ದಾವಣಗೆರೆ, ಮಾ. 25- ಮಿತಿ ಮೀರಿದ ಸಂಭ್ರಮ, ಒಂದಿಷ್ಟು ವಿಕೃತಿಗಳ ನಡುವೆ ನಗರದಲ್ಲಿ ಸೋಮವಾರ ಹೋಳಿ ಹಬ್ಬ ಜರುಗಿತು.
ಮಕ್ಕಳು, ಯುವಕ, ಯುವತಿಯರು, ವೃದ್ಧರಾದಿಯಾಗಿ ಬಣ್ಣದಾಟದಲ್ಲಿ ಮಿಂದೆದ್ದರು. ಪರಸ್ಪರ ಬಣ್ಣ ಹಚ್ಚುತ್ತಾ ಹ್ಯಾಪಿ ಹೋಳಿ ಎನ್ನುತ್ತಾ ಸಂಭ್ರಮಿಸಿದರು. ಬೆಳಿಗ್ಗೆ 8 ಗಂಟೆಯಿಂದಲೇ ರಂಗಿನಾಟ ಶುರುವಾಯಿತು. ಮಧ್ಯಾಹ್ನ 1 ಗಂಟೆಯಾದರೂ `ಬಣ್ಣದ’ ಯುವಕರು ಬೈಕ್ಗಳಲ್ಲಿ ತಿರುಗಾಡುತ್ತಿದ್ದರು.
10 ಗಂಟೆ ವೇಳೆಗೆ ರಾಂ ಅಂಡ್ ಕೋ ವೃತ್ತಕ್ಕೆ ಯುವಕ-ಯುವತಿಯರ ಪಡೆ ಹರಿದು ಬರಲಾರಂಭಿಸಿತು. ಪ್ರತಿ ವರ್ಷದಂತೆಯೇ ಈ ವರ್ಷವೂ ಬಿಸಿಲನ್ನೂ ಲೆಕ್ಕಿಸದೆ ಡಿಜೆ ಸದ್ದಿಗೆ ಯುವಕರು ಹೆಜ್ಜೆ ಹಾಕಿದರು. ಕುಣಿತದ ಕಿಚ್ಚು ಹೆಚ್ಚಿಸಲು ಮೇಲಿನಿಂದ ಕಾರಂಜಿಯಂತೆ ನೀರು ಸಿಂಪಡಿಸುವ ವ್ಯವಸ್ಥೆ ಮಾಡಲಾಗಿತ್ತು.
ವೃತ್ತದಲ್ಲಿರುವ ಸಿದ್ಧಿ ವಿನಾಯಕ ದೇವಸ್ಥಾನದ ಎಡ ಭಾಗದಲ್ಲಿ ಯುವತಿಯರಿಗೆ ಪ್ರತ್ಯೇಕ ಡಿಜೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಮನೆಗಳು ಹಾಗೂ ಹಾಸ್ಟೆಲ್ಗಳಲ್ಲಿ ಹೋಳಿ ಆಡಿ ಬಂದ ಯುವತಿಯರು ಇಲ್ಲಿಯೂ ಡಿಜೆ ಸದ್ದಿಗೆ ಯುವಕರನ್ನು ನಾಚಿಸುವಂತೆ ಕುಣಿದು ಕುಪ್ಪಳಿಸಿದರು. ಬಿಸಿಲಿನ ಕಾರಣದಿಂದಾಗಿ ಈ ಬಾರಿ ರಾಂ ಅಂಡ್ ಕೋ ವೃತ್ತದಿಂದ ಎವಿಕೆ ಕಾಲೇಜು ಮಾರ್ಗದ ರಸ್ತೆಗೆ ಪೆಂಡಾಲ್ ಹಾಕಿಸಲಾಗಿತ್ತು. ಚಿಕ್ಕ ಮಕ್ಕಳನ್ನು ಕರೆತಂದಿದ್ದ ಪೋಷಕರು ಅವರಿಂದ ನೃತ್ಯ ಮಾಡಿಸಿ, ಮೊಬೈಲ್ಗಳಲ್ಲಿ ಸೆರೆ ಹಿಡಿದು ಸಂಭ್ರಮಿಸಿದರು.
ಪರೀಕ್ಷೆ ಇದ್ದವರಿಗೆ ನಿರಾಸೆ
ಎಸ್ಸೆಸ್ಸೆಲ್ಸಿ ಸೇರಿದಂತೆ, ವಿವಿಧ ತರಗತಿಗಳಿಗೆ ಪರೀಕ್ಷೆ ನಡೆಯುತ್ತಿದ್ದುದರಿಂದ ಶಾಲೆಗಳಿಗೆ ರಜೆ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಪರೀಕ್ಷಾರ್ಥಿಗಳು ಹೋಳಿ ಆಟದಿಂದ ವಂಚಿತರಾದರು.
ನಗರವೆಲ್ಲಾ ಹೋಳಿ ಸಂಭ್ರಮದಲ್ಲಿದ್ದರೆ ವಿದ್ಯಾರ್ಥಿಗಳು ನಿರಾಶೆಯಿಂದ ಶಾಲೆಗಳಿಗೆ ತೆರಳುತ್ತಿದ್ದುದು ಕಂಡು ಬಂತು.
ಸಂಭ್ರಮದ ನಡುವೆ ಕಿರಿ ಕಿರಿ
ಎಲ್ಲರೂ ಹೋಳಿ ಸಂಭ್ರಮಿಸಿದರೆ, ಇತ್ತ ಕೆಲವು ಯುವಕರು ಹೋಳಿ ಹೆಸರಿನಲ್ಲಿ ವಿಕೃತಿ ಮೆರೆಯಲಾರಂಭಿಸಿದ್ದರು. ರಾಂ ಅಂಡ್ ಕೋ ವೃತ್ತದಲ್ಲಿ ನೃತ್ಯ ಮಾಡುತ್ತಾ ಹಾಕಿದ್ದ ಬಟ್ಟೆಗಳನ್ನು ಹರಿದು ಮೇಲಿನ ವಿದ್ಯುತ್ ತಂತಿಗೆ ಎಸೆಯುತ್ತಿದ್ದರು. ಸೈಲೆನ್ಸರ್ ಇಲ್ಲದೆ ಹೆಚ್ಚು ಸದ್ದು ಮಾಡುವ ಬೈಕ್ಗಳನ್ನು ಓಡಿಸುತ್ತಿದ್ದವರನ್ನು ತಡೆದು ಪೊಲೀಸರು ದಂಡ ವಿಧಿಸುತ್ತಿದ್ದುದು ಕಂಡು ಬಂತು. ನಿಟುವಳ್ಳಿ ಸೇರಿದಂತೆ ಕೆಲ ಬಡಾವಣೆಗಳಲ್ಲಿ ಕೆಲ ಗುಂಪುಗಳು, ಸ್ನೇಹಿತರ ಬಾಯಲ್ಲಿ ಬಣ್ಣ ಹಾಕುವುದು, ಚಡ್ಡಿ ಒಳಗೆ ಮೊಟ್ಟೆ ಒಡೆಯುತ್ತಾ ನೆರೆದಿದ್ದವರಿಗೆ ಕಿರಿ ಕಿರಿ ಉಂಟು ಮಾಡಿದರು.
ನೀರಿಲ್ಲದೆ ಪರದಾಟ
ಬಣ್ಣದಾಟ ಮುಗಿಯುತ್ತಿದ್ದಂತೆ ಯುವಕರು ಸ್ನಾನ ಮಾಡಲು ಭದ್ರಾ ಚಾನಲ್ ನತ್ತ ದೌಡಾಯಿಸಿದರು. ಆದರೆ ಅಲ್ಲಿ ಅತಿ ಕಡಿಮೆ ನೀರಿದ್ದರಿಂದ ಸ್ನಾನಕ್ಕಾಗಿ ಪರದಾಡಬೇಕಾಯಿತು. ಕೆಲವರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮನೆಗಳ ಕಡೆ ತೆರಳಿದರು.
ನೈಸರ್ಗಿಕ ಹೋಳಿ ಆಚರಣೆ
ವಚನಾಮೃತ ಬಳಗದಿಂದ ಎಸ್ಎಸ್ ಬಡಾವಣೆ ಎ ಬ್ಲಾಕ್, 8ನೇ ಕ್ರಾಸ್ ನಲ್ಲಿ ನೈಸರ್ಗಿಕ ಹೋಳಿ ಆಚರಿಸಲಾಯಿತು.
