ಮಾರ್ಗಸೂಚಿ ಅನ್ವಯ ದುಡಿಮೆಗೆ ಅವಕಾಶ ನೀಡಿ : ಎಸ್ಸೆಸ್-ಎಸ್ಸೆಸ್ಸೆಂ

ಮಾರ್ಗಸೂಚಿ ಅನ್ವಯ ದುಡಿಮೆಗೆ ಅವಕಾಶ ನೀಡಿ : ಎಸ್ಸೆಸ್-ಎಸ್ಸೆಸ್ಸೆಂ - Janathavaniಕೋವಿಡ್ ನಿಯಮಗಳನ್ನು ಪಾಲಿಸಲು ಜನತೆಗೆ ಮನವಿ

ದಾವಣಗೆರೆ, ಏ. 24- ಕೊರೊನಾದ 2ನೇ ಅಲೆ ತೀವ್ರವಾಗಿದ್ದು, ನಾಗರಿಕರು ಜೀವನಕ್ಕಿಂತ ಜೀವ ದೊಡ್ಡದು ಎಂಬುದನ್ನು ಅರಿತು ಮನೆಯಲ್ಲೇ ಇದ್ದು, ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್  ಮನವಿ ಮಾಡಿದ್ದಾರೆ.

ಜಿಲ್ಲಾಡಳಿತ ಕಠಿಣ ಕ್ರಮದ ಹೆಸರಿನಲ್ಲಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡುವಂತೆ ನಡೆದುಕೊಳ್ಳದೇ ಮಾರ್ಗಸೂಚಿ ಅನ್ವಯ ದುಡಿಮೆಗೆ ಅವಕಾಶ ನೀಡಬೇಕು. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಎಲ್ಲಾ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸಿದ್ದು, ಈ ಅಂಗಡಿ-ಮುಂಗಟ್ಟುಗಳಲ್ಲಿ ಕೆಲಸ ಮಾಡುವವರಿಗೆ ಜಿಲ್ಲಾಡಳಿತ ನೆರವು ನೀಡಬೇಕೆಂದು ಆಗ್ರಹಿಸಿದ್ದಾರೆ.

ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಸರ್ಕಾರ, ಜನರನ್ನು ತಪ್ಪಿತಸ್ಥರು ಎಂದು ಬಿಂಬಿಸದೇ ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ಕೊರೊನಾದಿಂದ ಜೀವನಕ್ಕೆ ತೊಂದರೆ ಆಗಿರುವ ರೈತರು, ಆಟೋ ಚಾಲಕರು, ಬೀದಿ ಬದಿ ವ್ಯಾಪಾರಸ್ಥರು, ಮನೆ ಕೆಲಸಗಾರರು, ಟ್ಯಾಕ್ಸಿ ಚಾಲಕರು, ಹಮಾಲರು, ಮೆಕ್ಯಾನಿಕ್‍ಗಳು, ಸಣ್ಣ ಉದ್ದಿಮೆದಾರರು, ಅಗತ್ಯ ವಸ್ತುಗಳನ್ನು ಹೊರತು ಪಡಿಸಿ ಅಂಗಡಿಗಳಲ್ಲಿ ಕೆಲಸ ಮಾಡುವವರು ಸೇರಿದಂತೆ, ಬಡವರ ನೆರವಿಗೆ ಜಿಲ್ಲಾಡಳಿತ ಧಾವಿಸಬೇಕೆಂದು ಒತ್ತಾಯಿಸಿದ್ದಾರೆ.

ಅದೇ ರೀತಿ ಕಳೆದ ವರ್ಷ ಕೊರೊನಾ ಸೋಂಕಿತರೊಂದಿಗೆ ಸಂಪರ್ಕ ಹೊಂದಿದವರನ್ನು ದಾವಣಗೆರೆಯ ಲಾಡ್ಜ್‍ಗಳಲ್ಲಿ ಐಸೋಲೇಷನ್ ಮಾಡಲಾಗಿದ್ದು, ಇದುವರೆಗೂ ಸಹ ಲಾಡ್ಜ್ ಮಾಲೀಕರಿಗೆ ಸರ್ಕಾರವೇ ನಿಗದಿಪಡಿಸಿದ್ದ ಬಾಡಿಗೆಯನ್ನು ಇದುವರೆಗೂ ಜಿಲ್ಲಾಡಳಿತ ಸಂದಾಯ ಮಾಡದೇ ಇರುವ ಬಗ್ಗೆ ಗಮನಕ್ಕೆ ಬಂದಿದ್ದು, ಜಿಲ್ಲಾಧಿಕಾರಿಗಳು ಶೀಘ್ರ ಬಾಡಿಗೆ ಪಾವತಿಗೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.

ಕೊರೊನಾದಿಂದ ಸಾಕಷ್ಟು ಜನರ ಜೀವನಕ್ಕೆ ತೀವ್ರ ತೊಂದರೆ ಉಂಟಾಗಿದೆ. ಆದರೂ ಸಹ ಅನಿವಾರ್ಯವಾಗಿ ಜೀವ ಉಳಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಜೀವ ಉಳಿದರೆ ಜೀವನವನ್ನು ಸುಂದರವಾಗಿ ಕಟ್ಟಿಕೊಳ್ಳಬಹುದು ಎಂಬುದನ್ನು ನಾಗರಿಕರು ಮನಗಾಣಬೇಕೆಂದು ತಿಳಿಸಿದ್ದಾರೆ.

ಕರ್ನಾಟಕದ ಗಡಿ ರಾಜ್ಯಗಳಲ್ಲಿ ಕೊರೊನಾ 2ನೇ ಅಲೆ ಅಬ್ಬರಿಸುತ್ತಿದ್ದು,ರಾಜ್ಯದ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಕೊರೊನಾ ತೀವ್ರವಾಗಿದ್ದು, ದಾವಣಗೆರೆಯಲ್ಲಿ ಕೊರೊನಾ ಹೆಚ್ಚಳವಾಗದಂತೆ ತಡೆಯುವ ಕೆಲಸ ನಮ್ಮಿಂದಲೇ ಆಗಬೇಕಿದ್ದು, ಅವಶ್ಯವಾಗಿ ಹೊರಬರಬೇಕೆಂಬ ಜನರು ಮಾಸ್ಕ್ ಧರಿಸಿ ಅಂತರ ಕಾಪಾಡಿಕೊಳ್ಳುವ ಮೂಲಕ ಜಾಗರೂಕತೆಯಿಂದ ಇರಬೇಕೆಂದು ಮನವಿ ಮಾಡಿದ್ದಾರೆ.

error: Content is protected !!