ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ನಲ್ಲಿ ಬಿಹಾರ, ಆಂಧ್ರ ಪ್ರದೇಶಗಳಿಗೆ ಮಣೆ
ನವದೆಹಲಿ, ಜು. 23 – ಮಧ್ಯಮ ವರ್ಗಕ್ಕೆ ಆದಾಯ ತೆರಿಗೆ ವಿನಾಯಿತಿ, ಉದ್ಯೋಗ ಸೃಷ್ಟಿ ಯೋಜನೆಗಳಿಗೆ 2 ಲಕ್ಷ ಕೋಟಿ ರೂ. ಹಾಗೂ ಎನ್ಡಿಎ ಮಿತ್ರ ಪಕ್ಷಗಳ ಆಡಳಿತ ಇರುವ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡುವ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ.
ಸತತ ಏಳನೇ ಬಾರಿ ಬಜೆಟ್ ಮಂಡಿಸಿರುವ ಸೀತಾರಾಮನ್, ಗ್ರಾಮೀಣ ಅಭಿವೃದ್ದಿ ಯೋಜನೆಗಳಿಗೆ 2.66 ಲಕ್ಷ ಕೋಟಿ ರೂ. ನೀಡಿದ್ದಾರೆ ಹಾಗೂ ದೀರ್ಘಾವಧಿ ಮೂಲಭೂತ ಸೌಲಭ್ಯ ಯೋಜನೆಗಳಿಗೆ 11.11 ಲಕ್ಷ ಕೋಟಿ ರೂ. ನೀಡುವ ಮೂಲಕ ಆರ್ಥಿಕ ಬೆಳವಣಿಗೆಗೆ ಒತ್ತು ನೀಡಿದ್ದಾರೆ.
ನವೋದ್ಯಮಗಳ ಎಲ್ಲಾ ವರ್ಗಗಳಿಗೆ ಏಂಜಲ್ ತೆರಿಗೆ ರದ್ದುಗೊಳಿಸಲಾಗಿದೆ. ಮೊಬೈಲ್ ಹಾಗೂ ಬಂಗಾರದ ಆಮದಿನ ಸುಂಕ ಇಳಿಸಲಾಗಿದೆ. ಬಂಡವಾಳ ಲಾಭ ತೆರಿಗೆ ಸರಳಗೊಳಿಸಲಾಗಿದೆ. ಆದರೆ ಷೇರು ಗಳ ವಹಿವಾಟಿನ ತೆರಿಗೆ ಹೆಚ್ಚಿಸ ಲಾಗಿದೆ. ಷೇರುಗಳ ವಹಿವಾಟು ತೆರಿಗೆ ಹೆಚ್ಚಿಸಿರುವುದರಿಂದ ಷೇರುಪೇಟೆಯಲ್ಲಿ ಕುಸಿತವಾಗಿದೆ. ವಿಶ್ವ ಈಗ ನೀತಿಗಳ ಅನಿಶ್ಚಿತತೆಯಲ್ಲಿ ಸಿಲುಕಿದೆ. ಆದರೆ ಭಾರತ ಅದಕ್ಕೆ ಅಪವಾದವಾಗಿದೆ. ಭಾರತದ ಆರ್ಥಿಕತೆ ಈಗ ಪ್ರಗತಿಯಲ್ಲಿದ್ದು, ಈ ಪ್ರಗತಿ ಮುಂದುವರಿಯಲಿದೆ ಎಂದು ಬಜೆಟ್ ಮಂಡಿಸುವಾಗ ಸೀತಾರಾಮನ್ ಹೇಳಿದ್ದಾರೆ.
ಬಜೆಟ್ನಲ್ಲಿ ಉದ್ಯೋಗ, ಕೌಶಲ್ಯ, ಸಣ್ಣ ಉದ್ಯಮ ಹಾಗೂ ಮಧ್ಯಮ ವರ್ಗಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಸೀತಾರಾಮನ್ ತಿಳಿಸಿದ್ದಾರೆ.
