ಜಿಲ್ಲೆಯಲ್ಲಿ ಬರ ನಿರ್ವಹಣೆಗೆ ಹಣದ ಕೊರತೆ ಇಲ್ಲ: ಕೆಡಿಪಿ ಸಭೆಯಲ್ಲಿ ಸಚಿವ ಮಲ್ಲಿಕಾರ್ಜುನ್
ದಾವಣಗೆರೆ, ಮಾ.6- ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಎದುರಿಸಲು ಹಣದ ಕೊರತೆ ಇಲ್ಲ. ಎಲ್ಲಿಯೇ ಸಮಸ್ಯೆ ಉಂಟಾದರೂ ತಕ್ಷಣ ಕಾರ್ಯಪ್ರವೃತ್ತರಾಗುವಂತೆ ಗಣಿ, ಭೂ ವಿಜ್ಞಾನ ಮತ್ತು ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಯ್ತಿ ಕಚೇರಿ ಸಭಾಂಗಣದಲ್ಲಿ ಬುಧವಾರ ಕೆಡಿಪಿ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ, ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ವೇಳೆ ಅವರು ಮಾತನಾಡಿದರು.
ಕುಡಿಯುವ ನೀರಿಗೆ ಎಲ್ಲೂ ಹಾಹಾಕಾರ ಬರಬಾರದು. ಅಗತ್ಯವಿದ್ದರೆ ಬೋರ್ವೆಲ್ ಕೊರೆಸಿ ನೀರು ಕೊಡಿ. ಫ್ಲೋರೈಡ್ ಇರುವ ಪ್ರದೇಶದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಿ. ಹಣದ ಸಮಸ್ಯೆ ಇಲ್ಲ. 10 ಕೋಟಿ ರೂಪಾಯಿ ಹಣ ಮೀಸಲಿದೆ ಎಂದರು.
ಜಿಲ್ಲೆಯಲ್ಲಿ ಇಲ್ಲಿಯವರೆಗೆ 22 ಗ್ರಾಮಗಳಲ್ಲಿ 27 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು, ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಪ್ರತಿ ತಹಶೀಲ್ದಾರ್ಗಳಿಗೂ ಹಣ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಸುರೇಶ್ ಇಟ್ನಾಳ್ ಹೇಳಿದರು.
ಚನ್ನಗಿರಿ ಶಾಸಕ ಬಸವರಾಜ ವಿ.ಶಿವಗಂಗಾ ಮಾತನಾಡಿ, ನೀರು ಪೂರೈಕೆಗೆ ಟ್ಯಾಂಕರ್ ಬಳಕೆಗೆ ಅನುಮತಿ ನೀಡಿದ್ದು ಜಿಪಿಎಸ್ ಅಳವಡಿಸಿದ ಟ್ಯಾಂಕರ್ ಬಾಡಿಗೆ ಪಡೆಯಲು ಷರತ್ತು ವಿಧಿಸಿದ್ದು ಇದರಿಂದ ಟ್ಯಾಂಕರ್ ಸಿಗುತ್ತಿಲ್ಲ ಎಂದಾಗ ಯಾವ ಟ್ಯಾಂಕರ್ ಪಡೆಯಲಾಗುತ್ತದೆಯೋ ಅದೇ ಟ್ಯಾಂಕರ್ಗೆ ಜಿಪಿಎಸ್ ಅಳವಡಿಸಿಕೊಳ್ಳಬೇಕು ಎಂದು ಸಚಿವರು ಹೇಳಿದರು.
ಕೊನೆ ಭಾಗಕ್ಕೆ ನೀರು ಕೊಟ್ಟು ನಂತರ ಕೆರೆ ತುಂಬಿಸಿಕೊಳ್ಳಿ
ಶಿವಗಂಗಾ ಬಸವರಾಜ್ಗೆ ಸಚಿವ ಎಸ್ಸೆಸ್ಸೆಂ ಕಿವಿ ಮಾತು
ಮೊದಲು ಭದ್ರಾ ನಾಲೆ ಬಲ ದಂಡೆಯ ಕೊನೆ ಭಾಗಕ್ಕೆ ನೀರು ತಲುಪಿಸಿ ನಂತರ ನೀವು ಕೆರೆ ತುಂಬಿಸಿಕೊಳ್ಳಿ ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಅವರಿಗೆ ಹೇಳಿದರು.
