ದಾವಣಗೆರೆ, ಏ. 28 – ಕರ್ನಾಟಕದಲ್ಲಿ ಮೊದಲ ಸುತ್ತಿನ ಚುನಾವಣೆಯ ನಂತರ, ಕಾಂಗ್ರೆಸ್ಗೆ ಖಾತೆ ತೆರೆಯುವ ವಿಶ್ವಾಸವೂ ಇಲ್ಲದಂತಾಗಿದೆ. ಈ ಬಾರಿ ಕರ್ನಾಟಕದಿಂದ ಒಂದು ಸೀಟಾದರೂ ದೊರೆತು, ಖಾತೆಯಾದರೂ ತೆರೆಯಲಿ ಎಂಬುದೇ ಅದರ ಚಿಂತೆಯಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ನಗರದ ಹೈಸ್ಕೂಲ್ ಮೈದಾನದಲ್ಲಿ ಬಿಜೆಪಿಯಿಂದ ಆಯೋಜಿಸಲಾಗಿದ್ದ ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿ ದಿರುವ ಗಾಯತ್ರಿ ಸಿದ್ದೇಶ್ವರ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಮತ ಯಾಚಿಸಲು ಸಮಾವೇಶ ಆಯೋಜಿಸಲಾಗಿತ್ತು.
ಕರ್ನಾಟಕದಲ್ಲಿ ಮೊದಲ ಸುತ್ತಿನ ಮತ ದಾನದ ನಂತರ ಕಾಂಗ್ರೆಸ್ನಲ್ಲಿ ಕೋಲಾಹಲವೇ ಉಂಟಾಗಿದೆ. ಬರುವ ಮೇ 7ರ ಎರಡನೇ ಸುತ್ತಿನಲ್ಲಾದರೂ ಒಂದು ಸೀಟು ಸಿಗಲಿ ಎಂಬ ಯೋಚನೆ ಕಾಂಗ್ರೆಸ್ನಲ್ಲಿದೆ. ದಾವಣಗೆರೆಯಲ್ಲಿ ಸೇರಿರುವ ಈ ಜನ ಸಮೂಹ ನೋಡಿದರೆ, ಕಾಂಗ್ರೆಸ್ ಪಕ್ಷದ ಪಾಪಕ್ಕೆ ಶಿಕ್ಷೆ ದೊರೆಯು ವುದು ಖಚಿತ ಎಂದು ಮೋದಿ ಹೇಳಿದರು.
ರಾಜ್ಯದೆಲ್ಲೆಡೆ ಈ ಬಾರಿ §ಫಿರ್ ಏಕ್ ಬಾರ್ ಮೋದಿ ಸರ್ಕಾರ್’ ಎಂಬ ಮಾತು ಪ್ರತಿಧ್ವನಿಸುತ್ತಿದೆ. ಲೋಕಸಭಾ ಚುನಾವಣೆಯ ಫಲಿತಾಂಶ ಬರುವ ಜೂನ್ 4 ಇಡೀ ಕರ್ನಾಟಕಕ್ಕೆ ಸಂಭ್ರಮವಾಗಲಿದೆ. ದಾವಣಗೆರೆಯ ವಿಶೇಷವಾದ ಬೆಣ್ಣೆ ದೋಸೆಯೊಂದಿಗೆ ಫಲಿತಾಂಶ ಸವಿಯಲು ಇಂದಿನಿಂದಲೇ ಸಿದ್ಧತೆ ಆರಂಭಿಸಿ. ಬೆಣ್ಣೆ ದೋಸೆಯ ಸ್ವಾದ ಇನ್ನಷ್ಟು ಹೆಚ್ಚಾಗಲಿದೆ ಎಂದೂ ಅವರು ಹೇಳಿದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ದೇಶವನ್ನು ಮುನ್ನಡೆಸುತ್ತಿದೆ. ಆದರೆ, ಕರ್ನಾಟಕದ ಕಾಂಗ್ರೆಸ್ ಸರ್ಕಾರ ಹಿಂದಕ್ಕೆ ತಳ್ಳುತ್ತಿದೆ. ವಿಕಸಿತ ಭಾರತಕ್ಕಾಗಿ 24 ಗಂಟೆಯೂ ಕೆಲಸ ಮಾಡಬೇಕು ಎಂಬುದು ಮೋದಿ ಮಂತ್ರವಾಗಿದೆ. ಆದರೆ, ಕಾಂಗ್ರೆಸ್ ಪಕ್ಷ ದೇಶವನ್ನು ಒಡೆಯುವ, ಅಭಿವೃದ್ಧಿಯನ್ನು ತಡೆಯುವ ಕೆಲಸ ಮಾಡುತ್ತಿದೆ ಎಂದವವರು ಆರೋಪಿಸಿದರು.
ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ಮುಖ್ಯ ಮಂತ್ರಿಯಾಗಿದ್ದಾಗ ಕರ್ನಾಟಕದ ಅಭಿವೃದ್ಧಿಗೆ ಕೆಲಸ ಮಾಡಿದ್ದರು. ಆದರೆ, ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿರುವರು ಪರಸ್ಪರ ಕಾಲೆಳೆಯುವುದರಲ್ಲಿ ತೊಡಗಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. ಪರೋಕ್ಷವಾಗಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ನಾರಿ ಶಕ್ತಿಗಾಗಿ ಮೋದಿ ಶ್ರಮ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೆಣ್ಣು ಮಕ್ಕಳ ಸ್ವಾವಲಂಬಿ ಜೀವನಕ್ಕೆ ಲಖ್ಪತಿ ದೀದಿ ಯೋಜನೆ ಜಾರಿಗೆ ತಂದಿದ್ದಾರೆ. ನಾರಿ ಶಕ್ತಿಗಾಗಿ ಮೋದಿ ಶ್ರಮಿಸುತ್ತಿದ್ದಾರೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಹೇಳಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಾರಿ ಶಕ್ತಿಯನ್ನು ವಿರೋಧಿಸುತ್ತಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದೂ ಅವರು ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನಸಾಮಾನ್ಯರ ಹಿತಕ್ಕಾಗಿ ಜಲಜೀವನ್ ಮಿಷನ್, ಉಜ್ವಲ ಯೋಜನೆ, ನಿರಂತರ ಜ್ಯೋತಿ, ಸ್ವಚ್ಛ ಭಾರತ, ಡಿಜಿಟಲ್ ಇಂಡಿಯಾ, ಕೃಷಿ ಸಮ್ಮಾನ್, ಮುದ್ರಾ ಮುಂತಾದ ದೂರದೃಷ್ಟಿ ಯೋಜನೆ ಜಾರಿಗೆ ತಂದಿದ್ದಾರೆ. ಆರ್ಥಿಕತೆ ವಿಶ್ವದಲ್ಲೇ ಐದನೇ ಸ್ಥಾನಕ್ಕೆ ಬಂದಿದ್ದು, ಮೂರನೇ ಸ್ಥಾನಕ್ಕೆ ತರಲು ಮೋದಿ ಗುರಿ ಹೊಂದಿದ್ದಾರೆ ಎಂದು ಹೇಳಿದರು.
ವಿಕಸಿತ ಭಾರತಕ್ಕಾಗಿ, ರೈತರ ಏಳಿಕೆಗಾಗಿ, ಹೆಣ್ಣು ಮಕ್ಕಳ ರಕ್ಷಣೆಗಾಗಿ, ಆರ್ಥಿಕತೆಗಾಗಿ ನಿಮ್ಮ ಮತ ಬಿಜೆಪಿಗೆ ನೀಡಬೇಕಿದೆ. ಮಹಿಳೆಯರು ಅಡುಗೆ ಮಾಡಲೂ ಸೈ, ಆಡಳಿತಕ್ಕೂ ಸೈ ಎಂಬುದನ್ನು ಸಾಬೀತು ಪಡಿಸಲಿದ್ದೇವೆ ಎಂದು ಗಾಯತ್ರಿ ತಿಳಿಸಿದರು. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕೆಲವೇ ದಿನಗಳ ಹಿಂದೆ ವಿದ್ಯಾರ್ಥಿನಿ ನೇಹಾ ಹತ್ಯೆ ಮಾಡಲಾಗಿದೆ. ನಲ್ಲೂರಿನಲ್ಲೂ ಇಬ್ಬರು ಯುವಕರಿಗೆ ಚೂರಿ ಇರಿತವಾಗಿದೆ. ಗಂಗಾವತಿಯಲ್ಲಿ ಜೈ ಶ್ರೀರಾಮ್ ಘೋಷಣೆ ಮಾಡಿದವರಿಗೆ ಹಲ್ಲೆ ಮಾಡಲಾಗಿದೆ. ರಾಜ್ಯದ ಜನರ ರಕ್ಷಣೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದವರು ಟೀಕಿಸಿದರು.
