ದಾವಣಗೆರೆ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನ
ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದಾವಣಗೆರೆ ಜಿಲ್ಲಾ 12 ನೇ ಕನ್ನದ ಸಾಹಿತ್ಯ ಸಮ್ಮೇಳನಕ್ಕೆ ಚನ್ನಗಿರಿ ತಾಲ್ಲೂಕು ಹರನಹಳ್ಳಿ – ಕೆಂಗಾಪುರದ ಶ್ರೀ ರಾಮಲಿಂಗೇಶ್ವರ ಮಠದ ಆವರಣದಲ್ಲಿ ಇಂದು ಚಾಲನೆ ದೊರೆಯಲಿದೆ.
ಇಂದು ಬೆಳಿಗ್ಗೆ 8.30 ಕ್ಕೆ ಕಣಿವೆ ಬಿಳಚಿ ಗ್ರಾ.ಪಂ. ಅಧ್ಯಕ್ಷೆ ದಾಬುಬಾಯಿ ರಾಷ್ಟ್ರಧ್ವಜಾರೋಹಣವನ್ನು, ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಪರಿಷತ್ತಿನ ಧ್ವಜಾರೋಹಣವನ್ನು, ಹೊನ್ನಾಳಿ ಉಪ ವಿಭಾಗದ ಉಪವಿಭಾಗಾಧಿಕಾರಿ ಹುಲ್ಮನಿ ತಿಮ್ಮಣ್ಣ ನಾಡ ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ.
ಬೆಳಿಗ್ಗೆ 9 ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭಗೊಳ್ಳಲಿದೆ. ಎಸ್ಪಿ ಸಿ.ಬಿ. ರಿಷ್ಯಂತ್ ಮೆರವಣಿಗೆಗೆ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ಚನ್ನಗಿರಿ ತಹಶೀಲ್ದಾರ್ ಎರಿಸ್ವಾಮಿ, ಡಿವೈಎಸ್ಪಿ ಡಾ. ಸಂತೋಷ್, ಜಿಲ್ಲಾ ಸಂಘ ಗಳ ನೋಂದಣಾಧಿಕಾರಿ ಅನ್ನಪೂರ್ಣ, ಪಿಯು ಡಿಡಿ ಎಂ. ಶಿವರಾಜ್, ಡಿಡಿಪಿಐ ಜಿ.ಆರ್. ತಿಪ್ಪೇಶಪ್ಪ, ಪ್ರಾಂಶುಪಾಲರಾದ ಎ. ಎಸ್. ಶೈಲಜಾ, ಬಸವಾಪಟ್ಟಣ ಸಿಪಿಐ ಎಸ್.ಬಿ. ಅಜ್ಜಪ್ಪ, ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಸಿ.ಬಿ. ರವಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾಧ್ಯಕ್ಷ ಡಿ.ಡಿ. ಹಾಲಪ್ಪ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮುಬಾರಕ್ ಅಲಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಡಿ. ರಾಮಪ್ಪ ಮತ್ತಿತರರು ಭಾಗವಹಿಸಲಿದ್ದಾರೆ.
ಬೆಳಗ್ಗೆ 11 ಗಂಟೆಗೆ ಸಮ್ಮೇಳನದ ಉದ್ಘಾಟನಾ ಸಮಾರಂಭ ಜರುಗಲಿದ್ದು, ಶಾಸಕ ಪ್ರೊ.ಎನ್. ಲಿಂಗಣ್ಣ ಅಧ್ಯಕ್ಷತೆ ವಹಿಸುವರು. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಡೋಜ ಮಹೇಶ್ ಜೋಶಿ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.
ಕಸಾಪ ಪದಾಧಿಕಾರಿಗಳಿಂದ ವೇದಿಕೆ ಸ್ಥಳ ಪರಿಶೀಲನೆ
ಹರನಹಳ್ಳಿ-ಕೆಂಗಾಪುರದಲ್ಲಿ ನಡೆಯುತ್ತಿರುವ ದಾವಣಗೆರೆ ಜಿಲ್ಲಾ 12 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಗಳು ಭರದಿಂದ ಸಾಗಿದ್ದು, ಜಿಲ್ಲಾ ಕಸಾಪ ಪದಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಮಾಜಿ ಅಧ್ಯಕ್ಷ ಎ.ಆರ್.ಉಜ್ಜನಪ್ಪ, ಗೌರವ ಕಾರ್ಯ ದರ್ಶಿಗಳಾದ ಬಿ.ದಿಳ್ಯಪ್ಪ, ರೇವಣಸಿ ದ್ದಪ್ಪ ಅಂಗಡಿ, ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ, ಸಂಘಟನಾ ಕಾರ್ಯದರ್ಶಿ ಸಿ.ಜಿ.ಜಗದೀಶ್ ಕೂಲಂಬಿ, ಜಿಗಳಿ ಪ್ರಕಾಶ್, ತಾಲೂಕು ಅಧ್ಯಕ್ಷ ಮಧುಕುಮಾರ್, ಕೇಂದ್ರ ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಜಿ.ರುದ್ರಯ್ಯ, ಶ್ರೀ ರಾಮಲಿಂಗೇಶ್ವರ ವಿದ್ಯಾ ಸಂಸ್ಥೆಯ ಹೆಚ್.ಆರ್.ಹಾಲೇಶ್, ಆಡಳಿತಾಧಿಕಾರಿ ರಘು ದೊಡ್ಡಮನಿ, ಬೇತೂರು ಷಡಾಕ್ಷರಪ್ಪ ಮತ್ತಿತರರು ಹಾಜರಿದ್ದರು.
