ಬ್ಯಾಂಕ್‌ನಲ್ಲಿ ಕನ್ನಡ ಕಡೆಗಣನೆ ಖಂಡಿಸಿ ಪ್ರತಿಭಟನೆ

ದಾವಣಗೆರೆ, ಮೇ 27- ದೈನಂದಿನ ವ್ಯವಹಾರದಲ್ಲಿ ಕನ್ನಡವನ್ನು  ನಿರ್ಲಕ್ಷ್ಯ ಮಾಡುತ್ತಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕನ್ನಡ ವಿರೋಧಿ ನಡೆಯನ್ನು ಬದಲಾಯಿಸಿಕೊಳ್ಳುವಂತೆ  ಒತ್ತಾಯಿಸಿ ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ನಗರದ ಹೆಚ್ ಕೆ ಆರ್ ವೃತ್ತದ ಬಳಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ಮುಂಭಾಗದಲ್ಲಿ ನಿನ್ನೆ ಪ್ರತಿಭಟನೆ ನಡೆಸಿದರು. ನಂತರ ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು. 

ಪಾಸ್‍ಬುಕ್, ಚಲನ್, ಚೆಕ್‍ಬುಕ್‍ಗಳಲ್ಲಿ ಸ್ಥಳೀಯ ಭಾಷೆಯಾದ ಕನ್ನಡವನ್ನು ಕಡೆಗಣಿಸಿ ರಾಷ್ಟ್ರಭಾಷೆಯ ಹೆಸರಿನಲ್ಲಿ ಬಲವಂತವಾಗಿ ಹೇರಿಕೆ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕರ್ನಾಟಕದಲ್ಲಿ ಕನ್ನಡವೇ ರಾಜ್ಯ ಮತ್ತು ಆಡಳಿತ ಭಾಷೆ ಇಲ್ಲಿ ವ್ಯವಹಾರ, ಉದ್ಯೊಗ, ಉದ್ಯಮ,ಶಿಕ್ಷಣ ಸೇರಿದಂತೆ ಎಲ್ಲಾ ರಂಗಗಳಲ್ಲಿ ಕನ್ನಡವೇ ಪ್ರಧಾನವಾಗಬೇಕು ಎಂದು ಸರ್ಕಾರ ದಶಕಗಳ ಹಿಂದೆಯೇ ಆದೇಶಿಸಿದೆ.  

ಬ್ರಿಟಿಷ್ ಅಧಿಕಾರಿಗಳು ಸಹ ಇಲ್ಲಿ ಜನರ ಭಾಷೆಯಲ್ಲಿ ತಮ್ಮ ಆಡಳಿತ ಮತ್ತು ವ್ಯವಹಾರವನ್ನು ನಡೆಸಿ ಸ್ಥಳಿಯ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಆದರೆ ಇತ್ತೀಚೆಗೆ ಎಲ್ಲಾ ವ್ಯವಹಾರಗಳಲ್ಲಿ ಹಿಂದಿ, ಇಂಗ್ಲಿಷ್ ಭಾಷೆಗಳನ್ನು ಬಳಸುತ್ತಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ಜನರಿಗೆ ಭಾಷಾ ಸಮಸ್ಯೆ ಎದುರಾಗುತ್ತದೆ. ಇಲ್ಲಿನ ಬ್ಯಾಂಕಿನ ಸಿಬ್ಬಂದಿಗಳಿಗೆ ಕನ್ನಡವೇ ಬರುವುದಿಲ್ಲ. ಕೆಲವೊಂದು ವೇಳೆ ಉಡಾಫೆಯಾಗಿ ಮಾತನಾಡಿ, ಗ್ರಾಹಕರನ್ನು ಅವಮಾನಿಸುವ ಕೆಲಸ ಮಾಡಿದ್ದಾರೆ. ಇದು ನಿಜಕ್ಕೂ ಸರಿಯಾದ ನಡೆಯಲ್ಲ. ರಾಜ್ಯ ಭಾಷೆಯನ್ನು ಗೌರವಿಸದೇ ವ್ಯವಹರಿಸುವ ಬ್ಯಾಂಕ್ ನ ನಡೆ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

15 ದಿನಗಳೊಳಗಾಗಿ  ಬ್ಯಾಂಕಿನ ಎಲ್ಲಾ ವ್ಯವಹಾರಗಳಲ್ಲಿ ಕನ್ನಡವನ್ನು ಮುದ್ರಿಸಿ ವ್ಯವಹರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬ್ಯಾಂಕಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. 

ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಎನ್. ವೆಂಕಟೇಶ್, ಯುವ ಘಟಕದ ಅಧ್ಯಕ್ಷ ಮಂಜುನಾಥ, ಶೇರ್ ಅಲಿ, ಉಡೇಕರ್ ಮತ್ತಿತರರು ಪಾಲ್ಗೊಂಡಿದ್ದರು.

error: Content is protected !!