ಉನ್ನತ ಶಿಕ್ಷಣಕ್ಕೆ ಸಾಲ, ಯುಜಿಸಿ ಅನುದಾನ ಕಡಿತ
ನವದೆಹಲಿ, ಜು. 23 – ಉನ್ನತ ಶಿಕ್ಷಣ ಕ್ಕಾಗಿ 10 ಲಕ್ಷ ರೂ.ಗಳ ಸಾಲದ ನೆರವು ನೀಡುವುದಾಗಿ ಕೇಂದ್ರ ಬಜೆಟ್ನಲ್ಲಿ ಪ್ರಕಟಿಸಲಾಗಿದೆ. ಇದೇ ವೇಳೆ ಉನ್ನತ ಶಿಕ್ಷಣ ನಿಯಂತ್ರಕ ಯು.ಜಿ.ಸಿ.ಗೆ ನೀಡುವ ಅನುದಾನದಲ್ಲಿ ಶೇಕಡ 60ರ ಕಡಿತವಾಗಿದೆ.
ಪ್ರತಿಷ್ಠಿತ ವಾಣಿಜ್ಯ ಶಾಲೆಗಳಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇ ಜ್ಮೆಂಟ್ಗೆ (ಐ.ಐ.ಎಂ.) ನೀಡುವ ಅನುದಾನ ವನ್ನು ಸತತ ಎರಡನೇ ವರ್ಷ ಕಡಿತಗೊಳಿಸ ಲಾಗಿದೆ. ಶಾಲಾ ಶಿಕ್ಷಣಕ್ಕೆ ನೀಡುವ ಅನುದಾನವನ್ನು 535 ಕೋಟಿ ರೂ. ಹೆಚ್ಚಿಸ ಲಾಗಿದೆ. ಆದರೆ ಉನ್ನತ ಶಿಕ್ಷಣದ ಅನುದಾನ ವನ್ನು ಕಳೆದ ವರ್ಷದ ಪರಿಷ್ಕರಿಸಿದ ಅಂದಾಜಿಗೆ ಹೋಲಿಸಿದರೆ 9,600 ಕೋಟಿ ರೂ ಇಳಿಕೆ ಮಾಡಲಾಗಿದೆ.
ಒಟ್ಟಾರೆ ಶಿಕ್ಷಣ ವಲಯಕ್ಕೆ ಇರುವ ಅನುದಾನ 9,000 ಕೋಟಿ ರೂ ಕಡಿಮೆ ಯಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಶಿಕ್ಷಣ ವಲಯಕ್ಕೆ 1.29 ಲಕ್ಷ ಕೋಟಿ ರೂ ಅನುದಾನ ನೀಡಲಾಗಿತ್ತು. ಈ ಬಾರಿ 1.20 ಲಕ್ಷ ಕೋಟಿ ರೂ ಅನುದಾನ ನೀಡಲಾಗಿದೆ. ದೇಶಿಯ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಪಡೆಯಲು 10 ಲಕ್ಷ ರೂ.ಗಳ ವರೆಗೆ ಸಾಲದ ನೆರವು ನೀಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ.
ಈ – ವೋಚರ್ ಮೂಲಕ 1 ಲಕ್ಷ ವಿದ್ಯಾರ್ಥಿಗಳಿಗೆ ಶೇಕಡ ಮೂರರ ಬಡ್ಡಿ ವಿನಾಯಿತಿ ಇರುವ ಸಾಲ ನೀಡಲಾಗುವುದು ಎಂದು ಸೀತಾರಾಮನ್ ಹೇಳಿದ್ದಾರೆ.
ಇದು ಸರ್ಕಾರದ ಯಾವುದೇ ಯೋಜನೆ ಹಾಗೂ ನೀತಿಗಳ ಲಾಭಕ್ಕೆ ಅರ್ಹರಾಗದ ವಿದ್ಯಾರ್ಥಿಗಳಿಗೆ ನೆರವಾಗಲಿದೆ ಎಂದು ಸಚಿವೆ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಸರ್ಕಾರದ ಕ್ರಮಗಳಿಂದ ವಿದ್ಯಾರ್ಥಿಗಳು, ಶಿಕ್ಷಣ ವಲಯ ಹಾಗೂ ಉದ್ಯಮಗಳಿಗೆ ಅನುಕೂಲವಾಗಲಿದೆ ಎಂದಿದ್ದಾರೆ.
