ಶಿವಮೊಗ್ಗ, ಜು.22- ಮಲೆನಾಡಿನಲ್ಲಿ ಕಳೆದೆರಡು ದಿನಗಳಿಂದ ಆರ್ಭಟ ನಿಲ್ಲಿಸಿದ್ದ ಮುಂಗಾರು ಮಳೆ, ಸೋಮವಾರ ಮತ್ತೆ ನಿಧಾನವಾಗಿ ಸುರಿದಿದ್ದು, ತುಂಗಾ ಮತ್ತು ಭದ್ರಾ ನದಿಗಳಲ್ಲಿ ನೀರಿನ ಹರಿವು ಸೋಮವಾರ ಮತ್ತೆ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಗಾಜನೂರಿನ ತುಂಗಾ ಜಲಾಶಯಕ್ಕೆ ಸೋಮವಾರ ಬೆಳಗ್ಗೆ 33 ಸಾವಿರ ಕ್ಯೂಸೆಕ್ಸ್ ಇದ್ದ ಒಳ ಹರಿವು ಸಂಜೆ 35 ಸಾವಿರ ಕ್ಯೂಸೆಕ್ಸ್ ಗೆ ಏರಿಕೆ ಕಂಡಿದ್ದು, ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದರಿಂದಾಗಿ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಕೊಂಚು ಹೆಚ್ಚಾಗಿದೆ.
ಭದ್ರಾ ಒಳ ಹರಿವು ಮತ್ತೆ ಏರಿಕೆ : ಭದ್ರಾ ಜಲಾಶಯಕ್ಕೆ ಭಾನುವಾರ 23 ಸಾವಿರ ಕ್ಯೂಸೆಕ್ಸ್ ಇದ್ದ ಒಳ ಹರಿವು ಸೋಮವಾರ 25 ಸಾವಿರ ಕ್ಯೂಸೆಕ್ಸ್ಗೆ ಏರಿಕೆ ಆಗಿದೆ. ಸೋಮವಾರ ಸಂಜೆ ಜಲಾಶಯದ ನೀರಿನ ಮಟ್ಟ 167 ಅಡಿ ದಾಟಿದ್ದು, ಕಳೆದ ವರ್ಷಕ್ಕಿಂತ 23 ಅಡಿ ನೀರು ಹೆಚ್ಚು ಸಂಗ್ರಹವಾಗಿದೆ. ಕಳೆದ ವರ್ಷ ಈ ದಿನ ಜಲಾಶಯದಲ್ಲಿ 144 ಅಡಿ ನೀರಿತ್ತು. ಜಲಾಶಯದ ಗರಿಷ್ಟ ಮಟ್ಟ 186 ಅಡಿಗಳಾಗಿದ್ದು, ಜಲಾಶಯ ಭರ್ತಿಗೆ 19 ಅಡಿ ಮಾತ್ರ ಬಾಕಿ ಇದೆ.