ದಾವಣಗೆರೆ, ಜು.10- ಶಿಷ್ಯ ವೇತನಕ್ಕೆ ಆಗ್ರಹಿಸಿ ನಗರದಲ್ಲಿ ಜೆಜೆಎಂ ಮೆಡಿಕಲ್ ಕಾಲೇಜಿನ ಸ್ನಾತಕೋತ್ತರ ಮತ್ತು ಗೃಹ ವೈದ್ಯ ವಿದ್ಯಾರ್ಥಿಗಳು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಇಂದಿಗೆ 12ನೇ ದಿನಕ್ಕೆ ಕಾಲಿಟ್ಟಿದ್ದು, ಕೋವಿಡ್ ಸೇವೆ ಹೊರತುಪಡಿಸಿ, ಹೊರ ರೋಗಿಗಳ ವಿಭಾಗದ (ಒಪಿಡಿ) ಎಲ್ಲಾ ವೈದ್ಯಕೀಯ ಸೇವೆಗಳನ್ನು ಸ್ಥಗಿತಗೊಳಿಸಿ ಹೋರಾಟ ತೀವ್ರಗೊಳಿಸಿದ್ದಾರೆ.
ಶ್ರೀ ಜಯದೇವ ಮುರುಘರಾಜೇಂದ್ರ ವೃತ್ತದಲ್ಲಿ ವಿದ್ಯಾರ್ಥಿಗಳು ಮಳೆಯನ್ನೂ ಲೆಕ್ಕಿಸದೇ ಛತ್ರಿ ಹಿಡಿದುಕೊಂಡು ಮತ್ತು ನೆನೆಯುತ್ತಾ ಮುಷ್ಕರ ನಡೆಸಿದರು.
ಇದೇ ವೇಳೆ ಸಾರ್ವಜನಿಕರಿಗೆ ಸ್ಯಾನಿಟೈಸರ್, ಮಾಸ್ಕ್ ಗಳನ್ನು ವಿತರಿಸಿ, ಕೊರೊನಾ ಸೋಂಕು ಹರಡದಂತೆ ಸಂರಕ್ಷಿಸಿಕೊಳ್ಳುವ ಬಗ್ಗೆ ಅಗತ್ಯ ರಕ್ಷಣಾ ಕ್ರಮಗಳ ಕುರಿತು ಜನಜಾಗೃತಿ ಮೂಡಿಸಿದರು. ಸಂಜೆ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು.
ಇಂದಿನಿಂದ ಒಪಿಡಿಯಲ್ಲಿ ಚಿಕಿತ್ಸೆಯನ್ನು ಸ್ಥಗಿತಗೊಳಿಸಿದ್ದು, ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಲು ಮುಂದಾಗದೇ ಇದ್ದರೆ ಇನ್ನೆರಡು ದಿನಗಳವರೆಗೆ ಕಾದು ನಂತರ ಕೋವಿಡ್ ಸೇವೆ ಹೊರತುಪಡಿಸಿ ತುರ್ತು ಮತ್ತು ಹೆರಿಗೆ ಸೇವೆಗಳು ಸೇರಿದಂತೆ ಎಲ್ಲಾ ವೈದ್ಯಕೀಯ ಸೇವೆಗಳನ್ನು ಸ್ಥಗಿತ ಗೊಳಿಸುವುದಾಗಿ ವೈದ್ಯಕೀಯ ವಿದ್ಯಾರ್ಥಿ
ಡಾ. ಹರೀಶ್ ಎಚ್ಚರಿಸಿದ್ದಾರೆ.