ಜಿಲ್ಲೆಯಲ್ಲಿ ಆರ್ಭಟಿಸಿದ ಮಳೆರಾಯ

ಜಿಲ್ಲೆಯಲ್ಲಿ ಆರ್ಭಟಿಸಿದ ಮಳೆರಾಯ

ತಗ್ಗು ಪ್ರದೇಶದ ಮನೆಗಳಿಗೆ ನೀರು, ಒಂದೇ ದಿನ 33.7 ಮಿ.ಮೀ. ಮಳೆ 

ದಾವಣಗೆರೆ, ಅ. 17 – ಜಿಲ್ಲೆಯಲ್ಲಿ ಗುರುವಾರ 33.7 ಮಿ.ಮೀ.ಗಳ ಧಾರಾಕಾರ ಮಳೆಯಾಗಿದ್ದು, ದಾವಣಗೆರೆ ತಾಲ್ಲೂಕಿನಲ್ಲಿ ಅತಿ ಹೆಚ್ಚಿನ 59 ಮಿ.ಮೀ. ಮಳೆಯಾಗಿದೆ.

ಹರಿಹರ ತಾಲ್ಲೂಕಿನಲ್ಲಿ 40.3 ಮಿ.ಮೀ., ಜಗಳೂರಿನಲ್ಲಿ 39.8 ಮಿ.ಮೀ., ಚನ್ನಗಿರಿಯಲ್ಲಿ 20.1 ಮಿ.ಮೀ., ನ್ಯಾಮತಿಯಲ್ಲಿ 15.5 ಮಿ.ಮೀ. ಹಾಗೂ ಹೊನ್ನಾಳಿಯಲ್ಲಿ 13.3 ಮಿ.ಮೀ. ಮಳೆಯಾಗಿದೆ.

ದಾವಣಗೆರೆ ಹಾಗೂ ಹರಿಹರದಲ್ಲಿ ಸುರಿದ ಧಾರಾಕಾರ ಮಳೆಯಿಂದ ಹಲವೆಡೆ ಅವಾಂತರ ಸೃಷ್ಟಿಯಾಗಿತ್ತು. ತಗ್ಗು ಪ್ರದೇಶಗಳಲ್ಲಿನ ಬಡಾವಣೆಗಳಲ್ಲಿ ನೀರು ನುಗ್ಗಿತ್ತು.  ಹರಿಹರ ನಗರದ ಬೆಂಕಿ ನಗರ ಹಾಗೂ ಕಾಳಿದಾಸ ನಗರಗಳಲ್ಲಿ ನೀರು ನುಗ್ಗಿದ ಕಾರಣ ಜನರು ಸಂಕಷ್ಟ ಎದುರಿಸಬೇಕಾಯಿತು.

ದಾವಣಗೆರೆ ನಗರದ ಪಿಸಾಳೆ ಕಾಂಪೌಂಡ್‌ನ ಹಲವು ಮನೆಗಳಿಗೆ ಬೆಳಗಿನ ಜಾವ ನೀರು ನುಗ್ಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ನೀರು ತೆರವುಗೊಳಿಸಿದರು. ಈರುಳ್ಳಿ ಮಾರುಕಟ್ಟೆ ಹಾಗೂ ಭಾರತ್ ಕಾಲೋನಿ ಸೇರಿದಂತೆ ಹಲವೆಡೆ ಮಳೆ ನೀರಿನಿಂದ ಅವಾಂತರ ಸೃಷ್ಟಿಯಾಗಿತ್ತು. ಹಳೆ ಕುಂದುವಾಡ ಹಾಗೂ ದಾವಣಗೆರೆ ಸಂಪರ್ಕಿಸುವ ರಸ್ತೆ ಜಲಾವೃತವಾಗಿತ್ತು. ಮಾಗಾನಹಳ್ಳಿ ಬಳಿ ಹಳ್ಳ ತುಂಬಿ ಹರಿದು ಸಂಚಾರಕ್ಕೆ ಸಮಸ್ಯೆಯಾಗಿತ್ತು. 

ಜಿಲ್ಲೆಯಲ್ಲಿ ಆರ್ಭಟಿಸಿದ ಮಳೆರಾಯ - Janathavani

ದಾವಣಗೆರೆ ಸಮೀಪ ಬಿ.ಕಲಪನಹಳ್ಳಿ ಬಳಿ ಹಳ್ಳ ತುಂಬಿ ಸೇತುವೆ ಮೇಲೆ ನೀರು ಹರಿಯುತ್ತಿರುವುದು

ಜಿಲ್ಲೆಯಲ್ಲಿ ಮಳೆಯಿಂದಾಗಿ ಮೂರು ಪಕ್ಕಾ ಮನೆಗಳಿಗೆ ತೀವ್ರ ಹಾನಿಯಾಗಿದೆ. 8 ಪಕ್ಕಾ ಮನೆಗಳಿಗೆ ಭಾಗಶಃ ಹಾನಿಯಾಗಿದೆ. 1 ಕಚ್ಚಾ ಮನೆಗೆ ತೀವ್ರ ಹಾಗೂ 12 ಕಚ್ಚಾ ಮನೆಗಳಿಗೆ ಭಾಗಶಃ ಹಾನಿಯಾಗಿದೆ. 1.13 ಎಕರೆ ಈರುಳ್ಳಿ ನಾಶವಾಗಿದೆ. ಒಟ್ಟಾರೆ 11.53 ಲಕ್ಷ ರೂ.ಗಳ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ ಮಳೆ ಬಿರುಸು ಜೋರಾಗಿದೆ. ಜಿಲ್ಲೆಯಲ್ಲಿ ಅಕ್ಟೋಬರ್ 1ರಿಂದ 17ರವರೆಗೆ 180.3 ಮಿ.ಮೀ. ಮಳೆ ಸುರಿದಿದೆ. ವಾಡಿಕೆ ಮಳೆ ಪ್ರಮಾಣ 73.2 ಮಿ.ಮೀ. ಆಗಿದೆ. ಇದುವರೆಗೂ ವಾಡಿಕೆಗಿಂತ ಶೇ.146ರಷ್ಟು ಹೆಚ್ಚು ಮಳೆಯಾಗಿದೆ.

ಬರದ ನಾಡು ಎಂದೇ ಕರೆಯಲಾಗುವ ಜಗಳೂರು ತಾಲ್ಲೂಕಿನಲ್ಲಿ ವಾಡಿಕೆಗಿಂತ ಶೇ.251 ಪಟ್ಟು ಹೆಚ್ಚು ಮಳೆಯಾಗಿದೆ. ತಾಲ್ಲೂಕಿನಲ್ಲಿ ವಾಡಿಕೆ ಮಳೆ ಪ್ರಮಾಣ 62.2 ಮಿ.ಮೀ. ಆಗಿದ್ದರೆ, ಇದುವರೆಗೂ 218.3 ಮಿ.ಮೀ. ಮಳೆಯಾಗಿದೆ.

ಅಕ್ಟೋಬರ್ 22ರವರೆಗೂ ರಾಜ್ಯದ ಉತ್ತರ ಒಳನಾಡಿನಲ್ಲಿ ಮಳೆ ಮುಂದುವರೆಯಲಿದೆ. ನಂತರದಲ್ಲಿ ಮಳೆ ತೀವ್ರತೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

error: Content is protected !!