ಎಸಿಬಿ ಬಲೆಗೆ ಬಿದ್ದ ಜಗಳೂರು ಬಿಇಒ

ಎಸಿಬಿ ಬಲೆಗೆ ಬಿದ್ದ ಜಗಳೂರು ಬಿಇಒ - Janathavaniಜಗಳೂರು, ಮಾ.29- ನಿಯೋಜನೆ ಮಾಡಲು ಶಿಕ್ಷಕರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಬಿಇಒ ಸಿ.ಎಸ್. ವೆಂಕಟೇಶ್ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ಸೋಮವಾರ ಸಂಜೆ ನಡೆದಿದೆ.

ಪಟ್ಟಣದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಬಿಇಒ ಕೊಠಡಿಯಲ್ಲಿ ಶಿಕ್ಷಣ ಸಂಯೋಜಕರಾದ ಮಂಜಪ್ಪನವರ ಸಮಕ್ಷಮ ಬಿಇಒ ಸಿ.ಎಸ್. ವೆಂಕಟೇಶ್ ಅವರು ಶಿಕ್ಷಕ ಅಂಜಿನಾಯ್ಕ್ ಅವರಿಂದ 10 ಸಾವಿರ ರೂ. ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಸ್ತಗಿರಿ ಮಾಡಿದ್ದಾರೆ. ಶಿಕ್ಷಕ ಆಂಜನೇಯ ನಾಯ್ಕ ತಾಲ್ಲೂಕಿನ ಜಾಲಿನಗರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ನಿಯೋಜನೆ ಮಾಡಿಕೊಡಲು ಬಿಇಒ ಅವರಿಗೆ ಕೋರಿಕೊಂಡಿದ್ದರು. ಈ ಸಮಯದಲ್ಲಿ ಬಿಇಒ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಪೂರ್ವ ವಲಯ ಎಸಿಬಿ ಪೊಲೀಸ್ ಅಧೀಕ್ಷಕ ಜಯಪ್ರಕಾಶ್ ಮಾರ್ಗದರ್ಶನದಂತೆ  ನಡೆದ ಕಾರ್ಯಾಚರಣೆಯಲ್ಲಿ ಡಿಎಸ್ಪಿ ಎಸ್.ಸುಧೀರ್, ಪಿಐಗಳಾದ ಮಧುಸೂದನ್, ರವೀಂದ್ರ ಎಂ. ಕುರುಬಗಟ್ಟಿ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

error: Content is protected !!