ಜಗಳೂರು, ಮಾ.8- ಪಟ್ಟಣ ಪಂಚಾ ಯತಿಯ 2024-25ನೇ ಸಾಲಿನ ಆಯವ್ಯಯ 20.31 ಕೋಟಿ ಅದಾಯ ನಿರೀಕ್ಷೆಯ ಮತ್ತು 1.41ಲಕ್ಷ ರೂ ಉಳಿತಾಯ ಬಜೆಟ್ಟನ್ನು ತಹಶೀಲ್ದಾರ್ ಹಾಗೂ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಚಂದ್ರಶೇಖರನಾಯ್ಕ್ ಮಂಡಿಸಿದರು.
ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ಆಯವ್ಯಯ ಮಂಡಿಸಿದ ಅವರು, ಕಳೆದ ಬಾರಿ 16 ಕೋಟಿ ರೂ. ಆಯವ್ಯಯ ಮಂಡನೆಯಾಗಿದ್ದು, ಈ ಬಾರಿ 20.31 ಕೋಟಿ ರೂ.ಗಳ ಬಜೆಟ್ ಮಂಡನೆಯಾಗಿದೆ. ಪಟ್ಟಣದ ಸರ್ವತೋಮುಖ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಒತ್ತಡ ನೀಡಲಾಗುವುದು ಎಂದರು.
ಪಟ್ಟಣದ ಅಭಿವೃದ್ಧಿಗೆ ಶ್ರಮಿಸಿ
ಶಾಸಕ ಬಿ.ದೇವೇಂದ್ರಪ್ಪ ಸಲಹೆ
ಜಗಳೂರು, ಮಾ.8- ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಪಕ್ಷಬೇಧ ಮರೆತು ಎಲ್ಲಾ 18 ಮಂದಿ ಸದಸ್ಯರು ಶ್ರಮಿಸಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಕರೆ ನೀಡಿದರು.
ಬಜೆಟ್ ಮಂಡನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಲ್ಲಾ ವಾರ್ಡುಗಳ ನಾಗರೀಕರಿಗೆ ಉತ್ತಮವಾದ ರಸ್ತೆ, ಚರಂಡಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು. ಜೆಸಿಆರ್ ಬಡಾವಣೆಯ ರಸ್ತೆ ಸಂಪೂರ್ಣ ಕಿತ್ತು ಹೋಗಿ ವಾಹನ ಸೇರಿದಂತೆ ಪಾದಚಾರಿಗಳು ಸಹ ಸಂಚರಿಸದಂತಾಗಿದೆ. ಕೂಡಲೇ ರಸ್ತೆ ಕಾಮಗಾರಿ ಕೈಗೊಳ್ಳಬೇಕು ಪ್ರತಿ ಮಾಹೆ ಕೊನೆಯ ಭಾನುವಾರ ಸ್ವಚ್ಚತಾ ಕಾರ್ಯದಲ್ಲಿ ಭಾಗಿಯಾಗುತ್ತಿದ್ದೇನೆ ಪಪಂ ಸದಸ್ಯರು ಸಹ ಪಾಲ್ಗೋಳ್ಳಬೇಕು ಎಂದರು.
ಈ ಬಜೆಟ್ನಲ್ಲಿ ಹಲವಾರು ಯೋಜನೆಗಳಿಗೆ ಹಣ ಮೀಸಲಿರಿಸಲಾಗಿದೆ. ಆದರೆ ಕಾರ್ಯರೂಪಕ್ಕೆ ಬಂದಿಲ್ಲವೆಂದು ಸದಸ್ಯರ ಗಂಭೀರ ಆರೋಪವಾಗಿದ್ದು, ಮುಕ್ತಿ ವಾಹನದ ಅವಶ್ಯಕತೆ ಇದೆ. ಆದರೆ ಖರೀದಿಸಿಲ್ಲ. ನನ್ನ ಸ್ವಂತ ಖರ್ಚಿನಲ್ಲಿ ಎರಡು ವಾಹನಗಳನ್ನು ಕೊಡುಗೆಯಾಗಿ ನೀಡಲಾಗುವುದು. ಒಂದು ವಾಹನ ಮಕ್ತಿವಾನವಾಗಿದ್ದು ಇನ್ನೊಂದು ವಾಹನ ಯಾರಿಗಾದರೂ ಅಪಘಾತವಾಗಿ ಸಾವನ್ನಪ್ಪಿದರೆ ಅಂತಹ ಶವವನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದರು.
ತರಕಾರಿ ಮಾರುಕಟ್ಟೆಯ ಮೇಲೆ ಸೀಟ್ ಅಳವಡಿಸಿ ಮೂಲಭೂತ ಸೌಲಭ್ಯ ಕಲ್ಪಿಸಿ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಿಕೊಡಬೇಕು, ಎಸ್ಬಿಎಂ ಬ್ಯಾಂಕ್ ಮುಂಭಾಗದಲ್ಲಿ ಮಳಿಗೆ ಸಂಕೀರ್ಣಗಳನ್ನು ನಿರ್ಮಿಸಿದರೆ ಪಪಂಗೆ ಹೆಚ್ಚಿನ ಆದಾಯವಾಗಲಿದೆ ಎಂದರು.
15ನೇ ಹಣಕಾಸು ಯೋಜನೆಯಡಿ 100 ಲಕ್ಷ ರೂಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು ಮತ್ತು ವಿದ್ಯುತ್ ದೀಪ ಹಾಗೂ ಘನತ್ಯಾಜ್ಯ ವಿಲೇವಾರಿ ಘಟಕದ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಲಾ ಗುವುದು.
ಎಸ್ಎಫ್ಸಿ ವಿಶೇಷ ಅನುದಾನದಡಿ 150 ಲಕ್ಷ ರೂ.ಗಳನ್ನು ಕುಡಿಯುವ ನೀರಿನ ಸ್ಥಾವರ, ನೀರು ಪೂರೈಕೆಗೆ ಸಂಬಂಧಿಸಿದ ಕಾಮಗಾರಿ ಗಳನ್ನು ಕೈಗೆತ್ತಿಕೊಳ್ಳಲಾಗುವುದು.
ಎಸ್ಸಿ ಮತ್ತು ಎಸ್ಟಿ ಅನುದಾನದಡಿ 44 ಲಕ್ಷ ರೂ.ಗಳನ್ನು ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಯಡಿ ರಾಜಕಾಲುವೆ, ರಸ್ತೆ, ಚರಂಡಿ, ವಿದ್ಯುತ್ ದೀಪ ಕುಡಿಯುವ ನೀರಿಗೆ ಸಂಬಂಧಿಸಿದ ಕಾಮಗಾರಿ ಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್, ಸೇರಿದಂತೆ ಸರ್ವ ಸದಸ್ಯರು ಹಾಜರಿದ್ದರು.