ವಿವಿಧ ಹಣ್ಣುಗಳು. ತರಕಾರಿ, ದಾಸವಾಳದ ಎಲೆ, ಕರಿಬೇವು, ತುಳಸಿ, ಮೆಹಂದಿ ಸೊಪ್ಪು ಇವುಗಳಿಂದ ಮಾಡಿದ ಮಿಶ್ರಣ ಉಪಯೋಗಿಸಿ ಹೋಳಿ ಆಚರಿಸಲಾಗುತ್ತದೆ. ಸೌಮ್ಯ ಸತೀಶ್ ಧಾರವಾಡ ಇವರ ನೇತೃತ್ವದಲ್ಲಿ ಆಚರಿಸಲಾದ ಹೋಳಿಯಲ್ಲಿ ಸುಮಾ ಪ್ರಸಾದ್, ದೀಪ ಜ್ಯೋತಿ, ಸುಮಾ, ಸರಿತಾ, ಕವಿತಾ, ಸುರೇಖಾ, ತನುಜ, ಸುಜಾತ, ಮಧು, ಮಂಗಳ, ಶಾಂತ, ಸುಮಾ ಬೇತೂರು, ಸಾವಿತ್ರ, ವಿಜಯ, ಶ್ರೇಯ, ಶಿಲ್ಪ, ವಿಜಯ, ಸರೋಜಾ, ಸುಮಾ ಇತರರು ಪಾಲ್ಗೊಂಡಿದ್ದರು.
ರಾಂ ಅಂಡ್ ಕೋದಲ್ಲಿನ ಯುವಕ-ಯುವತಿಯರ ನೃತ್ಯವನ್ನು ನೆರೆದಿದ್ದವರು ಮೊಬೈಲ್ಗಳಲ್ಲಿ ಸೆರೆ ಹಿಡಿಯುತ್ತಿದ್ದರು. ಸ್ನೇಹಿತರು, ಬಂಧುಗಳೊಂದಿಗೆ ಹಂಚಿಕೊಂಡರು. ಕೆಲವರು ಸುತ್ತಲೂ ಇದ್ದ ಕಟ್ಟಡಗಳನ್ನು ಏರಿ ಹೋಳಿ ಸಂಭ್ರಮ ವೀಕ್ಷಿಸಿದರು. ಪರ ಊರಿನಲ್ಲಿದ್ದವರು `ನಮ್ಮ ದಾವಣಗೆರೆ, ನಮ್ಮ ರಾಂ ಅಂಡ್ ಕೋ’ ಇತ್ಯಾದಿ ಶೀರ್ಷಿಕೆಯಡಿ ವೀಡಿಯೋಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡು ಖುಷಿ ಪಟ್ಟರು.
ನಿಟುವಳ್ಳಿ, ಕೆಟಿಜೆ ನಗರ, ಜಾಲಿ ನಗರ, ಪಿ.ಜೆ. ಬಡಾವಣೆ, ಎಂ.ಸಿ. ಕಾಲೋನಿ, ವಿನೋಬನಗರ, ಕಾಡಪ್ಪರ ಕಣ, ಡಿಸಿಎಂ ಟೌನ್ ಶಿಪ್ ಮೊದಲಾದ ಕಡೆ ಹೋಳಿಯ ಸಂಭ್ರಮ ಹೆಚ್ಚಾಗಿತ್ತು. ಬಿಐಇಟಿ ರಸ್ತೆ, ಡೆಂಟಲ್ ಕಾಲೇಜು ರಸ್ತೆ, ನೂತನ ಕಾಲೇಜು ರಸ್ತೆ ಬಳಿಯ ಯುವಕ-ಯುವತಿಯರ ಹಾಸ್ಟೆಲ್ಗಳಲ್ಲಿ ಹೋಳಿ ಜೋರಾಗಿತ್ತು.
ನಿಜಲಿಂಗಪ್ಪ ಬಡಾವಣೆ ಬಳಿಯ ರಿಂಗ್ ರಸ್ತೆಯಲ್ಲಿ ಏನಿಲ್ಲಾ ಏನಿಲ್ಲಾ ಹಾಡಿಗೆ ಮಹಾನಗರ ಪಾಲಿಕೆ ಪೌರ ಕಾರ್ಮಿಕರು ಬಣ್ಣ ಹಚ್ಚಿಕೊಂಡು ನೃತ್ಯ ಮಾಡಿ ಸಂಭ್ರಮಿಸಿದರು.