ಕೇಜ್ರಿವಾಲ್ ಭರವಸೆಗಳೊಂದಿಗೆ ಆಮ್ ಆದ್ಮಿ ಪಾರ್ಟಿಯ ಚುನಾವಣಾ ರಣಕಹಳೆ
ದಾವಣಗೆರೆ, ಮಾ. 4 – ಕರ್ನಾ ಟಕದಲ್ಲಿ ಆಮ್ ಆದ್ಮಿ ಪಾರ್ಟಿ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡಲಾಗುವುದು ಹಾಗೂ ಕೃಷಿ ಇಳುವರಿಗೆ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಮಾಡಲಾಗುವುದು ಎಂದು ಆಮ್ ಆದ್ಮಿ ಪಾರ್ಟಿ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿ ಅರ ವಿಂದ ಕೇಜ್ರಿವಾಲ್ ಘೋಷಿಸಿದ್ದಾರೆ.
ನಗರದ ಹೈಸ್ಕೂಲ್ ಮೈದಾನ ದಲ್ಲಿ ಆಮ್ ಆದ್ಮಿ ಪಾರ್ಟಿ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ಸಮಾವೇಶದಲ್ಲಿ ಅವರು ಈ ಘೋಷಣೆ ಮಾಡುವುದ ರೊಂದಿಗೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿದರು.
ಕರ್ನಾಟಕದಲ್ಲಿ ಉತ್ತಮ ಶಿಕ್ಷಣ ಹಾಗೂ ಉದ್ಯೋಗದ ವ್ಯವಸ್ಥೆ ಮಾಡಲಾ ಗುವುದು. ಉದ್ಯೋಗ ಸಿಗುವವರೆಗೂ ತಿಂಗಳಿಗೆ 3 ಸಾವಿರ ರೂ.ಗಳ ನಿರುದ್ಯೋಗ ಭತ್ಯೆ ನೀಡ ಲಾಗುವುದು ಎಂದು ಕೇಜ್ರಿವಾಲ್ ಘೋಷಿಸಿದರು.
ದೆಹಲಿಯ ಮಾದರಿಯಲ್ಲಿ ಕರ್ನಾಟಕದಲ್ಲೂ ಉಚಿತ ವಿದ್ಯುತ್ ನೀಡಲಾಗುವುದು. ದೆಹಲಿಯಂತೆ ಭವ್ಯ ವಾದ ಶಾಲೆ ಹಾಗೂ ಆಸ್ಪತ್ರೆಗಳನ್ನು ನಿರ್ಮಿಸಲಾಗುವುದು ಎಂದರು.
ಮಹಾರಾಷ್ಟ್ರದ ನಂತರ ಕರ್ನಾಟಕದಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.ರೈತರ ಸಾಲ ಮನ್ನಾ ಮಾಡಿ, ಕನಿಷ್ಠ ಬೆಂಬಲ ಬೆಲೆ ಕೊಡುವ ಜೊತೆಗೆ ರೈತರನ್ನು ಎಲ್ಲ ಸಮಸ್ಯೆಗಳಿಂದ ಮುಕ್ತಗೊಳಿಸಲಾಗು ವುದು ಎಂದು ಕೇಜ್ರಿವಾಲ್ ಹೇಳಿದರು.
ಕರ್ನಾಟಕದಲ್ಲಿ ಕಟ್ಟಾ ಪ್ರಾಮಾಣಿಕ ಸರ್ಕಾರ ಬೇಕಿದೆ. ಒಮ್ಮೆ ಆಮ್ ಆದ್ಮಿ ಪಾರ್ಟಿಗೆ ಅವಕಾಶ ಕೊಡಿ. ಕೆಲಸ ಮಾಡಲು ಸಾಧ್ಯವಾಗದಿದ್ದರೆ ಮತ್ತೆಂದೂ ಮತ ಕೇಳುವುದಿಲ್ಲ ಎಂದವರು ತಿಳಿಸಿದರು.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮಾತನಾಡಿ, ಹೊಸ ರಾಷ್ಟ್ರೀಯ ಪಿಂಚಣಿ ಹೆಸರಿನಲ್ಲಿ ಸರ್ಕಾರಿ ನೌಕರರಿಂದ ಹಣ ಪಡೆದು ಷೇರು ಪೇಟೆಯಲ್ಲಿ ತೊಡಗಿಸಲಾಗುತ್ತಿದೆ. ಈ ಹಣ ಅಂಬಾನಿ ಹಾಗೂ ಅದಾನಿಯಂಥವರ ಪಾಲಾಗುತ್ತಿದೆ. ನಿವೃತ್ತಿಯ ವೇಳೆಗೆ ಸರ್ಕಾರಿ ನೌಕರರಿಗೆ ಯಾವುದೇ ಹಣ ಸಿಗದೇ ಇರಬಹುದು ಎಂದು ಕಳವಳ ವ್ಯಕ್ತಪಡಿಸಿದರು.