ವಿಶ್ವವಿದ್ಯಾಲಯ ಧನಸಹಾಯ ಆಯೋಗಕ್ಕೆ (ಯುಜಿಸಿ) ನೀಡಲಾಗುವ ಅನುದಾನವನ್ನು ಈ ಬಾರಿ 2,500 ಕೋಟಿ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ಕಳೆದ ಪರಿಷ್ಕೃತ ಅಂದಾಜಿನಲ್ಲಿ 6,409 ಕೋಟಿ ರೂ.ಗಳ ಅನುದಾನ ನೀಡಲಾಗಿತ್ತು. ಈ ಬಾರಿ ಶೇ. 60ರ ಇಳಿಕೆಯಾಗಿದೆ.
ಐ.ಐ.ಎಂ.ಗಳೂ ಅನುದಾನ ಕಡಿತ ಎದುರಿಸಿವೆ. ಕಳೆದ ಬಾರಿ 300 ಕೋಟಿ ರೂ. ಅನುದಾನ ನೀಡಿದ್ದಾರೆ, ಈ ಬಾರಿ 212 ಕೋಟಿ ರೂ. ಅನುದಾನ ನೀಡಲಾಗಿದೆ.
ಕಳೆದ ವರ್ಷದ ಪರಿಷ್ಕೃತ ಅಂದಾಜಿಗೆ ಹೋಲಿಸಿದರೆ ಐ.ಐ.ಟಿ.ಗಳ ಅನುದಾನ ಸಹ ಇಳಿಕೆಯಾಗಿದೆ. ಕಳೆದ ವರ್ಷ 10,384 ಕೋಟಿ ರೂ. ಅನುದಾನ ನೀಡಿದ್ದಾರೆ ಈ ಬಾರಿ 10,324 ಕೋಟಿ ರೂ. ನೀಡಲಾಗಿದೆ.
ಬಜೆಟ್ ಮುಖ್ಯಾಂಶಗಳು
- ಹೊಸ ತೆರಿಗೆ ಪದ್ಧತಿಯಲ್ಲಿ ಡಿಡಕ್ಷನ್ ಪ್ರಮಾಣ 50,000 ಗಳಿಂದ 75,000 ರೂ.ಗಳಿಗೆ ಏರಿಕೆ
- ಹೊಸ ತೆರಿಗೆ ಪದ್ಧತಿಯಲ್ಲಿ ವೇತನದಾರರಿಗೆ 17,500 ರೂ.ಗಳ ವರೆಗಿನ ಆದಾಯ ತೆರಿಗೆ ಉಳಿತಾಯ
- ಮೊಬೈಲ್ ಫೋನ್, ಪಿಸಿಬಿಎ (ಪ್ರಿಂಟೆಡ್ ಸರ್ಕೀಟ್ ಬೋರ್ಡ್ ಅಸೆಂಬ್ಲಿ) ಹಾಗೂ ಮೊಬೈಲ್ ಚಾರ್ಜರ್ ಸುಂಕ ಶೇ. 15 ಕ್ಕೆ ಇಳಿಕೆ.
- ಬಂಗಾರ ಹಾಗೂ ಬೆಳ್ಳಿ ಮೇಲಿನ ಸುಂಕ ಶೇ. 6 ಹಾಗೂ ಪ್ಲಾಟಿನಂ ಸುಂಕ ಶೇ. 6.4 ಕ್ಕೆ ಇಳಿಕೆ
- ಶೇರು ಹಾಗೂ ಸೆಕ್ಯೂರಿಟಿಗಳ ಮಾರಾಟದ ಮೇಲಿನ ತೆರಿಗೆ ಹೆಚ್ಚಳ
- ಎಲ್ಲಾ ವರ್ಗದ ನವೋದ್ಯಮಗಳ ಮೇಲಿನ ಏಂಜಲ್ ಟ್ಯಾಕ್ಸ್ ರದ್ದು
- ವಿದೇಶಿ ಕಂಪನಿಗಳ ಕಾರ್ಪೊರೇಟ್ ತೆರಿಗೆ ಶೇ. 40 ರಿಂದ 35 ಕ್ಕೆ ಇಳಿಕೆ
- ಕೆಲ ಹಣಕಾಸು ಆಸ್ತಿಗಳಲ್ಲಿ ಅಲ್ಪಾವಧಿ ಲಾಭದ ಮೇಲಿನ ತೆರಿಗೆ ಶೇ. 20ಕ್ಕೆ ಹೆಚ್ಚಳ
- ಎಲ್ಲಾ ಹಣಕಾಸು ಹಾಗೂ ಹಣಕಾಸೇತರ ಆಸ್ತಿಗ ಳಲ್ಲಿ ದೀರ್ಘಾವಧಿ ಲಾಭಕ್ಕೆ ಶೇ.12.5 ರ ತೆರಿಗೆ
- ಇ-ಕಾಮರ್ಸ್ ನಿರ್ವಾಹಕರ ಟಿಡಿಎಸ್ ತೆರಿಗೆ ಶೇ. ಒಂದರಿಂದ ಶೇ. 0.1 ಕ್ಕೆ ಇಳಿಕೆ
- ಆದಾಯ ತೆರಿಗೆ ವ್ಯತ್ಯಾಸ 50 ಲಕ್ಷ ರೂ.ಗಳಿಗಿಂತ ಹೆಚ್ಚಿದ್ದಲ್ಲಿ ಮಾತ್ರ ಮೂರರಿಂದ ಐದು ವರ್ಷಗಳ ನಡುವೆ ಆದಾಯ ತೆರಿಗೆ ಅಂದಾಜು ಮರುಪರಿಶೀಲನೆ
- ಆರು ತಿಂಗಳಲ್ಲಿ ಆದಾಯ ತೆರಿಗೆ ಕಾಯ್ದೆಯ ಸಮಗ್ರ ಮರುಪರಿಶೀಲನೆ
- ಜಿಎಸ್ಟಿ ಸರಳೀಕರಣ ಹಾಗೂ ಉಳಿದ ವಲಯಗಳಿಗೆ ವಿಸ್ತರಣೆ
- ಪ್ರಸಕ್ತ ಸಾಲಿನಲ್ಲಿ ವಿತ್ತೀಯ ಕೊರತೆ ಶೇ. 4.9, ಮುಂದಿನ ವರ್ಷ ಶೇ. 4.5 ರ ಗುರಿ
- ಕೃಷಿ ಹಾಗೂ ಸಂಬಂಧಿತ ವಲಯಗಳಿಗೆ 1.52 ಲಕ್ಷ ಕೋಟಿ ರೂ.
- ಬಂಡವಾಳ ಹೂಡಿಕೆಗೆ 11.11 ಲಕ್ಷ ಕೋಟಿ ರೂ.
- ಬಿಹಾರದ ನೀರಾವರಿ ಹಾಗೂ ಪ್ರವಾಹ ನಿರ್ಮೂಲನೆ ಯೋಜನೆಗೆ 11,500 ಕೋಟಿ ರೂ.
- ಆಂಧ್ರಪ್ರದೇಶಕ್ಕೆ 15,000 ಕೋಟಿ ರೂ.ಗಳ ವಿಶೇಷ ನೆರವು
ಬಂಗಾರ, ಮೊಬೈಲ್, ಕ್ಯಾನ್ಸರ್ ಔಷಧಿಗಳ ತೆರಿಗೆ ಇಳಿಕೆ
ನವದೆಹಲಿ, ಜು. 23 – ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಂಗಾರ, ಬೆಳ್ಳಿ ಹಾಗೂ ಇತರೆ ಅಮೂಲ್ಯ ಲೋಹಗಳ ಆಮದು ಮೇಲಿನ ತೆರಿಗೆ ತಗ್ಗಿಸಿದ್ದಾರೆ. ಮೊಬೈಲ್ ಹಾಗೂ ಕ್ಯಾನ್ಸರ್ಗೆ ಸಂಬಂಧಿಸಿದ ಔಷಧಗಳ ಬೆಲೆಯನ್ನು ಕಡಿಮೆ ಮಾಡಲಾಗಿದೆ.
