ಕೇಂದ್ರದ ಯೋಜನೆಗಳಿಗೆ ಪ್ರಚಾರದ ಕೊರತೆ

ಕೇಂದ್ರದ ಯೋಜನೆಗಳಿಗೆ ಪ್ರಚಾರದ ಕೊರತೆ

ಲೀಡ್ ಬ್ಯಾಂಕ್‌ ಗ್ರಾಹಕ ಸಂಪರ್ಕ ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ

ದಾವಣಗೆರೆ, ಜೂ.23- ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ, ಜೀವನ್ ಜ್ಯೋತಿ ಯೋಜನೆ,  ಅಟಲ್ ಪಿಂಚಣಿ, ಮುದ್ರಾ ಯೋಜನೆ ಮೊದಲಾದ ಯೋಜನೆಗಳ ಬಗ್ಗೆ ಇನ್ನೂ ಹೆಚ್ಚಿನ ಜನರಿಗೆ ತಿಳಿದಿಲ್ಲ. ಈ ಯೋಜನೆಗಳ ಬಗ್ಗೆ ಪ್ರಚಾರ ಮಾಡಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ಕೆನರಾ ಬ್ಯಾಂಕ್ ಲೀಡ್ ಬ್ಯಾಂಕ್ ವತಿ ಯಿಂದ ನಗರದ ರೋಟರಿ ಬಾಲಭವನದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಗ್ರಾಹಕ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ, ಕೇಂದ್ರ ಯೋಜನೆಗಳ ಫಲಾನುಭವಿಗಳಿಗೆ ಚೆಕ್ ವಿತರಿಸಿ ಅವರು ಮಾತನಾಡಿದರು.

ಸುರಕ್ಷಾ ಬಿಮಾ ಹಾಗೂ ಜೀವನ್ ಜ್ಯೋತಿ ಯೋಜನೆಯಡಿ ವಿಮೆ ಮಾಡಿಸಿದ್ದವರು ಕಳೆದ ಕೋವಿಡ್ ಸಂದರ್ಭದಲ್ಲಿ ಮೃತಪಟ್ಟಾಗ ಅವರ ಕುಟುಂಬ ವರ್ಗಕ್ಕೆ ವಿಮೆಯ ಹಣದಿಂದ ಸಾಕಷ್ಟು ನೆರವಾಗಿದೆ. ಈ ಬಗ್ಗೆ ಕುಟುಂಬದವರೂ ಹೇಳಿಕೊಂಡಿದ್ದಾರೆ. ಆದರೆ ಹೆಚ್ಚಿನ ಜನರಿಗೆ ಈ ಯೋಜನೆಗಳ ಬಗ್ಗೆ ಅರಿವಿಲ್ಲ ಎಂದರು.

ಲೀಡ್ ಬ್ಯಾಂಕ್ ವತಿಯಿಂದ ಯೋಜನೆಗಳ ಬಗ್ಗೆ ಹೆಚ್ಚಿನ ಪ್ರಚಾರ ಮಾಡುವಂತೆ ಹೇಳಲಾಗಿದೆ. ಇದರ ಅಂಗವಾಗಿಯೇ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಯೋಜನೆಗಳ ಅರಿವು ಮೂಡಿಸುವಲ್ಲಿ  ಮಾಧ್ಯಮಗಳ ಪಾತ್ರವೂ ಪ್ರಮುಖವಾಗಿದೆ ಎಂದು ಹೇಳಿದರು.

ಲೆಕ್ಕ ಕೊಡದ ಅಧಿಕಾರಿಗಳು: ಕೇಂದ್ರ ಸರ್ಕಾರದ ಯೋಜನೆಗಳಿಂದ ಎಷ್ಟು ಜನರು ವಿಮಾ ಸೌಲಭ್ಯ ಪಡೆದಿದ್ದಾರೆ ಎಂದು ಅಧಿಕಾರಿಗಳನ್ನು ಕೇಳಿದರೆ, ಇಲ್ಲಿಯವರೆಗೂ ಲೆಕ್ಕ ಕೊಟ್ಟಿಲ್ಲ ಎಂದು ಸಂಸದ ಸಿದ್ದೇಶ್ವರ ಬೇಸರ ವ್ಯಕ್ತಪಡಿಸಿದರು.

