ಪಂಚರಥ ಯಾತ್ರೆಗೆ ಹಲಗೇರಿಯಲ್ಲಿ ಭವ್ಯ ಸ್ವಾಗತ

ಪಂಚರಥ ಯಾತ್ರೆಗೆ ಹಲಗೇರಿಯಲ್ಲಿ ಭವ್ಯ ಸ್ವಾಗತ

ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಭವ್ಯ ಸ್ವಾಗತ

ರಾಣೇಬೆನ್ನೂರು, ಫೆ. 15- ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಪಂಚರಥ ಯಾತ್ರೆ ಬುಧವಾರ  ಹಲಗೇರಿ ಗ್ರಾಮಕ್ಕೆ ಆಗಮಿಸಿದಾಗ ಭವ್ಯ ಸ್ವಾಗತ ಕೋರಲಾಯಿತು. 

ಪಕ್ಷದ ಕಾರ್ಯಕರ್ತರು ಅವರಿಗೆ ಕ್ರೇನ್ ಮೂಲಕ ಹೂವಿನ ಹಾರ ಅರ್ಪಿಸುವ ಮೂಲಕ ತಮ್ಮ ಅಭಿಮಾನ ವ್ಯಕ್ತಪಡಿಸಿದರು. 

ಈ ಸಮಯದಲ್ಲಿ ಜೆಡಿಎಸ್ ಧುರೀಣ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯದ ಅಭಿವೃದ್ಧಿ ಕುರಿತು ಚಿಂತನೆ ನಡೆಸುವುದಕ್ಕಿಂತ ಪರಸ್ಪರ ಪರ್ಸೆಂಟೇಜ್ ವಿಚಾರವಾಗಿ ಆರೋಪ ಪ್ರತ್ಯಾರೋಪದಲ್ಲಿ ನಿರತವಾಗಿದ್ದು, ರಾಜ್ಯವನ್ನು ಲೂಟಿ ಹೊಡೆಯಲು ಪೈಪೋಟಿ ನಡೆಸುತ್ತಿವೆ.

ಈ ನಿಟ್ಟಿನಲ್ಲಿ ರಾಜ್ಯದ ಜನತೆ ನಮ್ಮ ಪಕ್ಷಕ್ಕೆ ಆಶೀರ್ವಾದ ಮಾಡುವ ಮೂಲಕ ಸುಭಿಕ್ಷ ಆಡಳಿತ ನೀಡಲು ಬದ್ಧರಾಗಿದ್ದೇವೆ. ಬಿಜೆಪಿ ಸರ್ಕಾರ ರಸಗೊಬ್ಬರ ದರವನ್ನು ಒಂದಕ್ಕೆ ನಾಲ್ಕು ಪಟ್ಟು ಏರಿಕೆ ಮಾಡಿ ರೈತರ ಹಿತವನ್ನು ಕಡೆಗಣಿಸಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಖರೀದಿ ಮಾಡಲು ಎಕರೆಗೆ ಹತ್ತು ಸಾವಿರ ನೀಡುತ್ತೇವೆ. ರೈತರು ಸಾಲಗಾರರಾಗಬಾರದು ಎಂಬುದು ನಮ್ಮ ಚಿಂತನೆಯಾಗಿದೆ. ಭೂಮಿಯಿಲ್ಲದ ಕೂಲಿ ಕಾರ್ಮಿಕರಿಗೆ ಪ್ರತಿ ತಿಂಗಳು 15 ಸಾವಿರ ರು. ಆರ್ಥಿಕ ನೆರವು ನೀಡುವಂತಹ ಕಾರ್ಯಕ್ರಮ ಜಾರಿಗೆ ತರುತ್ತೇವೆ. ಯುವಕರಿಗೆ ಉದ್ಯೋಗ ನೀಡುವುದು ಪಂಚರತ್ನ ಯೋಜನೆಯ ಭಾಗವಾಗಿದೆ. ಮನೆಯಿಲ್ಲದವರಿಗೆ ನಿವೇಶನ ನೀಡಿ ಮನೆ ನಿರ್ಮಿಸಿ ಕೊಡುತ್ತೇವೆ ಎಂದರು.

