ಮೌಲ್ಯ ಕಲಿಸದ ಶಿಕ್ಷಣವೇ ಸಮಸ್ಯೆ : ಜಯದೇವ್
ದಾವಣಗೆರೆ, ಜು. 26 – ಅನುಕಂಪ, ಕರುಣೆ, ಸಹಾನುಭೂತಿ ಹಾಗೂ ಸಂವೇದನೆಯಂತಹ ಗುಣಗಳನ್ನು ಬೆಳೆಸದ ಶಿಕ್ಷಣ ವ್ಯವಸ್ಥೆ ಸಮಾಜಕ್ಕೆ ಕೆಡುಕನ್ನೇ ತರುತ್ತದೆ. ಇಂತಹ ಶಿಕ್ಷಣ ಇರುವುದಕ್ಕಿಂತ, ಇಲ್ಲದಿರುವುದೇ ವಾಸಿ ಎಂದು ಚಾಮರಾಜನಗರ ದೀನಬಂಧು ಟ್ರಸ್ಟ್ನ ಜಿ.ಎಸ್. ಜಯದೇವ ಅಭಿಪ್ರಾಯಪಟ್ಟಿದ್ದಾರೆ.
ನಗರದ ಸಿದ್ದಗಂಗಾ ವಿದ್ಯಾಸಂಸ್ಥೆಯಲ್ಲಿ ಕರ್ನಾ ಟಕ ಸಾಹಿತ್ಯ ಅಕಾಡೆಮಿ, ಜೆ.ಹೆಚ್. ಪಟೇಲ್ ಫೌಂಡೇ ಷನ್, ಕರುಣಾ ಜೀವ ಕಲ್ಯಾಣ ಟ್ರಸ್ಟ್ ಸಂಯು ಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಶಿಕ್ಷಣ ಮತ್ತು ಮಕ್ಕಳ ಮನೋವಿಕಾಸ ವಿಷಯಕ್ಕೆ ಸಂಬಂಧಿಸಿದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೊದಲ ಸ್ಥಾನ ಗಳಿಸುವುದಕ್ಕೇ ಸಾಕಷ್ಟು ಶಿಕ್ಷಣ ಸಂಸ್ಥೆಗಳು ಆದ್ಯತೆ ನೀಡುತ್ತಿವೆ. ಇದರಿಂದಾಗಿ ಶಾಲೆಯ ಸಹಪಾಠಿಗಳು ಹಾಗೂ ಮಿತ್ರರ ನಡುವೆಯೇ ಸ್ಪರ್ಧೆ ಯಾಗುತ್ತಿದೆ. ಸಹಪಾಠಿಗಳೂ ಸಹ ಶತ್ರುಗಳಾಗಿ ಮಾರ್ಪಡುತ್ತಿದ್ದಾರೆ ಎಂದವರು ವಿಷಾದಿಸಿದರು.
ಎಲ್ಲರನ್ನೂ ಹಿಂದೆ ಹಾಕಿ ಮುಂದೆ ಬರಬೇಕು ಎಂಬ ಮನೋಭಾವವೇ ಸಮಸ್ಯೆಗೆ ಮೂಲ ಕಾರಣ. ಮಕ್ಕಳ ನಡುವೆ ಇಂತಹ ಸ್ಪರ್ಧೆ ಹುಟ್ಟು ಹಾಕಿ, ಅತಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಯನ್ನು ವೈಭವೀಕರಿಸುವ ಕೆಲಸವನ್ನು ಸಾಕಷ್ಟು ಶಿಕ್ಷಣ ಸಂಸ್ಥೆಗಳು ಮಾಡುತ್ತಿವೆ.