ಆದರೆ, ಆಮದು ಮಾಡಿಕೊಳ್ಳುವ ತೋಟದ ಕೊಡೆಗಳು ಹಾಗೂ ಪ್ರಯೋಗಾಲಯದ ರಾಸಾಯನಿಕಗಳ ಮೇಲಿನ ತೆರಿಗೆ ಹೆಚ್ಚಿಸಲಾಗಿದೆ.
ಬಂಗಾರ ಹಾಗೂ ಬೆಳ್ಳಿ ಆಮದು ತೆರಿಗೆಯನ್ನು ಶೇ.6 ಮತ್ತು ಪ್ಲಾಟಿನಮ್ ತೆರಿಗೆ ಶೇ.6.4 ಕ್ಕೆ ಇಳಿಸಲಾಗಿದೆ. ದೇಶದ ಆಭರಣ ಮಾರುಕಟ್ಟೆಯ ಮೌಲ್ಯವರ್ಧನೆ ಗಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಔಷಧಿಗಳಾದ ಟ್ರಾಸ್ಟುಜುಮಾಬ್ ಡೆರುಕ್ಸಟೆಕಾನ್, ಒಸಿಮೆರ್ಟಿನಿಬ್ ಹಾಗೂ ಡುರ್ವಲುಮಾಬ್ ಮೇಲಿನ ತೆರಿಗೆಯನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ. ಎಕ್ಸ್ರೇ ಹಾಗೂ ಫ್ಲಾಟ್ ಪ್ಯಾನೆಲ್ ಡಿಟೆಕ್ಟರ್ ಮೇಲಿನ ತೆರಿಗೆಯನ್ನು ಶೇ.15 ರಿಂದ ಐದಕ್ಕೆ ಇಳಿಸಲಾಗಿದೆ.
ಮೊಬೈಲ್ ಫೋನ್, ಚಾರ್ಜರ್ ಹಾಗೂ ಮೊಬೈಲ್ ಉತ್ಪಾದನೆಗೆ ಬಳಸುವ ಕೆಲ ಘಟಕಗಳ ತೆರಿಗೆಯನ್ನು ಶೇ.15 ಕ್ಕೆ ಇಳಿಕೆ ಮಾಡಲಾಗಿದೆ. ಇದಕ್ಕೂ ಮುಂಚೆ ಮೊಬೈಲ್ ಫೋನ್ ಚಾರ್ಜರ್ ಹಾಗೂ ಮದರ್ ಬೋರ್ಡ್ಗಳ ಮೇಲೆ ಶೇ. 20ರ ಆಮದು ತೆರಿಗೆ ವಿಧಿಸಲಾಗುತ್ತಿತ್ತು.
ಮೊಬೈಲ್ ಫೋನ್ಗಳ ಉತ್ಪಾದನೆಗೆ ಬಳಸಲಾಗುವ ಬಿಡಿ ಭಾಗಗಳ ಮೇಲಿನ ತೆರಿಗೆಯನ್ನು ಸಹ ಕೇಂದ್ರ ಸರ್ಕಾರ ಇಳಿಕೆ ಮಾಡಿದೆ.
ಲೀಥಿಯಂ, ಕೊಬಾಲ್ಟ್ ಹಾಗೂ ಅಪರೂಪದ ಮೂಲವಸ್ತುಗಳ ಆಮದು ತೆರಿಗೆಯನ್ನೂ ಇಳಿಕೆ ಮಾಡಲಾಗಿದೆ. ಇವುಗಳು ಅಣು ವಿದ್ಯುತ್, ನವೀಕರಣ ಇಂಧನ, ಬಾಹ್ಯಾಕಾಶ, ರಕ್ಷಣೆ, ಟೆಲಿಕಾಂ ಹಾಗೂ ಉನ್ನತ ತಂತ್ರಜ್ಞಾನದ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಬಳಕೆಯಾಗುತ್ತವೆ.
