ಮುದ್ರಣ ಮಾಧ್ಯಮದ ವಿಶ್ವಾಸಾರ್ಹತೆ ಕುಂದಿಲ್ಲ

ಮುದ್ರಣ ಮಾಧ್ಯಮದ ವಿಶ್ವಾಸಾರ್ಹತೆ ಕುಂದಿಲ್ಲ

ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಹೆಚ್.ಬಿ. ಮಂಜುನಾಥ್

ದಾವಣಗೆರೆ, ಜು.1- 21ನೇ ಶತಮಾತನದಲ್ಲಿ ಆಧುನಿಕ ದೃಶ್ಯಮಾಧ್ಯಮ ಎಷ್ಟೇ ಜನಪ್ರಿಯವಾದರೂ ಮುದ್ರಣ ಮಾಧ್ಯಮದ ವಿಶ್ವಾಸಾರ್ಹತೆ ಕುಂದಿಲ್ಲ ಎಂದು ಹಿರಿಯ ಪತ್ರಕರ್ತ  ಎಚ್.ಬಿ.ಮಂಜುನಾಥ್ ತಿಳಿಸಿದರು. 

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ನಗರದ ಲಕ್ಷ್ಮಿ ವೃತ್ತದಲ್ಲಿರುವ ಕರ್ನಾಟಕದ ಗಾಂಧಿ ಹರ್ಡೇಕರ್ ಮಂಜಪ್ಪ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ದೃಶ್ಯ ಮಾಧ್ಯಮಗಳು ಜನರನ್ನು ಆಕರ್ಷಿತರನ್ನಾಗಿ ಮಾಡಿವೆ. ಇದರಿಂದ ದೃಶ್ಯ ಮಾಧ್ಯಮಗಳ ಜನಪ್ರಿಯತೆ ಹೆಚ್ಚಿದೆ. ಆದರೂ ಮುದ್ರಣ ಮಾಧ್ಯಮದ ಮೇಲೆ ಜನರು ಇನ್ನೂ ವಿಶ್ವಾಸ ಇಟ್ಟುಕೊಂಡಿದ್ದಾರೆ. ಇದನ್ನು ಹೀಗೇ ಉಳಿಸಿಕೊಳ್ಳುವ ಸಂಕಲ್ಪ ಮಾಡುವ ಪವಿತ್ರ ದಿನವಿದು ಎಂದು ಅವರು ಹೇಳಿದರು.  ಜೊತೆಗೆ ಪತ್ರಿಕೆಯ ಆಕರ್ಷಣೆ ಅಲಂಕಾರಕ್ಕೆ ಆದ್ಯತೆ  ಕೊಡುವುದಕ್ಕಿಂತ  ವರದಿಗಳ  ಅಂತಃ ಸತ್ವದ ಕಡೆ ಹೆಚ್ಚು ಗಮನ ಕೊಡಬೇಕು. ಇದ ರಿಂದ ವಿಶ್ವಾಸಾರ್ಹತೆ ಮತ್ತಷ್ಟು ವೃದ್ಧಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಮಹಾನಗರ ಪಾಲಿಕೆ ಮಹಾಪೌರರಾದ  ವಿನಾಯಕ ಪೈಲ್ವಾನ್ ಮಾತನಾಡಿ, ರಾಜಕೀಯ ವ್ಯವಸ್ಥೆಯು ಕರ್ತವ್ಯ ವಿಮುಖರಾಗದಂತೆ ಪತ್ರಿಕೆಗಳು ಸದಾ ಎಚ್ಚರಿಸುತ್ತವೆ. ಇವತ್ತು ಪತ್ರಿಕಾ ದಿನಾಚರಣೆ ಹಗಲಿರುಳು ಸಮಾಜಕ್ಕಾಗಿ ದುಡಿಯುವ ಪತ್ರಕರ್ತರಿಗೆ ಶುಭಾಶಯಗಳು ಎಂದರು.

ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ಅವರು ಹರ್ಡೇಕರ್ ಮಂಜಪ್ಪ ಅವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ, ನಗರ ಪಾಲಿಕೆ ಸೇರಿದಂತೆ,  ಎಲ್ಲಾ ಇಲಾಖೆಗಳ ಸಾರ್ವಜನಿಕ ಆದೇಶಗಳು, ಸೂಚನೆಗಳು ನಾಗರಿಕರಿಗೆ ಸರಿಯಾಗಿ ತಲುಪುವಲ್ಲಿ ಪತ್ರಿಕೆಗಳ ಪಾತ್ರ ಮಹತ್ತರವಾಗಿದೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ ಮಾತನಾಡಿ, ಇಂದು ಹರ್ಡೇಕರ್ ಮಂಜಪ್ಪ ಪುತ್ಥಳಿಗೆ ಮಾಲಾರ್ಪಣೆ  ಮಾಡಿ ಗೌರವ ನಮನ  ಸಲ್ಲಿಸುವ ಮೂಲಕ ಸಾಂಕೇತಿಕವಾಗಿ ಪತ್ರಿಕಾ ದಿನಾಚರಣೆ ಆಚರಿಸಿದ್ದೇವೆ. ಈ ತಿಂಗಳ ಅಂತ್ಯದೊಳಗೆ ವಿಶೇಷವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು   ಎಂದು ತಿಳಿಸಿದರು.

ಹಿರಿಯ ಪತ್ರಕರ್ತರುಗಳಾದ ಬಕ್ಕೇಶ್ ನಾಗನೂರು, ಎ.ಎಲ್. ತಾರಾನಾಥ, ಮಂಜುನಾಥ ಗೌರಕ್ಕಳವರ್, ಮಂಜುನಾಥ ಕಾಡಜ್ಜಿ, ಓ.ಎನ್. ಸಿದ್ದಯ್ಯ ಒಡೆಯರ್ 

ಸಂಘದ ಜಿಲ್ಲಾ ಪದಾಧಿಕಾರಿಗಳಾದ ನಿಂ ಗೋಜಿರಾವ್, ಇಂದುಧರ್ ನಿಶಾನಿಮಠ್, ಚನ್ನವೀರಯ್ಯ, ಸೋಮಶೇಖರ್, ಚನ್ನಬಸವ ಶೀಲಾವಂತ್, ಮಹಮ್ಮದ್ ರಫಿ, ಅರ್.ಎಸ್. ತಿಪ್ಪೇಸ್ವಾಮಿ, ಎನ್.ಆರ್. ರವಿ, ವಿ.ಬಿ. ಅನಿಲ್ ಕುಮಾರ್, ರಾಜಶೇಖರ್, ಕೆ. ಜೈಮುನಿ, ಹನುಮಂತಪ್ಪ, ನರೇಂದ್ರ, ನಿಂಗರಾಜ್, ದಾನೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಖಜಾಂಚಿ ಎನ್.ವಿ. ಬದರಿನಾಥ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಸಿ. ವೇದಮೂರ್ತಿ ವಂದಿಸಿದರು.

error: Content is protected !!