ನೌಕರರಿಗೆ ಓಓಡಿ ಸೌಲಭ್ಯ
ಚನ್ನಗಿರಿ ತಾಲ್ಲೂಕು ಕೆಂಗಾಪುರದಲ್ಲಿ ಇಂದು ಮತ್ತು ನಾಳೆ ನಡೆಯುವ ದಾವಣಗೆರೆ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು, ಪದವಿ ಪೂರ್ವ ಕಾಲೇಜು ಉಪನ್ಯಾಸಕರಿಗೆ ಅನ್ಯಕಾರ್ಯ ನಿಮಿತ್ಯ ಎಂದು ಪರಿಗಣಿಸಿ ಓಓಡಿ ಸೌಲಭ್ಯ ನೀಡಲಾಗುವುದು.
ಸಮ್ಮೇಳನಕ್ಕೆ ಹೋಗಲು ಉಚಿತ ಸಾರಿಗೆ ವ್ಯವಸ್ಥೆ
ಕೆಂಗಾಪುರದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ಹೋಗುವ ಸಾಹಿತ್ಯ ಅಭಿಮಾನಿಗಳಿಗೆ, ಸಾರ್ವಜನಿಕರಿಗೆ , ಕನ್ನಡಾಭಿಮಾನಿಗಳಿಗೆ, ಸಾಹಿತಿಗಳಿಗೆ ದಾವಣಗೆರೆಯಿಂದ ಕೆಂಗಾಪುರ, ಚನ್ನಗಿರಿ, ಕಬ್ಬಳ, ಬಸವಾಪಟ್ಟಣ ಭಾಗದಿಂದ ಕೆಂಗಾಪುರಕ್ಕೆ ಉಚಿತ ಸಾರಿಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಶ್ರೀ ರಾಮಲಿಂಗೇಶ್ವರ ವಿದ್ಯಾಸಂಸ್ಥೆಯ ಬಸ್ಗಳನ್ನು ಉಚಿತವಾಗಿ ಬಿಡಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ವಿಜಯಕುಮಾರ್ ತಿಳಿಸಿದ್ದಾರೆ.
ಸೂಳೆಕೆರೆ ಶಾಂತವ್ವ ವೇದಿಕೆಯನ್ನು ಸಂಸದ ಜಿ.ಎಂ. ಸಿದ್ದೇಶ್ವರ, ಕೆಳದಿ ಚನ್ನಮ್ಮ ಮಹಾಮಂಟಪವನ್ನು ಸಚಿವ ಭೈರತಿ ಬಸವರಾಜ್, ಕೆಂಗಪ್ಪ ನಾಯಕ ಮಹಾದ್ವಾರವನ್ನು ಶಾಸಕ ಮಾಡಾಳು ವಿರೂಪಾಕ್ಷಪ್ಪ, ಡಾ. ಎಂ. ಚಿದಾನಂದಪ್ಪ ಪುಸ್ತಕ ಮಳಿಗೆಗಳ ಉದ್ಘಾಟನೆಯನ್ನು ಶಾಸಕ ಎಸ್.ವಿ. ರಾಮಚಂದ್ರ ನೆರವೇರಿಸುವರು. ಯುಗಧರ್ಮ ರಾಮಣ್ಣ ಸಮ್ಮೇಳನಾಧ್ಯಕ್ಷರಾಗಿ ಪಾಲ್ಗೊಳ್ಳಲಿದ್ದಾರೆ.
ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಸುಶೀಲಾದೇವಿ ಆರ್. ರಾವ್ ಕನ್ನಡ ಧ್ವಜ ಹಸ್ತಾಂತರ ಮಾಡಲಿದ್ದು, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ `ಜ್ಞಾನ ಗಂಗೆ’ ಸ್ಮರಣ ಸಂಚಿಕೆಯನ್ನು ಬಿಡುಗಡೆ ಹಾಗೂ ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ.ಹೆಚ್.ಎಸ್. ಮಂಜುನಾಥ ಕುರ್ಕಿ ಕೃತಿಗಳ ಬಿಡುಗಡೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ, ಎಸ್.ಎ. ರವೀಂದ್ರನಾಥ್, ಮಾಜಿ ಶಾಸಕರಾದ ಎಂ. ಬಸವರಾಜನಾಯ್ಕ, ವಡ್ನಾಳ್ ರಾಜಣ್ಣ, ಮಹಿಮಾ ಜೆ. ಪಟೇಲ್, ಕೆ. ಶಿವಮೂರ್ತಿನಾಯ್ಕ, ಕಸಾಪ ಕೇಂದ್ರ ಸಮಿತಿ ಸದಸ್ಯ ಜಿ. ರುದ್ರಯ್ಯ, ತಾ.ಪಂ. ಇಓ ಎಂ.ಆರ್.ಪ್ರಕಾಶ್, ಕೆಂಗಾಪುರ ಶ್ರೀ ರಾಮಲಿಂಗೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷ ಹೆಚ್.ಆರ್. ವಿಜಯಕುಮಾರ್, ರಾಷ್ಟ್ರೀಯ ಗೋವು ಸೇವಾ ಸಂಘದ ರಾಜ್ಯಾಧ್ಯಕ್ಷ ಬಿ.ಟಿ. ಸಿದ್ಧಪ್ಪ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದಿನೇಶ್ ಪೂಜಾರಿ, ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರಾಜಶೇಖರ ಗುಂಡಗಟ್ಟಿ, ಕಸಾಪ ನಿಕಟಪೂರ್ವ ಅಧ್ಯಕ್ಷ ಎ.ಆರ್. ಉಜ್ಜನಪ್ಪ ಮತ್ತಿತರರು ಭಾಗವಹಿಸಲಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ಗೋಷ್ಠಿ ವಿಶೇಷ ಉಪನ್ಯಾಸ, ಯುವ ಕವಿಗೋಷ್ಠಿ, ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಜಾನಪದ ಕವಿ ಯುಗ ಧರ್ಮ ರಾಮಣ್ಣ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ
ಜಾನಪದ ಸಾಹಿತ್ಯ 64 ವಿದ್ಯೆಗಳಿಗೆ ತಾಯಿ ಬೇರು. ಲೋಕಾನುಭವದ ಈ ನಿಧಿಯ ಬಗ್ಗೆ ಪ್ರಾಥ ಮಿಕ ಹಂತದಲ್ಲಿಯೇ ಪರಿಚಯಿಸುವ ಶಿಕ್ಷಣದ ಮೂಲಕ ಇಂದಿನ ಮಕ್ಕಳಿಗೆ ಜಾನಪದದ ಜ್ಞಾನವನ್ನು ನೀಡುವ ಅಗತ್ಯತೆ, ಅನಿವಾರ್ಯತೆ ಇದೆ. ಹೊಟ್ಟೆ ಹೊರೆಯುವ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ನೆತ್ತಿ ಹೊರೆಯುವ ಜಾನಪದ ಶಿಕ್ಷಣಕ್ಕೆ ಬೇಡಿಕೆ ಇಲ್ಲದಂತಾಗಿದೆ.ಇದರ ಬಗ್ಗೆ ಸರ್ಕಾರ, ಸಮಾಜ, ಶಿಕ್ಷಣ ತಜ್ಞರಿಗೆ ಒಲವಿಲ್ಲದಂತಾಗಿದೆ. ಈಗಿನ ಆಧುನಿಕ ಸಾಹಿತ್ಯದಲ್ಲಿ ಜಾನಪದ ಸಾಹಿತ್ಯ ತನ್ನ ಅಸ್ತಿತ್ವ ಕಳೆದುಕೊಂಡು ಕಾಲಕ್ರಮೇಣ ನಶಿಸಿ ಹೋಗುತ್ತಿದೆ. ಯಾವ ಸ್ವಾರ್ಥ, ಪ್ರತಿಫಲ ಅಪೇಕ್ಷೆ ಇಲ್ಲದೇ ರಚಿಸಿದ ನಿಜವಾದ ಕವಿಗಳು ನಮ್ಮ ಜಾನಪದರು. ಜಾನಪದವೇ ನಿಜವಾದ ಭಾಷಾ ಸಾಹಿತ್ಯ. ನೈಜವಾದ ಜ್ಞಾನದ ಉತ್ಪತ್ತಿಯಾಗುವ, ಆಡುಭಾಷೆಯಲ್ಲಿ ಆಕಾಶವನ್ನೇ ಅಳೆಯುವ ತಾಕತ್ತಿರುವುದು ನಮ್ಮ ಜಾನಪದ ಸಾಹಿತ್ಯಕ್ಕಿದೆ.
ಈ ನಿಟ್ಟಿನಲ್ಲಿ ಇದನ್ನು ಮನಗಂಡು ನಮ್ಮ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಾನಪದ ಕವಿಯೆಂದೇ ಪ್ರಸಿದ್ಧರಾದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ `ಯುಗ ಧರ್ಮ ರಾಮಣ್ಣ’ ನವರನ್ನು ಗುರುತಿಸಿ 12 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿರುವುದು ಕನ್ನಡಿಗರಾದ ನಾವು ಹೆಮ್ಮೆ ಪಡುವ ವಿಚಾರವಾಗಿದೆ.
ಸಿರಿಗನ್ನಡಂ ಗೆಲ್ಗೆ.. ಸಿರಿನ್ನಡಂ ಬಾಳ್ಗೆ…..
– ಡಾ.ಅನಿತಾ ಹೆಚ್.ದೊಡ್ಡಗೌಡರ್, ಸಹಾಯಕ ಪ್ರಾಧ್ಯಾಪಕರು, ದಾವಣಗೆರೆ.