ಭಜನಾ ಗಾಯನದಿಂದ ಅಧ್ಯಾತ್ಮಿಕ ಅನುಭೂತಿ

ಜಗಳೂರಿನಲ್ಲಿ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

ಜಗಳೂರು, ಮಾ.2- ಗ್ರಾಮೀಣ ಪ್ರದೇಶದ ಜನರ ಭಕ್ತಿ ಪರಂಪರೆಯ ಪ್ರತೀಕವಾದ ಭಜನಾ ಗಾಯನಕ್ಕೆ ಭಕ್ತ ಸಮೂಹವನ್ನು  ಅಧ್ಯಾತ್ಮಿಕ ಅನು ಭೂತಿಯಲ್ಲಿ ತೇಲಿಸುವ ಶಕ್ತಿ ಇದೆ ಎಂದು ಚಿತ್ರದುರ್ಗದ ಸಿದ್ದರಾಮೇಶ್ವರ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ರಾಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬೆಂಚಿಕಟ್ಟೆ ಗ್ರಾಮದಲ್ಲಿ ಜರುಗಿದ ಪಾಂಡುರಂಗ ವಿಠಲ ಏಕಾದಶಿ ದಿಂಡಿ ಉತ್ಸವದ ನೇತೃತ್ವ ವಹಿಸಿ ಅವರು ಮಾತನಾಡಿದರು.

ದೇಸೀ ಸಂಸ್ಕೃತಿಯನ್ನು ಬಿಂಬಿಸುವ ಪ್ರಾಚೀನ ಭಕ್ತಿ ಗಾಯನದ ಪ್ರಕಾರ ಗಳಲ್ಲಿ ಭಜನಾ ಗಾಯನ ಪ್ರಮುಖ ಸ್ಥಾನ ಪಡೆದಿದೆ. ಭಗವಂತನನ್ನು ಸರಳ ಹಾಗೂ ಸುಲಭವಾಗಿ ಭಜನೆಯ ಮೂಲಕ ಅರ್ಥೈಸಿಕೊಳ್ಳಬಹುದೆಂದರು.

ಇಂದಿನ ಆಧುನಿಕ ಕಾಲಘಟ್ಟದಲ್ಲಿಯೂ ಭಜನಾ ತಂಡಗಳು ಹಾಗೂ ಕಲಾವಿದರಿಂದಾಗಿ ಈ ನೆಲದ ವಿಶಿಷ್ಟ ಸಂಸ್ಕೃತಿ ಇನ್ನೂ ಉಳಿದಿದೆ. ತನ್ನದೇ ಆದ ಶೈಲಿಯಲ್ಲಿ ತತ್ವಪದ, ಭಕ್ತಿಯ ಸಾರ ಹಾಗೂ ಜಾನಪದ ಹಾಡುಗಾರಿಕೆಯ ಮೂಲಕ ಮನಸ್ಸಿನಲ್ಲಿ ಅಡಗಿರುವ  ಎಲ್ಲಾ ದುರಾಸೆಗಳನ್ನು, ಕೆಟ್ಟ ಆಲೋಚನೆಗಳನ್ನು ದೂರ ಮಾಡಿ ಮನಸ್ಸನ್ನು ಸಾತ್ವಿಕಗೊಳಿಸುತ್ತದೆ ಎಂದು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.

ಬೆಂಚಿಕಟ್ಟಿ ದ್ಯಾಮಲಾಂಬಿಕ ಕಲಾ ತಂಡದಿಂದ ಕೀರ್ತನೆ, ಪ್ರವಚನ, ವೀಣಾ ವಾದನ, ಸಂಗೀತ, ಭಜನಾ ಗಾಯನ ಮನಸೆಳೆಯಿತು.

ಭಜನಾ ಮಂಡಳಿ ಅಧ್ಯಕ್ಷ ಬಿ.ಹೆಚ್. ಅಂಜಿನಪ್ಪ, ಉಪಾಧ್ಯಕ್ಷ ಕುಮಾರಸ್ವಾಮಿ, ಕಾರ್ಯದರ್ಶಿ ನವಲಪ್ಪ, ಬಿ.ಎಸ್. ರಾಜಪ್ಪ, ಗೌರಮ್ಮ ರಮೇಶ್‌, ಕೆ.ಎನ್. ಜಗದೀಶ್, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ  ಬಿ.ಆರ್. ಅಂಜಿನಪ್ಪ, ದ್ಯಾಮೇಶ್, ಪೂಜಾರಿ ದ್ಯಾಮೇಶ್, ಅಂಜಿನಪ್ಪ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯ ಜಗದೀಶ್, ಗೋವಿಂದ ಇನ್ನಿತರರಿದ್ದರು.

error: Content is protected !!