ಜಿಲ್ಲಾ ವರದಿಗಾರರ ಕೂಟದಿಂದ ಜಿಲ್ಲಾಧಿಕಾರಿಗೆ ಮನವಿ
ದಾವಣಗೆರೆ, ಫೆ.5- ಮಾಧ್ಯಮಗಳ ಹೆಸರೇಳಿಕೊಂಡು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ನಕಲಿ ಪತ್ರಕರ್ತರ ಹಾವಳಿಯನ್ನು ತಡೆಗಟ್ಟುವಂತೆ ಕೋರಿ ಬುಧವಾರ ಜಿಲ್ಲಾ ವರದಿಗಾರರ ಕೂಟದ ಸದಸ್ಯರು ಜಿಲ್ಲಾಧಿಕಾರಿಗೆ ಮತ್ತು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಅವರಿಗೆ ಮನವಿ ಸಲ್ಲಿಸಿದರು.
ಮಾಧ್ಯಮ ವೃತ್ತಿಗೆ, ವೃತ್ತಿ ಬಾಂಧವರ ಹೆಸರಿಗೆ ಮಸಿ ಬಳಿಯುವಂತಹ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ಪತ್ರಕರ್ತರು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಬಡದಾಳ್ ಮಾತನಾಡಿ, ಮಾಧ್ಯಮಗಳ ಹೆಸರು ಹೇಳುತ್ತಲೇ ಬಡ್ಡಿ ವ್ಯವಹಾರ ಮಾಡುವವರು, ಕಾನೂನು ಬಾಹಿರ ಕೆಲಸ ಮಾಡುವವರು, ಇಸ್ಪೀಟ್ ಜೂಜಾಟ ಆಡಿಸುವವರು, ರಿಯಲ್ ಎಸ್ಟೇಟ್ ದಂಧೆಯವರು, ಗ್ಯಾರೇಜ್, ಮೆಕ್ಯಾನಿಕ್ಗಳು, ಆಟೋ ರಿಕ್ಷಾಗಳು, ಪ್ರಿಂಟಿಂಗ್ ಪ್ರೆಸ್ನವರು, ಸರಕು ಸಾಗಾಣಿಕೆ ವಾಹನಗಳ ಮೇಲೆ ಪ್ರೆಸ್, ಮೀಡಿಯಾ ಎಂಬುದಾಗಿ ಬರೆಸಿಕೊಂಡು ಸುತ್ತಾಡುತ್ತಿದ್ದು, ಇದರಿಂದ ನೈಜ ಮಾಧ್ಯಮದವರಿಗೆ ನಿರಂತರ ತೊಂದರೆಯಾಗುತ್ತಲೇ ಇದೆ. ಪ್ರೆಸ್, ಮೀಡಿಯಾ ಎಂಬುದಾಗಿ ಇರುವ ವಾಹನಗಳನ್ನೇ ಮೊದಲು ತಪಾಸಣೆ ಮಾಡುವಂತೆ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿಗಳು ತಮ್ಮ ಅಧೀನ ಅಧಿಕಾರಿ, ಸಿಬ್ಬಂದಿಗೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.
ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿಯನ್ನು ಹಾಕಿ, ತಾವು ಪತ್ರಕರ್ತರೆಂದು ಅಧಿಕಾರಿ, ಸಿಬ್ಬಂದಿಗಳನ್ನು ಹೆದರಿಸುವ, ಬೆದರಿಸುವ ಕೆಲಸವೂ ಆಗುತ್ತಿದೆ. ಹಣ ವಸೂಲಿ ಮಾಡುವುದೇ ಇವರ ಉದ್ದೇಶ ವಾಗಿದ್ದು, ಇಂತಹವರಿಂದಾಗಿ ನೈಜವಾಗಿ ಮಾಹಿತಿ ಹಕ್ಕಿನಡಿ ಮಾಹಿತಿ ಕೋರಿ, ಅರ್ಜಿ ಸಲ್ಲಿಸುವ ನೈಜ ಪತ್ರಕರ್ತರಿಗೂ ಸಂಬಂಧಿಸಿದ ಅಧಿಕಾರಿಗಳು, ಸಿಬ್ಬಂದಿ ವ್ಯವಹಾರ ಕುದುರಿಸಲು ಆರ್ಟಿಐನಲ್ಲಿ ಮಾಹಿತಿ ಕೋರಿದ್ದಾರೆಂಬ ವ್ಯಂಗ್ಯದ ಮಾತು ಕೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಮೊದಲು ತಪ್ಪಿಸುವಂತೆ ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ನಕಲಿ ಪತ್ರಕರ್ತರ ಹಾವಳಿ ತಡೆಗಟ್ಟಲು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಹದಿನೈದು ದಿನಗಳೊಳಗಾಗಿ ಸೂಕ್ತ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೂಟದ ಗೌರವಾಧ್ಯಕ್ಷ ಬಿ.ಎನ್. ಮಲ್ಲೇಶ್, ಪ್ರಧಾನ ಕಾರ್ಯದರ್ಶಿ ಎಂ.ವೈ. ಸತೀಶ್, ಖಜಾಂಚಿ ಪವನ್ ಕುಮಾರ್, ಹಿರಿಯ ಪತ್ರಕರ್ತರಾದ ಎ.ಎಲ್. ತಾರಾನಾಥ್, ಮಂಜುನಾಥ್ ಗೌರಕ್ಕಳವರ್, ಚಂದ್ರಣ್ಣ, ಸಿದ್ದಯ್ಯ ಹಿರೇಮಠ್, ರಮೇಶ್ ಜಹಗೀರ್ದಾರ್, ಆರ್.ಎಸ್. ತಿಪ್ಪೇಸ್ವಾಮಿ, ಸಿಕಂದರ್, ರವಿ ಬಾಬು, ಹೆಚ್.ಎಂ.ಪಿ. ಕುಮಾರ್, ಸಿ. ವರದರಾಜ್, ತೇಜಸ್ವಿನಿ, ಕಾವ್ಯ ಬಿ.ಕೆ., ಸುರೇಶ್ ಕುಣಿಬೆಳಕೆರೆ, ಪುನೀತ್ ಆಪ್ತಿ, ತೇಜಸ್ವಿನಿ, ಸಂಜಯ್ ಕುಂದುವಾಡ, ರಮೇಶ್, ಶಿವುಕುಮಾರ್, ಕಿರಣ್, ಮದನ್, ಸುರೇಶ್ ಕಕ್ಕರಗೊಳ್ಳ ಸೇರಿದಂತೆ ಮತ್ತಿತರರಿದ್ದರು.