ಕೇಜ್ರಿವಾಲ್ ಕಿಡಿನುಡಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಶಾಲೆ ಹಾಗೂ ಆಸ್ಪತ್ರೆಗಳನ್ನು ನಿರ್ಮಿಸುವುದೇ ಗೊತ್ತಿಲ್ಲ. ಗುಜರಾತ್ನಲ್ಲಿ 30 ವರ್ಷಗಳಿಂದ ಬಿಜೆಪಿ ಸರ್ಕಾರ ಇದೆ. ಅಲ್ಲಿ ಒಳ್ಳೆಯ ಶಾಲೆ ಹಾಗೂ ಆಸ್ಪತ್ರೆಗಳನ್ನು ನಿರ್ಮಿಸಲು ಸಾಧ್ಯವಾಗಿಲ್ಲ.
ಪಂಜಾಬ್ನಲ್ಲಿ ಆಮ್ ಆದ್ಮಿ ಪಾರ್ಟಿಯ ಸಚಿವ ಹಾಗೂ ಶಾಸಕರೊಬ್ಬರು ತಪ್ಪು ಮಾಡಿದಾಗ ನಮ್ಮ ಸರ್ಕಾರವೇ ಜೈಲಿಗೆ ಕಳಿಸಿದೆ. ನಾವು ಯಾರನ್ನೂ ಬಿಡುವುದಿಲ್ಲ. ನನ್ನ ಮಗನೇ ಭ್ರಷ್ಟಾಚಾರ ಮಾಡಿದರೂ ಕ್ಷಮಿಸುವುದಿಲ್ಲ.
ಕರ್ನಾಟಕದ ಜನತೆ ಒಳ್ಳೆಯವರು, ದೇಶಭಕ್ತರು, ಶ್ರಮಿಕರು. ಆದರೆ, ಇಲ್ಲಿನ ಜನಪ್ರತಿನಿಧಿಗಳು ಭ್ರಷ್ಟರಾಗಿದ್ದಾರೆ. ಇವರಿಂದ ದೇಶ-ವಿದೇಶಗಳಲ್ಲಿ ಕರ್ನಾಟಕಕ್ಕೆ ಕೆಟ್ಟ ಹೆಸರು ಬರುತ್ತಿದೆ.
ಬಿಜೆಪಿಗೆ ಅಧಿಕಾರ ನೀಡಿದರೆ ಭ್ರಷ್ಟಾಚಾರ ನಿವಾರಣೆ ಮಾಡುವುದಾಗಿ ಕಳೆದ ವಾರ ಇಲ್ಲಿಗೆ ಬಂದಿದ್ದ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಅಮಿತ್ ಷಾ ಅವರು ಹೇಳಿದ್ದಾರೆ. ಆದರೆ, ಕಳೆದ ಐದು ವರ್ಷಗಳಿಂದ ಅವರದೇ ಸರ್ಕಾರ ಇದೆ. ಏನು ಮಾಡುತ್ತಿದ್ದಾರೆ?
ಇತ್ತೀಚೆಗೆ ಈಶಾನ್ಯದ ರಾಜ್ಯಗಳಿಗೆ ನಡೆದ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಸ್ಪರ್ಧಿಸಿರಲಿಲ್ಲ. ಆದರೂ, ಅಲ್ಲಿನ ಫಲಿತಾಂಶದ ನಂತರ ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಆಮ್ ಆದ್ಮಿ ಪಾರ್ಟಿ ಟೀಕಿಸಿದ್ದಾರೆ. ಇದು ನಮ್ಮ ಬಗ್ಗೆ ಪ್ರಧಾನಿಗೆ ಇರುವ ಹೊಟ್ಟೆ ಉರಿ ತೋರಿಸುತ್ತದೆ.
