ಉಪಚುನಾವಣೆ : ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ ಬಳಕೆ

ದಾವಣಗೆರೆ, ಮಾ.24 – ಇದೇ ದಿನಾಂಕ 29 ರಂದು ನಡೆಯುತ್ತಿರುವ ಪಾಲಿಕೆ ಉಪ ಚುನಾವಣೆ ಮತ್ತು ಅವಧಿ ಪೂರ್ಣಗೊಂಡ/ತೆರವಾದ ಸ್ಥಾನಗಳಿಗೆ ನಡೆಯುತ್ತಿರುವ ಗ್ರಾ.ಪಂ ಚುನಾವಣೆಯಲ್ಲಿ ಮತದಾರರ ‘ಎಡಗೈ ತೋರು ಬೆರಳಿಗೆ’ ಅಳಿಸಲಾಗದ ಶಾಯಿಯನ್ನು ಹಾಕುವಂತೆ ರಾಜ್ಯ ಚುನಾವಣಾ ಆಯೋಗ ನಿರ್ದೇಶನ ನೀಡಿದೆ.

ಮಹಾನಗರಪಾಲಿಕೆ ವಾರ್ಡ್ ನಂ.20 ಮತ್ತು 22 ರ ಉಪಚುನಾವಣೆ ಹಾಗೂ 2021 ರ ಮೇ ಮಾಹೆಯವರೆಗೆ ಅವಧಿ ಮುಕ್ತಾಯವಾಗುತ್ತಿರುವ ದಾವಣಗೆರೆ ತಾಲ್ಲೂಕಿನ 37-ಬೇತೂರು, 40-ಕನಗೊಂಡ ನಹಳ್ಳಿ ಮತ್ತು 41-ಕುಕ್ಕುವಾಡ ಗ್ರಾಮ ಪಂಚಾಯಿತಿಗಳ ಚುನಾವಣೆ ಹಾಗೂ ವಿವಿಧ ಕಾರಣಗಳಿಂದ ಹೊನ್ನಾಳಿ ತಾಲ್ಲೂಕಿನ 7-ಅರಬಗಟ್ಟೆ ಗ್ರಾಮ ಪಂಚಾಯಿತಿಯ 3-ಸುಂಕದಕಟ್ಟೆ ಕ್ಷೇತ್ರದ ಉಪ ಚುನಾವಣೆ-2021 ರ ಸಂಬಂಧ ಚುನಾವಣಾ ವೇಳಾಪಟ್ಟಿಯನ್ನು ಹೊರಡಿಸಲಾಗಿದ್ದು, ಮಾರ್ಚ್ 29 ರಂದು ಮತದಾನ ನಡೆಯಲಿದೆ. ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ/ಉಪ ಚುನಾವಣೆ ಯಲ್ಲಿ ಮತದಾರರ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಾಕುವಂತೆ ಚುನಾವಣಾ ಆಯೋಗ ನಿರ್ದೇಶಿಸಿದೆ ಎಂದು ಎಡಿಸಿ ಪೂಜಾರ ವೀರಮಲ್ಲಪ್ಪ ತಿಳಿಸಿದ್ದಾರೆ.

error: Content is protected !!