ದಾವಣಗೆರೆ, ಆ. 23- ನಗರದಲ್ಲಿ 120 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅತ್ಯಾಧುನಿಕ ವಾದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣವನ್ನು ಡಿಸೆಂಬರ್ ಅಂತ್ಯದ ವೇಳೆಗೆ ಉದ್ಘಾಟಿಸ ಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಅವರು ಬುಧವಾರ ಪಿ.ಬಿ.ರಸ್ತೆಯಲ್ಲಿ ನಿರ್ಮಾಣಗು ತ್ತಿರುವ ಬಸ್ ನಿಲ್ದಾಣ ಕಾಮ ಗಾರಿ ಯನ್ನು ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರೊಂದಿಗೆ ವೀಕ್ಷಿಸಿ, ಪತ್ರಕರ್ತರೊಂದಿಗೆ ಮಾತನಾಡಿದರು.
ಪಂಪಾಪತಿ ಅವರ ಅವಧಿಯಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗಿತ್ತು. 2017ರಲ್ಲಿ ನಾನು ಸಾರಿಗೆ ಸಚಿವನಾಗಿದ್ದಾಗ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಈ ನಿಲ್ದಾಣವನ್ನು ಕೆಡವಿ ಹೊಸ ನಿಲ್ದಾಣ ನಿರ್ಮಿಸಲು ಹೇಳಿದ್ದರು. ಎಲ್ಲಾ ಸಿದ್ಧತೆಯೂ ನಡೆದಿತ್ತು. ಇದೀಗ ಸ್ಮಾರ್ಟ್ ಸಿಟಿ ಅನುದಾನದಲ್ಲಿ ನಿರ್ಮಾಣವಾಗಿದೆ. ಸಚಿವ ಮಲ್ಲಿಕಾರ್ಜುನ್ ಹಾಗೂ ಶಾಮನೂರು ಶಿವಶಂಕರಪ್ಪ ಅವರು ಡಿಸೆಂಬರ್ ತಿಂಗಳಲ್ಲಿ ಉದ್ಘಾಟನೆಗೆ ಎಲ್ಲಾ ಸೂಚನೆ ನೀಡಿದ್ದಾರೆ ಎಂದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಶೇ.75 ರಷ್ಟು ಹಾಗೂ ಕೆಎಸ್ಸಾರ್ಟಿಸಿಯಿಂದ ಶೇ.25 ರಷ್ಟು ಅನುದಾನ ಸೇರಿ ಒಟ್ಟು 120 ಕೋಟಿ ರೂ. ವೆಚ್ಚದಲ್ಲಿ ಆರೂವರೆ ಎಕರೆ ಪ್ರದೇಶದಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗುತ್ತಿದೆ ಎಂದರು.
ಸಾರಿಗೆ ಇಲಾಖೆಯಿಂದಲೇ ಹಣ ತರುತ್ತಿದ್ದೆ: ಎಸ್ಸೆಸ್ಸೆಂ
ದಾವಣಗೆರೆ, ಆ. 23- 1982ರಲ್ಲಿ ನಾನಿನ್ನೂ ಚಿಕ್ಕವನಾಗಿದ್ದಾಗ ಪಂಪಾಪತಿ ಅವರು ಸತ್ಯಾಗ್ರಹ ಮಾಡಿ ಈ ಬಸ್ ನಿಲ್ದಾಣ ನಿರ್ಮಿಸಿದ್ದರು. ಇದೀಗ ಅದನ್ನು ಅತ್ಯಾಧುನಿಕ ನಿಲ್ದಾಣವನ್ನಾಗಿ ಮಾಡುತ್ತಿರುವುದು ನನಗೆ ಖುಷಿ ತಂದಿದೆ ಎಂದು ಗಣಿ, ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರೂ, ಜಿಲ್ಲಾ ಉಸ್ತುವಾರಿ ಸಚಿವರೂ ಆದ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ನಿಲ್ದಾಣ ಉತ್ತಮವಾಗಿ ನಿರ್ಮಾಣವಾಗಿದೆ. ಇದೊಂದು ಹೈಟೆಕ್ ಬಸ್ ನಿಲ್ದಾಣವಾಗಿದೆ ಎಂದು ಪ್ರಶಂಸಿಸಿದ ಸಚಿವರು, ಅಂದು ನಮ್ಮ ಸರ್ಕಾರ ಇದ್ದಿದ್ದರೆ ಸ್ಮಾರ್ಟ್ ಸಿಟಿ ಹಣವನ್ನು ಬೇರೆ ಕಾರ್ಯಕ್ಕೆ ವಿನಿಯೋಗಿಸಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಸಾರಿಗೆ ಇಲಾಖೆಯಿಂದಲೇ ಹಣ ತರುತ್ತಿದ್ದೆ. ಈ ಕಾರ್ಯ ಬಿಜೆಪಿಯವರಿಂದ ಸಾಧ್ಯವಾಗಲಿಲ್ಲ ಎಂದು ಹೇಳಿದರು. ಬಸ್ ನಿಲ್ದಾಣಕ್ಕೆ ಉಪಯೋಗಿಸುತ್ತಿರುವ ಸ್ಮಾರ್ಟ್ ಸಿಟಿಯ 90 ಕೋಟಿ ರೂಪಾಯಿ ಹಣವನ್ನು ನಗರದಲ್ಲಿ ಬೇರೆ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬಹುದಿತ್ತು ಎಂದು ಎಸ್ಸೆಸ್ಸೆಂ ಹೇಳಿದರು.
