ಗರ್ಭಿಣಿ, ಬಾಣಂತಿಯರಿಗೆ ಅರಿವು ಮೂಡಿಸುವ ಕಾರ್ಯ ಹೆಚ್ಚಾಗಲಿ

ಗರ್ಭಿಣಿ, ಬಾಣಂತಿಯರಿಗೆ ಅರಿವು ಮೂಡಿಸುವ ಕಾರ್ಯ ಹೆಚ್ಚಾಗಲಿ

ತಾಯಿ-ಮಕ್ಕಳ ಆಸ್ಪತ್ರೆ ತಜ್ಞರು, ಸಿಬ್ಬಂದಿಗೆ ಆರೈಕೆ ಒಡನಾಡಿ ಪ್ರಶಂಸನಾ ಕಾರ್ಯಕ್ರಮದಲ್ಲಿ ಡಿಹೆಚ್‌ಒ ಡಾ.ಷಣ್ಮುಖಪ್ಪ

ದಾವಣಗೆೆರೆ, ಆ.23- ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕೆಲಸ ಶ್ಲ್ಯಾಘನೀಯವಾದದ್ದು. ಈ ರೀತಿ ಕೆಲಸಗಳು ಮತ್ತಷ್ಟು ಹೆಚ್ಚಾಗಲಿ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ ಆಶಿಸಿದರು.

ಯೋಸೈಡ್ ಸಂಸ್ಥೆಯಿಂದ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಚಿಗಟೇರಿ ಜಿಲ್ಲಾ ಆಸ್ಪತ್ರೆ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ತಾಯಿ ಮತ್ತು ಮಕ್ಕಳ ತಜ್ಞರುಗಳು ಹಾಗೂ ಶುಶ್ರೂಕೆ ಕಾರ್ಯದಲ್ಲಿ ಭಾಗಿಯಾದ ಶುಶ್ರೂಷಾ ಅಧಿಕಾರಿಗಳು, ಆಪ್ತ ಸಮಾಲೋಚಕರಿಗೆ ಆರೈಕೆ ಒಡನಾಡಿ ಪ್ರಶಂಸನಾ  ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಬಾಣಂತಿರು, ಗರ್ಭಿಣಿಯರು ಹಾಗೂ ಮಕ್ಕಳಿಗೆ ಆರೋಗ್ಯ ಇಲಾಖೆಯಿಂದ ನೀಡುವ ಸೌಲಭ್ಯ ಹಾಗೂ ಅರಿವು ಮೂಡಿಸುವುದು ಅದರಲ್ಲೂ ನಗರದ ಪ್ರತಿ ವಾರ್ಡ್‌ನಲ್ಲೂ ಒಂದು ದಿನ ವಿಶೇಷ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುವುದು ಸಂತಸದ ವಿಚಾರ. ಇಂತಹ ಉತ್ತಮ ಕಾರ್ಯದಲ್ಲಿ ಭಾಗಿಯಾದವರಿಗೆ ಪ್ರಶಂಸನೆ ವ್ಯಕ್ತಪಡಿಸುವ ಕಾರ್ಯಕ್ರಮವೂ ಅರ್ಥಪೂರ್ಣವಾದದ್ದು ಎಂದರು.

ಚಿಗಟೇರಿ ಜಿಲ್ಲಾಸ್ಪತ್ರೆ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಕೇರ್ ಕಂಪ್ಯಾನಿಯನ್ ಪ್ರೋಗ್ರಾಂ ಅಡಿಯಲ್ಲಿ ಹೊಸ ಮೈಲುಗಲ್ಲು ಸಾಧಿಸಿದೆ. 2017 ರಿಂದ ಇಲ್ಲಿಯವರೆಗೆ 2,47,672 ಜನ  ತಾಯಂದಿರು ಹಾಗೂ ಆರೈಕೆ ದಾರರಿಗೆ ಸ್ಪೂರ್ತಿ ನೀಡಿ, ಕುಟುಂಬಗಳ ಆರೋಗ್ಯ ಫಲಿತಾಂಶ ಸುಧಾರಿಸುವಲ್ಲಿ ಇಲ್ಲಿನ ಶುಶ್ರೂಷಕಿಯರು ಹಾಗೂ ಆಪ್ತ ಸಮಾಲೋಚಕರು ಪ್ರಮುಖ ಪಾತ್ರ ವಹಿಸಿದ್ದಾರೆ.

ಕೇರ್ ಕಂಪ್ಯಾನಿಯನ್ ಪ್ರೋಗ್ರಾಂ ಶುರುವಾಗಿದ್ದು,  2014 ರಲ್ಲಿ. ಆರಂಭ ವಿಶೇಷವಾಗಿ ಗರ್ಭಿಣಿಯ ಪೋಷಕರಿಗೆ ಹಾಗೂ ಕುಟುಂಬಸ್ಥರಿಗೆ ಪ್ರಸವಪೂರ್ವ, ಪ್ರಸವನಂತರ ಅನುಸರಿಸ ಬೇಕಾದ ಕ್ರಮಗಳ ಬಗ್ಗೆ ಹಾಗೂ ಮೂಢನಂಬಿಕೆ ಹೋಗಲಾಡಿಸಿ ಅವರಿಗೆ ತಿಳುವಳಿಕೆ ನೀಡುವ ಜೊತೆಗೆ ಮಕ್ಕಳ ಆರೈಕೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಶುಶ್ರೂಷಕಿಯರು ಹಾಗೂ ಸಮಾಲೋಚಕರು ಮಾಡಿದ್ದಾರೆ. ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಜನರಿಗೆ ಜಾಗೃತಿ ಮೂಡಿಸುವ ಅವರ ಕೆಲಸ ಪ್ರಶಂಸನೀಯ. ಇದೀಗ ಆರು ಜನ ಶುಶ್ರೂಷಕಿಯರು ಹಾಗೂ ಎರಡು ಜನ ಆಪ್ತ ಸಮಾ ಲೋಚಕರಿಗೆ ಆರೈಕೆ ಒಡನಾಡಿ ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಿದ್ದು ಸಂತೋಷ ತಂದಿದೆ ಎಂದರು.

ಜಿಲ್ಲಾ ಸರ್ಜನ್ ಡಾ.ನಾಗೇಂದ್ರ, ಜಿಲ್ಲಾ ಸರ್ವೇಕ್ಷ ಣಾಧಿಕಾರಿ ಡಾ.ರಾಘವನ್, ಆರ್‌ಸಿಹೆಚ್‌ಒ ರೇಣುಕಾ ರಾಧ್ಯ, ನಿವಾಸಿ ವೈದ್ಯಾಧಿಕಾರಿ ಡಾ.ನಾಗವೇಣಿ, ಶಾಂತಿ, ಕಾರ್ಯಕ್ರಮ ಸಂಯೋಜಕಿ ಪರ್ವಿನ್, ಜೀವಿತಾ, ಮಣಿಕಂಠ, ವರಲಕ್ಷ್ಮಿ ಇತರರು ಈ ಸಂದರ್ಭದಲ್ಲಿದ್ದರು. 

error: Content is protected !!