ವರ್ಷಕ್ಕೊಂದು ಪ್ರಧಾನಿ ಸೂತ್ರಕ್ಕೆ ಮತ ಪೋಲು ಮಾಡಬೇಡಿ
ಪ್ರತಿಪಕ್ಷಗಳ ಐ.ಎನ್.ಡಿ.ಐ. ಒಕ್ಕೂಟವು ವರ್ಷಕ್ಕೊಬ್ಬರನ್ನು ಪ್ರಧಾನ ಮಂತ್ರಿ ಮಾಡುವ ಸೂತ್ರ ಹೊಂದಿದೆ. ಹೀಗಾದರೆ ದೇಶ ಹಾಗೂ ಜನರ ಗತಿ ಏನಾಗಲಿದೆ? ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ. ಯಾರು ಪ್ರಧಾನ ಮಂತ್ರಿಯಾಗಬೇಕು ಎಂಬ ಹೆಸರೂ ಅವರ ಬಳಿ ಇಲ್ಲ. ದೇಶದ ಪ್ರಧಾನ ಮಂತ್ರಿ ಹುದ್ದೆಯನ್ನು ಕಣ್ಣು ಮುಚ್ಚಿ ಕೊಡಲಾಗದು. ಅವರ ಹಿನ್ನೆಲೆ ನೋಡಬೇಕಾಗುತ್ತದೆ ಎಂದವರು ಹೇಳಿದರು. ಹೀಗಾಗಿ ಜನರು ಅಪ್ಪಿ ತಪ್ಪಿಯೂ, ಇಂಥವರನ್ನು ಬೆಂಬಲಿಸಲು ಅಮೂಲ್ಯ ಮತ ಪೋಲು ಮಾಡಬಾರದು ಎಂದು ಮೋದಿ ಕರೆ ನೀಡಿದರು.
ಬರ ಪರಿಹಾರ; ಬಿಜೆಪಿಯೇ ಮುಂದೆ : ಬೊಮ್ಮಾಯಿ
ಕಾಂಗ್ರೆಸ್ ಪಕ್ಷದವರು ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಸುಳ್ಳು ಹೇಳುತ್ತಿದ್ದಾರೆ. ಮತಗಳಿಗಾಗಿ, ಚುನಾವಣೆಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು.
2004-14ರ ನಡುವೆ ಕರ್ನಾಟಕ ಸರ್ಕಾರವು 19,579 ಕೋಟಿ ರೂ.ಗಳ ಪರಿಹಾರಕ್ಕಾಗಿ ಕೇಂದ್ರಕ್ಕೆ ಬೇಡಿಕೆ ಸಲ್ಲಿಸಿತ್ತು. ಆದರೆ, ಈ ಅವಧಿಯಲ್ಲಿ ಕೇವಲ 1,054 ಕೋಟಿ ರೂ. ಬಿಡುಗಡೆ ಮಾಡಿತ್ತು.
ಮತ್ತೊಂದೆಡೆ 2014-24ರ ನಡುವೆ ಮೋದಿ ಸರ್ಕಾರದ ಎದುರು 18,747 ಕೋಟಿ ರೂ.ಗಳ ಬೇಡಿಕೆ ಇಡಲಾಗಿತ್ತು. ಮೋದಿ ಸರ್ಕಾರ 10 ಸಾವಿರ ಕೋಟಿ ರೂ. ಕೊಟ್ಟಿದೆ ಎಂದವರು ಹೇಳಿದರು.
ಬಿಜೆಪಿ ಮುಖಂಡರ ಅಭಿಮತ
ಕಾಂಗ್ರೆಸ್ ಸರ್ಕಾರದಲ್ಲಿ ಹೆಣ್ಣು ಮಕ್ಕಳಿಗೆ ಹಾಗೂ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ. ನಮ್ಮ ಹೆಣ್ಣು ಮಕ್ಕಳ ರಕ್ಷಣೆಯಾಗಬೇಕಾದರೆ ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನ ಮಂತ್ರಿ ಆಗಬೇಕು.
