ಟ್ರ್ಯಾಕ್ಟರ್ ರಾಲಿಗೆ ಮುಂದಾದ ರೈತರಿಗೆ ಪೊಲೀಸರ ತಡೆ
ದಾವಣಗೆರೆ, ಸೆ. 22 – ಭದ್ರಾ ಜಲಾಶಯದಿಂದ ಬಲದಂಡೆಗೆ ಸತತ 100 ದಿನ ನೀರು ಹರಿಸಲು ಆಗ್ರಹಿಸಿ ಟ್ರ್ಯಾಕ್ಟರ್ ರಾಲಿ ನಡೆಸಲು ಮುಂದಾದ ರೈತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ನಗರದ ಬೀರಲಿಂಗೇಶ್ವರ ದೇವಾಲಯದ ಆವರಣದಿಂದ ಟ್ರ್ಯಾಕ್ಟರ್ ರಾಲಿ ನಡೆಸಲು ಭಾರತೀಯ ರೈತ ಒಕ್ಕೂಟದ ಮುಖಂಡರು ನಿರ್ಧರಿಸಿದ್ದರು.
ಈ ಹಿಂದೆ ಸತತ 100 ದಿನ ನೀರು ಹರಿಸುವುದಾಗಿ ತಿಳಿಸಿದ್ದ ಕಾರಣ ಬಿತ್ತನೆ ಮಾಡಿದ್ದೇವೆ. ಈಗ ಆನ್ ಅಂಡ್ ಆಫ್ ಪದ್ಧತಿಯಲ್ಲಿ ನೀರು ಬಿಡುವುದಾಗಿ ತಿಳಿಸಲಾಗಿದೆ. ಇದರಿಂದಾಗಿ ಭತ್ತದ ಬೆಳೆ ಹಾಳಾಗುವ ಆತಂಕವಿದೆ ಎಂದು ರೈತ ಮುಖಂಡರು ತಿಳಿಸಿದರು.
ನಾಲ್ಕು ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಇದುವರೆಗೂ ಭದ್ರಾ ಅಚ್ಚುಕಟ್ಟಿನ ನೀರಾವರಿ ಸಲಹಾ ಸಮಿತಿ ಸಭೆ ನಡೆಸಲು ಮುಂದಾಗಿಲ್ಲ. ರೈತರನ್ನು ಸರ್ಕಾರ ನಿರ್ಲಕ್ಷಿಸುವುದರ ವಿರುದ್ಧ ಟ್ರ್ಯಾಕ್ಟರ್ ರಾಲಿ ನಡೆಸುವುದಾಗಿ ರೈತ ಮುಖಂಡರು ಹೇಳಿದರು.
ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಾ ರೈತರು ಟ್ರ್ಯಾಕ್ಟರ್ ರಾಲಿಗೆ ಮುಂದಾದರು. ಆದರೆ, ಬೀರಲಿಂಗೇಶ್ವರ ದೇವಾಲಯದ ಗೇಟ್ ಮುಚ್ಚಿದ ಪೊಲೀಸರು, ರೈತರು ಹೊರ ಹೋಗದಂತೆ ತಡೆದರು.
ರೈತರನ್ನು ಗಮನಿಸದ ಸರ್ಕಾರ
ಮುಖಂಡರಿಂದ ತೀವ್ರ ಆಕ್ರೋಶ
ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಸಹ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ರೈತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆದ್ದಲು ಪ್ರದೇಶದ ಬೆಳೆ ಈಗಾಗಲೇ ಹಾಳಾಗಿದೆ. ಭತ್ತಕ್ಕೂ ನೀರು ಕೊಡದೇ ಇದ್ದರೆ ಮುಂದಿನ ದಿನಗಳಲ್ಲಿ ರೈತರು ಸಂಕಷ್ಟಕ್ಕೆ ಸಿಲುಕುವ ಜೊತೆಗೆ, ಮೇವಿಲ್ಲದೇ ಜಾನುವಾರು ಗಳೂ ಸಮಸ್ಯೆಗೆ ಸಿಲುಕಲಿವೆ ಎಂದು ತ.
