ದೃಶ್ಯಕಲಾ ಮಹಾವಿದ್ಯಾನಿಲಯ ಪ್ರದೇಶದಲ್ಲಿ ವಸತಿ ಗೃಹ ರದ್ದುಪಡಿಸಲು ಮುಖ್ಯಮಂತ್ರಿಗೆ ಮನವಿ

ದಾವಣಗೆರೆ, ಫೆ.23- ದಾವಣಗೆರೆ ವಿಶ್ವವಿದ್ಯಾನಿಲಯದ ದೃಶ್ಯಕಲಾ ಮಹಾವಿದ್ಯಾನಿಲಯ ಪ್ರದೇಶದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ವಸತಿ ಗೃಹ ನಿರ್ಮಾಣಕ್ಕೆ ಸರ್ಕಾರ ಮಂಜೂರು ಮಾಡಿರುವುದನ್ನು ರದ್ದುಪಡಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಂಡಿರುವುದಾಗಿ ವಿಧಾನ ಪರಿಷತ್ ಸದಸ್ಯ ಮೋಹನ್ ಕುಮಾರ್ ಕೊಂಡಜ್ಜಿ ತಿಳಿಸಿದರು.

ನಗರದ ದೃಶ್ಯಕಲಾ ಮಹಾವಿದ್ಯಾನಿಲಯಕ್ಕೆ ಇಂದು ಸಂಜೆ ಭೇಟಿ ನೀಡಿ, ವಸತಿ ಗೃಹ ನಿರ್ಮಿಸಲು ಉದ್ದೇಶಿಸಿರುವ ಜಾಗವನ್ನು ಪರಿಶೀಲನೆ ನಡೆಸಿದರು. 

ಈ ವೇಳೆ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದಾವಣಗೆರೆ ಮಧ್ಯ ಕರ್ನಾಟಕದ ಕೇಂದ್ರ ಎಂದು ರಾಜ್ಯ ಸರ್ಕಾರ 1964ರಲ್ಲಿ ಸರ್ಕಾರಿ ಕಲಾ ಶಾಲೆಯನ್ನು ಆರಂಭಿಸಲು (ಈಗಿನ ದಾವಣಗೆರೆ ವಿಶ್ವವಿದ್ಯಾಲಯ ದೃಶ್ಯ ಕಲಾ ಮಹಾವಿದ್ಯಾಲಯದ ಅಧೀನದಲ್ಲಿದ್ದು ) 22.27 ಎಕರೆ ಜಮೀನನ್ನು ಮಂಜೂರು ಮಾಡಿತ್ತು. ಇಲ್ಲಿ ಕಲಾ ಗ್ಯಾಲರಿ, ಶಿಲ್ಪ ಕಲಾ ವಿಭಾಗ, ಕಲಾ ಸ್ಟುಡಿಯೋ ಹಾಗೂ ಕಲಾ ಗ್ರಾಮ ನಿರ್ಮಾಣ ಆಗಬೇಕಾಗಿದೆ ಎಂದು ಹೇಳಿದರು.

ಈ ಮಧ್ಯ ಸರ್ಕಾರದ ಜನವರಿ 4, 2021ರ ಆದೇಶದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ವಸತಿ ಗೃಹಗಳ ನಿರ್ಮಾಣಕ್ಕೆ 4.31 ಎಕರೆ ಪ್ರದೇಶವನ್ನು ಮಂಜೂರು ಮಾಡಿ ಆದೇಶ ಹೊರಡಿಸಲಾಗಿದ್ದು, ಇದು ಕಾನೂನು ಬಾಹಿರ ಆಗಿದೆ ಎಂದರು.

ಹೀಗಾಗಿ, ದಾವಣಗೆರೆ ವಿಶ್ವವಿದ್ಯಾ ನಿಲಯ ದೃಶ್ಯಕಲಾ ಮಹಾವಿದ್ಯಾಲಯದ ಹೆಸರಿನಲ್ಲಿರುವ 4.31 ಎಕರೆ ಪ್ರದೇಶ ವನ್ನು ಜಿಲ್ಲಾಮಟ್ಟದ ಅಧಿಕಾರಿಗಳ ವಸತಿ ನಿಲಯಗಳ ನಿರ್ಮಾಣಕ್ಕೆ ಮಂಜೂರು ಮಾಡಿರುವುದನ್ನು ರದ್ದುಪ ಡಿಸುವಂತೆ  ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಆದೇಶಿಸುವಂತೆ ಸಿಎಂ ಅವರಲ್ಲಿ ಮನವಿ ಮಾಡಿದ್ದೇನೆ ಎಂದರು.

ಇದೇ ಸಂದರ್ಭದಲ್ಲಿ ದೃಶ್ಯಕಲಾ ಮಹಾವಿದ್ಯಾಲಯದ ಸಂರಕ್ಷಣಾ ಹೋರಾಟ ಸಮಿತಿ ಸದಸ್ಯರಾದ ಪ್ರೊ.ಸಿ.ಹೆಚ್. ಮುರುಗೇಂದ್ರಪ್ಪ, ಬಾ.ಮ. ಬಸವರಾಜಯ್ಯ, ಮಹಾಲಿಂಗಪ್ಪ, ವೈ. ಕುಮಾರ್ ಮತ್ತು ವಿದ್ಯಾರ್ಥಿ ಸಂಘಟನೆ ಮುಖಂಡರಿದ್ದರು.

error: Content is protected !!