ದೆಹಲಿಯಲ್ಲಿ ಉಚಿತ ಸೇವೆಗಳನ್ನು ನೀಡಿದರೂ ಹೆಚ್ಚುವರಿ ಬಜೆಟ್ ಮಂಡಿಸಲಾಗಿದೆ. ಇದಕ್ಕೆ ಭ್ರಷ್ಟಾಚಾರ ಇಲ್ಲದಿರುವುದೇ ಕಾರಣ. ಕರ್ನಾಟಕದಲ್ಲಿ ಉಚಿತ ಸೇವೆಗಳು ಇರದೇ ಇದ್ದರೂ,
3 ಲಕ್ಷ ಕೋಟಿ ರೂ.ಗಳ ಸಾಲ ಮಾಡಲಾಗಿದೆ.
ಸಿಸೋಡಿಯಾಗೆ ಸಮರ್ಥನೆ, ಮಾಡಾಳ್ಗೆ ಖಂಡನೆ
ದಾವಣಗೆರೆ, ಮಾ. 4 – ಅಬಕಾರಿ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿ ಬಂಧಿತ ರಾಗಿರುವ ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಎ.ಎ.ಪಿ. ನಾಯಕ ಮನೀಶ್ ಸಿಸೋಡಿಯ ಅವರನ್ನು ಪಕ್ಷದ ವೇದಿಕೆಯಲ್ಲಿ ಸಮರ್ಥಿಸಿಕೊಳ್ಳಲಾಯಿತು.
ಸಿಸೋಡಿಯಾ ಉತ್ತಮ ಶಾಲೆಗಳನ್ನು ನಿರ್ಮಿಸಿದ್ದಾರೆ, ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಇದನ್ನು ಸಹಿಸದೇ ಅವರನ್ನು ಜೈಲಿಗೆ ಹಾಕಲಾಗಿದೆ ಎಂದು ವೇದಿಕೆಯಲ್ಲಿ ಮಾತನಾಡಿದ ನಾಯಕರು ಹೇಳಿದರು.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಾತನಾಡಿ, ಸಿಸೋಡಿಯ ವಿರುದ್ಧ ನೂರಾರು ಕೋಟಿ ರೂ.ಗಳ ಭ್ರಷ್ಟಾಚಾರದ ಆರೋಪ ಮಾಡಲಾಗುತ್ತಿದೆ. ಆದರೆ, ಅವರ ಮನೆ ಮೇಲೆ ದಾಳಿ ಮಾಡಿದಾಗ ಸಿಕ್ಕಿದ್ದು 10 ಸಾವಿರ ರೂ. ಮಾತ್ರ ಎಂದರು. ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಮಾತನಾಡಿ, ಅಂತರರಾಷ್ಟ್ರೀಯ ಮಟ್ಟದ ಶಾಲೆ ಕಟ್ಟುವುದು ಅಪರಾಧವೇ? ಎಂದು ಪ್ರಶ್ನಿಸಿದರು. ಸಿಸೋಡಿಯ ಅವರ ಪರ ಘೋಷಣೆೆಗೆ ಕರೆ ನೀಡಿದರು. ಅದರಂತೆ, ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಘೋಷಣೆ ಹಾಕಿದರು.
ದೆಹಲಿಯಲ್ಲಿ 40 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆ ದೊರೆಯುವಂತೆ ಮಾಡಿದ ಮಾಜಿ ಸಚಿವ ಸತ್ಯೇಂದ್ರ ಜೈನ್ ಬಂಧಿಸಲಾಗಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಆಕ್ಷೇಪಿಸಿದರು.
ಇದೇ ವೇಳೆ ಮಾತನಾಡಿದ ನಾಯಕರು, ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಲಂಚ ಪ್ರಕರಣವನ್ನು ತೀವ್ರವಾಗಿ ಖಂಡಿಸಿದರು.
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಲಂಚ ಪಡೆಯುವಾಗ ಸಿಕ್ಕಿ ಬಿದ್ದಿದ್ದು, ಅವರ ಮನೆಯಲ್ಲಿ 8 ಕೋಟಿ ರೂ. ಪತ್ತೆಯಾಗಿದೆ. ಇನ್ನೂ ಶಾಸಕ ವಿರೂಪಾಕ್ಷಪ್ಪ ಬಂಧನವಾಗಿಲ್ಲ. ಮುಂದೆ ಅವರಿಗೆ ಪದ್ಮ ಭೂಷಣ ಕೊಡಬಹುದು ಎಂದು ಕೇಜ್ರಿವಾಲ್ ಲೇವಡಿ ಮಾಡಿದರು.