– ಎಂ.ಪಿ. ರೇಣುಕಾಚಾರ್ಯ, ಮಾಜಿ ಸಚಿವ
ದೆಹಲಿಯಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಬೇಕು. ದಾವಣಗೆರೆಯಿಂದ ಗಾಯತ್ರಿ ಸಿದ್ದೇಶ್ವರ ಸಂಸದೆಯಾಗಬೇಕು. ಅಡುಗೆ ಮಾಡಲೂ ಸೈ, ಆಡಳಿತಕ್ಕೂ ಸೈ ಎಂಬ ರೀತಿಯಲ್ಲಿ ಗಾಯತ್ರಿ ಸಿದ್ದೇಶ್ವರ ಅವರಿದ್ದಾರೆ.
– ಎಸ್.ವಿ. ರಾಮಚಂದ್ರ, ಮಾಜಿ ಶಾಸಕ
1,300 ಕೋಟಿ ರೂ. ಹಣ ಭದ್ರಾ ನಾಲೆ ಆಧುನೀಕರಣಕ್ಕೆ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಬಿಡುಗಡೆ ಮಾಡಲಾಗಿತ್ತು. ಇದರಿಂದಾಗಿ ಕೊನೆ ಭಾಗದವರೆಗೆ ನೀರು ಬಂದಿತ್ತು. ಈಗ ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ.
– ಬಿ.ಪಿ. ಹರೀಶ್, ಶಾಸಕ
ಸಿದ್ದರಾಮಯ್ಯ ಸರ್ಕಾರಕ್ಕೆ ವರ್ಷವಾದರೂ ಅಭಿವೃದ್ಧಿ ಕೆಲಸ ಮಾಡಿಲ್ಲ. ಉದ್ಯೋಗ ಕೊಟ್ಟಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಮಾಡದೇ ಸರ್ಕಾರ ನಿಷ್ಕ್ರಿಯವಾಗಿದೆ. ಗ್ಯಾರಂಟಿ ಹೆಸರಿನಲ್ಲಿ ಸರ್ಕಾರದ ಖಜಾನೆ ಖಾಲಿ ಮಾಡಿ ದಿವಾಳಿಯಾಗಿದೆ. ಕಾಂಗ್ರೆಸ್ ದುರಾಡಳಿತದಿಂದ ಪಕ್ಷ ನಶಿಸಿ ಹೋಗುತ್ತಿದೆ. ಶಾಸಕರು ಹಾಗೂ ಸಚಿವರ ನಡುವೆ ಭ್ರಷ್ಟಾಚಾರದ ಪೈಪೋಟಿ ನಡೆದಿದೆ.
– ಗೋವಿಂದ ಕಾರಜೋಳ, ಮಾಜಿ ಸಚಿವ
ಮುಂದಿನ ದಿನಗಳಲ್ಲಿ ನದಿಗಳ ಜೋಡಣೆ ಜಾರಿಗೆ ಬರಬೇಕಿದೆ. ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದರೆ ಈ ದಿಸೆಯಲ್ಲಿ ಕ್ರಮವಾಗುವ ವಿಶ್ವಾಸ ಇದೆ.
– ಮಾಡಾಳ್ ವಿರೂಪಾಕ್ಷಪ್ಪ, ಮಾಜಿ ಶಾಸಕ
ಸುಭದ್ರತೆ, ಸುರಕ್ಷತೆ, ಕಾನೂನು ಸುವ್ಯವಸ್ಥೆ ಹಾಗೂ ರೈತರ ನೆಮ್ಮದಿಗಾಗಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು. ಆರ್ಥಿಕತೆಯಲ್ಲಿ ಭಾರತ ಮೊದಲ ಸ್ಥಾನಕ್ಕೆ ಬರಲು ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕಿದೆ.
– ಕರುಣಾಕರ ರೆಡ್ಡಿ, ಮಾಜಿ ಸಚಿವ
28 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ವಾತಾವರಣ ರೂಪುಗೊಂಡಿದೆ. ನರೇಂದ್ರ ಮೋದಿ ದೇಶಕ್ಕೆ ಅನಿವಾರ್ಯ. ಭವಿಷ್ಯದ ಭಾರತದ ನಿರ್ಮಾಣಕ್ಕೆ ಅವರು ಮತ್ತೆ ಪ್ರಧಾನಿಯಾಗಬೇಕು. ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಿಗೆ ವಾರಂಟಿ ಇಲ್ಲ. ಲೋಕಸಭಾ ಚುನಾವಣೆ ನಂತರ ಬಹುಶಃ ಎಲ್ಲ ಗ್ಯಾರಂಟಿಗಳು ನಿಲ್ಲಲಿವೆ.