ಕಾವೇರಿ ವಿಷಯ ದೊಡ್ಡದು ಎಂಬಂತೆ ಬಿಂಬಿಸುತ್ತಿರುವ ಸರ್ಕಾರ, ಕೇವಲ ಮಂಡ್ಕಕ್ಕೆ ಸೀಮಿತವಾಗಿರುವಂತಿದೆ. ಆದರೆ, ಕೆ.ಆರ್.ಎಸ್.ಗಿಂತ ಭದ್ರಾ ಅಣೆಕಟ್ಟೆ ಹೆಚ್ಚಿನ ಜಲ ಸಂಗ್ರಹ ಹೊಂದಿದೆ. ಆದರೂ, ಈ ಭಾಗದ ರೈತರ ಸಮಸ್ಯೆ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಹೆಚ್.ಆರ್. ಶಾಮನೂರು ಲಿಂಗರಾಜ್ ಟೀಕಿಸಿದರು.
ಮುಖಂಡರಾದ ಡಾ. ರವಿಕುಮಾರ್ ಮಾತನಾಡಿ, ಭದ್ರಾ ನೀರು ಮಧ್ಯ ಕರ್ನಾಟಕಕ್ಕೆ ಜೀವಜಲ. ಈ ಹೋರಾಟದಲ್ಲಿ ರೈತರಷ್ಟೇ ಅಲ್ಲದೇ ಎಲ್ಲ ವರ್ಗದ ನಾಗರಿಕರು ಭಾಗವಹಿಸಬೇಕು. 22 ಟಿ.ಎಂ.ಸಿ.ಗೂ ಹೆಚ್ಚು ನೀರು ಕೃಷಿಗೆ ಇದೆ. ಆದರೂ 15 ಟಿಎಂಸಿ ನೀರು ಒದಗಿಸಲು ಸರ್ಕಾರ ಸಿದ್ಧವಿಲ್ಲ ಎಂದು ಹೇಳಿದರು.
ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ್ ಮಾತನಾಡಿ, ಸತತ 100 ದಿನ ನೀರು ಹರಿಸುವುದಾಗಿ ಸರ್ಕಾರ ತಿಳಿಸಿದ ಹಿನ್ನೆಲೆಯಲ್ಲಿ ರೈತರು ಸಾಲ ಸೋಲ ಮಾಡಿ ಬಿತ್ತನೆ ಮಾಡಿದ್ದಾರೆ. ಆದರೆ, ಈಗ ಆನ್ ಅಂಡ್ ಆಫ್ ಪದ್ಧತಿ ಎಂದು ಹೇಳುತ್ತಿರುವುದರಿಂದ ರೈತರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ ಎಂದರು.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ರೈತರು, ಎರಡು ದಿನಗಳ ಹಿಂದೆಯೇ ಪ್ರತಿಭಟನೆ ಮಾಡುವುದಾಗಿ ತಿಳಿಸಲಾಗಿತ್ತು. ಶಾಂತಿಯುತ ಪ್ರತಿಭಟನೆಗೆ ಅಡ್ಡಿಪಡಿಸಲಾಗುತ್ತಿದೆ ಎಂದು ಆಕ್ಷೇಪಿಸಿದರು.
ಆಗ ಪೊಲೀಸರು ಹಾಗೂ ರೈತರ ನಡುವೆ ವಾಗ್ವಾದ ನಡೆಯಿತು. ನಂತರ ಪ್ರತಿಭಟನಾ ನಿರತ ರೈತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ನಿನ್ನೆ ರೈತರು ಹೆದ್ದಾರಿ ತಡೆ ನಡೆಸಿದ್ದರು. ಟ್ರ್ಯಾಕ್ಟರ್ ರಾಲಿ ಮೂಲಕ ಮತ್ತೆ ಹೆದ್ದಾರಿ ತಡೆ ನಡೆಸುವ ಮಾಹಿತಿ ಇತ್ತು. ಹೆದ್ದಾರಿ ತಡೆದರೆ ದೊಡ್ಡ ಸಮಸ್ಯೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರೈತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಹೆಚ್.ಆರ್. ಶಾಮನೂರು ಲಿಂಗರಾಜ್, ಕೊಳೇನಹಳ್ಳಿ ಸತೀಶ್, ಬೆಳವನೂರು ನಾಗೇಶ್ವರ ರಾವ್, ಲೋಕಿಕೆರೆ ನಾಗರಾಜ್, ಡಾ. ರವಿಕುಮಾರ್, ಗುರುನಾಥ್, ಕುಂದುವಾಡ ಗಣೇಶಪ್ಪ, ಕುಂದುವಾಡ ಹನುಮಂತಪ್ಪ, ಮಹೇಶ್ವರಪ್ಪ ಹೊಸ ಕುಂದುವಾಡ, ಅಗಸನಕಟ್ಟೆ ಅಣ್ಣಪ್ಪ, ಪುನೀತ್ ಮತ್ತಿತರರು ಪಾಲ್ಗೊಂಡಿದ್ದರು.