ಸಭೆಯಲ್ಲಿ ಸೂಳೆಕೆರೆಯಲ್ಲಿ ನೀರು ಕಡಿಮೆ ಇದೆ. ಭದ್ರಾ ನಾಲೆಯಿಂದ ಕೆರೆಗೆ ನೀರು ತುಂಬಿಸುವುದನ್ನು ಬಿಟ್ಟು ಬರೀ ಕೊನೆ ಭಾಗಕ್ಕೆ ನೀರು ತಲುಪಿಸಲು ಆದ್ಯತೆ ನೀಡುತ್ತಿದ್ದೀರಿ ಎಂದು ಶಾಸಕ ಶಿವಗಂಗಾ ಬಸವರಾಜ್ ಜಿಲ್ಲಾಧಿಕಾರಿ ಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದು.
ಈ ವೇಳೆ ಸಚಿವರು ಮಧ್ಯಪ್ರವೇಶಿಸಿ, ಕೊನೆಯ ಭಾಗಕ್ಕೆ ನೀರು ಕೊಡಿಸುತ್ತಿಲ್ಲ ಎಂದು ನಿಮ್ಮ ಪಕ್ಕ ಕುಳಿತವರು (ಶಾಸಕ ಬಿ.ಪಿ. ಹರೀಶ್) ನನ್ನ ವಿರುದ್ಧ ಮಾಧ್ಯಮಗಳಲ್ಲಿ ಆರೋಪಿಸಿದ್ದಾರೆ ಎಂದು ಮಾತಿನಲ್ಲೇ ತಿವಿದರು.
ಚನ್ನಗಿರಿ ಭಾಗಕ್ಕೂ ನೀರು ಬೇಕು. ದಾವಣಗೆರೆ ಭಾಗಕ್ಕೂ ನೀರು ಬೇಕು. ಕೊನೆ ಭಾಗಕ್ಕೆ ನೀರು ತಲುಪಿಸಿದರೆ ಆ ಭಾಗದ ಗ್ರಾಮಗಳಲ್ಲಿ ಬೋರ್ವೆಲ್ಗಳಲ್ಲಿ ನೀರಿನ ಮಟ್ಟ ಸುಧಾರಿಸಿ ಕುಡಿಯುವ ನೀರಿಗೆ ತೊಂದರೆಯಾಗುವುದಿಲ್ಲ. ಆದ್ದರಿಂದ ಅಕ್ರಮ ಪಂಪ್ ಸೆಟ್ ತೆರವುಗೊಳಿಸಲು ಬಿಗಿ ಕ್ರಮ ಕೈಗೊಂಡು ಮೊದಲು ಕೊನೆ ಭಾಗಕ್ಕೆ ನೀರು ತಲುಪಿಸಿ, ನಂತರ ಕೆರೆಗೆ ತುಂಬಿಸಿಕೋ ಎರಡೂ ಕಡೆಯ ಜನರು ಗಲಾಟೆ ಮಾಡದಂತೆ ನಿರ್ವಹಿಸಿ ಎಂದು ಸಚಿವ ಎಸ್ಸೆಸ್ಸೆಂ, ಚನ್ನಗಿರಿ ಶಾಸಕರಿಗೆ ಸಲಹೆ ನೀಡಿದರು.
ನಮಗೂ ಹಸು ಕೊಡಿ ಎಂದ ಶಾಸಕರು
ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಮಾರ್ಗದರ್ಶನ ದಂತೆ ಜಿಲ್ಲಾ ಸಹಕಾರ ಬ್ಯಾಂಕ್ ಸಹಯೋಗದೊಂದಿಗೆ ಸಬ್ಸಿಡಿ ದರದಲ್ಲಿ ತಾಲ್ಲೂಕಿನ 250 ಜನರಿಗೆ 500 ಹಸು ಖರೀದಿಗೆ ನೆರವು ನೀಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಸಭೆಗೆ ತಿಳಿಸಿದರು.
