ಗ್ಯಾರಂಟಿ ಕೊಡಿ, ಇಲ್ಲವೇ ಅಧಿಕಾರದಿಂದ ತೊಲಗಿ

ಗ್ಯಾರಂಟಿ ಕೊಡಿ, ಇಲ್ಲವೇ ಅಧಿಕಾರದಿಂದ ತೊಲಗಿ

ಕಾಂಗ್ರೆಸ್ ದ್ರೋಹದ ವಿರುದ್ಧ ಜು.5ರಿಂದ ಗಾಂಧಿ ಪ್ರತಿಮೆ ಎದುರು ಸತ್ಯಾಗ್ರಹ : ಯಡಿಯೂರಪ್ಪ

ದಾವಣಗೆರೆ, ಜೂ.  23 – ಚುನಾವಣೆ ವೇಳೆ ಭರವಸೆ ನೀಡಿದಂತೆ ಐದು ಗ್ಯಾರಂಟಿಗಳನ್ನು ಜಾರಿಗೆ ತರಲು ಸಾಧ್ಯವಾಗದೇ ಇದ್ದರೆ, ಕಾಂಗ್ರೆಸ್ ಸರ್ಕಾರ ಅಧಿಕಾರ ಬಿಟ್ಟು ತೊಲಗಲಿ ಎಂದು ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಗುಡುಗಿದ್ದಾರೆ.

ನಗರದ ಅಭಿನವ ರೇಣುಕ ಮಂದಿರದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ಯಾರಂಟಿಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದ ನಂತರ ಅವುಗಳನ್ನು ಜಾರಿಗೆ ತರದೇ ಇರುವುದನ್ನು ಜನ ಒಪ್ಪುವುದಿಲ್ಲ ಎಂದರು.

ಬರುವ ಜುಲೈ 4ರಿಂದ ವಿಧಾನ ಮಂಡಲದ ಅಧಿವೇಶನ ಆರಂಭವಾಗಲಿದೆ. ಜುಲೈ 5ರಿಂದ ಗ್ಯಾರಂಟಿಗಳ ಈಡೇರಿಕೆಗೆ ಒತ್ತಾಯಿಸಿ, ಬೆಂಗಳೂರಿನಲ್ಲಿ ಗಾಂಧಿ ಪ್ರತಿಮೆ ಎದುರು ನಾನು ಸತ್ಯಾಗ್ರಹಕ್ಕೆ ಕೂರುತ್ತೇನೆ. ಶಾಸಕರು ಸದನದ ಒಳಗೆ ಹೋರಾಟ ನಡೆಸಲಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದರು.

ಸದನದ ಒಳಗೆ ಹಾಗೂ ಹೊರಗೆ ಬಿಜೆಪಿ ತೀವ್ರ ಹೋರಾಟ ನಡೆಸಲಿದೆ. ಸರ್ಕಾರದ ಕಿವಿ – ಮೂಗು ಹಿಡಿದು ಗ್ಯಾರಂಟಿಗಳನ್ನು ಜಾರಿಗೆ ತರುವಂತೆ ಒತ್ತಾಯಿಸಲಿದ್ದೇವೆ ಎಂದು ಹೇಳಿದರು.

