‘ಭಾರತ ಜನನಿಯ ತನುಜಾತೆ’ ಅಜರಾಮರ ಗೀತೆಯಾಗಿದೆ

‘ಭಾರತ ಜನನಿಯ ತನುಜಾತೆ’ ಅಜರಾಮರ ಗೀತೆಯಾಗಿದೆ

86ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಿರಿಯ ಸಾಹಿತಿ ಡಾ. ಪ್ರಧಾನ ಗುರುದತ್ತ

ಹಾವೇರಿ, ಜ.13- ಕುವೆಂಪು ಅವರು ರಚಿಸಿರುವ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ ಕಾವ್ಯ ಭಾರತದ ಸಾಹಿತ್ಯ ಲೋಕದಲ್ಲಿಯೇ ವಿಶಿಷ್ಟ ಸ್ಥಾನ ಪಡೆದುಕೊಂಡಿದ್ದು, ಇದು ಅಜರಾಮರ ಗೀತೆಯಾಗಿದೆ ಎಂದು ಹಿರಿಯ ಸಾಹಿತಿ ಡಾ. ಪ್ರಧಾನ ಗುರುದತ್ತ ಅವರು ಅಭಿಪ್ರಾಯಪಟ್ಟರು.

ಕಳೆದ ವಾರ ಇಲ್ಲಿ ಏರ್ಪಾಡಾಗಿದ್ದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನಕ-ಷರೀಫ-ಸರ್ವಜ್ಞ ಪ್ರಧಾನ ವೇದಿಕೆಯಲ್ಲಿ ಜರುಗಿದ ‘ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾ ಟಕ ಮಾತೆ’ ಕುರಿತ ವಿಶೇಷ ಉಪನ್ಯಾಸ ದಲ್ಲಿ ಭಾಗವಹಿಸಿ, ಅವರು ಮಾತನಾಡಿದರು.