ಈ ವೇಳೆ ಶಾಸಕರುಗಳಾದ ಡಿ.ಜಿ ಶಾಂತನಗೌಡ, ಕೆ.ಎಸ್ ಬಸವಂತಪ್ಪ, ಶಿವಗಂಗಾ ಬಸವರಾಜ್, ಹರೀಶ್ ಅವರುಗಳು ನಮ್ಮ ತಾಲ್ಲೂಕುಗಳಿಗೆ ಏಕೆ ಹಸು ಕೊಟ್ಟಿಲ್ಲ. ನಮಗೂ ಕೊಡಿ ಎಂದರು.
ಇದೊಂದು ಪ್ರಾಯೋಗಿಕ ಯೋಜನೆಯಾಗಿತ್ತು. ಆದ್ದರಿಂದ ಕೇವಲ ದಾವಣಗೆರೆ ತಾಲ್ಲೂಕಿನಲ್ಲಿ ಮಾತ್ರ ವಿತರಿಸಲಾಗಿದೆ ಎಂದು ಸಚಿವ ಮಲ್ಲಿಕಾರ್ಜುನ್ ಹೇಳಿದರು.
ಪ್ರತಿ ಹಸುವಿಗೆ 40 ಸಾವಿರ ಸಬ್ಸಿಡಿ ಹಾಗೂ ಜಿಲ್ಲಾ ಸಹಕಾರಿ ಬ್ಯಾಂಕ್ನಲ್ಲಿ ಸಾಲ ನೀಡಲಾಗುತ್ತದೆ. ಆದರೆ ಡಿಸಿಸಿ ಬ್ಯಾಂಕ್ನವರು ಸರಿಯಾಗಿ ಸಹಕರಿಸಲಿಲ್ಲ.
ಮುಂದಿನ ದಿನಗಳಲ್ಲಿ ಪಂಚಾಯ್ತಿ ಮಟ್ಟದಲ್ಲಿ ಫಲಾನುಭವಿಗಳ ಗುರುತಿಸಿ, ಎಲ್ಲಾ ತಾಲ್ಲೂಕುಗಳಿಗೂ ಯೋಜನೆ ವಿಸ್ತರಿಸಲಾಗುವುದು ಎಂದು ಎಸ್ಸೆಸ್ಸೆಂ ಹೇಳಿದರು.
ಹರಿಹರ: ಹೆಚ್ಚುವರಿ 50 ಬೆಡ್ ಆಸ್ಪತ್ರೆಗೆ ಪ್ರಸ್ತಾವನೆ
ಹರಿಹರದಲ್ಲಿ ಹೆಚ್ಚುವರಿಯಾಗಿ 50 ಬೆಡ್ ಕಟ್ಟಡಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಚಿವರು ಸೂಚಿಸಿದರು.
ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಹರಿಹರದ ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಹೆಚ್ಚು ಬೆಡ್ಗಳ ಕಟ್ಟಡಕ್ಕೆ ಕ್ರಮ ವಹಿಸಿ ಎಂದು ಡಿಹೆಚ್ಒ ಅವರಿಗೆ ಸೂಚಿಸಿದರು.
ಡಿಹೆಚ್ಒ ಮಾತನಾಡಿ, ಪ್ರಸ್ತುತ 100 ಬೆಡ್ಗಳ ಆಸ್ಪತ್ರೆ ಇದೆ. ಈಗ 50 ಬೆಡ್ಗಳ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂದರು. ಆಗ ಸಚಿವರು, ಮತ್ತೆ 50 ಬೆಡ್ಗಳಿಗೆ ಪ್ರಸ್ತಾವನೆ ಸಲ್ಲಿಸಲು ಹೇಳಿದರು.
ಶಾಸಕರ ಕರೆ ಸ್ವೀಕರಿಸದ ಸಿಬ್ಬಂದಿ: ಆರೋಪ
ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಸಮಸ್ಯೆಯಾದರೆ ಅಲ್ಲಿನ ರೋಗಿಗಳು ನಮಗೆ ಪೋನ್ ಮಾಡುತ್ತಾರೆ. ನಾವು ಅಲ್ಲಿದ್ದವರಿಗೆ ಕೊಡಿ ಎಂದಾಗ, ಅಲ್ಲಿದ್ದ ವೈದ್ಯರು, ಸಿಬ್ಬಂದಿಗಳು ನಮ್ಮಜೊತೆ ಮಾತನಾಡದೇ ನಮಗೆ ಅಗೌರವ ತೋರುತ್ತಾರೆ ಎಂದು ಶಾಸಕರುಗಳಾದ ಶಿವಗಂಗಾ ಬಸವರಾಜ್ ಹಾಗೂ ಕೆ.ಎಸ್. ಬಸವಂತಪ್ಪ ಹೇಳಿದರು. ಶಾಸಕರ ಕರೆ ಸ್ವೀಕರಿಸುವಂತೆ ಎಲ್ಲಾ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಸುತ್ತೋಲೆ ಕಳುಹಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಕರೆ ಕಟ್ಟೆಯಲ್ಲಿ ಬಾಡಿಗೆ ಕಟ್ಟದಿದ್ರೆ ಆಸ್ಪತ್ರೆಗೆ ಬೀಗ
ಚನ್ನಗಿರಿ ತಾಲ್ಲೂಕು ಕರೆಕಟ್ಟೆಯಲ್ಲಿ ಆಸ್ಪತ್ರೆಗೆ ಸಂಬಂಧಿಸಿದ ಜಾಗದ ವಿವಾದ ನ್ಯಾಯಾಲಯದಲ್ಲಿದೆ. ಬಾಡಿಗೆ ಮನೆಯಲ್ಲಿ ಆಸ್ಪತ್ರೆ ನಡೆಸಲಾಗುತ್ತಿದೆ. ಆದರೆ ಸರಿಯಾಗಿ ಬಾಡಿಗೆ ಕಟ್ಟದಿದ್ದರೆ ಮನೆ ಮಾಲೀಕರು ಬೀಗ ಹಾಕಿಕೊಂಡು ಹೋಗುತ್ತಾರೆ. ಇದರಿಂದ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಶೀಘ್ರವೇ ಸಮಸ್ಯೆ ಬಗೆಹರಿಸಿ ಎಂದು ಜಿ.ಪಂ. ಸಿಇಒ ಅವರಿಗೆ ಎಂದು ಶಾಸಕ ಶಿವಗಂಗಾ ಬಸವರಾಜ್ ಹೇಳಿದರು
ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ತಲುಪದ ಫಲಾನುಭವಿಗಳನ್ನು ಗುರುತಿಸಿ, ಅಭಿಯಾನ ನಡೆಸಿ, ಆಧಾರ್ ಜೋಡಣೆ, ಬ್ಯಾಂಕ್ ಕೆವೈಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಾಂತ್ರಿಕ ಪರಿಣಿತರೊಂದಿಗೆ ಸಮಸ್ಯೆ ಇತ್ಯಾರ್ಥಕ್ಕೆ ಕ್ರಮ ವಹಿಸುವಂತೆ ಸಚಿವರು ಸೂಚಿಸಿದರು.
ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಒಂದು ಕೆ.ಜಿ ವರೆಗೆ ಅಕ್ಕಿಯನ್ನು ಕಡಿಮೆ ಕೊಡುತ್ತಿರುವ ದೂರುಗಳಿವೆ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಪ್ರಸ್ತಾಪಿಸಿದಾಗ ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಇಲಾಖೆ ಅಧಿಕಾರಿಗಳೊಂದಿಗೆ ಅನಿರೀಕ್ಷಿತ ಭೇಟಿ ನೀಡುವ ಮೂಲಕ ಪರಿಶೀಲನೆ ನಡೆಸಲು ತಿಳಿಸಿ ಪ್ರಮಾಣಕ್ಕಿಂತ ಕಡಿಮೆ ಆಹಾರ ಧಾನ್ಯ ವಿತರಣೆ ಮಾಡುತ್ತಿದ್ದಲ್ಲಿ ಅಂತಹ ನ್ಯಾಯಬೆಲೆ ಅಂಗಡಿಗಳ ಮೇಲೆ ಕ್ರಮ ಜರುಗಿಸಲು ಸೂಚನೆ ನೀಡಲಾಯಿತು.
