ದಲಿತ ಸಂಘರ್ಷ ಸಮಿತಿ ಪ್ರತಿಭಟನೆ
ದಾವಣಗೆರೆ, ಅ.4- ಮ್ಯಾನೇಜ್ಮೆಂಟ್ ಕೋಟಾದಡಿ ಆಯ್ಕೆಯಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಶುಲ್ಕ ಪಾವತಿ ಮತ್ತು ವಸತಿ ನಿಲಯ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಯಿಂದ ನಗರದಲ್ಲಿ ಇಂದು ಪ್ರತಿಭಟನಾ ಜಾಗೃತಿ ಆಂದೋಲನ ನಡೆಸಲಾಯಿತು.
ಪಿ.ಬಿ. ರಸ್ತೆಯಲ್ಲಿನ ಪಂಚಲಿಂಗೇಶ್ವರ, ಶನೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ಡಿಎಸ್ಎಸ್ ಮುಖಂಡರು, ಕಾರ್ಯಕರ್ತರು, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸರ್ಕಾರದ ಆದೇಶದಂತೆ ಆದಾಯ ಮಿತಿಯನ್ನು 2.5 ಲಕ್ಷದಿಂದ 10 ಲಕ್ಷಕ್ಕೆ ಕುಟುಂಬದ ವಾರ್ಷಿಕ ಆದಾಯ ಮಿತಿ ಹೆಚ್ಚಿಸಬೇಕು. ಸಂವಿಧಾನದ ಆಶಯದಂತೆ ಉಚಿತ, ಕಡ್ಡಾಯ ಶಿಕ್ಷಣ ಮೀಸಲಾತಿ ಜಾರಿಗೊಳಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಶಿಕ್ಷಣದ ಹಕ್ಕು ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಡಿಎಸ್ಎಸ್ನ ಪದಾಧಿಕಾರಿಗಳಾದ ವಿಶ್ವನಾಥ್ ಮೈಲಾಳ್, ಎ. ತಿಪ್ಪೇಸ್ವಾಮಿ, ಸಂತೋಷ್ ಗುಡಿಮನಿ, ಹೆಚ್.ಕೆ.ಆರ್. ಸುರೇಶ್, ಸುರೇಶ್ ತೆರದಳ್ಳಿ, ಹೆಚ್. ಶಶಿಕುಮಾರ್, ಹಾಲೇಶಿ, ಹನುಮಂತ, ಆರ್. ಶ್ರೀನಿವಾಸ್, ಅಣ್ಣಪ್ಪ ಯರಗುಂಟೆ, ಡಿ. ಸುರೇಶ್, ಶಾಂತಪ್ಪ ಕರೂರು, ಮರಿದೇವ, ಶಿವು ವಡ್ಡನಳ್ಳಿ, ನಿಂಗರಾಜ್, ಮಂಜುನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು.