ಜಗಳೂರಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಗಾರ್ಮೆಂಟ್ಸ್ ಸ್ಥಾಪನೆಗೆ ಕ್ರಮ: ಡಾ.ಪ್ರಭಾ

ಜಗಳೂರಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಗಾರ್ಮೆಂಟ್ಸ್ ಸ್ಥಾಪನೆಗೆ ಕ್ರಮ: ಡಾ.ಪ್ರಭಾ

 ಸಂಗೇನಹಳ್ಳಿ ಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಿದ ಸಂಸದೆ

ಜಗಳೂರು, ಅ. 25- ಸ್ಥಳೀಯ ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಗಾರ್ಮೆಂಟ್ಸ್ ಸ್ಥಾಪಿಸಲಾಗುವುದು ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.

ತಾಲ್ಲೂಕಿನ ಕಲ್ಲೇದೇವರಪುರ ಗ್ರಾಮದಲ್ಲಿ ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ್ ಅವರು  ಐತಿಹಾಸಿಕ ಕಲ್ಲೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ವಿವಿಧ ದೇವಸ್ಥಾನಗಳ  ಜೀರ್ಣೋ ದ್ಧಾರಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ಸಂಗೇನಹಳ್ಳಿ ಕೆರೆ ಕೋಡಿಬಿದ್ದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಿ  ಅವರು ಮಾತನಾಡಿದರು.

ಲೋಕಸಭಾ ಕ್ಷೇತ್ರದಲ್ಲಿ ಅತ್ಯಂತ ಹಿಂದುಳಿದ ಹರಪನಹಳ್ಳಿ ಮತ್ತು  ಜಗಳೂರು ಕ್ಷೇತ್ರಗಳಿಗೆ ಆದ್ಯತೆ ನೀಡಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳನ್ನು ಹಂತ ಹಂತವಾಗಿ ಅಭಿವೃದ್ದಿಗೊಳಿಸುವುದಾಗಿ ಭರವಸೆ ವ್ಯಕ್ತಪಡಿಸಿದರು.

ತಮ್ಮ ಬೇಡಿಕೆಯಂತೆ ಶೀಘ್ರದಲ್ಲಿ ಈ ಭಾಗದ ಗ್ರಾಮಸ್ಥರು ಹಾಗೂ ಕೆರೆ ಸಮಿತಿ, ಶಾಸಕರೊಡನೆ ಒಂದು ದಿನ ಸುದೀರ್ಘವಾಗಿ ಚರ್ಚಿಸಿ ಪ್ರವಾಸಿ ತಾಣ, ಸಿರಿಧಾನ್ಯ ಕೇಂದ್ರ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ಅಭಿವೃದ್ದಿ ಕಾಮಗಾರಿ ಕುರಿತು ನಿತಿನ್ ಗಡ್ಕರಿ ಬಳಿ ನಿಯೋಗ ತೆರಳೋಣ ಎಂದರು.

ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ಮೇಲ್ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆಯನ್ನು ಕಂದಾಯ ಸಚಿವರಿಗೆ ಸಲ್ಲಿಸಲಾಗಿದೆ.ಶೀಘ್ರದಲ್ಲಿ ಅನುಮೋದನೆ ಸಿಗಲಿದೆ. ತಾಲ್ಲೂಕಿನ ಬಹುತೇಕ ಕೆರೆಗಳು ಕಳೆದ ಅರ್ಧ ಶತಕಗಳಿಂದ ಕೆರೆ ಕೋಡಿಗಳು ಬಿದ್ದಿಲ್ಲ. ಆದ್ದರಿಂದ ರೈತರು, ಕೆಲವರು ವಸತಿಗಾಗಿ ಕೆರೆ ಒತ್ತುವರಿಯಾಗಿದ್ದವು‌. ಇದೀಗ ಕೆರೆ ಕೋಡಿ ಬಿದ್ದ ಪರಿಣಾಮ ಕೆರೆಗಳ ನಿರ್ದಿಷ್ಟ ವಿಸ್ತೀರ್ಣ ಗೋಚರಿಸುತ್ತವೆ‌. ಸಿರಿಗೆರೆ ಶ್ರೀಗಳ ಆಶಯದಂತೆ ಬರದ ನಾಡು ಬಂಗಾರದ ನಾಡಾಗಲಿದೆ. ಕೆರೆಗಳ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಗಾರಿಕೆಯಾಗಬೇಕಿದೆ ಎಂದು ಸಲಹೆ ನೀಡಿದರು.

ಕುದುರೆ ಲಾಳಾಕೃತಿ ಕೋಡಿಯ ಐತಿ ಹಾಸಿಕ ಸಂಗೇನಹಳ್ಳಿ ಕೆರೆ ಕಳೆದ 15 ವರ್ಷ ಗಳಿಂದ ಸತತ ಮೂರು ಬಾರಿ ಕೆರೆ ಕೋಡಿ  ಬಿದ್ದರೂ ಕೆಲ ಅವೈಜ್ಞಾನಿಕ ಕಾಮಗಾರಿಗಳಿಂದ ರೈತರಿಗೆ ಪ್ರಯೋಜನವಾಗುತ್ತಿಲ್ಲ. ಗ್ರಾಮಕ್ಕೆ ಸೂಕ್ತ ರಸ್ತೆ ಸಂಚಾರ ಸಂಪರ್ಕಕ್ಕಾಗಿ ಮೇಲ್ಸೇತುವೆ ನಿರ್ಮಾಣವಾಗಬೇಕಿದೆ. ಕೆರೆ ಏರಿಯ ಸುತ್ತಲೂ ಬೆಳೆದಿರುವ ಜಾಲಿ ಗಿಡಗಳನ್ನು ತೆರವುಗೊಳಿಸಬೇಕು. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸಿರಿಧಾನ್ಯಗಳನ್ನು ಬೆಳೆಯುವ ಹಬ್ ಮತ್ತು ಪ್ರವಾಸಿ ತಾಣವಾಗಬೇಕಿದೆ ಎಂದು ಸಾಹಿತಿ  ಡಾ.ಅಶೋಕ ಕುಮಾರ್ ಸಂಗೇನಹಳ್ಳಿ ಸಲಹೆ ನೀಡಿದರು.

ಗ್ರಾ.ಪಂ ಅಧ್ಯಕ್ಷ ಕೊಟ್ಟಿಗೆ ತಿಪ್ಪೇಸ್ವಾಮಿ, ವಸಂತ ಕುಮಾರಿ, ಉಪಾಧ್ಯಕ್ಷೆ ಅನ್ನಪೂರ್ಣಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹ್ಮದ್, ಮುಖಂಡರಾದ ಕೆ.ಪಿ.ಪಾಲಯ್ಯ, ಕಲ್ಲೇಶ್‌ರಾಜ್ ಪಟೇಲ್, ಸಣ್ಣಸೂರಯ್ಯ, ಕೆ.ಟಿ.ಬಡಯ್ಯ, ಶಿವನಗೌಡ, ಡಿ.ಎಸ್. ಕಲ್ಲಪ್ಪ, ಬಿ.ಮಹೇಶ್ವರಪ್ಪ, ಅಜ್ಜಣ್ಣ, ದುಬೈ ಕಲ್ಲೇಶ್, ತಿಪ್ಪೇಸ್ವಾಮಿ ಸೇರಿದಂತೆ ಗ್ರಾ.ಪಂ ಸದಸ್ಯರು, ನೆರೆಹೊರೆ ಗ್ರಾಮಸ್ಥರು ಭಾಗವಹಿಸಿದ್ದರು.

error: Content is protected !!