ದೇಶದ ಪ್ರಗತಿ ಹಿಂದೆ ಮಹಾತ್ಮರ ಬಲಿದಾನದ ಶ್ರಮವಿದೆ

ಹರಿಹರ: ಗಣರಾಜ್ಯೋತ್ಸವದಲ್ಲಿ ಶಾಸಕ ರಾಮಪ್ಪ

ಹರಿಹರ, ಜ26- ವಿಶ್ವ ಮಟ್ಟದಲ್ಲಿ ಗುರ್ತಿಸಿಕೊಳ್ಳುತ್ತಿರುವ ಭಾರತದ ಇಂದಿನ ಪ್ರಗತಿಗೆ ದೇಶ ಕ್ಕಾಗಿ ಹೋರಾಟ ಮಾಡಿದ ಮಹಾನ್‌ ವ್ಯಕ್ತಿಗಳ ತ್ಯಾಗ, ಬಲಿದಾನಗಳೇ ಕಾರಣ ಎಂದು ಶಾಸಕ ಎಸ್. ರಾಮಪ್ಪ ಹೇಳಿದರು.

ನಗರದ ಗಾಂಧಿ ಮೈದಾನದಲ್ಲಿ ನಡೆದ 72 ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ದೇಶವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ವಿಶ್ವಮಟ್ಟದಲ್ಲಿ ಪ್ರಗತಿಯನ್ನು ಸಾಧಿಸಲು ಬ್ರಿಟಿಷ್ ಸರ್ಕಾರದ ವಿರುದ್ಧ ಹೋರಾಟ ಮಾಡಿದ ಮಹಾತ್ಮಾ ಗಾಂಧಿ, ರಾಣಿ ಚೆನ್ನಮ್ಮ, , ಬಾಲ ಗಂಗಾಧರ ತಿಲಕ್, ಲಾಲಾ ಲಜಪತರಾಯ್, ಸುಭಾಷ್ ಚಂದ್ರ ಬೋಸ್, ಸಂಗೊಳ್ಳಿ ರಾಯಣ್ಣ ಮುಂತಾದ ನಾಯಕರ ಬಲಿದಾನದ ಪ್ರತಿಫಲವಾಗಿದ್ದು, ಪ್ರಸ್ತುತ ದೇಶದ ಜನರು ನೆಮ್ಮದಿ ಜೀವನ ನಡೆಸುವುದಕ್ಕೆ ದಾರಿಯಾಯಿತು ಎಂದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿ ಧಾನವನ್ನು ರಚಿಸಿ ಅದರಲ್ಲಿ ದೇಶದ ರಕ್ಷಣೆಗೆ ಸಂಬಂಧಿ ಸಿದ ಕಾನೂನು ರಚಿಸಿದ ಪರಿಣಾಮವಾಗಿ ಇಂದು ಅನೇಕ ಸಮಸ್ಯೆಗಳು ಬಂದರು ಸಹ ಅದನ್ನು ಸರಿಯಾದ ರೀತಿಯಲ್ಲಿ ಬಗೆಹರಿಸುವ ವ್ಯವಸ್ಥೆ ಸಂವಿಧಾನ ದಲ್ಲಿದೆ. ಡಾ. ಅಂಬೇಡ್ಕರ್ ರವರಿಗೆ ವಿಶ್ವದಲ್ಲಿ ಅತ್ಯಂತ ಶ್ರೇಷ್ಠ ಗೌರವ ಸಿಕ್ಕಿದೆ. ಇಂತಹ ಮಹಾನ್ ವ್ಯಕ್ತಿಗಳ ರಾಷ್ಟ್ರವಾದ  ಭಾರತ ಮುಂದೆಯೂ ಸಹ ಯಾವುದೇ ರೀತಿಯ ತೊಂದರೆ ಬರದಂತೆ ಉತ್ತಮವಾದ ರೀತಿಯಲ್ಲಿ ಪ್ರಗತಿಯನ್ನು ಸಾಧಿಸುವ ನಿಟ್ಟಿನಲ್ಲಿ ನಾವೆಲ್ಲ ಹೆಜ್ಜೆಗಳನ್ನು ಹಾಕಬೇಕು ಎಂದು ಕರೆ ನೀಡಿದರು.

ತಹಶೀಲ್ದಾರ್ ಕೆ. ಬಿ. ರಾಮಚಂದ್ರಪ್ಪ, ತಾ.ಪಂ. ಅಧ್ಯಕ್ಷೆ ಶ್ರೀದೇವಿ ಮಂಜಪ್ಪ, ನಗರಸಭೆ ಪೌರಾಯುಕ್ತ ಉದಯಕುಮಾರ್ ಮಾತನಾಡಿದರು. 

ವಿವಿಧ ರಂಗದಲ್ಲಿ ಸಾಧನೆ ಮಾಡಿದ ಆರೋಗ್ಯ ಇಲಾಖೆಯ ಡಾ. ಚಂದ್ರಮೋಹನ್, ಡಾ. ವಿಶ್ವನಾಥ್, ಉಮ್ಮಣ್ಣ, ಹೆಚ್. ಸುಮಂಗಳಾ,  ಶ್ರೀನಿವಾಸ್ , ಲಕ್ಷ್ಮಿ, ದಾದಾಪೀರ್, ಶಿಕ್ಷಣ ಇಲಾಖೆಯ ಶಿವಮೂರ್ತಿ, ಅಕ್ಷರ ದಾಸೋಹ ಅಧಿಕಾರಿ ರಾಮಕೃಷ್ಣಪ್ಪ, ಅಗ್ನಿ ಶಾಮಕದಳ ಪಿಎಸ್ಐ ಸಂಜೀವ್ ಕುಮಾರ್, ಅಂಗನವಾಡಿ ಶಿಕ್ಷಕಿ ಬಸಮ್ಮ, ಸಾವಿತ್ರಾ, ಪೊಲೀಸ್ ಇಲಾಖೆ ಮುರುಳೀಧರ್, ಕನ್ನಡ ಪರ ಸಂಘಟನೆಯ ಪ್ರವೀಣ್, ಪತ್ರಕರ್ತ ಪಂಚಾಕ್ಷರಿ, ಕುಮಾರ್ ಮುಂತಾದವರಿಗೆ ತಾಲ್ಲೂಕು ಆಡಳಿತದಿಂದ ಸನ್ಮಾನ ಮಾಡಿ ಗೌರವಿಸಲಾಯಿತು.  

ಸಿಪಿಐ ಸತೀಶ್ ಕುಮಾರ್, ಇಓ ಗಂಗಾಧರನ್, ಬಿಇಓ ಯು. ಬಸವರಾಜಪ್ಪ, ನಗರಸಭೆ ಸದಸ್ಯ ಜಂಬಣ್ಣ ಗುತ್ತೂರು, ಎಂ.ಎಸ್. ಬಾಬುಲಾಲ್, ನಗರಸಭೆ ಎಇಇ ಬಿರಾದಾರ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರೇವಣಸಿದ್ದಪ್ಪ ಅಂಗಡಿ ಇನ್ನಿತರರು ಹಾಜರಿದ್ದರು.

error: Content is protected !!