ಸಾಧನೆಯಿಂದ ಶ್ರೇಯಸ್ಸು ಪ್ರಾಪ್ತಿ: ರಂಭಾಪುರಿ ಜಗದ್ಗುರು

ಕೊಲನುಪಾಕ (ತೆಲಂಗಾಣ ರಾಜ್ಯ), ಜ. 10 – ಕಷ್ಟದ ಜೀವನ ಶಿಸ್ತನ್ನು ಕಲಿಸುವ ಪಾಠಶಾಲೆ. ನಿರಂತರ ಪ್ರಯತ್ನ ಮತ್ತು ಸಾಧನೆಯಿಂದ ಉನ್ನತಿ ಪಡೆಯಲು ಸಾಧ್ಯ. ಕ್ರಿಯಾಶೀಲ ಬದುಕು ಉಜ್ವಲ ಬಾಳಿಗೆ ಭದ್ರ ಬುನಾದಿ. ಸಾಧನೆಯಿಂದ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದ ಡಾ. ಶ್ರೀ ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಕೊಲನುಪಾಕ ಶ್ರೀ ಸ್ವಯಂಭು ಸೋಮೇಶ್ವರ ಕ್ಷೇತ್ರದಲ್ಲಿ ತಮ್ಮ 65ನೇ ಜನ್ಮ ದಿನೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡುತ್ತಿದ್ದರು.

ವ್ಯಕ್ತಿತ್ವದ ಉನ್ನತೀಕರಣ ಮತ್ತು ವೈಯಕ್ತಿಕ ಸಾಧನೆಗಾಗಿ ಶ್ರಮಿಸಿದರೆ ಲೋಕೋದ್ಧಾರ ತಾನಾಗಿಯೇ ಆಗುತ್ತದೆ. ಸಾಗುವ ದಾರಿ ಕಠಿಣ ವಿದ್ದಷ್ಟೂ ಯಶಸ್ಸಿನ ಎತ್ತರ ಹೆಚ್ಚಾಗಿರುತ್ತದೆ. ಹಣ ಹೆಸರುಗಳಿಗಾಗಿ ಗುದ್ದಾಡುವ ಬದಲು ಮಾಡುವ ಕೆಲಸವನ್ನು ಶ್ರದ್ಧೆ, ಪ್ರಾಮಾಣಿಕತೆ ಗಳಿಂದ ಮಾಡಿದರೆ ಅದು ತಾನಾಗಿಯೇ ಲಭಿಸುತ್ತದೆ. ಅನುಭವ ಜೀವನದ ಅತ್ಯುತ್ತಮ ಗುರು. ಕೆಟ್ಟ ಅನುಭವಗಳು ಜೀವನದಲ್ಲಿ ಶ್ರೇಷ್ಠ ಪಾಠಗಳನ್ನು ಕಲಿಸುತ್ತವೆ. ಮನುಷ್ಯ ಎಷ್ಟೇ ದೊಡ್ಡ ಸ್ಥಾನಕ್ಕೇರಲಿ ಅವನು ತನ್ನ ಹಿಂದಿನ ಸ್ಥಿತಿಯನ್ನು ಸದಾಕಾಲ ನೆನಪಿಟ್ಟುಕೊಂಡಿರ ಬೇಕು. ಮಾತು ಕೃತಿ ಚಿಂತನೆಗಳು ಬದುಕಿನ ಮೇಲೆ ಅಗಾಧ ಪರಿಣಾಮ ಬೀರುತ್ತವೆ. ಕಲ್ಲು ಹೃದಯದವರನ್ನು ಬದಲಿಸಬಹುದು. ಆದರೆ ಕೊಳಕು ಮನಸ್ಸು ಇರುವವರನ್ನು ಬದಲಿಸಲು ಸಾಧ್ಯವಿಲ್ಲ. ಜ್ಞಾನ ಶಕ್ತಿಯನ್ನು ನೀಡಿದರೆ, ನಡತೆ ಗೌರವವನ್ನು ತಂದು ಕೊಡುತ್ತದೆ ಎಂದು ಜಗದ್ಗುರುಗಳು ಹೇಳಿದರು.   