ಶಿಕ್ಷಣ ಸಮಾಜದ ಸಮಸ್ಯೆ ಬಗೆಹರಿಸಬೇಕಿತ್ತು. ಆದರೆ, ಮೌಲ್ಯಗಳನ್ನು ಕಲಿಸದ ಶಿಕ್ಷಣ ವ್ಯವಸ್ಥೆ, ಈಗ ತಾನೇ ಸಮಸ್ಯೆಯಾಗಿದೆ ಎಂದು ಜಯದೇವ ವಿಷಾದಿಸಿದರು.
400 ದಶಲಕ್ಷ ಮಕ್ಕಳಿಗೆ ಕೇವಲ ಶೇ.4ರ ಅನುದಾನ
ಭಾರತದಲ್ಲಿ 400 ದಶಲಕ್ಷ ಮಕ್ಕಳಿದ್ದಾರೆ. ಭಾರತ ವಿಶ್ವದಲ್ಲೇ ಅತಿ ಹೆಚ್ಚು ಮಕ್ಕಳನ್ನು ಹೊಂದಿದೆ. ಆದರೆ, ಸರ್ಕಾರಗಳು ಬಜೆಟ್ನಲ್ಲಿ ಶೇ.4ರಷ್ಟನ್ನು ಮಾತ್ರ ಮಕ್ಕಳಿಗೆ ಮೀಸಲಿಡುತ್ತಿದ್ದಾರೆ. ದೇಶದ ಅರ್ಧದಷ್ಟಿರುವ ಮಕ್ಕಳಿಗೆ ಇಷ್ಟು ಕಡಿಮೆ ಅನುದಾನ ಸಾಲುವುದಿಲ್ಲ ಎಂದು ಚಾಮರಾಜನಗರ ದೀನಬಂಧು ಟ್ರಸ್ಟ್ನ ಜಿ.ಎಸ್. ಜಯದೇವ ಅಭಿಪ್ರಾಯ ಪಟ್ಟರು.
ಕೇಂದ್ರ ಸರ್ಕಾರ ಸೈನ್ಯಕ್ಕೆ ಶೇ.13ರಷ್ಟು ಅನುದಾನ ನೀಡುತ್ತಿದೆ. ಆದರೆ, ಶಿಕ್ಷಣಕ್ಕೆ ಕಡಿಮೆ ಅನುದಾನ ನೀಡುತ್ತಿದೆ. ಭಾರತದ ಕೆಲ ಭಾಗಗಳಲ್ಲಿ ಮಕ್ಕಳ ಅಪೌಷ್ಠಿಕತೆಯ ಮಟ್ಟ ಆಫ್ರಿಕಾದ ದೇಶಗಳಷ್ಟಿದೆ ಎಂದು ಜಯದೇವ ವಿಷಾದಿಸಿದರು.
ಕೆಲವು ಮಕ್ಕಳು ಕಲಿಯುವುದಕ್ಕಿಂತ ಹೆಚ್ಚಾಗಿ, ಮಧ್ಯಾಹ್ನದ ಬಿಸಿಯೂಟ ಸಿಗುತ್ತದೆ ಎಂಬ ಕಾರಣಕ್ಕೆ ಶಾಲೆಗೆ ಬರುವ ಪರಿಸ್ಥಿತಿ ಇದೆ. ಈ ಸಮಸ್ಯೆಗಳನ್ನು ಬಗೆಹರಿಸಲು ಶಿಕ್ಷಣ ವಲಯಕ್ಕೆ ಹೆಚ್ಚಿನ ಅನುದಾನದ ಅಗತ್ಯವಿದೆ ಎಂದರು.
ಮಕ್ಕಳನ್ನು ಸ್ಪರ್ಧೆಗೆ ಒಡ್ಡುವ ಬದಲು ಅವರಲ್ಲಿನ ಪ್ರತಿಭೆಗಳನ್ನು ಹುಡುಕಿ ಪ್ರೋತ್ಸಾಹಿಸಬೇಕು. ಮಕ್ಕಳು ದೊಡ್ಡವರಾದ ಮೇಲೆ ಯಾವುದೇ ಉದ್ಯೋಗಕ್ಕೆ ಹೋದರೂ ಶಿಸ್ತು, ಪ್ರಾಮಾಣಿಕತೆ ಹಾಗೂ ಕರ್ತವ್ಯ ನಿಷ್ಠೆಯಿಂದ ಕೆಲಸ ಮಾಡಬೇಕು. ಆಗ ಮಾತ್ರ ಸಮಾಜ ಬೆಳೆಯುತ್ತದೆ ಎಂದವರು ತಿಳಿಸಿದರು.
