ಮತ್ತಿಹಳ್ಳಿಯ ವ್ಯಕ್ತಿಗೆ ಕೊರೊನಾ ಸೋಂಕು

ಹರಪನಹಳ್ಳಿ, ಜೂ.23- ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮಕ್ಕೆ ಆಗಮಿಸಿದ ವ್ಯಕ್ತಿಗೆ  ಕೊರೊನಾ ಸೋಂಕು ಇರುವುದು ದೃಢ ಪಟ್ಟಿದೆ. 

ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಯೊಬ್ಬರ  ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಿಕೊಡಲಾಗಿದೆ. ಆ ವರದಿ ಬರುವ ಪೂರ್ವದಲ್ಲಿಯೇ ಆ ವ್ಯಕ್ತಿ ಸ್ವಂತ ಗ್ರಾಮ ಹರಪನಹಳ್ಳಿ ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮಕ್ಕೆ ಸೋಮವಾರ ಸಂಜೆ ಆಗಮಿಸಿದ್ದಾನೆ.

ಆತ ಆಗಮಿಸಿದ ನಂತರ ತಡರಾತ್ರಿ ಆತನಿಗೆ ಕೋವಿಡ್ ಸೋಂಕು ಇರುವುದು ದೃಢ ಪಟ್ಟಿದೆ. ಆಗ ಅಧಿಕಾರಿಗಳು ಮಂಗಳವಾರ ಬೆಳಗಿನ ಜಾವ ಆತನನ್ನು  ಕರೆದುಕೊಂಡು ಹೋಗಿ ತೋರಣಗಲ್ ಒಪಿಜಿ ಕೇಂದ್ರಕ್ಕೆ ದಾಖಲಿಸಿದ್ದಾರೆ.

ಸೋಂಕಿತನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದವರನ್ನು ಮತ್ತಿಹಳ್ಳಿ ಗ್ರಾಮದಲ್ಲಿಯೇ ಹೋಮ್ ಕ್ವಾರಂಟೈನ್‌ಗೆ ಅಳವಡಿಸಲಾಗಿದೆ ಹಾಗೂ ಗ್ರಾಮದ ಕುರುಬರ ಓಣಿ ಹಾಗೂ ಜನತಾ ಕಾಲೋನಿಗಳನ್ನು ಸೀಲ್‌ಡೌನ್ ಮಾಡಲಾಗಿದೆ.

 ಮತ್ತಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ವಿಜಯಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. 

ಈ ಕುರಿತು ಪ್ರತಿಕ್ರಿಯೆ ನೀಡಿದ ಮತ್ತಿಹಳ್ಳಿ ಗ್ರಾ.ಪಂ. ಅಧ್ಯಕ್ಷರಾದ ಪಿ.ಚೆನ್ನಮ್ಮ ರಾಮಣ್ಣ ಅವರು, ದ್ರವ ಪರೀಕ್ಷೆ ವರದಿ ಬರುವ ಪೂರ್ವದಲ್ಲಿಯೇ ಗ್ರಾಮಕ್ಕೆ ಆಗಮಿಸಬಾರದಿತ್ತು. ವೈದ್ಯರು ಇಲ್ಲಿಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಹೇಳಿದರು.

error: Content is protected !!