60 ವರ್ಷ ಮೇಲ್ಪಟ್ಟ ತಂದೆ-ತಾಯಿಗಳಿಗೆ ಪ್ರತಿ ತಿಂಗಳು 5 ಸಾವಿರ ರು. ಸಹಾಯ ಧನ ಹಾಗೂ ಅಂಗವಿಕಲರ ಮಾಸಾಶನ 5 ಸಾವಿರ ರೂ.ಗಳಿಗೆ ಏರಿಸಲಾಗುವುದು. ಇದಲ್ಲದೆ ಸ್ತ್ರೀ ಶಕ್ತಿ ಸಂಘಗಳ ಸಾಲವನ್ನು ಅಧಿಕಾರ ಸ್ವೀಕರಿಸಿದ ತಕ್ಷಣವೇ ಮನ್ನಾ ಮಾಡುತ್ತೇವೆ. ಈ ಹಿಂದೆ ನಮ್ಮ ಅಧಿಕಾರದಲ್ಲಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದರೂ ಕೆಲವರಿಗೆ ಬಿಜೆಪಿ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಅದನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನೀಡಲಾಗುವುದು. ಪಾಟೀಲ ಪುಟ್ಟಪ್ಪನವರ ಜನ್ಮಸ್ಥಳವಾಗಿರುವ ಹಲಗೇರಿ ಗ್ರಾಮದಲ್ಲಿ ಅವರ ಪುತ್ಥಳಿ ನಿರ್ಮಿಸಲಾಗುವುದು. 

ಹೊಲಗಳಿಗೆ ರಸ್ತೆ, ಗರಡಿಮನಿ ನಿರ್ಮಾಣ ಮಾಡಲಾಗುವುದು. ಪಂಚರತ್ನ ಯೋಜನೆಗಳ ಜಾರಿಗೆ 2.5 ಲಕ್ಷ ಕೋಟಿ ಹಣ ಬೇಕಾಗುತ್ತದೆ. ಅದಕ್ಕಾಗಿ ನಮ್ಮ ಪಕ್ಷ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರುವಂತೆ ಜನರು ಆಶೀರ್ವಾದ ಮಾಡಬೇಕು. ಇದು ಸಾಕಾರವಾಗಲು ಸ್ಥಳೀಯ ಅಭ್ಯರ್ಥಿ ಮಂಜುನಾಥ ಗೌಡಶಿವಣ್ಣನವರ ಅವ ರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು. 

ಯಾತ್ರೆಯು ಅಂತರವಳ್ಳಿ, ಆಲದಕಟ್ಟಿ, ಹಾರೋಗೊಪ್ಪ, ನಿಟ್ಟೂರು, ಗೋಡಿಹಾಳ, ಕುಪ್ಪೇಲೂರು, ತುಮ್ಮಿನಕಟ್ಟಿ, ಮಾಳನಾಯಕ ನಹಳ್ಳಿ, ನಿಟಪಳ್ಳಿ, ಕೋಟಿಹಾಳ, ಹೊಳೆ ಆನ್ವೇರಿ, ಹನುಮನಹಳ್ಳಿ, ಇಟಗಿ, ಮಾಗೋಡ ಗ್ರಾಮಗಳಲ್ಲಿ ಸಂಚರಿಸಿ ನಗರಕ್ಕೆ ಬಂದು ಸೇರಿತು. 

ಯಾತ್ರೆಯು ಅಂತರವಳ್ಳಿಗೆ ಆಗಮಿಸಿದಾಗ ಕುಮಾರಸ್ವಾಮಿ ಹೊಲದ ಕೆಲಸದಲ್ಲಿ ನಿರತರಾಗಿದ್ದ ರೈತ ಮಹಿಳೆಯರೊಂದಿಗೆ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು. 

ಮಾಜಿ ಶಾಸಕ ಎಚ್.ಎಸ್.ಶಿವಶಂಕರ್, ಜಿಲ್ಲಾಧ್ಯಕ್ಷ ಜಯಾನಂದ ಜೆ.ಕೆ., ಅಭ್ಯರ್ಥಿ ಮಂಜುನಾಥ ಗೌಡಶಿವಣ್ಣನವರ, ಮಹೇಶ ಹೊನ್ನಜ್ಜೇರ, ಪ್ರವೀಣ ಹೊದ್ದಿಗೇರಿ ಮತ್ತಿತರರಿದ್ದರು.

error: Content is protected !!