ಉಪಟಳ ನೀಡುತ್ತಿದ್ದ ಗಂಡು ಮುಸಿಯಾ ಸೆರೆ

ಹೊನ್ನಾಳಿ, ಮೇ 2-  ಸಾರ್ವಜನಿಕರಿಗೆ ಮತ್ತು ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿ ಗಳಿಗೆ ಉಪಟಳ ನೀಡುತ್ತಿದ್ದ ಗಂಡು ಮುಸಿ ಯಾವನ್ನು (ಹನುಮಂತ ಲಂಗೂರ್) ಭಾನು ವಾರ ಪುರಸಭೆ, ಅರಣ್ಯ ಇಲಾಖೆ ಹಾಗೂ ಶಿವಮೊಗ್ಗದ ವನ್ಯಜೀವಿಗಳ ತಂಡದವರು ಜಂಟಿ ಕಾರ್ಯಾಚರಣೆ ನಡೆಸಿ, ನೀಲಕಂಠೇಶ್ವರ ದೇವಸ್ಥಾನದ ಬಳಿ ಸೆರೆ ಹಿಡಿದಿದ್ದಾರೆ.

ಕಳೆದ 15 ದಿನಗಳಿಂದ ಸುಮಾರು 30ಕ್ಕೂ ಹೆಚ್ಚು ಜನರಿಗೆ ಈ ಮುಸಿಯಾ ಗಾಯಗೊಳಿಸಿತ್ತು. ಕಳೆದ ವರ್ಷ ಒಂದು ಮುಸಿಯಾ ಅಕ್ಟೋಬರ್ ತಿಂಗಳಿಂದ ಡಿಸೆಂಬರ್ 15 ರವರೆಗೆ ಸುಮಾರು 100ಕ್ಕೂ ಹೆಚ್ಚು ಜನರಿಗೆ ಗಾಯಗೊಳಿಸಿದ್ದು, ಕೆಲವರು ಗಂಭೀರವಾಗಿ ಗಾಯಗೊಂಡಿದ್ದರು. 

ಸರ್ಕಾರಿ ಆಸ್ಪತ್ರೆಯ ಬಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮತ್ತು ಪುರಸಭಾ ಅಧ್ಯಕ್ಷ ಕೆ.ವಿ.ಶ್ರೀಧರ್ ಅವರನ್ನು ಅಟ್ಟಿಸಿಕೊಂಡು ಕಚ್ಚಲು ಹೋಗಿತ್ತು. ಅದೃಷ್ಟವಶಾತ್ ಅವರು ತಕ್ಷಣವೇ ಸರ್ಕಾರಿ ಆಸ್ಪತ್ರೆಯ ಒಳಗೆ ಓಡಿ ಹೋಗಿ ಪಾರಾಗಿದ್ದರು. ಸತತ ಮೂರು ತಿಂಗಳ ಪ್ರಯತ್ನದ ಬಳಿಕ ಡಿಸೆಂಬರ್ 16 ರಂದು ಮುಸಿಯಾವನ್ನು ಸೆರೆ ಹಿಡಿದು ಶಿವಮೊಗ್ಗದ ಬಳಿಯಿರುವ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ ಕಳುಹಿಸಿಕೊಡಲಾಯಿತು. 

ಪುರಸಭಾ ಅಧ್ಯಕ್ಷ ಕೆ.ವಿ.ಶ್ರೀಧರ್, ವಲಯ ಅರಣ್ಯಾಧಿಕಾರಿ ಎಸ್.ಕೆ.ದೇವರಾಜ್ ಮಾತನಾಡಿದರು. 

ಆಂಜನೇಯ ಸ್ವಾಮಿಗೆ ಪೂಜೆ : ಕಳೆದ ವರ್ಷ ಮುಸಿಯಾವೊಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾ ಚಾರ್ಯ ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯ ಬಳಿ ಏಕಾಏಕಿ ಕಚ್ಚಲು ಹೋಗಿತ್ತು. ಅದೃಷ್ಟವಶಾತ್ ಅವರು ಪಾರಾಗಿದ್ದರು. ಮುಸಿಯಾ ಕಚ್ಚಲು ಹೋಗಿದ್ದಕ್ಕೆ ಬಿಜೆಪಿ ಪಕ್ಷದ ಕಾರ್ಯಕರ್ತರುಗಳು, ಕೆಲವು ಹಿರಿ ಯರು ಸಲಹೆ ನೀಡಿದ್ದರ ಹಿನ್ನೆಲೆಯಲ್ಲಿ ಸಂತೆ ಮೈದಾನದಲ್ಲಿರುವ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆಯನ್ನೂ ಮಾಡಿಸಿದ್ದರು.

ಮುಸಿಯಾ ಕಾರ್ಯಾಚರಣೆಯಲ್ಲಿ ಪುರಸಭಾ ಕಿರಿಯ ಆರೋಗ್ಯ ನಿರೀಕ್ಷಕ ನಾಗೇಶ್, ದಫೇದಾರ್ ಅಂಕಣ್ಣ, ಸಿಬ್ಬಂದಿ ರವಿ, ರಾಜು, ಲಕ್ಷ್ಮಣ, ಅಪ್ಪು, ಶಿವಮೊಗ್ಗದ ವನ್ಯಜೀವಿ ತಜ್ಞರಾದ ಡಾ.ವಿನಯ್,
ಡಾ.ನಿಖಿತಾ, ಡಾ.ಸುಜಯ್, ಪ್ರಭಾರಿ ಉಪವಲಯ ಅರಣ್ಯಾಧಿಕಾರಿ ಎಚ್.ಬಿ.ಅಂಜಲಿ, ಅರಣ್ಯ ರಕ್ಷಕರಾದ ಪ್ರಭಾಕರ್, ಆಶಾ, ಚಾಂದ್, ಸಿಬ್ಬಂದಿ ಎಂ.ಆರ್.ಚಂದ್ರಪ್ಪ, ಬಸವರಾಜ್ ಗಾಳಿ, ಚನ್ನೇಶಪ್ಪ, ಕತ್ತಿಗೆ ಲೋಕೇಶಪ್ಪ, ಕತ್ತಿಗೆ ಬಸವರಾಜ್ ಮತ್ತಿತರರು ಪಾಲ್ಗೊಂಡಿದ್ದರು.

error: Content is protected !!