ಸಚಿವರ ಎದುರಲ್ಲೇ ಶ್ರೀಗಳ ವಿಷ ಸೇವನೆ ಯತ್ನ

ಚಿತ್ರದುರ್ಗ, ಫೆ. 13 –  ಯೋಗವನ ಬೆಟ್ಟದ ಉತ್ತರಾಧಿಕಾರಿ ಪಟ್ಟ ತಪ್ಪಿರುವುದರಿಂದ ತಮಗೆ ಅನ್ಯಾಯವಾಗಿದೆ ಎಂದು ಆರೋಪಿಸಿರುವ ಶ್ರೀ ತಿಪ್ಪೇರುದ್ರ ಸ್ವಾಮೀಜಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅವರ ಎದುರಿನಲ್ಲೇ  ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಶನಿವಾರ ಚಿತ್ರದುರ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಕೋರ್‌ ಕಮಿಟಿ ಸಭೆಯ ನಂತರ ಹೊರ ಬಂದ ಸಚಿವ ಶ್ರೀರಾಮುಲುಗೆ ಡೆತ್‌ನೋಟ್‌ ರೂಪದ ಮನವಿ ಸಲ್ಲಿಸಿದ ತಿಪ್ಪೇರುದ್ರ ಸ್ವಾಮೀಜಿ, ನನ್ನ ಸಾವಿಗೆ ಕಾರಣರಾದವರಿಗೆ ಶಿಕ್ಷೆ ಕೊಡಿಸಬೇಕು ಎಂದು ವಿಷ ಸೇವಿಸಲು ಮುಂದಾದರು. ಸಚಿವರು ಹಾಗೂ ಕಾರ್ಯತರ್ಕರು ಇದನ್ನು ತಡೆದರು. ತಕ್ಷಣ ಅಲ್ಲಿದ್ದ ಪೊಲೀಸರು ಜಾಗೃತರಾಗಿ ಸ್ವಾಮೀಜಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು.

ತುಮಕೂರು ಜಿಲ್ಲೆಯ ಕುಣಿಗಲ್‌ ಬಳಿಯಿರುವ ಯೋಗವನ ಬೆಟ್ಟದ ಉಸ್ತುವಾರಿ ವಹಿಸಿಕೊಂಡಿದ್ದ ಶ್ರೀ ತಿಪ್ಪೇರುದ್ರ ಸ್ವಾಮೀಜಿ ಹಲವು ವರ್ಷಗಳ ಕಾಲ ನಿರ್ವಹಣೆಯ ಹೊಣೆ ಹೊತ್ತಿದ್ದರು. ಕೆಲವು ವರ್ಷಗಳ ಹಿಂದೆ ಯೋಗವನ ಬೆಟ್ಟ ಟ್ರಸ್ಟ್‌ನ ಅಧ್ಯಕ್ಷರಾಗಿದ್ದ ಶ್ರೀ ಕಪರ್ದಿ ಸಿದ್ದಲಿಂಗ ಸ್ವಾಮಿಗಳ ನಿಧನ ನಂತರ ಹಿಂದಿನ ಟ್ರಸ್ಟ್‌ನಲ್ಲಿ ಕಾರ್ಯಾಧ್ಯಕ್ಷರಾಗಿದ್ದ ಗಾಣಿಗ ಪೀಠದ ಶ್ರೀ ಬಸವಕುಮಾರ ಸ್ವಾಮೀಜಿಯವರನ್ನು ಯೋಗವನ ಬೆಟ್ಟಗಳ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಶ್ರೀ ತಿಪ್ಪೇರುದ್ರ ಸ್ವಾಮೀಜಿ, ಯೋಗವನ ಬೆಟ್ಟಗಳ ಉತ್ತರಾಧಿಕಾರಿಯನ್ನಾಗಿ ಮಾಡಬೇಕು ಎಂದು ತುಮಕೂರು ಜಿಲ್ಲೆಯಲ್ಲಿ ಹೋರಾಟ ಮಾಡಿದ್ದರು. ಈ ನಡುವೆ ಶನಿವಾರ ಚಿತ್ರದುರ್ಗದಲ್ಲಿ ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗ ವಿಷ ಸೇವಿಸಿ, ತಮಗೆ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದ್ದರು.

