ಪ್ರವಾಸಿ ತಾಣವಾಗಿ ಕೊಣಚಗಲ್

ಜಗಳೂರು, ಜೂ.22- ತಾಲ್ಲೂಕಿನ ಧಾರ್ಮಿಕ ಕ್ಷೇತ್ರ ಶ್ರೀ ಕೊಣಚಗಲ್  ರಂಗನಾಥ ಸ್ವಾಮಿ ದೇವಸ್ಥಾನ ಹಾಗೂ ಐತಿಹಾಸಿಕ ದಳವಾಯಿ ಹೊಂಡದ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿ  ಅಭಿವೃದ್ಧಿ ಪಡಿಸಲಾಗುವುದು ಎಂದು  ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು.

ತಾಲ್ಲೂಕಿನ ಕೊಣಚಗಲ್ ಗುಡ್ಡದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು.  ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅನುಕೂಲ ವಾಗಲಿ ಎಂಬ  ಉದ್ದೇಶ ದಿಂದ  ದೇವಸ್ಥಾನಕ್ಕೆ ತೆರಳಲು  ಸಿಸಿ ರಸ್ತೆಯನ್ನು ಮಾಡಲಾಗುತ್ತಿದೆ. ತಡೆಗೋಡೆ, ಬದಿಯಲ್ಲಿ ಐ ಮಾಸ್ಕ್ ದೀಪಗಳು ಸೇರಿದಂತೆ ಭಕ್ತಾದಿಗಳ ಅನುಕೂಲಕ್ಕೆ ಕೊಣಚಗಲ್ ಗುಡ್ಡದ ಕೆಳಗಿರುವ ದಳವಾಯಿ ಹೊಂಡವನ್ನು ಸ್ವಚ್ಛಗೊಳಿಸುವ ಮೂಲಕ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದರು.

ತರಾಟೆ: ಹಿಂದಿನ ಸರ್ಕಾರದ ಆಡಳಿತ ಅವಧಿಯಲ್ಲಿ ಕೊಣಚಗಲ್ ದೇವಸ್ಥಾನ ಅಭಿವೃದ್ದಿ ಕಾಮಗಾರಿಗಳು ನಡೆಯದೇ ಕಣ್ಮರೆಯಾಗಿವೆ. ಈ ಬಾರಿ ವಿವಿಧ ಅನುದಾನಗಳನ್ನು ಕ್ರೋಢೀಕರಣ ಮಾಡಿ, ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಮಾಜಿ ಶಾಸಕರ ಹೆಸರೇಳದೇ ಪರೋಕ್ಷವಾಗಿ ಟೀಕಿಸಿದರು.

ಜಗಳೂರಿನ ಸರ್ಕಾರಿ ಬಾಲಕರ ಶಾಲಾ ಆವರಣದಲ್ಲಿ ಪರೇಡ್ ಗ್ರೌಂಡ್, ಬಯಲು ರಂಗಮಂದಿರ, ಆಡಿಟೋರಿಯಂ, ಕಾಮಗಾರಿ ಸುಸಜ್ಜಿತವಾಗಿ  ನಡೆಯುತ್ತಿದೆ. ತಾಲ್ಲೂಕಿನಲ್ಲಿ 120 ಲಕ್ಷ ರೂ. ವೆಚ್ಚದಲ್ಲಿ  ಚದುರಗೊಳ್ಳ ರಸ್ತೆ ಕಾಮಗಾರಿ  ಪ್ರಾರಂಭ ವಾಗಿದೆ. ಅಲ್ಲದೆ ಭದ್ರಾ ಮೇಲ್ದಂಡೆ ಯೋಜನೆ 2.4 ಟಿಎಂಸಿ ದೇಸಾಯಿ ವರದಿಯನ್ವಯ ಹೊರಾಟ ಸಮಿತಿಯ ತಿಪ್ಪೇಸ್ವಾಮಿ ಅವರ ಹೋರಾಟದ ರೂಪುರೇಷೆಯಂತೆ   ಪ್ರಾಜೆಕ್ಟ್ ಭದ್ರವಾಗಿದ್ದು,  ಒಂದು ಹನಿ ನೀರು ಹೊರಗಡೆ ಬಿಡಲು ನಾವು ಸಿದ್ದರಿಲ್ಲ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಪಲ್ಲಾಗಟ್ಟೆ ಮಹೇಶ್, ಮುಖಂಡ ರಾದ ಚಟ್ನಹಳ್ಳಿ ರಾಜಪ್ಪ, ಹಾಲಸ್ವಾಮಿ, ಬಿಸ್ತುವಳ್ಳಿ ಬಾಬು,ಮೆದಗಿನಕೆರೆ ವೀರಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!