ಹಸಿವು ತಣಿಸುವುದು ಪುಣ್ಯದ ಕಾರ್ಯ

ಹಸಿವು ತಣಿಸುವುದು ಪುಣ್ಯದ ಕಾರ್ಯ

ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್‌

ಹರಪನಹಳ್ಳಿ, ಫೆ.20- ಹಸಿದವರಿಗೆ ಅನ್ನ ಹಾಕುವುದು ಪುಣ್ಯದ ಕೆಲಸ, ಇದಕ್ಕಿಂತ ಮಹತ್ಕಾರ್ಯ ಮತ್ತೊಂದಿಲ್ಲ ಎಂದು ಶಾಸಕರಾದ ಶ್ರೀಮತಿ ಎಂ.ಪಿ.ಲತಾ ಮಲ್ಲಿಕಾರ್ಜುನ್‌ ಹೇಳಿದರು.

ಪಟ್ಟಣದ ಕೆಹೆಚ್‌ಬಿ ಕಾಲೋನಿಯ ನಿವೃತ್ತ ಬಿಎಸ್ಎನ್ಎಲ್ ನೌಕರ ಕೆ.ಆರ್. ಸುಧಾಕರ್ ಮತ್ತು ಕುಟುಂಬಸ್ಥರು ಕೊಟ್ಟೂ ರಿಗೆ ಹೊರಟ ಪಾದಯಾತ್ರಿಗಳಿಗೆ ಏರ್ಪಡಿ ಸಿದ್ದ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭಾರತೀಯ ಸಂಸ್ಕೃತಿಯಲ್ಲಿ ಅನ್ನ ದಾನಕ್ಕೆ ಮಹತ್ವದ ಸ್ಥಾನವಿದೆ. ಜಾತಿ-ಮತದ ಭೇದ ಇಲ್ಲದೇ ಭಕ್ತಿಯಿಂದ ಅನ್ನ ಸಂತರ್ಪಣೆ ಕಾರ್ಯ ಮಾಡುತ್ತಿರುವುದು ಸಂತಸದ ಸಂಗತಿ ಎಂದರು.

ಹಸಿದು ಬಂದವರಿಗೆ ಅನ್ನ ಹಾಕಬೇಕು ಎನ್ನುವ ಉದ್ದೇಶದಿಂದ ಹಿಂದಿನ ಕಾಲ ದಲ್ಲಿನ ಮಾತೆಯರು ಅಡುಗೆ ಮಾಡುವಾಗ ಒಂದು ಹಿಡಿ ಅಕ್ಕಿಯನ್ನು ಹೆಚ್ಚಾಗಿ ಹಾಕುತ್ತಿದ್ದರು ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಒತ್ತಡದ ಬದುಕಿ ನಲ್ಲಿ ಭಕ್ತಿ ಮಾರ್ಗದಲ್ಲಿ ನಡೆದರೆ  ಶಾಂತಿ, ನೆಮ್ಮದಿ ದೊರಕುತ್ತದೆ. ಧರ್ಮದ ತಳಹದಿ ಯ ಮೇಲೆ ಜೀವನ ಸಾಗಿಸಬೇಕು. ರಾಗ-ದ್ವೇಷ ತೊರೆದು ಮಾನವೀಯ ಮೌಲ್ಯ ಬೆಳೆಸಿಕೊಂಡರೆ ಕೊಟ್ಟೂರು ದೊರೆಯ ಆಶೀರ್ವಾದ ಸದಾ ಇರುತ್ತದೆ ಎಂದರು.

ಬಿಎಸ್ಸೆನ್ನೆಲ್ ನಿವೃತ್ತ ನೌಕರ ಕೆ.ಆರ್ ಸುಧಾಕರ್ ಮಾತನಾಡಿ, ಕೊಟ್ಟೂರು ಜಾತ್ರೆಗೆ ಹೊರಡುವ ಪಾದಯಾತ್ರಿಗಳಿಗೆ 18 ವರ್ಷಗಳಿಂದ ಅನ್ನ ಸಂತರ್ಪಣೆ ಸೇವೆ ಮಾಡುತ್ತಾ ಬಂದಿದ್ದೇವೆ. ವರ್ಷದಿಂದ ವರ್ಷಕ್ಕೆ ಯಾತ್ರೆಗೆ ಹೊರಡುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.

ರಥೋತ್ಸವಕ್ಕೆ ತೆರಳುವ ಭಕ್ತಾದಿಗಳಿಗೆ ಪಟ್ಟಣದ ತೆಗ್ಗಿನ ಮಠ, ಆರ್ಯ ವೈಶ್ಯ ಸಂಘ, ವೈದ್ಯಕೀಯ ಸಂಘ, ಕೆಂಪೇಶ್ವರ ದೇವಸ್ಥಾನ ಕಮಿಟಿಯವರು ಅನ್ನ ಸಂತರ್ಪಣೆ ಹಾಗೂ ವಸತಿ ಸೌಲಭ್ಯ ಮಾಡಿದ್ದರು.

ಈ ವೇಳೆ ಮುಖಂಡರಾದ ಸಂದೀಪ್, ಪ್ರದೀಪ್, ವಾಸವಿ ಸಮಾಜದ ರಾಘವೇಂದ್ರ ಶೆಟ್ಟಿ, ಮೆಡಿಕಲ್ ಕಿಟ್ಟಣ್ಣ, ಮುದಗಲ್ ಗುರುನಾಥ, ನಟೇಶ, ವಾಸವಿ ಮಹಿಳಾ ಸಮಾಜದವರು ಮತ್ತಿತರರಿದ್ದರು.

error: Content is protected !!