ಜಗತ್ತಿಗೆ ಬಸವಾದಿ ಶರಣ ಪರಿಚಯ ಕನ್ನಡಿಗರ ಜವಾಬ್ದಾರಿ

ಜಗತ್ತಿಗೆ ಬಸವಾದಿ ಶರಣ ಪರಿಚಯ ಕನ್ನಡಿಗರ ಜವಾಬ್ದಾರಿ

ದೆಹಲಿಯಲ್ಲಿ `ನೀನಲ್ಲದೆ ಮತ್ತಾರು ಇಲ್ಲವಯ್ಯಾ’ ನೃತ್ಯ ರೂಪಕ ಕಾರ್ಯಕ್ರಮದಲ್ಲಿ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ

ನವದೆಹಲಿ, ಜು. 31- ಇಡೀ ಜಗತ್ತಿಗೆ ಬಸವಾದಿ ಶರಣರನ್ನು ಪರಿಚಯಿಸುವುದು ಕನ್ನಡಿಗರೆಲ್ಲರ ಜವಾಬ್ದಾರಿ. ಆದರೆ ಭಾಷೆ, ಜಾತಿ, ಧರ್ಮ ಮೊದಲಾದವುಗಳ ಹೆಸರಿನಲ್ಲಿ ಬಸವಣ್ಣನವರಿಗೆ ಚೌಕಟ್ಟನ್ನು ಹಾಕಿ ಅವರನ್ನು ಹೊರಗೇ ಬಿಟ್ಟಿಲ್ಲ  ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ದೆಹಲಿ ಕರ್ನಾಟಕ ಸಂಘದ ಸಭಾ ಭವನದಲ್ಲಿ ಬಸವಣ್ಣನವರ  ವಚನಗಳ ಆಧಾರಿತ `ತುಮ್ಹಾರೆ ಸಿವಾ ಔರ್ ಕೋಯಿ ನಹೀ’ ನೃತ್ಯರೂಪಕದ ಕನ್ನಡ ಅವತರಣಿಕೆಯ ಪ್ರದರ್ಶನದ ಮುನ್ನ ಆಯೋಜಿಸಿದ್ದ ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. 

ಬಸವಣ್ಣ ಬಡವ-ಬಲ್ಲಿದ, ಗಂಡು-ಹೆಣ್ಣು, ಶ್ರೇಷ್ಠ-ಕನಿಷ್ಠ ಮೊದಲಾದ ಅಸಮಾನತೆಗಳನ್ನು ಹೋಗಲಾಡಿಸಲು, ದಲಿತ ವರ್ಗದವರು ತಲೆಯೆತ್ತಿ ಬಾಳುವಂತೆ ಸಾಮಾಜಿಕ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ದೊಡ್ಡ ಚಳುವಳಿಯನ್ನೇ ಮಾಡಿದ್ದಾರೆ.   ಈ ಕಾರಣಕ್ಕೇ ನಮ್ಮ ದೇಶದ ಪ್ರಧಾನ ಮಂತ್ರಿ  ಮೋದಿಯವರು ದೇಶ-ವಿದೇಶಗಳಲ್ಲಿ ಮತ್ತೆ-ಮತ್ತೆ ಬಸವಣ್ಣನ ವರ ಹೆಸರನ್ನು ಹೇಳುತ್ತಿರುತ್ತಾರೆ  ಎಂದು  ಸ್ವಾಮಿಗಳು  ನುಡಿದರು. 

ಬಸವಣ್ಣನವರ ಭಕ್ತಿಯ ಪರಿಮಳವನ್ನು ಹೊರಸೂಸುವ ಅವರ 44 ವಚನಗಳನ್ನು `ನೀನಲ್ಲದೆ ಮತ್ತಾರು ಇಲ್ಲವಯ್ಯಾ’ ಎನ್ನುವ ನೃತ್ಯ ರೂಪಕದಲ್ಲಿ ನಮ್ಮ ಕಲಾವಿದರು ಇದೀಗ ನಿಮ್ಮ ಮುಂದೆ ಪ್ರದರ್ಶಿಸಲಿದ್ದಾರೆ.