ಕುವೆಂಪು ಅವರು ಅನೇಕ ಸಾಹಿತ್ಯ ಗಳಲ್ಲಿ ಮಾತೆ ಹಾಗೂ ಜನ್ಮಭೂಮಿಯ ವರ್ಣನೆ ಮಾಡಿದ್ದಾರೆ. ರಾಮಾಯಣ ಮತ್ತು ಮಹಾಭಾರತದಲ್ಲಿ ಕೂಡ ಮಾತೆ ಮತ್ತು ಜನ್ಮಭೂಮಿಯ ಮಹತ್ವವನ್ನು ವಿವರಿಸಲಾಗಿದ್ದು, ರಾಮಾಯಣದಲ್ಲಿ ಋಷಿಮುನಿಗಳು ಹೇಳಿದ ಮಾತುಗಳು, ಶ್ರೀರಾಮನು ಲಕ್ಷ್ಮಣನಿಗೆ ಹೇಳುವಂತಹ ಮಾತುಗಳು, ಧನ ಧಾನ್ಯ, ಸಿರಿ ಸಂಪತ್ತು ಗಳು ಪ್ರಜೆಗಳಿಗೆ ಪ್ರಮುಖ ಸಂಪತ್ತುಗಳಾದರೆ, ಮಾತೆ ಮತ್ತು ಮಾತೃಭೂಮಿ ಸ್ವರ್ಗದಲ್ಲಿ ದೊರೆಯಬಹುದಾದ ಭೋಗ ಭಾಗ್ಯಗಳಿ ಗಿಂತ ಮಿಗಿಲಾದ ಸಂಪತ್ತು ಎಂಬುದಾಗಿ ವರ್ಣಿಸಿದ್ದಾರೆ.  ಭಾರತದಲ್ಲಿ ಜನನಿಗೆ ಮತ್ತು ಮಾತೃಭೂಮಿ ಕುರಿತು ಸಮಾಜ ದಲ್ಲಿರುವ ಪೂಜ್ಯ ಭಾವನೆ, ಆತ್ಮೀಯತೆ ಕುರಿತು ಜಗತ್ತಿನಲ್ಲಿಯೇ ವಿಶೇಷವಾದುದು.  ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷ್ ಇತಿಹಾಸ ಕಾರರನ್ನು ಭಾರತೀಯರು ಅನುಸರಿಸಿ ದ್ದುಂಟು.  ಪ್ರಸ್ತುತ ದಿನಮಾನಗಳಲ್ಲಿ ಹಿಂದುತ್ವ ಮತ್ತು ಭಾರತೀಯತೆ ಅಪಾಯ ದಲ್ಲಿವೆ ಎಂಬುದನ್ನು ಹಲವು ನಿದರ್ಶನಗ ಳಿಂದ ಗುರುತಿಸಬಹುದಾಗಿದೆ.  ಭಾರತದಲ್ಲಿ ಭಾಷಿಕ ಸಮಸ್ಯೆ ಇದುವರೆಗೂ ಇಲ್ಲ.  ಸಂಸ್ಕೃತದಿಂದ ಪ್ರೇರಿತ ಹಾಗೂ ಉದಯಿಸಿದ ಅನೇಕ ಭಾಷೆಗಳು ಕೂಡ ನಮ್ಮ ದೇಶದ ಭಾಷೆಗಳೇ ಆಗಿವೆ.  ಡಾ. ಎಸ್.ಎಲ್. ಭೈರಪ್ಪ ನವರು ಹಾಗೂ ಎಂ. ವೀರಪ್ಪ ಮೊಯಿಲಿ ಇಬ್ಬರೂ ಕೂಡ ಸರಸ್ವತಿ ಸಮ್ಮಾನ ಪ್ರಶಸ್ತಿ ಪುರಸ್ಕೃತರೇ ಆಗಿದ್ದಾರೆ.  ಹುಯಿಲಗೋಳ ನಾರಾಯಣರಾಯರ ಉದಯವಾಗಲಿ ಚೆಲುವ ಕನ್ನಡ ನಾಡು,  ಕರ್ಕಿ ಅವರ ಹಚ್ಚೇವು ಕನ್ನಡದ ದೀಪ  ಕಾವ್ಯಗಳು ಕೂಡ ಜನಪ್ರಿಯತೆಯನ್ನು ಪಡೆದುಕೊಂಡಿವೆ.  ಆದರೆ ಕನ್ನಡ ಸಾಹಿತ್ಯ ಲೋಕದಲ್ಲಿ ಜಯ ಭಾರತ ಜನನಿಯ ತನುಜಾತೆ ಕೋಟಿ ಕೋಟಿ ಕನ್ನಡಿಗರ ಅನನ್ಯ ದೇಗುಲದಲ್ಲಿ ಶಾಶ್ವತವಾಗಿ ನೆಲೆಗೊಂಡಿದೆ.  ಈ ಗೀತೆ ಭಾರತೀಯ ಸಾಹಿತ್ಯದಲ್ಲಿ ವಿಶಿಷ್ಟವಾದ ಸ್ಥಾನ ಪಡೆದುಕೊಂಡಿದೆ ಎಂದರು.

ಭಾರತ ದೇಶ ಭಾಷೆಗಳ ಶಬ್ದ ಕೋಶಕ್ಕೆ ಸಂಸ್ಕೃತವೇ ಮೂಲ ಆಧಾರ, ಕನ್ನಡ ಭಾಷೆ ಶಬ್ದಕೋಶಕ್ಕೆ ಶೇ. 65 ರಷ್ಟು ಸಂಸ್ಕೃತವೇ ಆಧಾರವಾಗಿದೆ.  ತೆಲುಗು ಮತ್ತು ಮಲೆಯಾಳಂ ಗಳಲ್ಲಿ ಶೇ. 80 ರಷ್ಟಿದ್ದರೆ, ತಮಿಳು ಭಾಷೆಯಲ್ಲಿ ಇದರ ಪ್ರಮಾಣ ಕಡಿಮೆಯಿದೆ.  ದೇಶ ಭಾಷೆಗಳಿಗೆ ಅನುವಾದಗೊಂಡಿರುವ ಮಾತೃ ಸ್ವರೂಪಿ ಸಂಸ್ಕೃತವಾಗಿದೆ.  ದೇಶದ ವಿವಿಧ ಭಾಷೆಗಳಿಗೆ ಸಂಸ್ಕೃತವೇ ಭಾಷಿಕ ಸಾಮರಸ್ಯ ಮಾಡಿದೆ.  ಕುವೆಂಪು ಅವರ ರಾಮಾಯಣದರ್ಶನಂ ಮುಂತಾದ ಮಹಾ ಕಾವ್ಯಗಳು, ಇಂತಹ ಸಾಮರಸ್ಯ ಕಾರ್ಯ ಗಳಿಗೆ ಕೊಡುಗೆ ನೀಡಿವೆ ಎಂದರು.  