4.1 ಕೋಟಿ ಯುವಕರಿಗೆ ಉದ್ಯೋಗ, ಕೌಶಲ್ಯ ಹಾಗೂ ಅವಕಾಶಗಳನ್ನು ಒದಗಿಸುವ ಐದು ವರ್ಷಗಳ ಯೋಜನೆಗೆ 2 ಲಕ್ಷ ಕೋಟಿ ರೂ ಒದಗಿಸಲಾಗಿದೆ. ಶಿಕ್ಷಣ, ಉದ್ಯೋಗ ಹಾಗೂ ಕೌಶಲ್ಯ ಯೋಜನೆಗಳಿಗೆ 1.48 ಲಕ್ಷ ಕೋಟಿ ರೂ. ನೀಡಲಾಗಿದೆ ಸೀತಾರಾಮನ್ ತಿಳಿಸಿದರು.
ಬಿಹಾರದ ಎಕ್ಸ್ಪ್ರೆಸ್ ವೇ, ವಿದ್ಯುತ್ ಘಟಕ, ಪಾರಂಪರಿಕ ಕಾರಿಡಾರ್ ಹಾಗೂ ಹೊಸ ವಿಮಾನ ನಿಲ್ದಾಣಗಳಿಗಾಗಿ 60,000 ಕೋಟಿ ರೂ. ನೀಡುವುದಾಗಿ ಸೀತಾರಾಮನ್ ಪ್ರಕಟಿಸಿದ್ದಾರೆ. ಬಿಹಾರದ ಮುಖ್ಯಮಂತ್ರಿ ಹಾಗೂ ಜೆಡಿಯು ನಾಯಕ ನಿತೀಶ್ ಕುಮಾರ್ ಅವರ ಬೆಂಬಲ ಕೇಂದ್ರ ಸರ್ಕಾರಕ್ಕೆ ಮಹತ್ವದ್ದಾಗಿದೆ. ಅಲ್ಲದೆ ಮುಂದಿನ ವರ್ಷ ಬಿಹಾರ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಬಜೆಟ್ ಅನುದಾನ ಗಮನಾರ್ಹವಾಗಿದೆ.
ಅದೇ ರೀತಿ ಆಂಧ್ರಪ್ರದೇಶಕ್ಕೆ ಹಲವು ಯೋಜನೆಗಳ ಮೂಲಕ 15,000 ಕೋಟಿ ರೂಪಾಯಿ ಒದಗಿಸಲಾಗಿದೆ. ಆಂಧ್ರಪ್ರದೇಶದ ಆಡಳಿತಾರೂಢ ಟಿಡಿಪಿ ಸಹ ಕೇಂದ್ರ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡುತ್ತಿದೆ.
ಮಧ್ಯಮ ವರ್ಗಕ್ಕೆ ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡಲಾಗಿದೆ. ತೆರಿಗೆ ನಿಗದಿಗಾಗಿ ಪರಿಗಣಿಸುವ ವಾರ್ಷಿಕ ಆದಾಯಕ್ಕೆ 75,000 ಡಿಡಕ್ಷನ್ ಪ್ರಕಟಿಸಲಾಗಿದೆ. ಇದು ಕಳೆದ ಬಾರಿಗೆ ಹೋಲಿಸಿದರೆ ಶೇಕಡ 50 ರಷ್ಟು ಹೆಚ್ಚಾಗಿದೆ. ಈ ಕ್ರಮದಿಂದಾಗಿ ತೆರಿಗೆದಾರರಿಗೆ ವರ್ಷಕ್ಕೆ 17,500 ರೂ.ಗಳ ವರೆಗೆ ಉಳಿತಾಯವಾಗಲಿದೆ.
ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುವ ಸಲುವಾಗಿ ಬಜೆಟ್ನಲ್ಲಿ ಕಂಪನಿಗಳಿಗೆ ನೆರವು ನೀಡುವ ಯೋಜನೆಗಳನ್ನು ಪ್ರಕಟಿಸಲಾಗಿದೆ. ಮೊದಲ ಬಾರಿಗೆ ಉದ್ಯೋಗಿಯಾದವರಿಗೆ ಒಂದು ತಿಂಗಳ ವೇತನವನ್ನು ನೀಡಲಾಗುವುದು. ನೇಮಕವಾದ ಮೊದಲ ನಾಲ್ಕು ವರ್ಷಗಳಿಗೆ ನಿವೃತ್ತಿ ನಿಧಿಯಲ್ಲಿ ಉದ್ಯೋಗಿ ಹಾಗೂ ಉದ್ಯೋಗದಾತ ಇಬ್ಬರಿಗೂ ನೆರವು ಸಿಗಲಿದೆ. ಇ.ಪಿ.ಎಫ್.ಒ. ದೇಣಿಗೆಯಲ್ಲಿ ಎರಡು ವರ್ಷಗಳಿಗೆ 3 ಸಾವಿರ ರೂ.ಗಳವರೆಗೆ ಮರು ಪಾವತಿ ಮಾಡಲಾಗುವುದು.
ಕೌಶಲ್ಯವೃದ್ಧಿಗೆ ಇಂಟರ್ನ್ಶಿಪ್ ಹಾಗೂ ಉನ್ನತ ಶಿಕ್ಷಣಕ್ಕೆ ಸಬ್ಸಿಡಿ ಸಾಲದ ಯೋಜನೆಗಳನ್ನು ಪ್ರಕಟಿಸಲಾಗಿದೆ. ಭಾರತದಲ್ಲಿ ನಗರ ಪ್ರದೇಶಗಳಲ್ಲಿ ನಿರುದ್ಯೋಗ ದರ ಶೇ. 6.7 ರಷ್ಟು ಇದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆದರೆ ನಿರುದ್ಯೋಗ ದರ ಇನ್ನೂ ಹೆಚ್ಚಾಗಿದೆ ಎಂದು ಖಾಸಗಿ ಅಧ್ಯಯನಗಳು ತಿಳಿಸಿವೆ.
2024 – 25 ರ ಸಾಲಿನಲ್ಲಿ ವಿತ್ತೀಯ ಕೊರತೆ ಶೇ. 4.9 ರಷ್ಟಿರಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಮಂಡಿಸಲಾಗಿದ್ದು ಹಂಗಾಮಿ ಬಜೆಟ್ನಲ್ಲಿ ವಿತ್ತೀಯ ಕೊರತೆ ಶೇ. 5.1 ರಷ್ಟು ಇರಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ತೆರಿಗೆ ಸಂಗ್ರಹ ಹಾಗೂ ರಿಸರ್ವ್ ಬ್ಯಾಂಕ್ನಿಂದ ಹೆಚ್ಚು ಡಿವಿಡೆಂಡ್ ದೊರೆತ ಕಾರಣ ವಿತ್ತೀಯ ಕೊರತೆ ಅಂದಾಜು ತಗ್ಗಿಸಲಾಗಿದೆ. ಮಾರುಕಟ್ಟೆಯಿಂದ ಪಡೆಯುವ ಒಟ್ಟು ಸಾಲವನ್ನು ಸಹ 14.01 ಲಕ್ಷ ಕೋಟಿ ರೂ.ಗಳಿಗೆ ಇಳಿಸಲಾಗಿದೆ.
ಕೃಷಿ ಹಾಗೂ ಸಂಬಂಧಿತ ವಲಯಗಳಿಗಾಗಿ 1.52 ಲಕ್ಷ ಕೋಟಿ ರೂ.ಗಳನ್ನು ಒದಗಿಸಲಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮೂರು ಕೋಟಿ ಕಡಿಮೆ ವೆಚ್ಚದ ಮನೆಗಳನ್ನು ನಿರ್ಮಿಸಲು ಪ್ರಸ್ತಾಪಿಸಲಾಗಿದೆ.
ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ ಸಾಲದ ನೆರವು, 12 ಕೈಗಾರಿಕಾ ಪಾರ್ಕ್ ಸ್ಥಾಪನೆ ಹಾಗೂ ಬಾಹ್ಯಾಕಾಶ ವಲಯಕ್ಕೆ 1,000 ಕೋಟಿ ರೂಗಳ ಬಂಡವಾಳ ನಿಧಿ ಸ್ಥಾಪಿಸುವುದಾಗಿಯೂ ಸೀತಾರಾಮನ್ ಪ್ರಕಟಿಸಿದ್ದಾರೆ.