ಜಿಲ್ಲಾಸ್ಪತ್ರೆಗೆ ಹುದ್ದೆಗಳ ಮಂಜೂರು ಮಾಡಲು ಕ್ರಮ : ಸಚಿವ ದಿನೇಶ್ ಗುಂಡೂರಾವ್

ಜಿಲ್ಲಾಸ್ಪತ್ರೆಗೆ ಹುದ್ದೆಗಳ ಮಂಜೂರು ಮಾಡಲು ಕ್ರಮ : ಸಚಿವ ದಿನೇಶ್ ಗುಂಡೂರಾವ್

ಚಾಮರಾಜ ಸರ್ಕಲ್ ಬಳಿಯ ಹಳೆಯ ಹೆರಿಗೆ ಆಸ್ಪತ್ರೆಗೆ ಸಚಿವ ದಿನೇಶ್ ಗೂಂಡೂರಾವ್ ಭೇಟಿ ನೀಡಿ ಪರಿಶೀಲಿಸಿದರು.  ಈ ವೇಳೆ ಆಸ್ಪತ್ರೆಯ ಅಭಿವೃದ್ಧಿಗೆ ಅನುದಾನ ನೀಡುವಂತೆ ಸಚಿವ ಶಾಮನೂರು ಮಲ್ಲಿಕಾರ್ಜುನ್ ಮನವಿ ಮಾಡಿದರು.

ದಾವಣಗೆರೆ, ಜು. 11 – ಜಿಲ್ಲಾ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಗೆ 400 ಹಾಸಿಗೆ ಸಾಮರ್ಥ್ಯಕ್ಕೆ ಅನುಗುಣವಾಗಿ ಹುದ್ದೆ ಮಂಜೂರು ಮಾಡಲಾಗಿತ್ತು. ಆದರೆ, ಈ ಆಸ್ಪತ್ರೆ ಈಗ 930 ಹಾಸಿಗೆಗಳನ್ನು ಹೊಂದಿದ್ದು, ಇದಕ್ಕೆ ಅನುಗುಣವಾಗಿ ಹುದ್ದೆಗಳನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಇಲ್ಲಿನ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಆಸ್ಪತ್ರೆಯ ಕಟ್ಟಡ ತುಂಬ ಹಳೆಯದಾಗಿದ್ದು, ಇದನ್ನು ದುರಸ್ತಿಗೊಳಿಸಿದರೆ ಪ್ರಯೋಜನವಾಗಲ್ಲ. ಇಡೀ ಕಟ್ಟಡವನ್ನು ಹೊಸದಾಗಿ ನಿರ್ಮಿಸಬೇಕಾದರೆ ಕನಿಷ್ಠ 100 ಕೋಟಿ ರೂ. ಬೇಕು. ಅಷ್ಟು ಅನುದಾನ ಒದಗಿಸಲು ಈಗ ಸಾಧ್ಯವಿಲ್ಲ. ಹಾಗಾಗಿ, ಪ್ರಸ್ತುತ ದಕ್ಷಿಣ ಬ್ಲಾಕ್ ತೆರವು ಮಾಡಿ ಹೊಸ ಕಟ್ಟಡ ನಿರ್ಮಾಣಕ್ಕೆ ರೂ. 20 ಕೋಟಿ ಬಿಡುಗಡೆ ಮಾಡಲಾಗುತ್ತದೆ ಎಂದರು.

ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು, ಇಲ್ಲಿನ ಆಸ್ಪತ್ರೆಗೆ ಇತರೆ ಜಿಲ್ಲೆಗಳಿಂದಲೂ ರೆಫರಲ್ ಆಗಿ ಹೆರಿಗೆಗಾಗಿ ಬರುತ್ತಿದ್ದು ತಿಂಗಳಿಗೆ 600 ರಿಂದ 700 ರಷ್ಟು ಹೆರಿಗೆಯಾಗುತ್ತಿದೆ ಮತ್ತು ನವಜಾತ ಶಿಶುಗಳು ಹಾಗೂ ಮಕ್ಕಳ ಚಿಕಿತ್ಸೆಗಾಗಿ ಹೆಚ್ಚು ಜನರು ಆಗಮಿಸುತ್ತಿರುವುದರಿಂದ ಈಗಿರುವ ಸ್ಥಳಾವಕಾಶ ಸಾಕಾಗುವುದಿಲ್ಲ. ಈಗಾಗಲೇ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣವಾಗಿದ್ದು, ಒಂದು ವಾರದಲ್ಲಿ ಅಲ್ಲಿಗೆ ಸ್ಥಳಾಂತರಿಸಲು ತಿಳಿಸಿ, ವಾರದಲ್ಲಿ ಟ್ರಾಮಾ ಕೇರ್ ಸೆಂಟರ್ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ ಮಾಡಲಾಗುತ್ತದೆ ಎಂದರು. 