ಕುವೆಂಪು ಅವರ ಅನೇಕ ಕೃತಿಗಳು ಇತರೆ ಭಾಷೆಗಳಿಗೆ ಅನುವಾದಗೊಂಡಿವೆ.  ಕೃತಿಯಾದ ರಾಮಾಯಣದರ್ಶನಂ, ಇಂಗ್ಲೀಷ್, ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಅನುವಾದಗೊಂಡಿದ್ದು, ವಿಶ್ವ ಮಾನವ ಸಂದೇಶ 14 ಭಾಷೆಗಳಿಗೆ ಅನುವಾದಗೊಂಡಿರುವ ಸಂದರ್ಭದಲ್ಲಿ ಕನ್ನಡ ಅಧ್ಯಯನ ಸಂಸ್ಥೆ ಸಮಸ್ತ ನಾಟಕ ಗಳನ್ನು ಅನುವಾದಿಸಲು ಸಾಧ್ಯವಾಗಿದೆ.  ಯುಗದ ಕವಿ, ಜಗದ ಕವಿ, ಕುವೆಂಪು ಅವರು ಕನ್ನಡದ ಬಹುತೇಕ ಸಾಹಿತ್ಯ ಪ್ರಕಾರಗಳಲ್ಲಿ ರಚನೆ ಮಾಡಿದ್ದಾರೆ.  ಎಲ್ಲಿ ಮಾತೆಯರು ನೆಲೆಸಿರುತ್ತಾರೆಯೋ, ಅಲ್ಲಿ ದೇವತೆಗಳು ನೆಲೆಸುತ್ತಾರೆ.  ಹೀಗಾಗಿ ಎಲ್ಲ ಮಾತೆಯರು ಕೂಡ ದೇವರ ಸ್ವರೂಪಿಗಳೇ.  ಭಾರತ ಜನನಿಯ ತನು ಜಾತೆಯ ಅರ್ಥವೂ ಕೂಡ ಮಾತೆಯ ಮಹತ್ವವನ್ನೇ ಸಾರುತ್ತದೆ.  ಹೆತ್ತು ಹೊತ್ತು ಸಾಕಿ, ಸಲಹಿ, ಮನುಷ್ಯನನ್ನಾಗಿ ಮಾಡಿದ ನೀತಿ, ನಿಯಮ, ಆದರ್ಶಗಳನ್ನು ಪಾಲಿಸುವಂತೆ ಮಾಡಿದ ಮಾತೃಭೂಮಿ ಅಥವಾ ಜನ್ಮ ಭೂಮಿ ಜೀವನಕ್ಕೆ ಆಧಾರದ ಮೌಲ್ಯಗಳನ್ನು ಕಲಿಸುತ್ತದೆ.  ಜನನಿ ಮತ್ತು ಜನ್ಮಭೂಮಿ ಬಗ್ಗೆ ಅನೇಕ ಪ್ರಕಾರಗಳಲ್ಲಿ ಮಹತ್ವವನ್ನು ವರ್ಣಿಸಲಾಗುತ್ತದೆ ಎಂದು ಪ್ರಧಾನ ಗುರುದತ್ತ ಅವರು ಹೇಳಿದರು.

ಸಿದ್ದಪ್ಪ ಹೊಟ್ಟಿ ಸ್ವಾಗತಿಸಿದರು, ಗಾಯತ್ರಿ ಉಡುಪ ನಿರ್ವಹಿಸಿದರು, ಸಿದ್ದಪ್ಪ ಸಂಗಪ್ಪ ಮೇಟಿ ವಂದಿಸಿದರೆ, ಡಾ. ನಿಷ್ಠಿ ರುದ್ರಪ್ಪ ಕಾರ್ಯಕ್ರಮ ನಿರೂಪಿಸಿದರು.

error: Content is protected !!