ಮೊದಲು ದಕ್ಷಿಣ ಧ್ರುವ ತಲುಪಿ ಇತಿಹಾಸ ಬರೆದ ಇಸ್ರೋ
ಬೆಂಗಳೂರು, ಆ. 23 – ಬಾಹ್ಯಾಕಾಶ ವಲಯದಲ್ಲಿ ದಿಗ್ಗಜ ಸಾಧನೆ ಮಾಡಿರುವ ಇಸ್ರೋ, ಚಂದ್ರಯಾನ – 3ನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸುವಲ್ಲಿ ಯಶಸ್ಸು ಕಂಡಿದೆ. ಸಂಜೆ 6.04ರ ಸಮಯದಲ್ಲಿ ಈ ಸಾಧನೆ ಮಾಡುವುದರೊಂದಿಗೆ, ಚಂದ್ರನ ತಲುಪಿದ ನಾಲ್ಕನೇ ದೇಶವಾಗಿ ಭಾರತ ಹೊರ ಹೊಮ್ಮಿದೆ. ದಕ್ಷಿಣ ಧ್ರುವ ತಲುಪಿದ ಮೊದಲ ದೇಶ ಭಾರತ ಎಂಬ ಹೆಗ್ಗಳಿಕೆಯೂ ದೊರೆತಿದೆ.
ಮೂರನೇಯ ಮಹತ್ವಾಕಾಂಕ್ಷಿ ಚಂದ್ರಯಾನದಲ್ಲಿ, ಚಂದ್ರನ ಮೇಲೆ ಗಗನನೌಕೆ ಇಳಿಸುವ ಭಾರತೀಯ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ ಕನಸು ನನಸಾಗಿದೆ.
ಲ್ಯಾಂಡರ್ ಆಗಿರುವ ವಿಕ್ರಮ ಹಾಗೂ ರೋವರ್ ಪ್ರಗ್ಯಾನ್ಗಳು ಚಂದ್ರನ ಮೇಲೆ ಇಳಿಯುವುದರೊಂದಿಗೆ ಬಾಹ್ಯಾಕಾಶದಲ್ಲಿ ಭಾರತದ ಸಾಧನೆಯನ್ನು ವಿಶ್ವಕ್ಕೆ ಸಾರಿದಂತಾಗಿದೆ. ಕಳೆದ ವಾರವಷ್ಟೇ ರಷ್ಯಾದ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಪ್ರಯತ್ನದಲ್ಲಿ ವೈಫಲ್ಯ ಕಂಡು, ಪತನಗೊಂಡಿತ್ತು. ಇದು ಚಂದ್ರಯಾನದ ಹಾದಿ ಎಷ್ಟು ಕಠಿಣ ಎಂಬುದನ್ನು ತೋರಿಸುತ್ತಿದೆ.
ವಿಜ್ಞಾನಿಗಳ ವಲಯದಲ್ಲಿ ಸಾಧನೆಯ ಸಂಭ್ರಮ
ಚಂದ್ರನ ಮೇಲೆ ಭಾರತದ ಅಚ್ಚಳಿಯದ ಗುರುತು
ನವದೆಹಲಿ, ಆ. 23 – ಚಂದ್ರನ ದಕ್ಷಿಣ ಧ್ರುವದ ಮೇಲೆ ಮೊದಲ ಹೆಜ್ಜೆ ಇಡುವಲ್ಲಿ ಇಸ್ರೋ ವಿಶ್ವದಲ್ಲೇ ಮೊದಲಿಗನಾಗಿರುವುದು ದೇಶದ ವಿಜ್ಞಾನ ಸಮುದಾಯದಲ್ಲಿ ಹರ್ಷದ ಹೊಳೆ ಹರಿಸಿದೆ.
ಹಿರಿಯ ವಿಜ್ಞಾನಿಗಳು ಹಾಗೂ ಪರಿಣಿತರು ಇಸ್ರೋದ ದೈತ್ಯ ಸಾಧನೆಗೆ ಪ್ರಶಂಸಿಸಿದ್ದಾರೆ ಹಾಗೂ ಚಂದ್ರನ ಮೇಲೆ ಭಾರತ ಅಚ್ಚಳಿಯದ ಗುರುತು ಮೂಡಿಸಿದೆ ಎಂದು ಹೇಳಿದ್ದಾರೆ.
ಚಂದ್ರಯಾನ – 3 ಯಶಸ್ಸು ಬಾಹ್ಯಾಕಾಶ ಯಾನ ದಲ್ಲಿ ಸಂಘಟಿತ ಪ್ರಗತಿಗೆ ಸಾಕ್ಷಿಯಾಗಿದೆ. ವಿವಿಧತೆಯಲ್ಲಿ ಏಕತೆ ಎಂಬಂತೆ ನಾವೆಲ್ಲರೂ ಬಾಹ್ಯಾಕಾಶ ಯಾನದಲ್ಲಿ ಸಾಗಿರುವುದನ್ನು ತೋರಿಸುತ್ತಿದೆ ಎಂದು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಸ್ಟ್ರೋಫಿಸಿಕ್ಸ್ ವಿಜ್ಞಾನಿ ಡಾ. ಕ್ರಿಸ್ಫಿನ್ ಕಾರ್ತಿಕ್ ಹೇಳಿದ್ದಾರೆ.