ಸ್ಮಾರ್ಟ್ ಸಿಟಿ ಹಾಗೂ ಕೆಎಸ್ಸಾರ್ಟಿಸಿ ಅನುದಾನದಲ್ಲಿ ಒಂದೂವರೆ ಎಕರೆ ಜಾಗದಲ್ಲಿ ಜಗಳೂರು ಭಾಗಕ್ಕೆ ತೆರಳುವವರಿಗೆ ಬಸ್ ನಿಲ್ದಾಣ ನಿರ್ಮಿಸಲಾಗುತ್ತಿದೆ. ಈ ನಿಲ್ದಾಣದ ಜೊತೆ ಅದನ್ನೂ ಉದ್ಘಾಟಿಸಲಾಗುವುದು ಎಂದರು.
ನಗರದಲ್ಲಿ ಟ್ರಕ್ ಟರ್ಮಿನಲ್ ಅಗತ್ಯವಿದ್ದು ಸ್ಥಳದ ಬಗ್ಗೆ ಸಭೆಯನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸ್ಥಳಾವಕಾಶ ಕಲ್ಪಿಸಿ ಟರ್ಮಿನಲ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದ ಸಚಿವರು, ಬೇತೂರು ಬಳಿಯ ಸೇತುವೆಗೆ ತಾತ್ಕಾಲಿಕವಾಗಿ ತಡೆ ಗೋಡೆ ನಿರ್ಮಿಸಲಾಗಿದ್ದು, ಮುಂದ ಹೊಸ ಬ್ರಿಡ್ಜ್ ನಿರ್ಮಿಸುವುದಾಗಿಯೂ ಹೇಳಿದರು.
3 ಮಾಲ್ಗಳು, ಹೋಟೆಲ್, ಥಿಯೇಟರ್ ಸೇರಿದಂತೆ ಪ್ರಯಾಣಿಕರಿಗೆ ಅಗತ್ಯವಿರುವ ತತ್ಕ್ಷಣದ ಸೌಲಭ್ಯಗಳನ್ನು ಇಲ್ಲಿ ಕಲ್ಪಿಸಲಾಗುತ್ತದೆ. ಏಕಕಾಲದಲ್ಲಿ 41 ಬಸ್ಗಳು ನಿಲ್ಲಲು ಸ್ಥಳಾವಕಾಶ ಕಲ್ಪಿಸಲಾಗಿದೆ. ಜೊತೆಗೆ ಕಾರ್ ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲಿರಲಿದೆ ಎಂದರು.
ಬಸ್ ನಿಲ್ದಾಣಕ್ಕೆ ಯಾರ ಹೆಸರಿಡಬೇಕೆಂಬ ಬಗ್ಗೆ ಯಾವ ಚರ್ಚೆಯಾಗಿಲ್ಲ. ಬಸ್ ನಿಲ್ದಾಣಕ್ಕೆ ಯಾರ ಹೆಸರನ್ನೂ ಇಡುವುದಿಲ್ಲ. ಸ್ಥಳೀಯವಾಗಿ ಒತ್ತಡ ಬಂದರೆ ಈ ಬಗ್ಗೆ ಚಿಂತಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.
5 ಸಾವಿರ ಬಸ್ ಖರೀದಿ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಂದೂ ಬಸ್ ಖರೀದಿಸಿರಲಿಲ್ಲ. ಕೊನೆಯ ಅವಧಿಯಲ್ಲಿ 4000 ಬಸ್ಗಳ ಖರೀದಿಗೆ ಟೆಂಡರ್ ಆಗಿತ್ತು. ಇದರೊಂದಿಗೆ ಈಗ 1000 ಬಸ್ಗಳನ್ನು ಖರೀದಿ ಸೇರಿ ಒಟ್ಟು 5 ಸಾವಿರ ಬಸ್ಗಳ ಖರೀದಿಸಲಾಗುತ್ತಿದೆ. ಇದರಲ್ಲಿ ಎಲೆಕ್ಟ್ರಾನಿಕ್ ಬಸ್ಗಳು ಇರಲಿವೆ. ನಗರ, ಗ್ರಾಮೀಣ ಸಾರಿಗೆಗೆ ಎಲೆಕ್ಟ್ರಾನಿಕ್ ಬಸ್ಗಳನ್ನು ನೀಡಲು ಉದ್ದೇಶಿಸಲಾಗಿದೆ ಎಂದು ಸಚಿವರು ಹೇಳಿದರು.
13 ಸಾವಿರ ಹುದ್ದೆ ಭರ್ತಿ: 2016 ರಿಂದ ಸುಮಾರು 16 ಸಾವಿರ ಸಿಬ್ಬಂದಿಗಳು ನಿವೃತ್ತರಾಗಿದ್ದರೂ ನೇಮಕಾತಿ ಪ್ರಕ್ರಿಯೆ ನಡೆದಿರುವುದಿಲ್ಲ. ಆದ್ದರಿಂದ ಶೀಘ್ರವೇ 13 ಸಾವಿರ ಖಾಲಿ ಹುದ್ದೆಗಳಿಗೆ ನೇಮಕಾತಿಗೆ ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.
ಈ ವೇಳೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಕೆ.ಎಸ್.ಆರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್, ಸ್ಮಾರ್ಟ್ ಸಿಟಿ ಎಂಡಿ ವೀರೇಶ್ ಕುಮಾರ್ ಉಪಸ್ಥಿತರಿದ್ದರು.