ದೊಣೆಹಳ್ಳಿಯಲ್ಲಿ ನಾಳೆಯಿಂದ ದಾಸೋಹ ಸಂಸ್ಕೃತಿ ಉತ್ಸವ

ದೊಣೆಹಳ್ಳಿಯಲ್ಲಿ ನಾಳೆಯಿಂದ ದಾಸೋಹ ಸಂಸ್ಕೃತಿ ಉತ್ಸವ

ಜಗಳೂರು, ಮಾ.13- ತಾಲ್ಲೂಕಿನ ದೊಣೆಹಳ್ಳಿ ಗ್ರಾಮದ ಶ್ರೀ ಶರಣ ಬಸವೇಶ್ವರ ದಾಸೋಹ ಮಠದಲ್ಲಿ ನಾಡಿದ್ದು ದಿನಾಂಕ 15ರಿಂದ 7‌ ದಿನಗಳ ಕಾಲ  ದಾಸೋಹ ಸಂಸ್ಕೃತಿ ಉತ್ಸವವು ಸಮಾಜಮುಖಿ
ಆಶಯ ದೊಂದಿಗೆ ಅರ್ಥಪೂರ್ಣವಾಗಿ ನಡೆಯಲಿದೆ ಎಂದು ದಾಸೋಹ ಮಠ ನಿರ್ಮಾಣ ಅಭಿವೃದ್ಧಿ ಸಮಿತಿಯ ಸಂಘಟನಾ ಸಂಚಾಲಕ ದೊಣೆಹಳ್ಳಿ ಗುರುಮೂರ್ತಿ ತಿಳಿಸಿದರು.

ಇಂದಿಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನಾಂಕ 15ರಂದು ಜಗಳೂರು ನೆರೆಯ ತಾಲ್ಲೂಕುಗಳಾದ ಕೂಡ್ಲಿಗಿ, ಮೊಳಕಾಲ್ಮೂರು ಹಾಗೂ ಚಳ್ಳಕೆರೆ ತಾಲ್ಲೂಕುಗಳ ಸಮಗ್ರ ನೀರಾವರಿ ಐಕ್ಯ ಹೋರಾಟವನ್ನು ಕುರಿತು ಚರ್ಚಿಸಲು ರೈತ ಸಮಾವೇಶದೊಂದಿಗೆ ಉತ್ಸವದ ಉದ್ಘಾಟನೆಯಾಗಲಿದೆ ಎಂದರು.

ಸಮಾವೇಶದಲ್ಲಿ ವಿವಿಧ ಬಸವಾದಿ ಶರಣರ ತತ್ವದಡಿಯ ಮಠಾಧೀಶರ ಸಾನ್ನಿಧ್ಯ ದಲ್ಲಿ ಸಂಸದರಾದ ಗೋವಿಂದ ಕಾರಜೋಳ, ಡಾ. ಪ್ರಭಾ ಮಲ್ಲಿಕಾರ್ಜುನ್, ಈ. ತುಕಾರಾಂ, ಶಾಸಕರಾದ ಎನ್.ವೈ. ಗೋಪಾಲಕೃಷ್ಣ, ಡಾ. ಎನ್.ಟಿ ಶ್ರೀನಿವಾಸ್, ಟಿ. ರಘುಮೂರ್ತಿ, ಮಾಜಿ ಶಾಸಕರಾದ ಹೆಚ್.ಪಿ. ರಾಜೇಶ್, ಎಸ್.ವಿ. ರಾಮಚಂದ್ರ ಸೇರಿದಂತೆ ಪ್ರಗತಿಪರ ಚಿಂತಕರು ಭಾಗವಹಿಸಲಿದ್ದಾರೆ.

ದಿನಾಂಕ 16ರ ಭಾನುವಾರ ಚಿತ್ರದುರ್ಗ ಮುರುಘಾ ಮಠದ ಮಾದಾರ ಚೆನ್ನಯ್ಯ ಸ್ವಾಮೀಜಿ   ದಿವ್ಯ ನೇತೃತ್ವದಲ್ಲಿ ಮಹಿಳಾ ಸಬಲೀಕರಣ ಸಮಾವೇಶ ನಡೆಯಲಿದ್ದು, ಚಿತ್ರದುರ್ಗದ ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಅಧ್ಯಕ್ಷತೆ ವಹಿಸಲಿದ್ದಾರೆ.

ಅಂದು ಉಚಿತ ಸಾಮೂಹಿಕ ವಿವಾಹಗಳು ಮತ್ತು ರಾಜ್ಯಮಟ್ಟದ ವಧು-ವರರ ಸಮಾವೇಶ ಜರುಗಲಿವೆ. ಇದೇ ವೇಳೆ ಸಾಹಿತಿ ಡಾ. ಸಂಗೇನಹಳ್ಳಿ ಅಶೋಕ ಕುಮಾರ್ ಅವರ `ನನ್ನ ದೇವರು ಮತ್ತು ಇತರೇ ಕವಿತೆಗಳು’ ಪುಸ್ತಕ ಲೋಕಾರ್ಪಣೆ ಗೊಳ್ಳಲಿದ್ದು, ವಿಜಯನಗರ ಜಿಲ್ಲಾಧಿಕಾರಿ ದಿವಾಕರ್ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ. ಗಣ್ಯರು ಹಾಗೂ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ.

ದಿನಾಂಕ 17ರಂದು ಶರಣ ಸಂಗಮ, ಉಚಿತ ಆರೋಗ್ಯ ತಪಾಸಣಾ ಸಮಾವೇಶ, ಮಾ.22 ಮತ್ತು 23ರಂದು `ಉಚಿತ ಕೃತಕ ಪೂರ್ಣದಂತ ಪಂಕ್ತಿ ಜೋಡಣಾ ಶಿಬಿರ’. ಈ ಶಿಬಿರದಲ್ಲಿ ಬೆಂಗಳೂರಿನ ಸರ್ಕಾರಿ ದಂತ ಮಹಾವಿದ್ಯಾಲಯದ ವೈದ್ಯರ ತಂಡ ಆಗಮಿಸಲಿದೆ.

ದಿನಾಂಕ 23ರ ಮಧ್ಯಾಹ್ನ ದಂತ ಪಂಕ್ತಿ ವಿತರಣಾ ಸಮಾರಂಭದಲ್ಲಿ ಮುರುಘಾರಾಜೇಂದ್ರ ಬೃಹನ್ಮಠದ ಉಸ್ತುವಾರಿ ಸದಸ್ಯ ಡಾ. ಬಸವಕುಮಾರ್ ಸ್ವಾಮೀಜಿ, ಮುಖ್ಯ ಅತಿಥಿಗಳಾಗಿ ದಾಮ ಐಮಡಿ ಶರಣಾರ್ಯರು, ಶಾಸಕ ಬಿ. ದೇವೇಂದ್ರಪ್ಪ ಭಾಗವಹಿಸಲಿದ್ದಾರೆ.

ಈ ವೇಳೆ ಬಸವರಾಜಪ್ಪ, ಶಿವನಗೌಡ, ಸಾಹಿತಿ ಸಂಗೇನಹಳ್ಳಿ ಅಶೋಕ ಕುಮಾರ್, ವಿ.ಎಸ್.ಎಸ್.ಎನ್ ಅಧ್ಯಕ್ಷ ಕೆ.ಗುರು ಮೂರ್ತಿ, ಪ್ರಾಂಶುಪಾಲ ನಾಗಲಿಂಗಪ್ಪ, ಭರಮಸಮುದ್ರ ಕುಮಾರ್ ಇದ್ದರು.

error: Content is protected !!