ವಿಷ ಸೇವನೆಗೂ ಮುನ್ನ ಸಚಿವರಿಗೆ ಸಲ್ಲಿಸಿದ ಡೆತ್‌ನೋಟ್‌ನಲ್ಲಿ ತಮಗೆ ಯೋಗವನ ಬೆಟ್ಟಗಳ ಉತ್ತರಾಧಿಕಾರ ತಪ್ಪುವಲ್ಲಿ ಶ್ರೀ ಬಸವಕುಮಾರ ಸ್ವಾಮೀಜಿ ಹಾಗೂ ಮಾಜಿ ಶಾಸಕ ಎಸ್‌.ಕೆ. ಬಸವರಾಜನ್‌ ಅವರ ಕೈವಾಡ ಇದ್ದು, ನನ್ನ ಸಾವಿಗೆ ಇವರೇ ಕಾರಣರಾಗಿದ್ದು, ಇವರಿಗೆ ಶಿಕ್ಷೆಯಾಗಬೇಕು ಎಂದು ದಾಖಲಿಸಿದ್ದರು.

ಈ ಬಗ್ಗೆ ಹೇಳಿಕೆ ನೀಡಿರುವ ಸಚಿವ ಶ್ರೀರಾಮುಲು, ವಿಷದ ಬಾಟಲಿ ಜೇಬಿನಲ್ಲಿ ಇಟ್ಟುಕೊಂಡು ಬಂದಿರುವುದು ಗೊತ್ತಿರಲಿಲ್ಲ. ವಿವಾದದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಈ ಸಮಸ್ಯೆ ಬಗೆಹರಿಸುವ ಬಗ್ಗೆ ಮಾಹಿತಿ ಪಡೆದು ಕ್ರಮ ತೆಗೆದುಕೊಳ್ಳುತ್ತೇನೆ. ಶ್ರೀಗಳ ಜೀವಕ್ಕೆ ಯಾವುದೇ ಅಪಾಯ ಇಲ್ಲ ಎಂದಿದ್ದಾರೆ.

ಶ್ರೀ ಬಸವಕುಮಾರ ಸ್ವಾಮಿಗಳು ಮಾತನಾಡಿದ್ದು, ತಿಪ್ಪೇರುದ್ರ ಸ್ವಾಮಿ ಅವರು ಹಿಂದಿನ ಶ್ರೀಗಳ ಸೇವೆ ಮಾಡುತ್ತಿದ್ದರು. ಆಗ ವೈಮನಸ್ಸು ಉಂಟಾಗಿ, ಬೇರೆ ಕಡೆ ಕೆಲಸ ಮಾಡುವಂತೆ ಹಿಂದಿನ ಶ್ರೀಗಳು ತಿಳಿಸಿ ಐದು ಲಕ್ಷ ರೂ.ಗಳ ಸಹಾಯ ಮಾಡಿದ್ದರು. ನಂತರ ಅವರು ಯೋಗವನ ಬೆಟ್ಟದಿಂದ ಹೊರ ಹೋಗಿ, ಮೂರು ವರ್ಷಗಳಿಂದ ದೂರವೇ ಇದ್ದರು ಎಂದು ಹೇಳಿದ್ದಾರೆ.

ಶ್ರೀ ಸಿದ್ದಲಿಂಗಸ್ವಾಮಿಗಳ ನಿಧನದ ನಂತರ ನನ್ನನ್ನು ಯೋಗವನ ಬೆಟ್ಟಗಳ ಉತ್ತರಾಧಿಕಾರಿಯಾಗಿ ನೇಮಿಸಲಾಗಿದೆ. ಸಮಸ್ಯೆಯೇನಾದರೂ ಇದ್ದಿದ್ದರೆ ಶ್ರೀಗಳು ಇರುವಾಗಲೇ ಬಗೆಹರಿಸಿಕೊಳ್ಳಬೇಕಿತ್ತು. ನಿಧನದ ನಂತರ ಯೋಗವನದ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡಲಾಗುತ್ತಿದೆ ಎಂದಿದ್ದಾರೆ.

ಮಾಜಿ ಶಾಸಕ ಬಸವರಾಜನ್ ಹೇಳಿಕೆ ನೀಡಿದ್ದು, ಆತ್ಮಹತ್ಯೆ ಎನ್ನುವುದು ಕೇವಲ ನಾಟಕ. ಅವರ ಬಗ್ಗೆ ನನಗೆ ಗೊತ್ತಿದೆ, ಅಪಪ್ರಚಾರ ಮಾಡುತ್ತಿದ್ದಾರೆ. ಪೀಠದ ಬಗ್ಗೆ ಅವರು ಎಂದೂ ನನ್ನ ಜೊತೆ ಮಾತನಾಡಿಲ್ಲ. ನಾಲ್ಕು ವರ್ಷಗಳ ಹಿಂದೆಯೇ ಅವರನ್ನು ಪೀಠದಿಂದ ಹೊರ ಹಾಕಲಾಗಿತ್ತು ಎಂದಿದ್ದಾರೆ.

error: Content is protected !!