`ಹೆತ್ತವರು’, `ಅಂತರಂಗದ ಧ್ವನಿ’ ಕೃತಿ ಲೋಕಾರ್ಪಣೆಯಲ್ಲಿ ಡಾ. ಎಂ.ಜಿ.ಆರ್. ಅರಸ್

`ಹೆತ್ತವರು’, `ಅಂತರಂಗದ ಧ್ವನಿ’ ಕೃತಿ ಲೋಕಾರ್ಪಣೆಯಲ್ಲಿ ಡಾ. ಎಂ.ಜಿ.ಆರ್. ಅರಸ್

ದಾವಣಗೆರೆ, ಫೆ.25- ಏನನ್ನಾದರೂ ಸಾಧನೆ ಮಾಡಿ, ಎಷ್ಟೇ ಸಂಪತ್ತು ಗಳಿಸಿರಿ. ಆದರೆ ತಾಯಿಯ ಪ್ರೀತಿಯನ್ನು ಒಮ್ಮೆ ಕಳೆದುಕೊಂಡರೆ ಮತ್ತೆ ಗಳಿಸಲು ಸಾಧ್ಯವಿಲ್ಲ.  ಎಲ್ಲಿ ತಾಯಿ ಸಂತುಷ್ಟಭರಿತಳಾಗಿರುತ್ತಾಳೋ ಆ ಸಮಾಜ, ದೇಶವೂ ಸಂತುಷ್ಟವಾಗಿರುತ್ತದೆ ಎಂದು ಚುಟುಕು ಸಾಹಿತ್ಯ ಪರಿಷತ್ ಮೈಸೂರು ಕೇಂದ್ರ ಸಮಿತಿಯ ಪ್ರಧಾನ ಸಂಚಾಲಕರೂ, ಸಂಸ್ಥಾಪಕರೂ ಆದ ಡಾ.ಎಂ.ಜಿ. ಆರ್. ಅರಸ್ ಹೇಳಿದರು.

ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ಕರ್ನಾಟಕ ವಚನ ಸಾಹಿತ್ಯ ಪರಿಷತ್, ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಶಾಖೆ, ಸ್ಫೂರ್ತಿ ಪ್ರಕಾಶನ ತೆಲಗಿ, ನಿರ್ವರ್ಣ ಆರ್ಟ್ ಗ್ಯಾಲರಿ ಸಂಯುಕ್ತಾಶ್ರಯಲ್ಲಿ ನಗರದ ಗುರುಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ `ಹೆತ್ತವರು’ ಹಾಗೂ `ಅಂತರಂಗದ ಧ್ವನಿ’ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ಹೆಣ್ಣು ಜನ್ಮ ನೀಡುವಾಗ ಅನುಭವಿ ಸುವ ಸಂಕಟ, ಸಂತಸ, ಮಗುವಿನ ಆರೋಗ್ಯ ಹಾಗೂ ಭವಿಷ್ಯದ ಬಗ್ಗೆ ತಳಮಳ ಹೊಂದಿರು ತ್ತಾಳೆ. ಈ ಕೃತಿಗೆ ಮುನ್ನುಡಿ ಬರೆಯುವಾಗ ನಾನು ನನ್ನ ಜನ್ಮದಾತರನ್ನು ನೆನೆದು ಭಾವುಕನಾಗಿದ್ದೆ. ಹೆತ್ತವರು ಕೃತಿ ಅಂತರಾಳದ ಒಳ ಧ್ವನಿಯನ್ನು ಪ್ರತಿನಿಧಿಸುತ್ತದೆ ಎಂದರು.

ಈ ಕೃತಿಯಲ್ಲಿ ಯಾವುದೇ ದ್ವೇಷದ ನುಡಿಗಳಿಲ್ಲ, ತಾಯಿಯನ್ನು ಇನ್ನಷ್ಟು ಪ್ರೀತಿ ಯಿಂದ ನೋಡಿಕೊಳ್ಳಬಹುದಾಗಿತ್ತು ಎಂಬ ಪಶ್ಚಾತ್ತಾಪ, ತಾಯಿಯ ಬಗ್ಗೆ ಹೆಮ್ಮೆ, ಸಂತಸದ ನುಡಿಗಳೂ ಇವೆ. 140 ಲೇಖಕರು ತಾಯಿಯ ಮಮತೆಯ ಒಡಲಾಟಗಳನ್ನು ಗ್ರಹಿಸಿದ್ದಾರೆ. ನೋವು ಸಂಕಟಗಳನ್ನು, ಸಂತಸದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಇದೊಂದು ಸಂಗ್ರಹ ಯೋಗ್ಯ ವಾದ ಕೃತಿಯಾಗಿದೆ ಎಂದು ಬಣ್ಣಿಸಿದರು.

