ಬಿಎಸ್ಸೆನ್ನೆಲ್ ಪುನರುಜ್ಜೀವನ ಅನಿವಾರ್ಯ : ಸಂಸದ ಸಿದ್ದೇಶ್ವರ

ಬಿಎಸ್ಸೆನ್ನೆಲ್ ಪುನರುಜ್ಜೀವನ ಅನಿವಾರ್ಯ : ಸಂಸದ ಸಿದ್ದೇಶ್ವರ

ದಾವಣಗೆರೆ, ಸೆ. 10- ಭಾರತದ ಉದ್ದಗಲಕ್ಕೂ ವಿಸ್ತರಿಸಿರುವ ಬಿಎಸ್ಸೆನ್ನೆಲ್ ಕಂಪನಿಯು ಗಡಿ ಮತ್ತು ಸೂಕ್ಷ್ಮ ವಲಯದಲ್ಲಿನ ಸೇವೆಗೆ ಹಾಗೂ ಗ್ರಾಮೀಣ ಭಾರತಕ್ಕೆ ಡಿಜಿಟಲ್ ಸೇವೆಗಳನ್ನು ಒದಗಿಸಲು ಅನಿವಾರ್ಯವಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ನಗರದಲ್ಲಿ ಮೊನ್ನೆ ನಡೆದ ದೂರವಾಣಿ ಸಲಹಾ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅದೇ ರೀತಿ ಖಾಸಗಿ ಕಂಪನಿಗಳು ಏಕಪಕ್ಷೀಯವಾಗಿ ದರ ಏರಿಕೆ ಮಾಡದಂತೆ ತಡೆಯಲು ಕೂಡ ಸರ್ಕಾರಿ ಕಂಪನಿಯು ಮಾರುಕಟ್ಟೆಯಲ್ಲಿ ಜೀವಂತವಾಗಿರಬೇಕಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಷ್ಟದಲ್ಲಿರುವ ಬಿ.ಬಿಎಸ್ಸೆನ್ನೆಲ್ ಪುನರುಜ್ಜೀವನಕ್ಕಾಗಿ 89,047 ಕೋಟಿ ರೂ.ಗಳ  ಮೂರನೇ ಪ್ಯಾಕೇಜನ್ನು ಘೋಷಣೆ ಮಾಡಿದೆ ಎಂದರು.

ಈ ಹಿಂದೆ ಘೋಷಣೆ ಮಾಡಿದ ಎರಡು ಪ್ಯಾಕೇಜ್‍ಗಳಿಂದ ಕಂಪನಿಯಲ್ಲಿ ಸ್ಥಿರತೆ ಮೂಡಿದೆ. 2021-22 ರ ಹಣಕಾಸು ವರ್ಷದಿಂದ ಬಿ.ಎಸ್.ಎನ್.ಎಲ್. ಸ್ವಲ್ಪಮಟ್ಟಿಗೆ ಚೇತರಿಕೆ ಕಂಡಿದೆ. ಆದಾಯವು 19,053 ಕೋಟಿಗಳಿಂದ 20,944 ಕೋಟಿಗೆ ಏರಿಕೆಯಾಗಿದೆ. ಸಾಲವೂ ಕೂಡ 32,944 ಕೋಟಿಗಳಿಂದ 22,289 ಕೋಟಿ ರೂಗಳಿಗೆ ಕುಸಿದಿದೆ ಎಂದು ಹೇಳಿದರು.

ಬಿಎಸ್ಸೆನ್ನೆಲ್  ಪುನರುಜ್ಜೀವನಕ್ಕಾಗಿ ಸರ್ಕಾರ ಹಲವಾರು ಪ್ರಯತ್ನಗಳನ್ನು ಮಾಡಿದೆ. ಈ ಹಿಂದೆ ಸ್ಯಾಮ್ ಪಿತ್ರೋಡ ನೇತೃ ತ್ವದ ಸಮಿತಿಯು ಕಂಪನಿಯನ್ನು ಲಾಭದಾಯಕ ವಾಗಿಸಲು ಖಾಸಗಿ ವೃತ್ತಿಪರರನ್ನು ನೇಮಿಸಿ ಕೊಳ್ಳುವುದ ರಿಂದಾರಂಭಿಸಿ ಟವರ್ ನಿರ್ವಹ ಣೆಗೆ ಪ್ರತ್ಯೇಕ ಅಂಗಸಂಸ್ಥೆಯನ್ನು ಸ್ಥಾಪಿಸುವ ವರೆಗೆ ಹಲವಾರು ಶಿಫಾರಸ್ಸು ಮಾಡಿತ್ತು. ಇವೆಲ್ಲವೂ ಕೇವಲ ಸಲಹೆಗಳಾಗಿಯೇ ಉಳಿ ದುಕೊಂಡವು ಜಾರಿಯಾಗಿರಲಿಲ್ಲ ಎಂದರು.

