ಜಿಗಳಿಯಲ್ಲಿ ವಿಜೃಂಭಣೆಯ ರಥೋತ್ಸವ

ಮಲೇಬೆನ್ನೂರು, ಮಾ. 17- ಜಿಗಳಿ ಗ್ರಾಮದ ಆರಾಧ್ಯ ದೈವ ಶ್ರೀ ರಂಗನಾಥ ಸ್ವಾಮಿಯ ರಥೋತ್ಸವವು ಗುರುವಾರ ಬೆಳಗಿನ ಜಾವ ವಿಜೃಂಭಣೆಯಿಂದ ಜರುಗಿತು.

ರಥದಲ್ಲಿ ಶ್ರೀ ರಂಗನಾಥ ಸ್ವಾಮಿ ದೇವರ ಮೂರ್ತಿಯನ್ನು ಇರಿಸಿ, ನಂತರ ರಥಕ್ಕೆ ಪೂಜೆ ಸಲ್ಲಿಸಿ ಗೋವಿಂದಾ ಗೋವಿಂದಾ ಎಂಬ ಜಯಘೋಷದೊಂದಿಗೆ ಭಕ್ತರು ರಥ ಎಳೆದು ಸಂಭ್ರಮಿಸಿದರು. ಗ್ರಾಮದ ಶ್ರೀ ಬೀರಲಿಂಗೇಶ್ವರ ಸ್ವಾಮಿ ಜಿ. ಬೇವಿನಹಳ್ಳಿ ಮತ್ತು ಯಲವಟ್ಟಿಯ ಶ್ರೀ ಹನುಮಂತ ದೇವರುಗಳ ಸಮ್ಮುಖದಲ್ಲಿ ನಡೆದ ರಥೋತ್ಸವಕ್ಕೆ ವೀರಗಾಸೆ, ಡೊಳ್ಳು ವಾದ್ಯ ಸೇರಿದಂತೆ ವಿವಿಧ ಕಲಾ ಮೇಳಗಳು ಮೆರಗು ತಂದವು.

ಅಂಬಾಭವಾನಿ ದೇವಸ್ಥಾನದ ಆವರಣದಲ್ಲಿ ಮರಾಠ ಸಮಾಜದವರು 4ನೇ ಬಾರಿಗೆ ಅನ್ನ ಸಂತರ್ಪಣೆ ಏರ್ಪಡಿಸಿದ್ದರು. ಗ್ರಾಮ ಸಹಾಯಕ ರಂಗನಾಥ್, ಧರ್ಮರಾಜ್, ಪ್ರವೀಣ್, ಚಮನ್ ಸಾಬ್ ಮತ್ತು ಸ್ನೇಹಿತರು ರಥೋತ್ಸವ ಹಾಗೂ ನಟ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನದ ಅಂಗವಾಗಿ ಅನ್ನ ಸಂತರ್ಪಣೆ ನಡೆಸಿಕೊಟ್ಟರು.

ಗ್ರಾಮದ ಉದ್ಯೋಗಸ್ಥ ಯುವಕರ ತಂಡವೊಂದು ಈ ವರ್ಷವೂ ಜಾತ್ರೆಗೆ ಬರುವ ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ಸಂಜೆ ಓಕಳಿ ನಂತರ ಕಂಕಣ ವಿಸರ್ಜನೆ ಮಾಡಲಾಯಿತು. ಶುಕ್ರವಾರ ಬೆಳಗಿನ ಜಾವ ವಿವಿಧ ಕಾರ್ಯ ಕ್ರಮಗಳ ನಂತರ ಸಂಜೆ ಭೂತನ ಸೇವೆ ಹಾಗೂ ದೇವರುಗಳು ಉತ್ಸವ ನಡೆಯಲಿದೆ.

error: Content is protected !!