ಎಮ್ಮೆ ಕದ್ದವರು ಯಾರು?
ಹಳ್ಳಿಯೊಂದರಲ್ಲಿ ಎಮ್ಮೆಗಳ ಕಳ್ಳತನವಾಗುತ್ತಿತ್ತು. ಕಳ್ಳರ ಪತ್ತೆ ಮಾಡಲಾ ಗದೇ ಬೇಸತ್ತ ಗ್ರಾಮಸ್ಥರು, ಸಾಧು ಒಬ್ಬರ ಬಳಿ ಹೋಗಿ ಸಮಸ್ಯೆಗೆ ಪರಿಹಾರ ಕೇಳಿದರು.
ಚಾದರ್ ಒಂದನ್ನು ಕೊಟ್ಟ ಸಾಧು, ಇದನ್ನು ನಾಲ್ಕು ಜನ ಹಿಡಿದುಕೊಳ್ಳಿ. ಗ್ರಾಮಸ್ಥರೆಲ್ಲ ಚಾದರ್ ಕೆಳಗೆ ನಡೆದು ಬರಲಿ. ಕಳ್ಳ ಇದರ ಕೆಳಗೆ ಬಂದರೆ ಸತ್ತು ಹೋಗುತ್ತಾನೆ ಎಂದರು.
ಅದರಂತೆ ನಾಲ್ವರು ಚಾದರ್ ಹಿಡಿದರು. ಉಳಿದ ಗ್ರಾಮಸ್ಥರೆಲ್ಲ ಸರದಿಯಲ್ಲಿ ಚಾದರ್ ಕೆಳಗೆ ಸಾಗಿದರು. ಆದರೆ, ಯಾರೊಬ್ಬರೂ ಸಾಯಲಿಲ್ಲ. ಹತಾಶರಾದ ಗ್ರಾಮಸ್ಥರು ಮತ್ತೆ ಸಾಧು ಬಳಿ ಹೋಗಿ ನಡೆದ ವಿಷಯ ತಿಳಿಸಿದರು. ಆಗ ಸಾಧು, ಕಳ್ಳತನ ಮಾಡಿದವರೇ ಚಾದರ್ ಹಿಡಿದಿದ್ದರು! ಕಳ್ಳರು ಸಾಯಲು ಹೇಗೆ ಸಾಧ್ಯ? ಎಂದರು. ಈ ಕಥೆ ಹೇಳಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಈ ಕಥೆಯ ರೀತಿಯಲ್ಲೇ ಕರ್ನಾಟಕ ಹಾಗೂ ದೇಶದಲ್ಲಿ ಕಳ್ಳತನ ಮಾಡುವವರ ಕೈಗೇ ಅಧಿಕಾರ ಕೊಟ್ಟಿದ್ದೀರಿ. ಅವರು ಹೇಗೆ ಕಳ್ಳರನ್ನು ಹಿಡಿಯಲು ಸಾಧ್ಯ? ಪ್ರಾಮಾಣಿಕವಾದ ಆಮ್ ಆದ್ಮಿ ಪಾರ್ಟಿಗೆ ಅಧಿಕಾರ ಕೊಟ್ಟರೆ ಕಳ್ಳರನ್ನು ಹಿಡಿಯುತ್ತೇವೆ ಎಂದರು.