-ಹೆಚ್.ಎಸ್. ಶಿವಶಂಕರ್, ಮಾಜಿ ಶಾಸಕ
ಕಾಂಗ್ರೆಸ್ನವರು ಹತ್ತು ವರ್ಷಗಳಲ್ಲಿ ರೈತರ 72 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ. ಆದರೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರೈತರು ಸಾಲಕ್ಕೆ ಸಿಲುಕಬಾರದು ಎಂದು ಐದೂವರೆ ವರ್ಷಗಳಲ್ಲಿ 2.72 ಲಕ್ಷ ಕೋಟಿ ರೂ.ಗಳನ್ನು ಅವರ ಖಾತೆಗೆ ಜಮಾ ಮಾಡಿದ್ದಾರೆ.
– ಬಿ.ಸಿ. ಪಾಟೀಲ್, ಮಾಜಿ ಸಚಿವ
ದಾವಣಗೆರೆ ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳಲ್ಲಿ 13 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಕೆಲಸ ಆಗಿದೆ. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನ ಮಂತ್ರಿಯಾಗಲು ಬಿಜೆಪಿ ಅಭ್ಯರ್ಥಿಗಳನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು.
– ಜಿ.ಎಂ. ಸಿದ್ದೇಶ್ವರ, ಸಂಸದ
ತಾತ್ಕಾಲಿಕ ಗ್ಯಾರಂಟಿ ಹಿಂದೆ ಹೋದರೆ ಶಾಶ್ವತ ನಷ್ಟವಾಗಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ 2047ರ ವೇಳೆಗೆ ಭಾರತವನ್ನು ಮೊದಲ ಸ್ಥಾನಕ್ಕೆ ತರುವ ಗುರಿ ಹೊಂದಿದ್ದಾರೆ. ಉತ್ತಮ ಭವಿಷ್ಯ, ಸ್ವಾಭಿಮಾನದ ಬದುಕಿಗಾಗಿ ಮೋದಿ ಮತ್ತೆ ಪ್ರಧಾನಿಯಾಗಬೇಕು.
– ಸುಮಲತ ಅಂಬರೀಶ್, ಸಂಸದೆ
ತಗ್ಗದೇ, ಜಗ್ಗದೇ, ನಿಲ್ಲದೇ ಮುನ್ನಡೆಯುವೆ
2024ರ ಈ ರೀತಿಯ ಉತ್ಸಾಹದ ಬೆಂಬಲ ಹಿಂದೆಂದೂ ನೋಡಿರಲಿಲ್ಲ. ಈ ಬಾರಿ ದೇಶದಲ್ಲಿ 2014 ಹಾಗೂ 2019ರಲ್ಲಿ ಕಂಡರಿಯದಂತಹ ವಾತಾವರಣ ಉಂಟಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ದೇಶದ ಜನತೆ ನನ್ನ ಕೆಲಸವನ್ನು ಅಳೆದೂ ತೂಗಿ ನೋಡಿದ್ದಾರೆ. ನನ್ನನ್ನು ಒರೆಗೆ ಹಚ್ಚಿದ್ದಾರೆ. ಈಗ ತಾಯಂದಿರು ಹಾಗೂ ಸಹೋದರಿಯರು ನನಗೆ ಅಭೇದ್ಯ ರಕ್ಷಾ ಕವಚವಾಗಿದ್ದಾರೆ ಎಂದವರು ಹೇಳಿದರು.
ರಾಜಕಾರಣಕ್ಕೆ ಕಾಂಗ್ರೆಸ್ನಿಂದಾಗಿ ಕೆಟ್ಟ ಹೆಸರು ಬಂದಿದೆ. ಇಂತಹ ಕ್ಷೇತ್ರದಲ್ಲೂ ನನಗೆ ಜನರಿಂದ ಈ ರೀತಿಯ ಆಶೀರ್ವಾದ ಸಿಗುತ್ತಿರುವುದು ಪೂರ್ವ ಜನ್ಮಗಳ ಪುಣ್ಯ ಎಂದು ಮೋದಿ ಹೇಳಿದರು.
ಇಂತಹ ಆಶೀರ್ವಾದಕ್ಕೆ ನಾನು ಮಾತುಗಳಿಂದ ಉತ್ತರ ಹೇಳಲು ಸಾಧ್ಯವಾಗದು. ಮೌನ ಸಮರ್ಪಣೆ ಹಾಗೂ ತಲೆ ತಗ್ಗಿಸಿ ಪ್ರಣಾಮ ಮಾಡಬೇಕು ಎಂದು ಕೈ ಮುಗಿದು ಹೇಳಿದರು.
ನಾ ಥಕೂಂಗ, ನಾ ರುಕೂಂಗ, ನಾ ಝುಕೂಂಗ (ತಗ್ಗದೇ, ಜಗ್ಗದೇ, ನಿಲ್ಲದೇ ಮುನ್ನಡೆಯುತ್ತೇನೆ). ಪ್ರತಿ ಕ್ಷಣವೂ ಜನತೆಗಾಗಿ ಹೋರಾಟ ನಡೆಸುತ್ತೇನೆ. ಇದೇ ನನ್ನ ಗ್ಯಾರಂಟಿ ಎಂದವರು ಹೇಳಿದರು.
ಕಾಂಗ್ರೆಸ್ಗೆ ಒಂದು ಸ್ಥಾನವಾದರೂ ಸಿಗಲಿ ಎಂಬ ಚಿಂತೆ
ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಕಾಂಗ್ರೆಸ್ ಖಾತೆ ತೆರೆಯುವ ಸಾಧ್ಯತೆ ಮುಗಿದಿದೆ. ಏನಾದರೂ ಆಗಿ ಒಂದು ಸ್ಥಾನವಾದರೂ ಸಿಗಲಿ ಎಂಬ ಚಿಂತೆ ಕಾಂಗ್ರೆಸ್ನದ್ದಾಗಿದೆ.
ಈ ಬಾರಿಯ ಚುನಾವಣೆ ನಂತರ ಕಾಂಗ್ರೆಸ್ನ ಅಂತರ್ಕಲಹ ಬೀದಿಗೆ ಬರಲಿದೆ. ಈ ಹಿಂದೆ ಸೋತಾಗಲೆಲ್ಲ ಮತ ಯಂತ್ರದ ನೆಪ ಹೇಳುತ್ತಿದ್ದರು. ಮತ ಯಂತ್ರದ ಕಾರಣದಿಂದ ಸೋತೆವು, ಠೇವಣಿ ಕಳೆದುಕೊಳ್ಳುತ್ತಿದ್ದೆವು ಎನ್ನುತ್ತಿದ್ದರು. ಚುನಾವಣೆ ಬಂದಾಗಲೆಲ್ಲ ಮತ ಯಂತ್ರದ ಜಪಮಾಲೆ ಮಾಡುತ್ತಿದ್ದರು. ಆದರೆ, ಈಗ ಸುಪ್ರೀಂ ಕೋರ್ಟ್ ಎಂತಹ ಕಪಾಳ ಮೋಕ್ಷ ಮಾಡಿದರೆ ಎಂದರೆ, ಮತ ಯಂತ್ರದ ನೆಪ ಹೇಳಲಾಗದು. ಸೋಲಿಗೆ ಯಾವ ನೆಪ ಹೇಳಬೇಕು ಎಂಬ ಚಿಂತೆಯಲ್ಲಿ ತೊಡಗಿದೆ.
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿ ಸಿದಾಗ ಮೊದಲು ಗ್ಯಾಸ್ ಸಿಲಿಂಡರ್ನಿಂದ ಸಂಭವಿಸಿದ್ದು ಎಂದು ಕಾಂಗ್ರೆಸ್ನವರು ಹೇಳುತ್ತಾರೆ. ನಂತರ ಉದ್ಯಮದ ದ್ವೇಷ ಎಂದರು. ಹುಬ್ಬಳ್ಳಿಯಲ್ಲಿ ಹಾಡು ಹಗಲೇ ಕಾಲೇಜು ಕ್ಯಾಂಪಸ್ನಲ್ಲಿ ವಿದ್ಯಾರ್ಥಿನಿ ಹತ್ಯೆ ಆಗಿದೆ. ಇದರಲ್ಲೂ ಕಾಂಗ್ರೆಸ್ನವರು ವೋಟ್ ಬ್ಯಾಂಕ್ ಹುಡುಕುತ್ತಿದ್ದಾರೆ. ನಾವು ಪಿ.ಎಫ್.ಐ. ನಿಷೇಧ ಮಾಡಿ, ಅದರ §ತೀಸ್ ಮಾರ್ ಖಾನ್’ಗಳನ್ನು (ಪ್ರಮುಖರನ್ನು) ಜೈಲಿಗೆ ಹಾಕಿದ್ದೇವೆ. ಕಾಂಗ್ರೆಸ್ನವರು ಅದೇ ಸಂಘಟನೆಯವರ ಜೊತೆ ಕೈ ಜೋಡಿಸಿದ್ದಾರೆ. ಸುರಕ್ಷತೆಯ ಗ್ಯಾರಂಟಿ ಎಂದರೆ ಮೋದಿ. ಕಳೆದ ಹತ್ತು ವರ್ಷಗಳಿಂದ ನೋಡಿದ್ದೀರಿ. §ಘರ್ ಮೇ ಘುಸ್ ಕೆ ಮಾರ್ತೇ ಹೈ’. (ಶತ್ರುಗಳ ನೆಲೆಗೆ ನುಗ್ಗಿ ದಾಳಿ ನಡೆಸುತ್ತೇವೆ). ನನಗೆ ದೇಶದ ಸುರಕ್ಷತೆಯೇ ಅತಿ ದೊಡ್ಡ ಆದ್ಯತೆ.
