ಕೋವಿಡ್ ರೋಗಿಗಳಿಗೆ ಆತ್ಮ ಸ್ಥೈರ್ಯ ತುಂಬಿದ ಕಾಂಗ್ರೆಸ್ ಸದಸ್ಯರು

ಕೋವಿಡ್ ರೋಗಿಗಳಿಗೆ ಆತ್ಮ ಸ್ಥೈರ್ಯ ತುಂಬಿದ ಕಾಂಗ್ರೆಸ್ ಸದಸ್ಯರು - Janathavaniದಾವಣಗೆರೆ, ಆ. 27-  ಮಹಾನಗರ ಪಾಲಿಕೆಯ ವಿಪಕ್ಷ ನಾಯಕ ಎ.ನಾಗರಾಜ್ ನೇತೃತ್ವದಲ್ಲಿ ಪಾಲಿಕೆ ಸದಸ್ಯರುಗಳು ಸಿಜಿ ಆಸ್ಪತ್ರೆಯ ಕೋವಿಡ್ ವಾರ್ಡ್ ಗಳಿಗೆ ಭೇಟಿ ನೀಡಿ ಅಲ್ಲಿನ ವಸ್ತುಸ್ಥಿತಿಯನ್ನು ಪರಿಶೀಲಿಸಿದರು.

ನಂತರ ಜಿಲ್ಲಾ ಸರ್ಜನ್ ಡಾ.ನಾಗರಾಜ್ ಜೊತೆ ಮಾತನಾಡಿದ ಸದಸ್ಯರುಗಳು, ಕೋವಿಡ್ ನಿರ್ವಹಣೆ   ಬಗ್ಗೆ ಮಾಹಿತಿ ಪಡೆದರು. ವೆಂಟಿಲೇಟರ್ ತೊಂದರೆಯಿಂದ ಪ್ರತಿದಿನ ರೋಗಿಗಳು ಪರದಾಡು ವಂತಹ ಪರಿಸ್ಥಿತಿ ಇದ್ದು ಇದರ ಬಗ್ಗೆ ಯಾವ ಕ್ರಮ ತೆಗೆದುಕೊಂಡಿದ್ದೀರಾ ಎಂದು ಎ.ನಾಗರಾಜ್ ವೈದ್ಯರನ್ನು ಪ್ರಶ್ನಿಸಿದರು. ಇದರ ಬಗ್ಗೆ ಮಾಹಿತಿ ನೀಡಿದ ಡಾ.ನಾಗರಾಜ್ ನಮ್ಮಲ್ಲಿ 14 ವೆಂಟಿಲೇಟರ್ ಇದ್ದು, ಅದರಲ್ಲಿ 10 ವೆಂಟಿಲೇಟರ್ ಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದರು. ಇತ್ತೀಚೆಗೆ ಪಿ.ಎಂ. ಕೇರ್ ನಿಂದ 25 ವೆಂಟಿಲೇಟರ್ ಗಳು ಬಂದಿದ್ದು ಅವನ್ನು ನಿರ್ವಹಿಸಲು ವೈದ್ಯರು ಮತ್ತು ಸಿಬ್ಬಂದಿ ಇಲ್ಲದಿರುವ ಕಾರಣ ಕಾರ್ಯ ನಿರ್ವಹಿಸದೆ ಹಾಗೆ ಇವೆ ಎಂದು ತಿಳಿಸಿದರು. ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದು ಸಿಬ್ಬಂದಿ ನೀಡಿದ ತಕ್ಷಣ ವೆಂಟಿಲೇಟರ್ ಕಾರ್ಯ ನಿರ್ವಹಣೆ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಪಾಲಿಕೆ ಸದಸ್ಯ ಗಡಿ ಗುಡಾಳ್ ಮಂಜುನಾಥ್, ಸದ್ಯ ಆಸ್ಪತ್ರೆಯಲ್ಲಿ ಇರುವ ರೋಗಿಗಳು ಮತ್ತು ಅವರಿಗೆ ನೀಡುವ ಆಹಾರದ ಬಗ್ಗೆ ಪ್ರಶ್ನೆ ಮಾಡಿದಾಗ ಸರ್ಜನ್ ಡಾ.ಶಶಿಧರ್ ಮಾತನಾಡಿ, 303 ರೋಗಿಗಳು ದಾಖಲಾಗಿದ್ದು, ಅದರಲ್ಲಿ 221 ಪಾಸಿಟಿವ್ ಕೇಸ್ ಇದೆ ಎಂದು ತಿಳಿಸಿದರು, ಪ್ರತಿದಿನ ಬೆಳಗ್ಗೆ ತಿಂಡಿ ನೀಡಲಾಗುವುದು ಮಧ್ಯಾಹ್ನ ಮತ್ತು ರಾತ್ರಿ ಚಪಾತಿ – ಪಲ್ಯ, ಅನ್ನ – ಸಾಂಬಾರ್ ನೀಡಲಾಗುವುದು ಜೊತೆಗೆ ಸಂಜೆ ಹಾಲು ಮತ್ತು ಡ್ರೈಫ್ರೂಟ್ಸ್ ನೀಡಲಾಗುತ್ತದೆ ಎಂದು ತಿಳಿಸಿದರು. ರೋಗಿಗಳಿಗೆ ಊಟದ ರುಚಿ ತಿಳಿಯದ ಕಾರಣ ಊಟ ಸರಿ ಇಲ್ಲ ಎಂದು ಹೇಳುತ್ತಾರೆಯೇ ವಿನಃ ಬೇರೆ ರೀತಿಯ ಯಾವುದೇ ತೊಂದರೆ ಇಲ್ಲ, ಸ್ವತಃ ಎಸ್ಪಿಯವರು ಸಹ ಊಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು. 