ಅಧಿಕಾರಿಗಳು ಲೆಕ್ಕ ಕೊಡಬೇಕೋ? ಅಥವಾ ಬ್ಯಾಂಕ್‌ನವರು ಕೊಡಬೇಕೋ ಗೊತ್ತಿಲ್ಲ. ಒಟ್ಟಿನಲ್ಲಿ ಸರಿಯಾದ ಲೆಕ್ಕ ಕೊಡುತ್ತಿಲ್ಲ ಎಂದರು.

ಜೀವ ರಕ್ಷಕ ಮೋದಿ: ಕೊವಿಡ್ ಸಂದರ್ಭದಲ್ಲಿ ಉಚಿತವಾಗಿ ಲಸಿಕೆ ನೀಡುವ ಮೂಲಕ ಮೋದಿ ನಮ್ಮ ಜೀವ ರಕ್ಷಕರಾಗಿದ್ದಾರೆ ಎಂದು ಸಿದ್ದೇಶ್ವರ ಹೇಳಿದರು.  ಹೊರ ದೇಶದ ಜನರು ಸಾವಿರಾರು ರೂಪಾಯಿ ಕೊಟ್ಟು ಕೊವಿಡ್ ಲಸಿಕೆ ಖರೀದಿಸಿದರು. ಆದರೆ ನಮ್ಮ ದೇಶದಲ್ಲಿ 110 ಕೋಟಿ ಜನರಿಗೆ ಉಚಿತವಾಗಿ ಲಸಿಕೆ ನೀಡಲಾಯಿತು. ಅಷ್ಟೇ ಅಲ್ಲ, ನೆರೆಯ ದೇಶಗಳಿಗೂ ಲಸಿಕೆ ಕಳುಹಿಸಿಕೊಡಲಾಯಿತು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಲೀಡ್ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ವೈ.ವಿ.ಎನ್. ಶಿವಪ್ರಸಾದ್ ಮಾತನಾಡಿ, ಕೇಂದ್ರ ಸರ್ಕಾರವು ಬ್ಯಾಂಕ್‌ಗಳ ಮೂಲಕ ಅನೇಕ ಉಪಯುಕ್ತ ಸೌಲಭ್ಯಗಳ್ನು ನೀಡುತ್ತಿದೆ. ಬ್ಯಾಂಕ್‌ಗಳಿಗೆ ಗುರಿ ನಿಗದಿಪಡಿಸಿ ಯೋಜನೆಗಳ ಉಪಯೋಗ ಹೆಚ್ಚಾಗುವಂತೆ ಮಾಡುತ್ತಿದೆ ಎಂದರು.

ನಾಗನೂರು ಬಳಿ ಗೌರಿ ರೈಸ್ ಇಂಡಸ್ಟ್ರೀಸ್‌ಗಾಗಿ  4 ಕೋಟಿ ರೂ. ಚೆಕ್ ಪಡೆದ ಫಲಾನುಭವಿ ಹಾಗೂ ವಾಲ್ಮೀಕಿ ಸಂಘಕ್ಕೆ 15 ಲಕ್ಷ ರೂ. ಚೆಕ್ ಪಡೆದ ಹಾಲಮ್ಮ ಅನಿಸಿಕೆ ಹಂಚಿಕೊಂಡರು. ಕಾರ್ಯಕ್ರಮಕ್ಕೂ ಮುನ್ನ ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ಅಜ್ಜಪ್ಪ ಮಾತನಾಡಿದರು.

ಲೀಡ್ ಬ್ಯಾಂಕ್ ವಿಭಾಗೀಯ ಪ್ರಬಂಧಕ  ಜಿ.ಸಿ. ಪ್ರಕಾಶ್ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಸಿಸಿ ಬ್ಯಾಂಕ್ ಸಿಇಒ ತಾವರಾನಾಯ್ಕ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಪ್ರಾದೇಶಿಕ ವ್ಯವಸ್ಥಾಪಕ ಪ್ರವೀಣ್ ಪ್ರಭಾಕರ್, ಶ್ರೀಮತಿ ರಶ್ಮಿ ರೇಖಾ ಇತರರು ಉಪಸ್ಥಿತರಿದ್ದರು.  ಕೆ.ರಾಘವೇಂದ್ರ ನಾಯರಿ ಕಾರ್ಯಕ್ರಮ ನಿರೂಪಿಸಿದರು.

error: Content is protected !!