ರಾಮ ಮಂದಿರ ಬೇಕಿಲ್ಲ
ಅಯೋಧ್ಯೆಯಲ್ಲಿ ಸಾವಿರಾರು ಕೋಟಿ ರೂ.ಗಳ ವೆಚ್ಚದಲ್ಲಿ ರಾಮ ಮಂದಿರ ನಿರ್ಮಾಣದ ಅಗತ್ಯ ಇತ್ತೆ? ಮನಸಿನಲ್ಲಿ – ಕೆಲಸದಲ್ಲಿ ರಾಮ ಬೇಕು. ಆಮ್ ಆದ್ಮಿ ಪಾರ್ಟಿಗೆ ರಾಮ ಮಂದಿರ ಬೇಕಿಲ್ಲ, ರಾಮ ರಾಜ್ಯ ಬೇಕು ಎಂದು ಎ.ಎ.ಪಿ. ಮುಖಂಡ ‘ಮುಖ್ಯಮಂತ್ರಿ’ ಚಂದ್ರು ಹೇಳಿದರು.ಬಿಜೆಪಿಯವರಿಗೆ ರಾಮ ಮಂದಿರ ಬೇಕು, ಆದರೆ ರಾಮ ರಾಜ್ಯ ಬೇಡ. ರಾಮನಿಗೆ ದೇವಾಲಯ ಕಟ್ಟಲಾಗಿದೆ. ಅದೇ ರೀತಿ ದೇಶದ 33 ಕೋಟಿ ದೇವರಿಗೂ ದೇವಾಲಯ ಕಟ್ಟಿಸಿ ಎಂದವರು ಸವಾಲು ಹಾಕಿದರು.
ಡಬ್ಬಲ್ ಇಂಜಿನ್ನ ಡಬ್ಬಲ್ ಭ್ರಷ್ಟಾಚಾರ ದೇಶಕ್ಕೆ ಹೊಸ ಇಂಜಿನ್ ಸರ್ಕಾರ ಬೇಕು : ಕೇಜ್ರಿವಾಲ್
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರಕ್ಕೆ ಬಂದಾಗ ರಾಜ್ಯದಲ್ಲಿ ಶೇ.20ರ ಭ್ರಷ್ಟಾಚಾರ ಇದೆ. ಡಬಲ್ ಇಂಜಿನ್ ಸರ್ಕಾರ ಅಧಿಕಾರಕ್ಕೆ ತನ್ನಿ ಎಂದು ಕರೆ ನೀಡಿದ್ದರು.
ರಾಜ್ಯದ ಜನತೆ ಪ್ರಧಾನಿ ಮಾತು ನಂಬಿ ಬಿಜೆಪಿಗೆ ಮತ ನೀಡಿದರು. ಆದರೆ, ಈಗ ಡಬ್ಬಲ್ ಇಂಜಿನ್ ಸರ್ಕಾರದಲ್ಲಿ ಶೇ.40ರ ಡಬ್ಬಲ್ ಭ್ರಷ್ಟಾಚಾರ ನಡೆಯುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದರು.
ಮುಂದೆಯೂ ಬಿಜೆಪಿಗೆ ಮತ ನೀಡಿದರೆ ಶೇ.80ರ ಭ್ರಷ್ಟಾಚಾರ ಆಗಲಿದೆ. ದೇಶಕ್ಕೀಗ ಡಬ್ಬಲ್ ಇಂಜಿನ್ ಸರ್ಕಾರ ಬೇಕಿಲ್ಲ, ಆಮ್ ಆದ್ಮಿ ಪಾರ್ಟಿಯಂತಹ ಹೊಸ ಇಂಜಿನ್ ಸರ್ಕಾರ ಬೇಕು ಎಂದವರು ಹೇಳಿದರು.
ಕರ್ನಾಟಕದ ಗುತ್ತಿಗೆದಾರರ ಸಂಘದಿಂದ ಭ್ರಷ್ಟಾಚಾರ ಆರೋಪ ಮಾಡಲಾಗುತ್ತಿದೆ. ಖಾಸಗಿ ಶಾಲೆಗಳ ಒಕ್ಕೂಟ ಭ್ರಷ್ಟಾಚಾರದ ವಿರುದ್ಧ ದೂರು ನೀಡಿದೆ. ಮಠಗಳಿಂದಲೂ ಕಮೀಷನ್ ಪಡೆಯಲಾಗುತ್ತಿದೆ.
ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಭ್ರಷ್ಟಾಚಾರದ ಕಾರಣದಿಂದ ಆತ್ಮಹತ್ಯೆಗೆ ಗುರಿಯಾಗಿದ್ದಾರೆ. ದೇಶದಲ್ಲಿ ಎಲ್ಲೂ ಕಂಡುಬರದೇ ಇರುವ ಪರಿಸ್ಥಿತಿ ಕರ್ನಾಟಕದಲ್ಲಿದೆ ಎಂದವರು ಹೇಳಿದರು. ಶಾಲೆ ಹಾಗೂ ಮಠಗಳನ್ನೂ ಬಿಡದೆ ರಾಜ್ಯ ಸರ್ಕಾರ ಲೂಟಿ ಮಾಡುತ್ತಿದೆ. ಈ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೌನವಾಗಿದ್ದಾರೆ. ಭ್ರಷ್ಟಾಚಾರದ ಆರೋಪ ಮಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರನ್ನೇ ಬಂಧಿಸಲಾಗಿದೆ ಎಂದು ಕೇಜ್ರಿವಾಲ್ ಟೀಕಿಸಿದರು.