ತಾವು 64 ಸಂವತ್ಸರಗಳನ್ನು ಕಳೆದು 65ನೇ ಸಂವತ್ಸರದಲ್ಲಿ ಪಾದಾರ್ಪಣೆ ಮಾಡಿದ್ದೇವೆ. ದೇಹದಲ್ಲಿ ಶಕ್ತಿ ಇರುವ ತನಕ ಶ್ರಮಿಸಬೇಕೆಂಬ ಗುರಿ ನಮ್ಮದಾಗಿದೆ. 29 ವರುಷದ ಅವಧಿಯಲ್ಲಿ ಮಾಡಿದ ಸಾಧನೆಗೆ ನಡೆದ ಕೆಲಸ ಕಾರ್ಯಗಳೇ ಸಾಕ್ಷಿಯಾಗಿವೆ. ಇವುಗಳಿಗೆಲ್ಲ ಪೂರ್ವಾಚಾರ್ಯರ ಆಶೀರ್ವಾದ ಮತ್ತು ಭಕ್ತ ಗಣದ ಸಹಕಾರ ಕಾರಣವಾಗಿವೆ ಎಂದರೆ ತಪ್ಪಾಗದು. ಭವಿಷ್ಯತ್ತಿನ ಬದುಕಿನಲ್ಲಿ ಸತ್ಯ ಸಂಕಲ್ಪಗಳು ಸಾಕಾರಗೊಳ್ಳಬೇಕೆಂಬ ಮಹತ್ವಾಕಾಂಕ್ಷೆ ನಮ್ಮದಾಗಿದೆ ಎಂದು ಜಗದ್ಗುರುಗಳು ಆಶಯ ವ್ಯಕ್ತಪಡಿಸಿದರು.

ಕೊಲ್ಲಿಪಾಕಿ ಕ್ಷೇತ್ರಾಭಿವೃದ್ಧಿ ಟ್ರಸ್ಟಿನ ಕಾರ್ಯಾಧ್ಯಕ್ಷ ಬಿಚಗುಂದದ ಶ್ರೀ ಸೋಮಲಿಂಗ ಶಿವಾಚಾರ್ಯರು ಮತ್ತು ಉಪಾಧ್ಯಕ್ಷ ಮೇಹಕರ ಹಿರೇಮಠದ ಶ್ರೀ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಉಪದೇಶಾಮೃತವನ್ನಿತ್ತರು. 

ಹಿರೇನಾಗಾಂವ, ರಾಜೇಶ್ವರ, ದೇವಾಪು ರ, ಗಡಿಗೌಡಗಾಂವ, ಅಷ್ಟಗಿ, ಹಳ್ಳಿಖೇಡ, ದೊಡ್ಡಸಗರ, ತೊನಸನಹಳ್ಳಿ, ದೋರನಹಳ್ಳಿ ಶ್ರೀಗಳವರು ಸೇರಿದಂತೆ 25ಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಂಡಿದ್ದರು. 

ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯರು ಸಮಾರಂಭದ ನೇತೃತ್ವ ವಹಿಸಿ ನಿರೂಪಿಸಿದರು. ಹೈದರಾಬಾದ್ ವೀರಶೈವ ಸಮಾಜದ ಅಧ್ಯಕ್ಷ ಎಂ.ವೀರಮಲ್ಲೇಶ, ಟ್ರಸ್ಟಿನ  ಕಾರ್ಯದರ್ಶಿ ಅಣ್ಣಾರಾವ್ ಬಿರಾದಾರ, ಸದಸ್ಯರಾದ ಶಿವಶರಣಪ್ಪ ಸೀರಿ, ಬಾಬುರಾವ್ ಬಿರಾದಾರ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು.

ನಾಡಿನ ನಾನಾ ಭಾಗಗಳಿಂದ ಆಗಮಿಸಿದ ಸದ್ಭಕ್ತರು ಶ್ರೀ ರಂಭಾಪುರಿ ಜಗದ್ಗುರುಗಳಿಗೆ ಜನ್ಮ ದಿನೋತ್ಸವ ನಿಮಿತ್ಯ ಗೌರವ ಸಮರ್ಪಿ ಸಿದರು. ಕಲಬುರ್ಗಿಯ ಗಿರಿಯಪ್ಪ ಮುತ್ಯಾ ಅವರು ಅನ್ನ ದಾಸೋಹ ಸೇವೆ ಸಲ್ಲಿಸಿದರು.

error: Content is protected !!