ಉತ್ತರ ಭಾರತೀಯರು ನಮಗೆ ಮೀರಾ, ಕಬೀರ್, ತುಳಸೀದಾಸ್ ಮೊದಲಾದ ಸಂತಕವಿಗಳು ಗೊತ್ತು. ಆದರೆ ಬಸವಣ್ಣ ಗೊತ್ತಿರಲಿಲ್ಲ ಎಂದು ಹೇಳುತ್ತಿದ್ದಾರೆ. ಇದರಿಂದ ಬಸವಣ್ಣನವರ ಪರಿಚಯ ಇನ್ನೂ ನಮ್ಮ ದೇಶದಲ್ಲಿಯೇ ಸರಿಯಾಗಿ ಆಗಿಲ್ಲವೆಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ.  

ಆಯಾ ಭಾಷೆಯ ನಾಟಕ, ನೃತ್ಯರೂಪಕ, ಸಂಗೀತಗಳ ಮೂಲಕ ಬಸವಾದಿ ಶರಣರನ್ನು ಪರಿಚಯಿಸುವ ಅಗತ್ಯತೆ ಎಂದಿಗಿಂತ ಇಂದಿದೆ. ನಮ್ಮ ಶಿವಕುಮಾರ ಕಲಾಸಂಘದ್ದು ಇದು ದುಸ್ಸಾಹಸದ ಕಾರ್ಯ. ಇದುವರೆಗೂ ಸಾಮಾನ್ಯ ಬಸ್ಸಿನಲ್ಲಿ 5000 ಕಿ. ಮೀ. ಪ್ರಯಾಣಿಸಿ 21 ಪ್ರದರ್ಶನಗಳನ್ನು ನೀಡಿದ್ದಾರೆ. ಕಲಾವಿದರಿಗೆ ನಮಗೆ ಊಟ, ವಸತಿ ಮುಖ್ಯವಲ್ಲ; ತತ್ವ ಪ್ರಚಾರಕ್ಕಾಗಿ ಬಂದಿದ್ದೇವೆ ಎನ್ನುವ ಛಲ ಇದೆ, ಮನೋ ಬಲ ಇದೆ. ನಮ್ಮಲ್ಲಿರುವ ಕಲಾವಿದರೆಲ್ಲರೂ ಪದವೀಧರರು. ಇದರಲ್ಲಿ ಕೆಲ ವರು ಉದ್ಯೋಗವನ್ನೂ ಬಿಟ್ಟು ಬಂದಿದ್ದಾರೆ. ಅನಾರೋಗ್ಯಕ್ಕೆ ತುತ್ತಾದರೂ ಪ್ರದರ್ಶನ ನಿಲ್ಲಿಸಿಲ್ಲ. ಅವರ ಈ ಸೇವೆ ಶ್ಲಾಘನೀಯವಾದುದು ಎಂದರು.  

 ಮುಖ್ಯ ಅತಿಥಿಗಳಾಗಿದ್ದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಕೇಂದ್ರ ಸಚಿವ ನಾರಾಯಣ ಸ್ವಾಮಿ ಮಾತನಾಡಿ `ತುಮ್ಹಾರೆ ಸಿವಾ ಔರ್ ಕೋಯಿ ನಹಿ’ ವಚನ ಸಂಸ್ಕೃತಿ ಅಭಿಯಾನ ಕನ್ನಡದ ಸಂಸ್ಕೃತಿ, ಜೀವನ ಪದ್ಧತಿ, ಸಂಸ್ಕಾರಗಳಿಗೆ ಬೆಳಕು ಚೆಲ್ಲುವ ಕಾರ್ಯಕ್ರಮ. ಇದು ಕನ್ನಡಿಗರ ಹೃದಯವನ್ನು ಮುಟ್ಟುವಂತಹದ್ದು. ಪಂಡಿತಾರಾಧ್ಯ ಶ್ರೀಗಳು ಸಾನ್ನಿಧ್ಯವಹಿಸಿರುವುದು ಸಭೆಗೆ ಮತ್ತಷ್ಟು ಮೆರಗು ನೀಡಿದೆ.  ಈ ಕಾರ್ಯಕ್ಕೆ ನನ್ನಿಂದಾದ ಎಲ್ಲ ಸಹಕಾರವನ್ನೂ ನೀಡುವುದಾಗಿ ತಿಳಿಸಿದರು.  