ಜನರಿಗೆ ಐದು ಗ್ಯಾರಂಟಿಗಳ ಭರವಸೆ ನೀಡಿ, ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ಈಗ ದ್ರೋಹ ಮಾಡಿದರೆ ಒಪ್ಪಲಾಗದು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನ್ನಭಾಗ್ಯದ ಗ್ಯಾರಂಟಿಯಂತೆ ಕೇಂದ್ರದ ಐದು ಕೆಜಿ ಅಕ್ಕಿ ಹೊರತು ಪಡಿಸಿ ಹತ್ತು ಕೆಜಿ ಅಕ್ಕಿ ನೀಡಬೇಕು. ಪ್ರತಿ ವ್ಯಕ್ತಿಗೆ ತಲಾ 15 ಕೆಜಿ ಅಕ್ಕಿ ಕೊಡಬೇಕು ಎಂದು ಯಡಿಯೂರಪ್ಪ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಪ್ರಧಾನಿ ಮೋದಿ ಅವರನ್ನು ಕೇಳಿ ಕಾಂಗ್ರೆಸ್ ಪಕ್ಷ ಅನ್ನಭಾಗ್ಯದ ಗ್ಯಾರಂಟಿ ಕೊಟ್ಟಿತ್ತೇ? ಗ್ಯಾರಂಟಿ ಈಡೇರಿಸುವ ಯೋಗ್ಯತೆ ನಮಗೆ ಇಲ್ಲ ಎಂದು ಅವರು ನೇರವಾಗಿ ಹೇಳಲಿ ಎಂದು ಕಿಡಿ ಕಾರಿದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಚುನಾವಣಾ ವೇಳೆ ಗ್ಯಾರಂಟಿಗಳನ್ನು ಆಮಿಷದ ರೀತಿ ತೋರಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಗ್ಯಾರಂಟಿ ಈಡೇರಿಸದೇ ಹೋದರೆ, ಅವರೇ ಅಧಿಕಾರ ಬಿಟ್ಟು ಹೋಗುವ ರೀತಿ ಹೋರಾಟ ಮಾಡಬೇಕು ಎಂದು ಹೇಳಿದರು. ಮಾಜಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಎಫ್.ಸಿ.ಐ. ಅಕ್ಕಿ ದಾಸ್ತಾನು ನೋಡಿಕೊಳ್ಳುವ ಸಂಸ್ಥೆ ಮಾತ್ರ. ಕೇಂದ್ರ ಸರ್ಕಾರದಿಂದ ಅಕ್ಕಿ ಖರೀದಿಸಬೇಕಾದರೆ, ಸಂಬಂಧಿಸಿದ ಸಚಿವರ ಜೊತೆ ಮಾತನಾಡಬೇಕು. ವಾಚ್‌ಮನ್‌ ಜೊತೆ ಮಾತನಾಡಿದ್ದೇವೆ, ಅಕ್ಕಿ ಕೊಡಿ ಎಂಬ ರೀತಿಯಲ್ಲಿ ಕಾಂಗ್ರೆಸ್ ವರ್ತಿಸುತ್ತಿದೆ ಎಂದು ಹೇಳಿದರು.

ಪರಿಷತ್ ಸದಸ್ಯ ಎನ್. ರವಿಕುಮಾರ್ ಮಾತನಾಡಿ, ಬಿಜೆಪಿ ಮುಖಂಡರು ಏಳು ತಂಡಗಳಲ್ಲಿ 30 ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದೇವೆ. ಗ್ಯಾರಂಟಿಗಳನ್ನು ಈಡೇರಿಸದ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಬಿ.ಪಿ. ಹರೀಶ್, ಪರಿಷತ್ ಸದಸ್ಯ ನವೀನ್, ಮಾಜಿ ಸಚಿವ ಬಿ.ಸಿ. ನಾಗೇಶ್, ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಪ್ರೊ. ಲಿಂಗಣ್ಣ, ಎಂ.ಪಿ. ರೇಣುಕಾಚಾರ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ಮುಖಂಡರಾದ ಅನಿಲ್ ಕುಮಾರ್, ಶಿವಕುಮಾರ್, ಸುಧಾ ಜಯರುದ್ರೇಶ್, ಯಶವಂತರಾವ್ ಜಾಧವ್, ಲೋಕಿಕೆರೆ ನಾಗರಾಜ್, ಬಿ.ಜಿ. ಅಜಯ್ ಕುಮಾರ್, ಶಾಂತರಾಜ್ ಪಾಟೀಲ್, ಕಲ್ಲೇಶ್, ಬಿ.ಎಸ್. ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!