ದಾವಣಗೆರೆ ಟೆಲಿಕಾಂ ಜಿಲ್ಲೆ ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ನಷ್ಟದ ಪ್ರಮಾಣವನ್ನು ಕಡಿಮೆಗೊಳಿಸಿಕೊಂಡಿದೆ. ಒಟ್ಟಾರೆಯಾಗಿ ದಾವಣಗೆರೆ ಟೆಲಿಕಾಂ ಜಿಲ್ಲೆಯನ್ನೊಳಗೊಂಡಂತೆ ಬಿಎಸ್ಸೆನ್ನೆಲ್ ಹುಬ್ಬಳ್ಳಿ ಬ್ಯುಸಿನೆಸ್ ಏರಿಯಾ ಸಾಕಷ್ಟು ನಷ್ಟದಲ್ಲಿ ನಡೆಯುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದರು.

ಹೊನ್ನಾಳಿ ತಾಲ್ಲೂಕಿನ ಎಂ.ಹನುಮನಹಳ್ಳಿ, ಕೆಂಗಲಹಳ್ಳಿ, ಫಲವನಹಳ್ಳಿ, ಚನ್ನಗಿರಿ ತಾಲ್ಲೂಕಿನ ಮುಗಳಿಹಳ್ಳಿ, ಗುಡ್ಡದಕೊಮಾರನಹಳ್ಳಿ, ರಾಜಗೊಂಡನಹಳ್ಳಿ ತಾಂಡ, ಬುಸ್ಸೇನಹಳ್ಳಿ, ನೆಲ್ಲಿಹಂಕ್ಲು, ಹೆಬ್ಬಳಗೆರೆ, ಅಗರಬನ್ನಿಹಟ್ಟಿ, ಜಮ್ಮಾಪುರ, ಹಾಗೂ ಹರಪನಹಳ್ಳಿ ತಾಲ್ಲೂಕಿನ ಒಳತಾಂಡ ಹಾಗೂ ಜಿಟ್ಟಿನಕಟ್ಟೆ ಗ್ರಾಮಗಳಲ್ಲಿ ಬಿಸ್ಸೆನ್ನೆಲ್ ಸಿಗ್ನಲ್ ಅಲಭ್ಯತೆಯ ಕುರಿತು ಸಚಿವರ ಗಮನ ಸೆಳೆದ ಪರಿಣಾಮವಾಗಿ ಬಿ.ಎಸ್.ಎನ್.ಎಲ್. ವತಿಯಿಂದ ಈ ಗ್ರಾಮಗಳಲ್ಲಿ ಟವರ್ ಅಳವಡಿಸಲು ಸರ್ವೆ ನಡೆಸುತ್ತಿರುವುದಾಗಿ ಜನರಲ್ ಮ್ಯಾನೇಜರ್ ತ್ರಿಪಾಠಿ ಸಭೆಗೆ ತಿಳಿಸಿದರು.  ಬರುವ ಡಿಸೆಂಬರ್ ವೇಳೆಗೆ ಬಿಎಸ್ಸೆನ್ನೆಲ್  4 ಜಿ ಸೇವೆ ಒದಗಿಸುವುದಾಗಿ ತ್ರಿಪಾಠಿ ತಿಳಿಸಿದರು.

ಬಿಎಸ್ಸೆನ್ನೆಲ್ ನ್ಯೂನ್ಯತೆಗಳ ಬಗ್ಗೆ ಸಭೆಯಲ್ಲಿ ಹಾಜರಿದ್ದ ದೂರವಾಣಿ ಸಲಹಾ ಸಮಿತಿ ಸದಸ್ಯರು ಸಂಸದರ ಗಮನಕ್ಕೆ ತಂದರು. ಗ್ರಾಮ ಪಂಚಾಯತಿಗಳಿಗೆ ಒದಗಿಸಿರುವ ಬ್ರ್ಯಾಡ್‍ಬ್ಯಾಂಡ್ ಸಂಪರ್ಕ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ  ಇದರಿಂದಾಗಿ ಗ್ರಾಮಪಂಚಾಯತಿಗಳಲ್ಲಿ ಕೆಲಸ ಮಾಡುವುದು ಕಷ್ಟವಾಗಿದೆ ಎಂದು ಸದಸ್ಯರು ದೂರಿದರು. 

ಈ ಎಲ್ಲಾ ನ್ಯೂನ್ಯತೆಗಳನ್ನು 3 ತಿಂಗಳ ಒಳಗಾಗಿ ಸರಿಪಡಿಸುವುದಾಗಿ ಅಧಿಕಾರಿಗಳು ತಿಳಿಸಿದರು.

 ಸಭೆಯಲ್ಲಿ ದೂರವಾಣಿ ಸಲಹಾ ಸಮಿತಿ ಸದಸ್ಯರುಗಳಾದ ಕಂದನಕೋವಿ ಹನುಮಂತಪ್ಪ, ರಾಜೇಶ್ ಕುರುಗೋಡ, ಗುಡ್ಡಪ್ಪ, ಅಸಗೋಡು ಸುರೇಶಗೌಡ್ರು, ಬಿ.ಎಸ್.ಎನ್.ಎಲ್. ಜನರಲ್ ಮ್ಯಾನೇಜರ್ ತ್ರಿಪಾಠಿ. ಸಬ್ ಡಿವಿಜನಲ್ ಇಂಜಿನಿಯರ್ ಗುರುಪ್ರಸಾದ್, ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!