ಕಾಂಗ್ರೆಸ್ನವರಿಗೆ ಕರ್ನಾಟಕದ ಏಳಿಗೆಯ ಕೆಲಸಕ್ಕೆ ಪುರುಸೊತ್ತಿಲ್ಲ. ಗುಂಪುಗಾರಿಕೆ, ವಂಶಾಡಳಿತ ಹಾಗೂ ತಪ್ಪು ನೀತಿಗಳ ಮೂಲಕ ಕರ್ನಾಟಕದ ಕಾಂಗ್ರೆಸ್ ರಾಜ್ಯದ ಜನರ ಭವಿಷ್ಯದ ಜೊತೆ ಚಲ್ಲಾಟ ಆಡುತ್ತಿದೆ ಎಂದು ಟೀಕಿಸಿದರು.
ಕರ್ನಾಟಕದ ವಿಜ್ಞಾನಿ ಕೆ. ಕಸ್ತೂರಿ ರಂಗನ್ ನೇತೃತ್ವದಲ್ಲಿ 20 ಲಕ್ಷಕ್ಕೂ ಹೆಚ್ಚು ಜನರು ಸಮಾಲೋಚನೆ ನಡೆಸಿ ನೂತನ ಶಿಕ್ಷಣ ನೀತಿ ರೂಪಿಸಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ವೋಟ್ ಬ್ಯಾಂಕ್ ರಾಜಕೀಯ ಖುಷಿ ಪಡಿಸಲು ಅದನ್ನೂ ರದ್ದು ಮಾಡಿದೆ. ಆ ಮೂಲಕ ಯುವ ಪೀಳಿಗೆಗೆ ಹೆಚ್ಚು ನಷ್ಟವಾಗಿದೆ. ರಾಜಕೀಯಕ್ಕಾಗಿ ಜನತೆಯ ಭವಿಷ್ಯ ಹಾಳುವ ಮಾಡುವ ಅಧಿಕಾರ ಯಾರಿಗೂ ಇಲ್ಲ ಎಂದೂ ಮೋದಿ ಹೇಳಿದರು.
ದಶಕಗಳಿಂದ ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರ ಹಾಗೂ ಹಗರಣಗಳ ಹಾದಿಯಲ್ಲಿ ನಡೆದಿದೆ. ಕೇಂದ್ರ ಸರ್ಕಾರದಿಂದ 1 ರೂ. ಕಳಿಸಿದರೆ, ಬಡವರಿಗೆ 15 ಪೈಸೆ ತಲುಪುತ್ತದೆ ಎಂದು ಕಾಂಗ್ರೆಸ್ನ ಆಗಿನ ಪ್ರಧಾನ ಮಂತ್ರಿ ಹೇಳಿದ್ದರು. ಬಡವರ 85 ಪೈಸೆ ಕಸಿಯುತ್ತಿದ್ದ §ಕೈ’ ಯಾವುದು? ಎಂದು ಮೋದಿ ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.