ಕಷ್ಟ, ಮಮತೆಯಿಂದ ಸಾಕಿದ ತಾಯಿಯನ್ನು ಮಕ್ಕಳು ಕೊನೆ ಗಳಿಗೆಯಲ್ಲಿ ನಿಷ್ಕೃಷ್ಟವಾಗಿ ನೋಡಿಕೊಳ್ಳು ವುದನ್ನು ಇಂದಿನ ದಿನಮಾನಗಳಲ್ಲಿ ನೋಡುತ್ತಿದ್ದೇವೆ. `ಸ್ವದೇಶದಲ್ಲಿ ತಾಯಿ ಸತ್ತಾಗ ವಿದೇಶದಲ್ಲಿ ಮಗ ತಲೆ ಬೋಳಿಸಿಕೊಳ್ಳುತ್ತಾನೆ’ ಈ ಬಗ್ಗೆಯೂ ಕೃತಿಯಲ್ಲಿ ಉಲ್ಲೇಖವಾಗಿದೆ. ಹೆತ್ತವರ ಒಡಲಾಳದ ನೋವು ಗ್ರಹಿಸಿದರೆ ಸಂಕಟವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದ ಮೈಸೂರು ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಾ ಹಾಲಪ್ಪಗೌಡರು ಮಾತನಾಡುತ್ತಾ,  ಹೆತ್ತವರು ಎಂದ ಕೂಡಲೇ ಹೃದಯ ತುಂಬಿ ಬರುತ್ತದೆ. ಕೃತಿ ಓದುವಾಗ ನನಗೂ ನನ್ನ ತಾಯಿಯ ನೆನಪಾಯಿತು. ನನಗೆ ಸಾಹಿತ್ಯದ ಮೇಲೆ ಒಲವು ಮೂಡಲು ತಾಯಿಯೇ ಕಾರಣ ಎಂದರು.

ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ  ಬಿ.ಹೆಚ್. ರಾಜಶೇಖರ್ ಗುಂಡಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಭದ್ರಾವತಿಯ ಎಮೆರಿಟಿಸ್ ಪ್ರಾಧ್ಯಾಪಕಿ ಡಾ. ವಿಜಯಾದೇವಿ, ಕನ್ನಡ ಜಾಗೃತಿ ಕೇಂದ್ರದ ಅಧ್ಯಕ್ಷ ಎಸ್.ಮಲ್ಲಿಕಾರ್ಜುನಪ್ಪ, ಚು.ಸಾ.ಪ. ಗೌರವ ಕಾರ್ಯದರ್ಶಿ ಕೆ.ಎಸ್. ವೀರಭದ್ರಪ್ಪ ತೆಲಿಗಿ, ವನಿತಾ ಸಾಹಿತ್ಯ ವೇದಿಕೆ ಅಧ್ಯಕ್ಷೆ ಎಂ.ಎಸ್. ಮಲ್ಲಮ್ಮ ನಾಗರಾಜ್, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷೆ ವೀಣಾ ಕೃಷ್ಣಮೂರ್ತಿ, ಚು.ಸಾ.ಪ. ಗೌರವಾಧ್ಯಕ್ಷ ಶಿವಯೋಗಿ ಹಿರೇಮಠ್, ಸ್ಫೂರ್ತಿ ಪ್ರಕಾಶನ ತೆಲಿಗಿ ಅಧ್ಯಕ್ಷ ಎಂ.ಬಸವರಾಜ್ ಉಪಸ್ಥಿತರಿದ್ದರು.

ಸಾಹಿತಿಗಳಾದ ಹರಿಹರದ ಲಲಿತಮ್ಮ ಚಂದ್ರಶೇಖರ್, ದಾವಣಗೆರೆಯ ಜಯಮ್ಮ ನೀಲಗುಂದ, ಸಾಸ್ವಿಹಳ್ಳಿಯ ಕೆ.ಪಿ. ದೇವೇಂದ್ರಯ್ಯ ಅವರನ್ನು ಗೌರವಿಸಲಾಯಿತು. 17 ಮಾತಾ-ಪಿತರನ್ನು ಅವರ ಮಕ್ಕಳು ಪಾದ ತೊಳೆದು ಪೂಜಿಸಿದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಚಿತ್ರಕಲಾ ಪ್ರದರ್ಶನ ಏರ್ಪಡಿಸಲಾಗಿತ್ತು. ಕಲಾವಿದರುಗಳಾದ ಡಿ.ವಿ. ಬಡಿಗೇರ್, ಶಾಂತಯ್ಯ ಪರಡಿಮಠ, ಚಂದ್ರಶೇಖರ್ ಸಂಗ, ರಾಘವೇಂದ್ರ ನಾಯಕ, ಆತಿಕ್ ವುಲ್ಲಾ, ಕೀರ್ತನಾ ಆರ್.ವೈ., ಪ್ರದೀಪ್, ಹರಜತ್ ಅಲಿ, ಮಮತಾ, ರಿಯಾಜ್ ಅಹಮದ್, ಸಂತೋಷ್ ಕುಲಕರ್ಣಿ, ಪ್ರವೀಣ್ ಕುಮಾರ್ ಅವರುಗಳ 40ಕ್ಕೂ ಹೆಚ್ಚು ಕಲಾಕೃತಿಗಳನ್ನು ಪ್ರದರ್ಶನಕ್ಕಿಡಲಾಗಿತ್ತು.

ರೇವಣಸಿದ್ದಪ್ಪ, ಸೌಮ್ಯ ಸತೀಶ್ ಸಂಗಡಿಗರು ಪ್ರಾರ್ಥಿಸಿದರು. ಪ್ರಕಾಶ್ ಬೂಸನೂರು ಸ್ವಾಗತಿಸಿದರು. ಸುನಿತಾ ಪ್ರಕಾಶ್, ವೀರೇಶ್ ನಿರೂಪಿಸಿದರು. ಸತ್ಯಭಾಮಾ ಮಂಜುನಾಥ್ ವಂದಿಸಿದರು.

error: Content is protected !!