ಇದಕ್ಕಾಗಿಯೇ ಪಂಜಾಬ್ ಸರ್ಕಾರ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ತರುತ್ತಿದೆ. ನೂತನ ಪಿಂಚಣಿ ವ್ಯವಸ್ಥೆಯಲ್ಲಿ ಹೂಡಿಕೆ ಮಾಡಲಾಗಿರುವ ಪಂಜಾಬ್ನ 18 ಸಾವಿರ ಕೋಟಿ ರೂ.ಗಳನ್ನು ವಾಪಸ್ ಪಡೆಯಲು ಹೋರಾಟ ನಡೆಸಲಾಗುವುದು ಎಂದರು.
ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಮಾತನಾಡಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ಗಳ ಹೆಸರು ಬೇರೆ ಆದರೂ ವರ್ತನೆ ಒಂದೇ. ಇದುವರೆಗೂ ರಾಜ್ಯದಲ್ಲಿ ಆಡಳಿತಾರೂಢ ಪಕ್ಷ ಬದಲಾಗಿದೆಯೇ ಹೊರತು ವ್ಯವಸ್ಥೆ ಬದಲಾಗಿಲ್ಲ. ಈ ಸಮಸ್ಯೆಗಳಿಗೆ ಆಮ್ ಆದ್ಮಿ ಪಾರ್ಟಿಯ `ಪೊರಕೆ’ಯೇ ಪರಿಹಾರ ಎಂದರು.
ಪಕ್ಷದ ಮುಖಂಡ ಮುಖ್ಯಮಂತ್ರಿ ಚಂದ್ರು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ಗಳಿಂದ ಆಗಿರುವ ಅನಾಹುತಗಳನ್ನು `ಪೊರಕೆ’ಯಿಂದ ಸ್ವಚ್ಛಗೊಳಿಸಬೇಕಿದೆ ಎಂದರು.
ಮುಖಂಡರಾದ ಬ್ರಜೇಶ್ ಕಾಳಪ್ಪ ಮಾತನಾಡಿ, ಕರ್ನಾಟಕ ಹಿಂದಿನಿಂದಲೂ ರಾಜಕೀಯ ಪ್ರಯೋಗಕ್ಕೆ ಹೆಸರಾಗಿದೆ. ರಾಜ್ಯದಲ್ಲಿ ದೊಡ್ಡ ಪರಿವರ್ತನೆಯ ಅಗತ್ಯವಿದ್ದು, ಆಮ್ ಆದ್ಮಿ ಪಾರ್ಟಿಗೆ ಅವಕಾಶ ಇದೆ ಎಂದರು.
ಇದೇ ವೇಳೆ ಕಾರ್ಯಕರ್ತರಿಗೆ ಪಕ್ಷದ ಸಿದ್ಧಾಂತವನ್ನು ಪ್ರಾಮಾಣಿಕವಾಗಿ ಪಾಲಿಸುವ ಪ್ರಮಾಣ ವಚನವನ್ನು ಬೋಧಿಸಲಾಯಿತು.
ವೇದಿಕೆಯ ಮೇಲೆ ಆಮ್ ಆದ್ಮಿ ಪಾರ್ಟಿ ಮುಖಂಡರಾದ ಬಿ.ಟಿ. ನಾಗಣ್ಣ, ಶಾಂತಲಾ ದಾಮಲೆ, ಮಾಜಿ ಸಂಸದ ಡಾ. ವೆಂಕಟೇಶ್, ರವಿಚಂದ್ರ ನರವನ, ವಿಜಯ್ ಶರ್ಮ, ಟೆನ್ನಿಸ್ ಕೃಷ್ಣ, ಅಪರ್ಣ ಮತ್ತಿತರರು ಉಪಸ್ಥಿತರಿದ್ದರು.