ಶಿವಾಜಿಗೆ ಅವಮಾನಿಸಿದ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ

ಯಶವಂತರಾವ್ ಜಾಧವ್ ನೇತೃತ್ವದಲ್ಲಿ ಡಿಸಿಗೆ ಮನವಿ ಸಲ್ಲಿಕೆ

ದಾವಣಗೆರೆ, ಸೆ.3- ಫೇಸ್‍ಬುಕ್‍ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಅವಹೇಳನಕಾರಿ ಶಬ್ದಗಳನ್ನು ಬರೆದು ಮತ್ತು ಸ್ವತಂತ್ರ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ವೀರರಾಣಿ ಕಿತ್ತೂರು ಚನ್ನಮ್ಮ ಅವರ ಭಾವಚಿತ್ರಕ್ಕೆ ಸೆಗಣಿ ಬಳಿದು ಅವಮಾನ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಜಿಲ್ಲಾ ಬಿಜೆಪಿ ದಕ್ಷಿಣ ವಿಧಾನಸಭಾ ಕ್ಷೇತ್ರ ಮತ್ತು ಹಿಂದೂಪರ ಸಂಘಟನೆಗಳ ಪದಾಧಿಕಾರಿಗಳು ನಗರದಲ್ಲಿ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

 ಮೊನ್ನೆ ಕೆಲ ಕಿಡಿಗೇಡಿಗಳು ಫೇಸ್‍ಬುಕ್ ಪೇಜಿನಲ್ಲಿ ಕನ್ನಡ ನಾಡಿನ ಭಾವಚಿತ್ರ ಹಾಕಿ ವಲಸಿಗರನ್ನು ಓಡಿಸಿ ಕನ್ನಡ ನಾಡನ್ನು ಉಳಿಸಿ ಎಂದು ಮತ್ತು ಶಿವ ಛತ್ರಪತಿ ಮಹಾರಾಜರ ಭಾವಚಿತ್ರವನ್ನು ಹಾಕಿ ಶಿವಾಜಿ ಓರ್ವ ಕಾಮುಕ, 8 ಹೆಂಡತಿಯರನ್ನು ಹೊಂದಿದ ದೇಶದ ಏಕೈಕ ಕಾಮುಕ ಎಂದು ಬರೆಯಲಾಗಿದೆ ಎಂದು ಆರೋಪಿಸಲಾಗಿದೆ.

ಶಿವಾಜಿ ಮಹಾರಾಜರ ಇತಿಹಾಸ ತಿಳಿಯದ ಮೂರ್ಖರು ಈ ರೀತಿಯಾಗಿ ಬರೆದಿದ್ದಾರೆ.ಮೊಘಲರ ವಿರುದ್ಧ ಹೋರಾಡಿ ಹಿಂದೂಗಳನ್ನು ಉಳಿಸಿದ ಶಿವಾಜಿ ಮಹಾರಾಜರು ಮೊಘಲರ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಸೆರೆಸಿಕ್ಕ ಅಬಲೆ ಹೆಣ್ಣು ಮಕ್ಕಳನ್ನು ತನ್ನ ತಾಯಿ ಸ್ವರೂಪವೆಂದು ಕಂಡ ಮಹಾನ್ ವ್ಯಕ್ತಿ. ಮತ್ತು ಸಂಗೊಳ್ಳಿ ರಾಯಣ್ಣ, ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಇತಿಹಾಸ ತಿಳಿಯದ ಕಿಡಿಗೇಡಿಗಳು ಈ ರೀತಿ ಪೋಸ್ಟ್ ಮಾಡಿ ಹಿಂದೂ ಸಮಾಜದ ಒಗ್ಗಟ್ಟನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಗಳನ್ನು ಕೂಡಲೇ ಬಂಧಿಸಿ ಉಗ್ರ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಲಾಗಿದೆ.

 ಈ ಸಂದರ್ಭದಲ್ಲಿ ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತ ರಾವ್ ಜಾಧವ್, ದಕ್ಷಿಣ ವಿಧಾನಸಭಾ ಕ್ಷೇತ್ರದ ಮಂಡಲ ಅಧ್ಯಕ್ಷ ಆನಂದ್ ರಾವ್ ಶಿಂಧೆ, ನಗರ ಪಾಲಿಕೆ ಸದಸ್ಯರುಗಳಾದ ಗಾಯತ್ರಿ ಖಂಡೋಜಿರಾವ್, ಎಲ್.ಡಿ. ಗೋಣೆಪ್ಪ, ಸೋಗಿ ಶಾಂತಕುಮಾರ್, ತರಕಾರಿ ಶಿವು, ಶಿವನಗೌಡ ಪಾಟೀಲ್, ವೀರೇಶ್ ಪೈಲ್ವಾನ್, ಪ್ರಸನ್ನ ಕುಮಾರ್, ಆರ್.ಎಲ್. ಶಿವಪ್ರಕಾಶ್, ರಾಕೇಶ್ ಜಾಧವ್, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉತ್ತರ ವಲಯ ಅಧ್ಯಕ್ಷ ಸಚಿನ್ ವೆರ್ಣೇಕರ್, ಗೌತಮ್ ಜೈನ್, ಶ್ರೀಕಾಂತ್ ನೀಲಗುಂದ, ನೀಲಗುಂದ ರಾಜು, ಟಿಂಕರ್ ಮಂಜಣ್ಣ, ಬಾಲ್ ರಾಜ್, ಗೋಪಾಲ್ ರಾವ್ ಮಾನೆ, ಕುಮಾರ್ ಘಾಟ್ಗೆ, ಮಂಜು ಪೈ, ಗುರು ಸೋಗಿ, ಪ್ರವೀಣ್ ಜಾಧವ್ ಸೇರಿದಂತೆ ಇತರರು ಇದ್ದರು.

error: Content is protected !!