ಹೊನ್ನಾಳಿ ಶಾಸಕರಾದ ಡಿ.ಜಿ.ಶಾಂತನಗೌಡರವರು ಕೆಲವರು ಕೆರೆ ಒತ್ತುವರಿ ಮಾಡುವ ಜೊತೆಗೆ ಸ್ಮಶಾನವನ್ನು ಒತ್ತುವರಿ ಮಾಡಿದ್ದಾರೆ ಎಂದಾಗ ಸರ್ಕಾರಿ ಜಾಗವನ್ನು ಗುರುತಿಸಿ ಒತ್ತುವರಿ ಮಾಡದಂತೆ ಬೀಟ್ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಮತ್ತು ಕೆರೆ ಒತ್ತುವರಿ ಬಗ್ಗೆ ಜಿಲ್ಲಾಧಿಕಾರಿಯವರು ಕ್ರಮ ಕೈಗೊಳ್ಳುವರೆಂದು ತಿಳಿಸಿದರು.
ಬರುವ ಜೂ.1ನೇ ತಾರೀಖಿನೊಳಗೆ ಎಲ್ಲಾ ಶಾಲೆಗಳಲ್ಲಿ ಶೌಚಾಲಯಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಕಟ್ಟಿಸುವಂತೆ ಶಾಸಕ ಶಿವಗಂಗಾ ಬಸವರಾಜ್ ಡಿಡಿಪಿಐ ಅವರಿಗೆ ಸೂಚಿಸಿದರು.
ಮಾಯಕೊಂಡದಲ್ಲಿ ರಾತ್ರಿ ಪಾಳೆಯಕ್ಕೆ ವೈದ್ಯರ ಅಗತ್ಯವಿದೆ ಎಂದಾಗ, ವೈದ್ಯರ ವಸತಿ ಗೃಹ ನಿರ್ಮಾಣ ಸಾಧ್ಯವಿದ್ದರೆ ಪ್ರಸ್ತಾವನೆ ಸಲ್ಲಿಸಿ, ವಸತಿಗೃಹವಾದರೆ ರಾತ್ರಿ ವೈದ್ಯರ ಕೊರತೆ ನೀಗುತ್ತದೆ ಎಂದು ಡಿಹೆಚ್ಒ ಅವರಿಗೆ ಸೂಚಿಸಿದರು.
ಉಕ್ಕಡಗಾತ್ರಿ ಅಜ್ಜಯ್ಯನ ದರ್ಶನಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಕ್ರಮ ಕೈಗೊಳ್ಳುವಂತೆ ಶಾಸಕ ಹರೀಶ್ ಹೇಳಿದರೆ, ಹಳ್ಳಿಗಳಲ್ಲಿ ಜಾತ್ರೆಗಳು ನಡೆಯುತ್ತಿದ್ದು ಸ್ವಚ್ಛತೆಗೆ ಆದ್ಯತೆ ನೀಡುವಂತೆ ಬಸವಂತಪ್ಪ ಡಿಹೆಚ್ಒ ಅವರಿಗೆ ಸೂಚಿಸಿದರು.
ಸಭೆಯಲ್ಲಿ ಶಾಸಕರುಗಳಾದ ಬಿ.ಪಿ. ಹರೀಶ್, ಡಿ.ಜಿ. ಶಾಂತನಗೌಡ, ಶಿವಗಂಗಾ ಬಸವರಾಜ್, ಕೆ.ಎಸ್. ಬಸವಂತಪ್ಪ, ಜಿಲ್ಲಾಧಿಕಾರಿ ಡಾ.ವೆಂಟಕೇಶ್ ಎಂ.ವಿ, ಜಿ.ಪಂ. ಸಿಇಒ ಸುರೇಶ್ ಬಿ. ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.