 ಇಲ್ಲಿಗೆ ಎಂಆರ್‍ಐ ಸ್ಕ್ಯಾನ್ ಬೇಕೆಂದು ಬೇಡಿಕೆ ಇದ್ದು ಇನ್ನೆರಡು ತಿಂಗಳಲ್ಲಿ ನೀಡಲಾಗುತ್ತದೆ. ಶವಾಗಾರ ಸೇರಿದಂತೆ ಒಳಚರಂಡಿ, ಓವರ್‍ಹೆಡ್ ಟ್ಯಾಂಕ್, ಸೇರಿದಂತೆ ಮಕ್ಕಳ ನಿಗಾ ಘಟಕಕ್ಕೆ ವೆಂಟಿಲೇಟರ್, ಆರ್ಥೋ ವಿಭಾಗಕ್ಕೆ ಮಾದರಿ ಓಟಿ ಬೇಕೆಂದು ಸರ್ಜನ್ ಮನವಿ ಮಾಡಿದರು. ಆಸ್ಪತ್ರೆಯ ಬಳಕೆ ಅನುದಾನ ಮತ್ತು ಎಬಿಆರ್‍ಕೆ ಯಡಿ ಬರುವ ಅನುದಾನವನ್ನು ಆರೋಗ್ಯ ರಕ್ಷಾ ಸಮಿತಿಯಲ್ಲಿ ಅನುಮೋದನೆ ಪಡೆದು ಜಿಲ್ಲಾಧಿಕಾರಿಯವರಿಂದ ಮಂಜೂರಾತಿ ಪಡೆದು ಆಸ್ಪತ್ರೆಗೆ ಅಗತ್ಯವಿರುವ ಸೌಲಭ್ಯ ಕಲ್ಪಿಸಲು ಸರ್ಜನ್ ತಿಳಿಸಿ ಯೂಸರ್ ಫಂಡ್ ಮತ್ತು ಎಬಿಆರ್‍ಕೆಯಡಿ 5 ಕೋಟಿಯಷ್ಟು ಅನುದಾನವಿದ್ದು ಇದನ್ನು ವೆಚ್ಚ ಮಾಡಿ ಜನರಿಗೆ ಆರೋಗ್ಯ ಸೌಲಭ್ಯ ಕಲ್ಪಿಸಲು ತಿಳಿಸಿದರು. 

ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಎಲ್ಲಾ ವಿಧವಾದ ತಜ್ಞ ವೈದ್ಯರ ಜೊತೆಗೆ ಮೆಡಿಕಲ್ ಕಾಲೇಜ್ ತಜ್ಞ ವೈದ್ಯರು ಲಭ್ಯವಾಗುವುದರಿಂದ ಇಲ್ಲಿ ವಿನೂತನವಾದ ಶಸ್ತ್ರ ಚಿಕಿತ್ಸೆಗಳನ್ನು ಕೈಗೊಳ್ಳುವ ಅವಕಾಶ ಇದೆ. ಆರ್ಥೋ ವಿಭಾಗದಲ್ಲಿ ಎಲ್ಲಾ ಬಗೆಯ ಶಸ್ತ್ರ ಚಿಕಿತ್ಸೆ ಮಾಡಬಹುದು ಮತ್ತು ನೇತ್ರ ಚಿಕಿತ್ಸಾ ವಿಭಾಗದಲ್ಲಿಯು ರೆಟಿನಾ ಶಸ್ತ್ರ ಚಿಕಿತ್ಸೆಯನ್ನು ಇಲ್ಲಿ ಕೈಗೊಳ್ಳುವಂತಾಗಬೇಕು. ಇದರಿಂದ ಎಬಿಆರ್‍ಕೆಯಡಿ ಹೆಚ್ಚು ಅನುದಾನ ಲಭ್ಯವಾಗುವುದರಿಂದ ಆಸ್ಪತ್ರೆಯ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು. 

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮಾತನಾಡಿ ಆಸ್ಪತ್ರೆಗೆ ಬೇಕಾದ ಓವರ್‍ಹೆಡ್ ಟ್ಯಾಂಕ್ ಮತ್ತು ಆಸ್ಪತ್ರೆಯೊಳಗೆ ಪ್ರಮುಖ ರಸ್ತೆಗಳನ್ನು ಪಾಲಿಕೆ ಅಥವಾ ಇತರೆ ಸರ್ಕಾರದ ಯೋಜನೆಯಲ್ಲಿ ಕೈಗೊಳ್ಳಲಾಗುತ್ತದೆ. 

ಆಸ್ಪತ್ರೆಯ ಮೂಲಭೂತ ಸೌಕರ್ಯಕ್ಕಾಗಿ ಈಗಿರುವ 7 ಕೋಟಿಯನ್ನು ಇತರೆ ಸೌಲಭ್ಯಗಳಿಗಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ. ಚಿಗಟೇರಿ ಆಸ್ಪತ್ರೆ ಎಲ್ಲಾ ಮೂಲಭೂತ ಸೌಕರ್ಯ ಕಲ್ಪಿಸಲು ತಕ್ಷಣದ ಕ್ರಮವಾಗಿ ಅಂದಾಜು 50 ಕೋಟಿ ಅಗತ್ಯವಾಗಿದ್ದು ಈ ಅನುದಾನವನ್ನು ಸರ್ಕಾರದಿಂದ ತಂದು ದಾವಣಗೆರೆ ಜನರಿಗೆ ಆರೋಗ್ಯ ಸೌಕರ್ಯ ಕಲ್ಪಿಸಲಾಗುತ್ತದೆ ಎಂದರು.

 ಇನ್ನೊಂದು ವಾರದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಉದ್ಘಾಟನೆ ಮಾಡುವ ಮೂಲಕ ಜನರಿಗೆ ಇನ್ನಷ್ಟು ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ಎಂದರು.  

ಸಭೆಯಲ್ಲಿ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕರುಗಳಾದ ಕೆ.ಎಸ್.ಬಸವಂತಪ್ಪ, ದೇವೇಂದ್ರಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ
ಡಾ.ರಂದೀಪ್, ಎನ್‍ಹೆಚ್‍ಎಂ ಯೋಜನಾ ನಿರ್ದೇಶಕ ಡಾ.ನವೀನ್ ಭಟ್ ಪೈ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಷಣ್ಮುಖಪ್ಪ, ಜಿಲ್ಲಾ ಸರ್ಜನ್ ಡಾ. ನಾಗೇಂದ್ರಪ್ಪ ಹಾಗೂ ಚಿಗಟೇರಿ ಆಸ್ಪತ್ರೆ ವೈದ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!