ರಕ್ತದಾನದಿಂದ ದೈಹಿಕ, ಮಾನಸಿಕ ದೃಢತೆ

ಚನ್ನಗಿರಿ, ಜೂ.21- ರಕ್ತದಾನ ಮಾಡುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯ ಸದೃಢವಾಗಲಿದೆ. ಈ ನಿಟ್ಟಿನಲ್ಲಿ ಯುವಕರು ರಕ್ತದಾನ ಮಾಡಲು ಮುಂದಾಗಬೇಕೆಂದು ಜಿ.ಪಂ ಸದಸ್ಯ ಬಸವಂತಪ್ಪ ಕರೆ ನೀಡಿದರು.

ಬಸವಾಪಟ್ಟಣ ಗ್ರಾಮದ ಜನತಾ ವಿದ್ಯಾಲಯದಲ್ಲಿ ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ವತಿಯಿಂದ  ರಾಹುಲ್ ಗಾಂಧಿ ಮತ್ತು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೊರೊನಾದ ಸಂದಿಗ್ಧ ಸಂದರ್ಭದಲ್ಲಿ ರೋಗಿಗಳಿಗೆ ರಕ್ತ ಅತ್ಯವಶ್ಯಕವಾಗಿದ್ದು, ರಕ್ತದ ಕೊರತೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಯುವಕರು ರಕ್ತದಾನ ಮಾಡುವ ಮೂಲಕ ಬಡ ರೋಗಿಗಳ ಬಾಳಿಗೆ ಬೆಳಕಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್ ಮಾತನಾಡಿದರು. ತಾ.ಪಂ ಸದಸ್ಯ ಜಿ.ಪಿ.ಪ್ರಕಾಶ್, ಯುವ ಕಾಂಗ್ರೆಸ್ ಅಧ್ಯಕ್ಷ ಓ.ಜಿ.ಕಿರಣ್, ಕಾಂಗ್ರೆಸ್ ಯುವ ಮುಖಂಡ ಜಿ.ಎಂ.ಗಂಗಾಧರ್‌, ಬಿ.ಜಿ.ಅಮಿತ್, ಎನ್ಎಸ್‌ಯುಐ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಡಿ.ಜಿ.ವಿನಾಯಕ, ಕಾಂಗ್ರೆಸ್ ಕಾರ್ಮಿಕ ವಿಭಾಗದ ಇ.ಮಂಜುನಾಥ್, ಯುವ ಮುಖಂಡ ಮಂಜುನಾಥ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!