ಪಾಲಿಕೆ ಸದಸ್ಯ ಸೈಯದ್ ಚಾರ್ಲಿ, ಕೋವಿಡ್ ಪಾಸಿಟಿವ್ ರೋಗಿಗಳನ್ನು ಹೋಂ ಕ್ವಾರಂಟೈನ್ ಗೆ ಕಳಿಸಿದಾಗ ಅವರು ಎಲ್ಲಾ ಕಡೆ ಸುತ್ತಾಡುತ್ತಿದ್ದು, ಅವರಿಗೆ ಸೀಲ್ ಹಾಕಿ ಕಳಿಸುವ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

ಸದಸ್ಯ ದೇವರಮನೆ ಶಿವ ಕುಮಾರ್ ಕೋವಿಡ್ ನಿರ್ವಹಣೆಗೆ ಬೇಕಾಗುವ ವೆಂಟಿಲೇಟರ್ ಸಿಲಿಂಡರ್ ಬಗ್ಗೆ ಕೇಳಿದಾಗ ಡಾ. ಸಂಜಯ್ ಮಾತನಾಡಿ, ಪ್ರತಿದಿನ 650 ಸಿಲಿಂಡರ್ ಅವಶ್ಯಕತೆಯಿದ್ದು, ಈಗ 300 ಸಿಲಿಂಡರ್ ಮಾತ್ರ ದೊರೆ ಯುತ್ತಿದೆ. ಆದ್ದರಿಂದ ನಿರ್ವಹಣೆ ತೊಂದರೆಯಾಗುತ್ತಿದೆ ಎಂದು ತಿಳಿಸಿ ದರು. ಸದ್ಯ ಜಂಬೋ ಸಿಲಿಂಡರ್ ಮೂಲಕ ಆಕ್ಸಿಜನ್ ಸರಬರಾಜು ಮಾಡುತ್ತಿದ್ದು, ಎಸ್.ಎಸ್. ಹೈಟೆಕ್ ಹಾಗೂ ಬಾಪೂಜಿ ಆಸ್ಪತ್ರೆಯಲ್ಲಿರು ವಂತೆ ಲಿಕ್ವಿಡ್ ಟ್ಯಾಂಕ್ ಮೂಲಕ ಆಕ್ಸಿಜನ್ ಸರಬರಾಜು ಮಾಡಿದರೆ ಅನುಕೂಲವಾಗುತ್ತದೆ ಎಂದು ತಿಳಿಸಿ, ಸಿ.ಜಿ. ಆಸ್ಪತ್ರೆಯಲ್ಲೂ ಸಹ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಶೀಘ್ರವೇ ಲಿಕ್ವಿಡ್ ಟ್ಯಾಂಕ್ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ವಿಪಕ್ಷ ಸದಸ್ಯರ ನಿಯೋಗ ಎಲ್ಲಾ ವಾರ್ಡ್ ಗಳಿಗೆ ಭೇಟಿ ನೀಡಿ ಪರಿಶೀಲಿಸಿತು. ಒಟ್ಟಿನಲ್ಲಿ ವೈದ್ಯರು ಮತ್ತು ಸಿಬ್ಬಂದಿಯ ಕೊರತೆ ಎದ್ದು ಕಾಣುತ್ತಿದೆ. ಜಿಲ್ಲಾಡಳಿತ ಶೀಘ್ರವೇ ಇದರ ಬಗ್ಗೆ ಗಮನ ಹರಿಸಿ ಸಾರ್ವಜನಿಕ ರಿಗೆ ಆಗುವ ತೊಂದರೆಯನ್ನು ಸರಿ ಪಡಿಸಬೇಕು ಎಂದು ಒತ್ತಾಯಿಸಿತು.

ಈ ಸಂದರ್ಭದಲ್ಲಿ ಸದಸ್ಯರುಗಳಾದ ಜಿ.ಡಿ. ಪ್ರಕಾಶ್, ವಿನಾಯಕ, ಆಶಾ ಉಮೇಶ್  ಮುಂತಾದವರು ಉಪಸ್ಥಿತರಿದ್ದರು.

error: Content is protected !!