ಪೊಲೀಸರಿಂದ ಹಿಡಿದು ನರ್ಸ್ಗಳವರೆಗೆ, ವೈದ್ಯರು – ಇಂಜಿನಿಯರ್ಗಳವರೆಗೆ ಎಲ್ಲರೂ ಶಿಸ್ತು ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಸಮಾಜಕ್ಕೆ ಬಹು ದೊಡ್ಡ ಕೊಡುಗೆ ನೀಡಿದಂತಾಗುತ್ತದೆ. ಆಗ ಸಮಾಜದಲ್ಲಿನ ಸಮಸ್ಯೆಗಳು ಬಗೆಹರಿಯುತ್ತವೆ. ಇಂತಹ ಗುಣಗಳನ್ನು ಶಿಕ್ಷಣ ಸಂಸ್ಥೆಗಳು ಬೆಳೆಸಬೇಕು ಎಂದು ಜಯದೇವ ಹೇಳಿದರು.
ಮಕ್ಕಳನ್ನು ವೈದ್ಯ ಇಲ್ಲವೇ ಇಂಜಿನಿಯರ್ ಹುದ್ದೆಗಳಿಗೆ ಮಾತ್ರ ಸೀಮಿತಗೊಳಿಸಬಾರದು. ಬಡಿಗೆಯವರಿಂದ ಹಿಡಿದು ಕಲಾವಿದರವರೆಗೆ ಯಾವುದೇ ಕೆಲಸದಲ್ಲಿ ಆಸಕ್ತಿ ತೋರಿದರೂ ಪ್ರೋತ್ಸಾಹಿಸಬೇಕು. ಯಾವುದೇ ಕೆಲಸ ಕೀಳಲ್ಲ. ಯಾವುದೇ ಕೆಲಸ ಮಾಡಿದರೂ ಶಿಸ್ತು ಹಾಗೂ ಪ್ರಾಮಾಣಿಕತೆ ಇರುವಂತಹ ಮನೋಭಾವ ಬೆಳೆಸಬೇಕು ಎಂದವರು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿದ್ಧಗಂಗಾ ವಿದ್ಯಾಸಂಸ್ಥೆಯ ಅಧ್ಯಕ್ಷೆ ಜಸ್ಟಿನ್ ಡಿಸೋಜ, ಜಿ.ಎಸ್. ಜಯದೇವ ಅವರ ತಂದೆ ಹೆಸರಾಂತ ಸಾಹಿತಿ ಹಾಗೂ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರು ತಮ್ಮ ಶಾಲೆಗೆ ಭೇಟಿ ನೀಡಿದ್ದರು. ಆಗ ಶಾಲೆಯ ಮಕ್ಕಳು 150 ಕವನಗಳ ಸಂಕಲನ ರೂಪಿಸಿ ಶಿವರುದ್ರಪ್ಪ ಅವರಿಗೆ ಅರ್ಪಿಸಿದ್ದರು ಎಂದು ಸ್ಮರಿಸಿದರು.
ವಿಜಯಪುರ ಶರಣ ತತ್ವ ಚಿಂತಕ ಡಾ. ಜೆ.ಎಸ್. ಪಾಟೀಲ ಬಸವ ವಾದ ಮತ್ತು ಸಂವಿಧಾನದ ಆಶಯಗಳು ವಿಷಯ ಕುರಿತು ಉಪನ್ಯಾಸ ನೀಡಿದರು.