ಇಸ್ರೋದ ಈ ದೈತ್ಯ ಸಾಧನೆ ಮುಂದಿನ ಪೀಳಿಗೆಯ ವಿಜ್ಞಾನಿಗಳು ಹಾಗೂ ಸಂಶೋಧಕರಿಗೆ ಸ್ಫೂರ್ತಿ ಎಂದು ದೆಹಲಿಯ ಆಮ್ನಿಪ್ರೆಸೆಂಟ್ ರೋಬೋಟ್ ಕಂಪನಿಯ ಸಿಇಒ ಆಕಾಶ್ ಸಿನ್ಹಾ ಹೇಳಿದ್ದಾರೆ.
ಚಂದ್ರನ ದಕ್ಷಿಣ ಧ್ರುವದಲ್ಲಿ ಗಗನನೌಕೆ ಇಳಿಸುವಲ್ಲಿ ಭಾರತ ಅಸಾಮಾನ್ಯ ಸಾಧನೆ ಮಾಡಿದೆ ಎಂದು ಸಿನ್ಹಾ ಹೇಳಿದ್ದಾರೆ. ಶಿವ ನಾಡರ್ ಇನ್ಸ್ಟಿಟ್ಯೂಷನ್ ಆಫ್ ಎಮಿನೆನ್ಸ್ನ ಪ್ರಾಧ್ಯಾಪಕರೂ ಆಗಿರುವ ಸಿನ್ಹಾ, ಚಂದ್ರಯಾನ – 3 ರೋವರ್ನ ತಂತ್ರಾಂಶ ರೂಪಿಸುವಲ್ಲಿ ಸಹಭಾಗಿಯಾಗಿದ್ದರು.
ಚಂದ್ರನ ಮೇಲೆ ನೀರು ಪತ್ತೆ ಮಾಡುವಲ್ಲಿ ಇಸ್ರೋದ ಮೊದಲ ಚಂದ್ರಯಾನ ಮುಂಚೂಣಿ ಪಾತ್ರ ವಹಿಸಿತ್ತು. ಇಸ್ರೋ ಈಗ ಹೊಸ ಎತ್ತರಗಳನ್ನು ತಲುಪುತ್ತಿದೆ ಹಾಗೂ ಹೊಸ ಮಾನದಂಡಗಳನ್ನು ಸಿದ್ಧಪಡಿಸುತ್ತಿದೆ ಎಂದೂ ಅವರು ಹೇಳಿದ್ದಾರೆ. ಚಂದ್ರ ಸ್ಪರ್ಷ ಭವಿಷ್ಯದ ಚಟುವಟಿಕೆಗಳ ಆರಂಭವಾಗಿದೆ. ಚಂದ್ರ ಬಾಹ್ಯಾಕಾಶದ ಇನ್ನಷ್ಟು ಆಚೆಗೆ ಸಾಗುವ ಹೆಬ್ಬಾಗಿಲು ಎಂದು ಕೊಲ್ಕೊತಾದ ಇಂಡಿಯನ್ ಸೆಂಟರ್ ಫಾರ್ ಸ್ಪೇಸ್ ಫಿಸಿಕ್ಸ್ ನಿರ್ದೇಶಕ ಸಂದೀಪ್ ಚಕ್ರವರ್ತಿ ಹೇಳಿದ್ದಾರೆ.
ಇಸ್ರೋ ಅಭಿವೃದ್ಧಿ ಪಡಿಸಿದ ಕೃತಕ ಬುದ್ಧಿವಂತಿಕೆ ಹಾಗೂ ಭಾರತೀಯ ವಿಜ್ಞಾನಿಗಳು ರೂಪಿಸಿದ ವ್ಯವಸ್ಥೆಗಳು ಚಂದ್ರಯಾನದಲ್ಲಿರುವ ಅಪಾಯಗಳನ್ನು ಗುರುತಿಸಿ ಅಂತಿಮವಾಗಿ ಯಶಸ್ಸು ದೊರಕಿಸಿವೆ ಎಂದು ಚಕ್ರವರ್ತಿ ಹೇಳಿದ್ದಾರೆ.
ಇಸ್ರೋದ ಕೃತಕ ಬುದ್ಧಿವಂತಿಕೆ ಆಧರಿತ ತಂತ್ರಾಂಶಗಳು ಉತ್ತಮವಾಗಿ ಕೆಲಸ ಮಾಡಿವೆ. ಮುಂದೆ ಇವೇ ತಂತ್ರಾಂಶಗಳನ್ನು ಬದಲಿಸಿ ಇತರೆ ಗಗನನೌಕೆಗಳ ನಿಯಂತ್ರಣಕ್ಕೆ ಬಳಸಬಹುದು ಎಂದು ವಿಗ್ಯಾನ್ ಪ್ರಸಾರ್ ಸಂಸ್ಥೆಯ ವಿಜ್ಞಾನಿ ಟಿ.ವಿ. ವೆಂಕಟೇಶ್ವರನ್ ಹೇಳಿದ್ದಾರೆ.
