ಟರೇಟ್ ದೊರಕಿದ್ದು, ಇದು ನಾಲ್ಕನೇಯ ಗೌರವವಾಗಿದೆ. ಇದಕ್ಕೆಲ್ಲ ನಾವು ಮಾಡುವ ಒಳ್ಳೆಯ ಕೆಲಸಗಳೇ ಕಾರಣ. ನಾನು ಏಳು ಬಾರಿ ಶಾಸಕನಾಗಿದ್ದೇನೆ. ಒಂದು ಬಾರಿ ಸಂಸದನಾಗಿ ಸೇವೆ ಸಲ್ಲಿಸಿದ್ದೇನೆ. ನನ್ನ ನಿಷ್ಠೆಯನ್ನು ಪರಿಗಣಿಸಿ ಪಕ್ಷ ಪ್ರತಿ ಬಾರಿ ನನಗೆ ಅವಕಾಶ ನೀಡಿದೆ ಎಂದು ಅವರು ಹೇಳಿದರು.

ಈಗ ಪದವಿ ಪಡೆದಿರುವ ವೈದ್ಯರು ತಾವು ಮಾಡುವ ದುಡಿಮೆಯಲ್ಲಿ ಹತ್ತು ಪೈಸೆಯಷ್ಟಾದರೂ ದಾನ ಧರ್ಮದ ಸೇವೆಗೆ ನೀಡಬೇಕು ಎಂದು ಅವರು ಕಿವಿಮಾತು ಹೇಳಿದರು.

ಈ ಹಿಂದೆ ಎಸ್. ನಿಜಲಿಂಗಪ್ಪನವರು ಅಧಿಕಾರದಲ್ಲಿದ್ದಾಗ ಬೆಳಗಾವಿ, ಕಲಬುರಗಿ, ದಾವಣಗೆರೆಗಳಿಗೆ ಮೆಡಿಕಲ್ ಕಾಲೇಜುಗಳನ್ನು ನೀಡಿದ್ದರು. ನಂತರ ವಿಜಯಪುರದಲ್ಲಿ ಬಿಎಲ್‌ಡಿಇ ಮತ್ತು ಬಾಗಲಕೋಟೆಯಲ್ಲಿ ಬಿವಿವಿಎಸ್ ಮೆಡಿಕಲ್ ಕಾಲೇಜುಗಳು ಆರಂಭವಾಗಿವೆ. ಹೆಚ್ಚೆಚ್ಚು ಕಾಲೇಜುಗಳು ಪ್ರಾರಂಭವಾದರೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗುತ್ತದೆ. ಈಗ ದೇಶ ಮತ್ತು ವಿದೇಶಗಳಲ್ಲಿ ಎಲ್ಲಿಯೇ ಹೋದರೂ ಇಲ್ಲಿನ ವೈದ್ಯರು ಸಿಗುತ್ತಾರೆ. ಇದು ಹೆಮ್ಮೆಯ ವಿಷಯ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಸಚಿವರಾದ ಎಂ.ಬಿ. ಪಾಟೀಲ್‌, ಶರಣ ಪ್ರಕಾಶ ಪಾಟೀಲ್‌, ವಿಧಾನ ಪರಿಷತ್ ಸದಸ್ಯ ಸುನೀಲ ಗೌಡ ಪಾಟೀಲ, ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಕುಲಪತಿ ಡಾ. ಆರ್. ಎಸ್. ಮುಧೋಳ, ಸಮಕುಲಪತಿ ಡಾ. ಅರುಣ ಚಂ. ಇನಾಮದಾರ, ಪ್ರಾಚಾರ್ಯ ಪ್ರೊ. ಅರವಿಂದ ಪಾಟೀಲ, ರಿಜಿಸ್ಟ್ರಾರ್ ಪ್ರೊ. ಆರ್.ವಿ. ಕುಲಕರ್ಣಿ, ಅಲೈಡ್ ಹೆಲ್ತ್ ಸೈನ್ಸಸ್ ಡೀನ್ ಡಾ. ಎಸ್.ವಿ. ಪಾಟೀಲ, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಎಸ್.ಎಸ್. ದೇವರಮನಿ ಉಪಸ್ಥಿತರಿದ್ದರು.

ಅಭಿನಂದನೆ : ಡೀಮ್ಡ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ಗೆ ಭಾಜನರಾಗಿರುವ ಎಸ್ಸೆಸ್ ಅವರನ್ನು ಹಿರಿಯ ಕೈಗಾರಿಕೋದ್ಯಮಿ ಅಥಣಿ ವೀರಣ್ಣ, ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ, ವೀರಶೈವ-ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್ ಅಭಿನಂದಿಸಿದ್ದಾರೆ.

error: Content is protected !!