ಹೊನ್ನಾಳಿ : ಯುವ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ

ಹೊನ್ನಾಳಿ, ಆ.10-  ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ತಾಲ್ಲೂಕು ಯುವ ಕಾಂಗ್ರೆಸ್ ವತಿಯಿಂದ ಯುವ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ನಡೆಯಿತು.

ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ಬಣ್ಣಜ್ಜಿ ಮಾತನಾಡಿ, ಯುವ ಕಾಂಗ್ರೆಸ್ ಪದಾಧಿಕಾರಿಗಳು ಜಾಗೃತರಾಗಿ ರಾಜ್ಯ ಸರ್ಕಾರದ ಜನ ವಿರೋಧಿ ಧೋರಣೆ ವಿರುದ್ಧ ಹೋರಾಟದ ರೂಪುರೇಷೆಗಳನ್ನು ಹಮ್ಮಿಕೊಳ್ಳುವ ಮೂಲಕ ಪಕ್ಷಕ್ಕೆ ಶಕ್ತಿ ತುಂಬಬೇಕಿದೆ ಎಂದರು.

ಎನ್‌ಎಸ್‌ಒಯು ತಾಲ್ಲೂಕು ಅಧ್ಯಕ್ಷ ಮನೋಜ್ ವಾಲಜ್ಜಿ ಮಾತನಾಡಿ, ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಯುವಕರಲ್ಲಿ ನಾಯಕತ್ವ ಬೆಳೆಯಬೇಕೆಂದು 1960 ರಲ್ಲಿ ಯುವ ಕಾಂಗ್ರೆಸ್ ಸ್ಥಾಪನೆ ಮಾಡಿದ್ದು, ಇದರ ಸಾರ್ಥಕತೆಗಾಗಿ ಪಕ್ಷದ ಯುವಕರಲ್ಲಿ  ಜಾಗೃತಿ ಮೂಡಿಸಲು ಕಾರ್ಯ ಯೋಜನೆಗಳಿಂದ ಮಾತ್ರ ಸಾಧ್ಯ ಎಂದರು.

ಎನ್‌ಎಸ್‌ಒಯು ರಾಜ್ಯವಕ್ತಾರ ದರ್ಶನ ಬಳ್ಳೇಶ್ವರ್‌ ಮಾತನಾಡಿ, ಕಾಂಗ್ರೆಸ್ ಜಾರಿಗೊಳಿಸಿದ್ದ 18 ವರ್ಷದ ಯುವಕರ ಮತದಾನದ ಹಕ್ಕನ್ನು ಅಂದಿನ ದಿನ ವಿರೋಧಿಸಿದ್ದ ಬಿಜೆಪಿ ಪಕ್ಷವು ಅದೇ ಯುವಕರಲ್ಲಿ ಕೋಮುಗಲಭೆ ನೆಪದಲ್ಲಿ ಮತ ಬ್ಯಾಂಕ್‌ ಆಗಿ ಮಾಡಿಕೊಳ್ಳುತ್ತಿದೆ. ಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆ ಗೆಲುವಿಗೆ, ಪಕ್ಷವನ್ನು ಸಧೃಡಗೊಳಿಸುವ ಅವಶ್ಯಕತೆಯ ಬಗ್ಗೆ ವಿವರಿಸಿದರು.

ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಮನೋಜ್, ಭಾಷಾ, ಶ್ರೀಧರ್ ಗೌಡ, ಬಾಹುಬಲಿ, ಹರೀಶ ವಾಮದೇವ, ಪ್ರಕಾಶ್‌, ಗಣೇಶ್‌ ಮದಕರಿ,ಕಿರಣ್ ಗೊಲ್ಲರಹಳ್ಳಿ, ನ್ಯಾಮತಿ ಯೂನುಸ್‌ ಖಾನ್ ಇದ್ದರು.

error: Content is protected !!