ವೇದಿಕೆಯ ಮೇಲೆ ಉಪಸ್ಥಿತರಿದ್ದ ರಂಗ ಸಂಘಟಕ  ಶ್ರೀನಿವಾಸ ಜಿ. ಕಪ್ಪಣ್ಣ ಮಾತನಾಡಿ, ಸಚಿವ  ನಾರಾಯಣ ಸ್ವಾಮಿಯವರು, ಈ  ನೃತ್ಯರೂಪಕವು ಇಡೀ ದೇಶದಲ್ಲಿ ಸಂಚರಿಸಲು ಅರ್ಥಿಕ ನೆರವು ನೀಡುವ ಭರವಸೆ ನೀಡಿದ   ಕಾರಣಕ್ಕೇ, ನಮ್ಮ ಈ ಕಾರ್ಯ ಯೋಜನೆ ಜಾರಿಗೊಂಡಿದೆ.  ನಮ್ಮ ತಂಡಕ್ಕೆ ಬಹಳ ವಿಶಿಷ್ಟವಾದ ಅನುಭವವಾಗಿದೆ. ಬಸವಣ್ಣನವರ ಸಾಹಿತ್ಯಕ್ಕೆ ಮೈ ಜುಂ ಎನಿಸುವ ಸಂಗೀತವನ್ನು ಖ್ಯಾತ ಸಂಗೀತಗಾರ ಅಶ್ವತ್ಥ್‌ ನೀಡಿದ್ದಾರೆ. ನಮಗೆ ಪ್ರೇಕ್ಷಕರ ಚಪ್ಪಾಳೆ, ಪ್ರೋತ್ಸಾಹವೇ `ಶಿವ’ ಎಂದರು.  

ಸಭೆಯ ಅಧ್ಯಕ್ಷತೆ ವಹಿಸಿದ್ದ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ  ನಾಗರಾಜ್ ಮಾತನಾಡಿ, ಪಂಡಿತಾರಾಧ್ಯ ಶ್ರೀಗಳು ಸಂಗೀತ, ಸಾಹಿತ್ಯ, ಕಲೆ, ನಾಟಕ, ಸಂಸ್ಕೃತಿಯ ಮೂಲಕ ಮಾಡುತ್ತಿರುವ ಕಾರ್ಯ ಅನನ್ಯವಾದುದು. ಇದಕ್ಕೆ ನಮ್ಮ ಸಂಘದ ಸಹಕಾರ ಯಾವತ್ತೂ ಇರುವುದು. ಕಲಾವಿದರು ದೆಹಲಿಯಲ್ಲಿರುವಷ್ಟೂ ದಿನವೂ ನಮ್ಮ ಸಂಘ ಆತಿಥ್ಯ ನೀಡುವುದು. ಇಂದು ನೀಡುವ ಪ್ರದರ್ಶನಕ್ಕೆ ಒಂದು ಲಕ್ಷ ರೂಪಾಯಿಗಳನ್ನು ನೀಡಲಾಗುವುದು ಎಂದರು. 

ದೆಹಲಿ ಕರ್ನಾಟಕ ಸಂಘದ ಕಾರ್ಯದರ್ಶಿ ರೇಣುಕುಮಾರ್ ಸ್ವಾಗತಿಸಿದರು. ಸವಿತಾ ನೆಲ್ಲಿ ವಂದಿಸಿದರೆ, ಪೂಜಾ ರಾವ್ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ `ನೀನಲ್ಲದೆ ಮತ್ತಾರೂ ಇಲ್ಲವಯ್ಯಾ’ ಎನ್ನುವ ಕನ್ನಡ ಅವತರಣಿಕೆಯಲ್ಲಿ ನೃತ್ಯರೂಪಕ ಪ್ರದರ್ಶನಗೊಂಡಿತು. ಸಭಾಂಗಣದಲ್ಲಿ ತುಂಬಿದ್ದ ಪ್ರೇಕ್ಷಕರು ಚಪ್ಪಾಳೆ ತಟ್ಟುವ ಮೂಲಕ ತಮ್ಮ ಮೆಚ್ಚುಗೆ ಸೂಚಿಸಿದರು.

error: Content is protected !!