10 ಕೋಟಿ ನಕಲಿ ಫಲಾನುಭವಿಗಳನ್ನು ಸೃಷ್ಟಿಸಿ, ಅವರ ಹೆಸರಿನಲ್ಲಿ ಹಣ ಕಬಳಿಸಲಾಗುತ್ತಿತ್ತು. ಈ ಹಣ ಕಾಂಗ್ರೆಸ್ ವ್ಯವಸ್ಥೆಗೆ ಸೇರ್ಪಡೆಯಾಗುತ್ತಿತ್ತು. ಇಂತಹ ನಕಲಿಗಳ ಸಂಖ್ಯೆ ಕರ್ನಾಟಕದ ಜನಸಂಖ್ಯೆಗಿಂತಲೂ ಹೆಚ್ಚಾಗಿತ್ತು. ಆಧಾರ್ ಹಾಗೂ ಡಿ.ಬಿ.ಟಿ. ಜೋಡಣೆಯಿಂದಾಗಿ ಬಡವರಿಗೆ ಹಕ್ಕು ನೀಡಲಾಗಿದೆ. ಈಗ ಮೋದಿ ಕಳಿಸುವ ಪ್ರತಿ ರೂಪಾಯಿಯೂ ಬಡವರಿಗೆ ತಲುಪುತ್ತದೆ ಎಂದರು.
2014ಕ್ಕೆ ಮುಂಚೆ ಕರ್ನಾಟಕದಲ್ಲಿ ಕೇವಲ 15 ರಾಷ್ಟ್ರೀಯ ಹೆದ್ದಾರಿಗಳಿದ್ದವು. ಈಗ ರಾಷ್ಟ್ರೀಯ ಹೆದ್ದಾರಿಗಳ ಸಂಖ್ಯೆ 47ಕ್ಕೆ ತಲುಪಿದೆ. ದಾವಣಗೆರೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೆ ಬಂದಿದೆ. ಹರಿಹರ ರೈಲ್ವೆ ನಿಲ್ದಾಣ ಉನ್ನತೀಕರಣವಾಗುತ್ತಿದೆ, ತುಮಕೂರು – ದಾವಣಗೆರೆ ನೇರ ಸಂಪರ್ಕ ಯೋಜನೆ ಜಾರಿಗೆ ಬರುತ್ತಿದೆ. ಎಸ್.ಟಿ.ಪಿ.ಐ. ಉಪ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದವರು ಹೇಳಿದರು.
ವೇದಿಕೆಯ ಮೇಲೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಗೋವಿಂದ ಕಾರಜೋಳ, ಸಂಸದ ಜಿ.ಎಂ. ಸಿದ್ದೇಶ್ವರ, ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಸಂಸದೆ ಸುಮಲತ ಅಂಬರೀಷ್, ಪರಿಷತ್ ಸದಸ್ಯ ನವೀನ್, ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ್, ಎಂ.ಪಿ. ರೇಣುಕಾಚಾರ್ಯ, ಕರುಣಾಕರ ರೆಡ್ಡಿ, ಬಿ.ಸಿ. ಪಾಟೀಲ್, ಹರಿಹರ ಶಾಸಕ ಬಿ.ಪಿ. ಹರೀಶ್, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್, ಮಾಜಿ ಶಾಸಕರಾದ ಹೆಚ್.ಎಸ್. ಶಿವಶಂಕರ್, ಮಾಡಾಳ್ ವಿರೂಪಾಕ್ಷಪ್ಪ, ಎಸ್.ವಿ. ರಾಮಚಂದ್ರ, ಹೆಚ್.ಪಿ. ರಾಜೇಶ್, ಬಸವರಾಜ ನಾಯ್ಕ, ಉಪ ಮೇಯರ್ ಯಶೋದ ಎಗ್ಗಪ್ಪ, ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿಸ್ವಾಮಿ, ಮುಖಂಡರಾದ ಅರುಣ್ ಕುಮಾರ್ ಪೂಜಾರ್, ರಾಜು ಕುರುಡಗಿ, ಚಿದಾನಂದಪ್ಪ, ಮಾಡಾಳ್ ಮಲ್ಲಿಕಾರ್ಜುನ್, ನಾಗರಾಜ್ ಲೋಕಿಕೆರೆ, ಬಿ.ಜಿ. ಅಜಯ್ ಕುಮಾರ್, ಆನಂದಪ್ಪ, ಡಾ. ಬಸವರಾಜ್ ಕೇಲಗಾರ್, ವೀರೇಶ್ ಹನಗವಾಡಿ, ಬಿ.ಎಸ್. ಜಗದೀಶ್, ಅನಿಲ್ ಮೆಣಸಿನಕಾಯಿ ಮತ್ತಿತರರು ಉಪಸ್ಥಿತರಿದ್ದರು.