ದಾವಣಗೆರೆ, ಮಾ. 3- ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮತ್ತವರ ಕುಟುಂಬದವರು ಕಳೆದ ಐದು ವರ್ಷಗಳಲ್ಲಿ ಕೋಟಿಗಟ್ಟಲೆ ಹಣ ಮತ್ತು ಆಸ್ತಿಯನ್ನು ಲೂಟಿ ಮಾಡಿದ್ದು, ಈಗಾಗಲೇ ಶಾಸಕರ ಪುತ್ರನ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ. ಈ ಪ್ರಕರಣ ಕುರಿತು ಮುಖ್ಯಮಂತ್ರಿಗಳು ಸೂಕ್ತ ತನಿಖೆಗೆ ಆದೇಶಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಕೆ. ಮಣಿಸರ್ಕಾರ್ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
2013 ರಲ್ಲಿ ದಾವಣಗೆರೆ ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿ ಅಕ್ರಮವಾಗಿ ನಿವೇಶನ ಪಡೆದವರಲ್ಲಿ ಮಾಡಾಳು ವಿರೂಪಾಕ್ಷಪ್ಪ ಕುಟುಂಬದವರಿದ್ದು, ಈ ಸಂಬಂಧ ಶ್ರೀರಾಮ ಸೇನೆ ವತಿಯಿಂದ ಪ್ರಕರಣ ದಾಖಲಿಸಲಾಗಿದೆ. ಜನತಾ ನ್ಯಾಯಾಲಯದಲ್ಲಿ ವಿಚಾರಣೆ ಇಂದಿಗೂ ನಡೆಯುತ್ತಿದೆ ಎಂದು ಅವರು ಹೇಳಿದರು.
ಮಾಡಾಳು ವಿರೂಪಾಕ್ಷಪ್ಪ ಪುತ್ರರಾದ ಎಂ.ವಿ. ಮಲ್ಲಿಕಾರ್ಜುನ್, ಎಂ.ವಿ. ಪ್ರವೀಣ್ ಕುಮಾರ್, ಸೊಸೆ ಹೆಚ್.ಜಿ. ಸುಧಾರಾಣಿ ಹೆಸರಿನಲ್ಲಿ ನಿವೇಶನ ಪಡೆಯಲಾಗಿದೆ. ಈ ಸಂಬಂಧ ಶ್ರೀರಾಮ ಸೇನೆ ಪ್ರಕರಣ ದಾಖಲಿಸಿದೆ. ಇವರೆಲ್ಲಾ ಜಾಮೀನಿನ ಮೇಲೆ ಹೊರಗಿದ್ದಾರೆ. ಜಾಮೀನು ರದ್ದುಪಡಿಸುವಂತೆ ಬೆಂಗಳೂರಿಗೆ ತೆರಳಿ ಅರ್ಜಿ ಸಲ್ಲಿಸುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೇನೆಯ ಪದಾಧಿಕಾರಿಗಳಾದ ಆಲೂರು ರಾಜಶೇಖರ್, ರಘು, ವಿನಯ್, ಸಾಗರ್, ಶ್ರೀಧರ್, ವಿನೋದ್ ರಾಜ್, ರಾಹುಲ್, ರಮೇಶ್, ರಾಜು, ಅವಿನಾಶ್ ಮತ್ತಿತರರಿದ್ದರು.