ಇಸ್ರೋದ ಈ ಯಶಸ್ಸು ಕೊನೆಯಲ್ಲ. ಇದು ಹೊಸ ಶೋಧದ ಆರಂಭ. ಚಂದ್ರನ ಮೇಲೆ ಯಾವುದೇ ಚಟುವಟಿಕೆಗಳ ಕುರಿತು ನಿರ್ಬಂಧಗಳನ್ನು ಹೇರುವ ಸಂದರ್ಭ ಬಂದಾಗ ಭಾರತದ ನಿಲುವು ಪಡೆಯಬೇಕಾಗುತ್ತದೆ. ಇದು ಭಾರತದ ಹೊಸ ಪ್ರಭಾವ ತೋರಿಸುತ್ತದೆ ಎಂದು ಚಕ್ರವರ್ತಿ ತಿಳಿಸಿದ್ದಾರೆ.
ಜುಲೈ 14ರಂದು ಉಡಾವಣೆಗೊಂಡಿದ್ದ ಚಂದ್ರಯಾನ -3, ಅತ್ಯಂತ ನಿಖರವಾದ 41 ದಿನಗಳ ಪ್ರಯಾಣದ ನಂತರ ಚಂದ್ರನ ಮೇಲೆ ಇಳಿದಿದೆ.
ಕಳೆದ ನಾಲ್ಕು ವರ್ಷಗಳಲ್ಲಿ ಎರಡನೇ ಬಾರಿ ಇಸ್ರೋ ಚಂದ್ರಯಾನದ ಪ್ರಯತ್ನ ನಡೆಸಿತ್ತು. 2019ರಲ್ಲಿ ನಡೆಸಿದ ಪ್ರಯತ್ನ ವಿಫಲವಾಗಿತ್ತು. ಈ ಬಾರಿ 140 ಕೋಟಿ ಭಾರತೀಯರ ಕನಸುಗಳನ್ನು ಹೊತ್ತ ಚಂದ್ರಯಾನ – 3, ಯಶಸ್ಸು ಕಾಣುವುದರೊಂದಿಗೆ ದೇಶಾದ್ಯಂತ ಸಂಭ್ರಮಕ್ಕೆ ಕಾರಣವಾಗಿದೆ.
ಅಮೆರಿಕ, ಚೀನ ಹಾಗೂ ಹಿಂದಿನ ಸೋವಿಯತ್ ಒಕ್ಕೂಟಗಳು ಚಂದ್ರನ ಮೇಲೆ ಗಗನನೌಕೆ ಇಳಿಸುವಲ್ಲಿ ಯಶಸ್ಸು ಕಂಡಿವೆ. ಆದರೆ, ಯಾವ ದೇಶವೂ ಇದುವರೆಗೆ ಚಂದ್ರನ ದಕ್ಷಿಣ ಧ್ರುವ ತಲುಪಲು ಸಾಧ್ಯವಾಗಿರಲಿಲ್ಲ.
ಲ್ಯಾಂಡರ್ ಹಾಗೂ ಆರು ಗಾಲಿಗಳ ರೋವರ್ ಮುಂದಿನ ಹದಿನಾಲ್ಕು ದಿನಗಳ ಕಾಲ ಚಂದ್ರನ ಮೇಲೆ ಕಾರ್ಯನಿರ್ವಹಿಸಲಿವೆ. ಇಸ್ರೋ ವಿಜ್ಞಾನಿಗಳು ಇಲ್ಲಿ ಹಲವಾರು ಪ್ರಯೋಗಗಳನ್ನು ನಡೆಸಲಿದ್ದಾರೆ.
ಚಂದ್ರಯಾನವು 41 ದಿನಗಳ ಸುದೀರ್ಘ ಅವಧಿಯದ್ದಾಗಿತ್ತು. ಆದರೆ, ಚಂದ್ರನ ಮೇಲೆ ಇಳಿಯುವ ಕೊನೆಯ 20 ನಿಮಿಷಗಳು ಅತ್ಯಂತ ಕಠಿಣವಾಗಿದ್ದವು. 5.44ಕ್ಕೆ ಚಂದ್ರನ ಮೇಲೆ ಇಳಿಯುವ ಪ್ರಕ್ರಿಯೆ ಆರಂಭವಾದಾಗ, ಇಸ್ರೋಗೆ ದೊಡ್ಡ ಸವಾಲು ಎದುರಾಗಿತ್ತು. ಈ ಇಪ್ಪತ್ತು ನಿಮಿಷಗಳು ಪೂರ್ಣಗೊಂಡು ಯಶಸ್ಸು ದೊರೆತಾಗ, ಬೆಂಗಳೂರಿನಲ್ಲಿ ಇಸ್ರೋ ಕೇಂದ್ರದ ವಿಜ್ಞಾನಿಗಳು ವಿಜಯೋತ್ಸಾಹದಿಂದ ಸಂಭ್ರಮಿಸಿದರು.